Advertisement

ಸಂಚಾರ ನಿರ್ವಹಣೆ: ವ್ಯೂಹಾತ್ಮಕ ಕಾರ್ಯಯೋಜನೆ ರಚನೆಯಾಗಲಿ

11:12 PM May 18, 2019 | Team Udayavani |

ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಎಂಬುದು ನಿತ್ಯದ ಕಿರಿಕಿರಿ ಎಂಬಂತಾಗಿದೆ. ಇದಕ್ಕಾಗಿ ಸಾಕಷ್ಟು ಪರ್ಯಾಯ ಯೋಜನೆಗಳನ್ನು ಕೈಗೊಂಡಿದ್ದರೂ ನಿಯಂತ್ರಣಕ್ಕೆ ತರುವುದು ಅಸಾಧ್ಯ ಎಂಬಂತಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಅಳವಡಿಸಿರುವ ಅಡಾಪ್ಟಿವ್‌ ಸಿಗ್ನಲ್ಗಳನ್ನು ಮಂಗಳೂರಿನಲ್ಲೂ ಅಳವಡಿಸಿದರೆ ಇಲ್ಲಿನ ಟ್ರಾಫಿಕ್‌ ಸಮಸ್ಯೆಗೆ ಕೊಂಚ ಪರಿಹಾರ ಒದಗಿಸಬಲ್ಲದು. ಈ ನಿಟ್ಟಿನಲ್ಲಿ ವ್ಯೂಹಾತ್ಮಕ ಯೋಜನೆ ರೂಪಿಸುವತ್ತ ಚಿಂತನೆ ನಡೆಯಬೇಕಿದೆ.

Advertisement

ಸಂಚಾರ ದಟ್ಟನೆ ಮಂಗಳೂರು ನಗರವನ್ನು ಇತ್ತೀಚೆಗೆ ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲೊಂದು. ಟ್ರಾಫಿಕ್‌ ಜಾಮ್‌ ದಿನನಿತ್ಯದ ಕಿರಿಕಿರಿ. ಇನ್ನು ಕೆಲವೇ ದಿನಗಳಲ್ಲಿ ಶಾಲೆಗಳು ಪ್ರಾರಂಭವಾಗಲಿವೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಮುಂದಿನ 15 ದಿನಗಳಲ್ಲಿ ಮಳೆಗಾಲ ಆರಂಭವಾಗುತ್ತದೆ. ಇದರೊಂದಿಗೆ ನಗರದ ಸಂಚಾರ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ.

ಮಂಗಳೂರು ನಗರದಲ್ಲಿ ಸಂಚಾರ ಸುವ್ಯವಸ್ಥೆಗೆ ಪೂರಕವಾಗಿ ಸೌಲಭ್ಯಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ದ್ವಿಪಥ ರಸ್ತೆಗಳು ಚತುಷ್ಪಥವಾಗಿವೆ. ಡಾಮಾರು ರಸ್ತೆಗಳು ಕಾಂಕ್ರೀಟೀಕರಣಗೊಂಡಿವೆ. ಆದರೂ ಸಮಸ್ಯೆ ಹಾಗೆಯೇ ಉಳಿದುಕೊಂಡಿದ್ದು ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸೌಲಭ್ಯಗಳ ಉನ್ನತೀಕರಣದ ಜತೆಗೆ ಸಂಚಾರ ವ್ಯವಸ್ಥೆ ನಿರ್ವಹಣೆಗೆ ವ್ಯೂಹಾತ್ಮಕ ಕಾರ್ಯಯೋಜನೆಗಳ ಬಗ್ಗೆಯೂ ಚಿಂತನೆ ನಡೆಸುವ ಅವಶ್ಯಕತೆ ಇದೆ.

