Advertisement

2 ವರ್ಷದಲ್ಲಿ 4.95 ಕೋ. ರೂ. ಮೌಲ್ಯದ ಸೊತ್ತು ಕಳವು; 3.72 ಕೋ. ರೂ. ಮೊತ್ತದ ಸೊತ್ತು ಜಪ್ತಿ

10:51 AM Apr 27, 2019 | Team Udayavani |

ಮಂಗಳೂರು: ಇಲ್ಲಿನ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2018 ಮತ್ತು 2019ರಲ್ಲಿ ವಿವಿಧ ಕಳವು ಪ್ರಕರಣಗಳಲ್ಲಿ ಒಟ್ಟು 4,95,00,000 ರೂ. ಮೌಲ್ಯದ ಸೊತ್ತುಗಳು ಕಳವಾಗಿದ್ದು, ಈ ಪೈಕಿ 3,72,00,000 ರೂ. ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದರು.

Advertisement

ಪೊಲೀಸರು ಜಪ್ತಿ ಮಾಡಿದ ಸೊತ್ತುಗಳನ್ನು ವಾರಸುದಾರರಿಗೆ ಮರಳಿಸುವ ಕವಾಯತು ಶುಕ್ರವಾರ ನಗರದ ನೆಹರೂ ಮೈದಾನಿನಲ್ಲಿ ಜರಗಿದ್ದು, ಸೊತ್ತುಗಳನ್ನು ಕಮಿಷನರ್‌ ವಾರಸುದಾರರಿಗೆ ಹಸ್ತಾಂತರಿಸಿದರು.
2018ನೇ ಸಾಲಿನಲ್ಲಿ ಒಟ್ಟು 4,30,00,000 ರೂ. ಮೌಲ್ಯದ ಸೊತ್ತು ಕಳವಾಗಿದ್ದು ಈ ಪೈಕಿ 3,40,00,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ. 2019ನೇ ಸಾಲಿನಲ್ಲಿ ಒಟ್ಟು 65,00,000 ರೂ. ಮೌಲ್ಯದ ಸೊತ್ತುಗಳು ಕಳವಾಗಿದ್ದು, ಈ ಪೈಕಿ 32,00,000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್‌ ವಿವರಿಸಿದರು. ಪ್ರಕರಣಗಳ ತನಿಖೆ ನಡೆಸಿ, ಅವುಗಳನ್ನು ಭೇಧಿಸುವಲ್ಲಿ ಯಶಸ್ವಿಯಾದ ಎಲ್ಲ ಪೊಲೀಸ್‌ ಅಧಿಕಾರಿ ಮತ್ತು ಸಿಬಂದಿಯನ್ನು ಅವರು ಅಭಿನಂದಿಸಿದರು.

ಮಂಗಳೂರು ಕೇಂದ್ರ ಉಪ ವಿಭಾಗ ವ್ಯಾಪ್ತಿಯಲ್ಲಿ 39,17,900 ರೂ., ಮಂಗಳೂರು ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ 36,60,410 ರೂ. ಹಾಗೂ ಮಂಗಳೂರು ಉತ್ತರ ಉಪ  ವಿಭಾಗ ವ್ಯಾಪ್ತಿಯಲ್ಲಿ 24,77,180 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ  ನಗದು, ಚಿನ್ನಾಭರಣ, ವಿವಿಧ ಬೈಕ್‌ಗಳು ಮತ್ತು ಸ್ಕೂಟರ್‌ಗಳು, ಮೊಬೈಲ್‌ ಫೋನ್‌ ಸೆಟ್‌ಗಳು, ಕೆ ಮರಾ ಸೇರಿವೆ. ಈ ಯಶಸ್ಸಿನಲ್ಲಿ ಜಿಲ್ಲೆಯಲ್ಲಿ  ಸೇವೆ ಸಲ್ಲಿಸಿ ಕೆಲವು ಸಮಯ ಹಿಂದೆ ವರ್ಗಾವಣೆಯಾದ ಅಧಿಕಾರಿಗಳ, ಸಿಬಂದಿ ಕೊಡುಗೆ ಇದೆ ಎಂದರು.

