Advertisement

ಗೂಡ್ಸ್‌ , ಶಾಲಾ ವಾಹನಗಳ ಮೇಲೆ ನಿಗಾ

10:33 AM Jun 22, 2019 | Team Udayavani |

ಮಂಗಳೂರು: ಸರಕು (ಗೂಡ್ಸ್‌) ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುವುದು ಮತ್ತು ಶಾಲಾ ವಾಹನಗಳಲ್ಲಿ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸಾಗಿಸುವುದರ ಮೇಲೆ ಪೊಲೀಸ್‌ ಇಲಾಖೆ ನಿಗಾ ಇರಿಸುತ್ತಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

Advertisement

ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಸರಕು ವಾಹನಗಳಲ್ಲಿ ಜನರನ್ನು ಸಾಗಿಸಿದ 280 ಪ್ರಕರಣಗಳನ್ನು ಮತ್ತು ಶಾಲಾ ವಾಹನಗಳಲ್ಲಿ ಮಿತಿ ಮೀರಿ ವಿದ್ಯಾರ್ಥಿಗಳನ್ನು ಸಾಗಿಸಿದ 60 ಪ್ರಕರಣಗಳನ್ನು ಒಂದು ತಿಂಗಳಲ್ಲಿ ಪತ್ತೆ ಹಚ್ಚಿ ಕೇಸು ದಾಖಲಿಸಲಾಗಿದೆ ಎಂದರು.

ವಾಹನಗಳಿಗೆ ಟ್ಯಾಂಕ್‌
ಮೀನು ಸಾಗಾಟ ವಾಹನಗಳು ರಸ್ತೆಯುದ್ದಕ್ಕೂ ನೀರು ಚೆಲ್ಲುತ್ತ ಸಾಗುವ ಕುರಿತು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಎಲ್ಲ ವಾಹನಗಳಿಗೆ ತ್ಯಾಜ್ಯ ನೀರು ಸಂಗ್ರಹಕ್ಕೆ ಟ್ಯಾಂಕ್‌ ಅಳವಡಿ ಸುವಂತೆ ಸೂಚಿಸಿದೆ. ಯಾಂತ್ರಿಕ ಮೀನುಗಾರಿಕೆ ನಿಷೇಧದ ಅವಧಿ ಮುಗಿಯುವು ದರೊಳಗೆ ಎಲ್ಲ ವಾಹನಗಳಲ್ಲೂ ಕಡ್ಡಾಯವಾಗಿ ಟ್ಯಾಂಕ್‌ ಅಳವಡಿಸಿರಬೇಕು ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಘಾತಕ ಶಕ್ತಿ ನಿಗ್ರಹ
ಸಮಾಜ ಘಾತಕರಿಂದ ಜನಸಾಮಾನ್ಯರಿಗೆ ತೊಂದರೆ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಬಾರ್‌ಗಳಿಗೆ ದಿಢೀರ್‌ ದಾಳಿ, ತಪಾಸಣೆ ಇನ್ನಷ್ಟು ಕಟ್ಟುನಿಟ್ಟಾಗಿ ಮುಂದುವರಿಯಲಿದೆ ಎಂದರು.

Advertisement

ಇದರಿಂದ ಸಭ್ಯ ಮದ್ಯ ಪಾನಿಗಳ ಹಕ್ಕನ್ನು ಕಸಿದಂತಾಗುವುದಿಲ್ಲವೇ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರದ್ದೇ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಇರಾದೆ ಇಲಾಖೆಯದ್ದಲ್ಲ. ಸಮಾಜ ಘಾತಕ ಶಕ್ತಿಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಮಾತ್ರವೇ ದಾಳಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next