ಸಮಸ್ಯೆಯ ಮೂಲಗಳು
ಮಂಗಳೂರು ನಗರದಲ್ಲಿ ಹೃದಯ ಭಾಗದ ಪ್ರಮುಖ ರಸ್ತೆಗಳನ್ನು ಪರಿಗಣನೆಗೆ ತೆಗೆದುಕೊಂಡರೆ 100ಕ್ಕೂ ಅಧಿಕ ಜಂಕ್ಷನ್‌ಗಳಿವೆ. 500ಕ್ಕೂ ಅಧಿಕ ಕ್ರಾಸಿಂಗ್‌ಗಳಿವೆ. ಕ್ರಾಸಿಂಗ್‌ಗಳು ವ್ಯವಸ್ಥಿತವಾಗಿಲ್ಲ.. ವಾಹನ ಚಾಲಕರ ಆತುರ, ಧಾವಂತ , ನಿರ್ಲಕ್ಷ್ಯದ ಚಾಲನೆ ಒಂದೆಡೆಯಾದರೆ ರಸ್ತೆ ಪಕ್ಕದಲ್ಲಿ ವಾಹನಗಳ ಪಾರ್ಕಿಂಗ್‌ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಎಲ್ಲ ಕಡೆ ಪೊಲೀಸ್‌ ಸಿಬಂದಿ ನಿಯೋಜಿಸಲು ಸಾಧ್ಯವಿಲ್ಲ. ರಸ್ತೆಯ ಅಗಲೀಕರಣ ವಾಹನಗಳ ಸಂಚಾರಕ್ಕೆ ಪೂರಕವಾಗುವ ಬದಲಾಗಿ ಪಾರ್ಕಿಂಗ್‌ ವ್ಯವಸ್ಥೆಯ ಅನುಕೂಲಕ್ಕೆ ಮಾಡಿದಂತಿದೆ.

ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ ರಾ.ಹೆ. 66 ಹಾಗೂ ರಾ.ಹೆ. 75 ನಗರದ ಹೃದಯ ಭಾಗದಲ್ಲೇ ಹಾದುಹೋಗುವುದರಿಂದ ಸಂಚಾರ ಸಮಸ್ಯೆಯನ್ನು ಇನ್ನಷ್ಟು ಜಠಿಲಗೊಳಿಸಿದೆ.ಇದಕ್ಕೆ ಪರ್ಯಾಯವಾಗಿ ರಿಂಗ್‌ ರೋಡ್‌ಗಳಾಗಿಲ್ಲ. ಮಂಗಳೂರು ನಗರದೊಳಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಪಿಟಿ , ನಂತೂರು, ಪಂಪ್‌ವೆಲ್, ತೊಕ್ಕೊಟ್ಟು ವೃತ್ತಗಳಲ್ಲಿ ಬೆಳಗ್ಗೆ 8.30 ರಿಂದ ಸಂಜೆ 8 ಗಂಟೆಯವರೆಗೆ ಅಗಾಗ್ಗೆ ಟ್ರಾಫಿಕ್‌ ಜಾಮ್‌ ಸಮಸ್ಯೆ ಪುನರಾವರ್ತಿಸುತ್ತಲೇ ಇರುತ್ತವೆ. ತೊಕ್ಕೊಟ್ಟು ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಸದಾ ವಾಹನ ದಟ್ಟನೆ ಇರುವ ಈ ಪ್ರದೇಶದಲ್ಲಿ ಈಗ ಟ್ರಾಫಿಕ್‌ ಜಾಮ್‌ ಸಮಸ್ಯೆ ತೀವ್ರಗೊಂಡಿದೆ.

Advertisement

ಮಂಗಳೂರು ನಗರದೊಳಗೆ ಬಂಟ್ಸ್‌ಹಾಸ್ಟೆಲ್, ಕಂಕನಾಡಿ ಕರಾವಳಿ ವೃತ್ತ , ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ, ಹಂಪನಕಟ್ಟೆ ಪಿ.ವಿ.ಎಸ್‌.ವೃತ್ತ ಮುಂತಾದ ಕಡೆಗಳಲ್ಲಿ ಅಗಾಗ್ಗೆ ತಲೆದೋರುವ ಸಂಚಾರ ಸ್ಥಗಿತದಿಂದ ವಾಹನ ಚಾಲಕರು ಹಾಗೂ ಪ್ರಯಾಣಿಕರು ನರಕ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಕೆಪಿಟಿ ಹಾಗೂ ನಂತೂರು ವೃತ್ತಗಳಲ್ಲಿ ಮೇಲ್ಸೇತುವೆ ನಿರ್ಮಾಣ ಪ್ರಸ್ತಾವಗಳು ಕಾರ್ಯ ರೂಪಕ್ಕೆ ಬಂದಿಲ್ಲ.