ಕಳವು ಸಹಿತ ಯಾವುದೇ ಪ್ರಕರಣ ನಡೆದ ಬಳಿಕ ತನಿಖೆ ಮಾಡಿ ಪ್ರಕರಣ ಭೇದಿಸಿದ ಬಳಿಕ ವಶಪಡಿಸಿಕೊಂಡ ಸೊತ್ತುಗಳನ್ನು ಕೋರ್ಟ್‌ ಆದೇಶ ಪಡೆದು ವಾರಸುದಾರರಿಗೆ ಮರಳಿಸಬೇಕಾಗಿದ್ದು, ಈ ಕೆಲಸವನ್ನು ಇಲಾಖೆ ಮಾಡುತ್ತಿದೆ. ಈ ಮೂಲಕ ರಾಜ್ಯ ಪೊಲೀಸರು ಇಲಾಖೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಿ ಕೆಲಸ ಮಾಡುತ್ತಿದ್ದಾರೆ. ಇದು ಇಲಾಖೆ ಬಗ್ಗೆ ಜನರಲ್ಲಿರುವ ವಿಶ್ವಾಸವನ್ನು ಇಮ್ಮಡಿಗೊಳಿಸುವ ಕಾರ್ಯಕ್ರಮವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಜನರು ಯಾವುದೇ ದೂರು, ಸಲಹೆಗಳಿದ್ದಲ್ಲಿ ಫೇಸುºಕ್‌, ವಾಟ್ಸಪ್‌, ಟ್ವಿಟರ್‌ ಮೂಲಕ ನೀಡಿದರೆ ಹೆಚ್ಚು ಅನುಕೂಲ. ಪೊಲೀಸ್‌ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಮಾಡುವಲ್ಲಿ ಇಲಾಖೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿ¤ದೆ. ಈ ದಿಸೆಯಲ್ಲಿ ಸಿಟಿ ಪೊಲೀಸ್‌ ಟ್ವಿಟರ್‌ ಖಾತೆಯನ್ನು ತೆರೆದಿದ್ದು, ಜನರು ಅದನ್ನು ಬಳಕೆ ಮಾಡುತ್ತಿದ್ದಾರೆ ಎಂದರು.

Advertisement

ಡ್ರಗ್ಸ್‌ ಮೂಲ ಶೋಧ
ಯುವಜನರು ಡ್ರಗ್ಸ್‌, ಗಾಂಜಾ, ಎಂಡಿಎಂ, ಸಿಂಥೆಟಿಕ್‌ ಮತ್ತಿತರ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಈ ಬಗ್ಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಡ್ರಗ್ಸ್‌ ಸಾಗಾಟದ ಮೂಲವನ್ನು ಪತ್ತೆ ಹಚ್ಚಿ ಸಂಪೂರ್ಣ ಮಟ್ಟ ಹಾಕಲು ಪ್ರಯತ್ನಿಸಲಾಗುವುದು ಎಂದು ವಿವರಿಸಿದರು.

ಶ್ರೀಲಂಕಾ ಬಾಂಬ್‌ ಸ್ಫೋಟ ಘಟನೆ
ಶ್ರೀಲಂಕಾ ಬಾಂಬ್‌ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ವಿಶೇಷ ನಿಗಾ ಇರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಲಾಡ್ಜ್ , ಹೊಟೇಲ್‌ ತಪಾಸಣೆ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ವಿಶೇಷ ತಪಾಸಣೆ ಕೈಗೊಳ್ಳಲಾಗಿದೆ. ದಿನದ 24 ಗಂಟೆಯೂ ಪೊಲೀಸ್‌ ಬೀಟ್‌ ನಡೆಸಲಾಗುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳ ಪಡಿಸಲಾಗುತ್ತಿದೆ ಎಂದರು.
ಡಿಸಿಪಿ ಹನುಮಂತರಾಯ ಸ್ವಾಗತಿಸಿದರು.  ಡಿಸಿಪಿ ಲಕ್ಷ್ಮೀಗಣೇಶ್‌ ವಂದಿಸಿದರು. ಎಎಸ್‌ಐ ಹರಿಶ್ಚಂದ್ರ ಬೈಕಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next