ಕೆಲವು ಪ್ರಯೋಗಗಳು
ಮಂಗಳೂರು ನಗರದೊಳಗೆ ಟ್ರಾಫಿಕ್‌ ಜಾಮ್‌ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡಲಾಗಿದೆ. ಇದರಲ್ಲಿ ಕೆಲವು ಯಶಸ್ವಿಯಾಗಿದೆ. ನಗರದ ಪ್ರಮುಖ ವೃತ್ತವಾಗಿರುವ ಹಂಪನಟ್ಟೆಯನ್ನು ಸಿಗ್ನಲ್ಮೂಲಕ್ತ ವೃತ್ತವಾಗಿ ಮಾಡಿರುವುದು ಹಾಗೂ ಸಂಚಾರ ವ್ಯವಸ್ಥೆಯನ್ನು ಮರು ಹೊಂದಾಣಿಕೆ ಮಾಡಿರುವುದರಿಂದ ಈ ಭಾಗದಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ. ಜ್ಯೋತಿ ವೃತ್ತ, ಬಲ್ಮಠ,ಕರಾವಳಿ ವೃತ್ತ ಸೇರಿದಂತೆ ಕೆಲವು ಕಡೆ ಸಿಗ್ನಲ್ ವ್ಯವಸ್ಥೆ ಅಳವಡಿಸಿದ್ದರೂ ಗೊಂದಲಮಯವಾಗಿವೆ. ಕೆಲವು ಕಡೆ ರಸ್ತೆಗಳ ಮಧ್ಯೆ ಕೋನ್‌, ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.
ಡಿವೈಡರ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ತಿರುಗಿಸುವುದು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದರೆ ಜತೆಗೆ ಒಂದಷ್ಟು ಪ್ರಮುಖ ಕ್ರಮಗಳು ಅವಶ್ಯವಿದೆ.

ಅಡಾಪ್ಟಿವ್‌ ಸಿಗ್ನಲ್‌ಳು
ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆಗೆ ಕೆಲವು ವ್ಯೂಹಾತ್ಮಕ ಕಾರ್ಯವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಈಗ ಇರುವ ಆಟೋಮೆಟಿಕ್‌ ಸಿಗ್ನಲ್ಗಳು ಶೀಘ್ರದಲ್ಲೇ ಅಡಾಪ್ಟಿವ್‌ ಸಿಗ್ನಲ್ಗಳಾಗಿ ಮಾರ್ಪಾಡುಗೊಳ್ಳಲಿವೆ.

ನಿರ್ದಿಷ್ಟ ಸಮಯ ನಿಗದಿ ಪಡಿಸಿ ಅದರಂತೆ ಸಿಗ್ನಲ್ಗಳು ಬದಲಾಗುತ್ತವೆ. ಮುಂದಿನ ದಿನಗಳಲ್ಲಿ ವಾಹನಗಳ ಸಾಂದ್ರತೆ ಆಧರಿಸಿ ಸ್ವತಃ ಕೆಮೆರಾಗಳೇ ಪರಸ್ಪರ‌ ಸಂವಹನ ನಡೆಸಿ ವಾಹನ ಸವಾರರಿಗೆ ಸಿಗ್ನಲ್ಗಳನ್ನು ನೀಡುತ್ತವೆ.ಈಗಾಗಲೇ ಇದನ್ನು ಪ್ರಾಯೋಗಿಕವಾಗಿ ಬೆಂಗಳೂರಿನ ಕೆಲವು ಕಡೆಗಳಲ್ಲಿ ಜಾರಿಗೊಳಿಸಲಾಗಿದೆ.

ಸುಮಾರು 60 ರಿಂದ 70 ಕೋ.ರೂ. ವೆಚ್ಚದಲ್ಲಿ ನಗರದ ಎಲ್ಲ ಸಿಗ್ನಲ್ಗಳನ್ನು ಈ ವ್ಯವಸ್ಥೆಗೆ ಮಾರ್ಪಾಡು ಮಾಡುವ ಕಾರ್ಯಯೋಜನೆ ಸಿದ್ಧಗೊಂಡಿದೆ. ಈ ಕ್ರಮದಿಂದ ವಾಹನ ದಟ್ಟನೆ ಶೇ.25 ರಿಂದ 30ರಷ್ಟು ತಗ್ಗಲಿದೆ. ಜತೆಗೆ ಸಂಚಾರ ವೇಗವೃದ್ಧಿಯಾಗಲಿದೆ.

ಪ್ರತಿ ಸಿಗ್ನಲ್‌ಗ‌ಳಲ್ಲಿ ಕಾಯುವಿಕೆ ಆವಧಿ 5 ರಿಂದ 10 ನಿಮಿಷ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಸಂಚಾರ ಮಾಹಿತಿ ಕೇಂದ್ರ ಸ್ಥಾಪಿಸುವ ಬಗ್ಗೆಯೂ ಸಿದ್ದತೆಗಳು ನಡೆಯುತ್ತಿದೆ.ಜಿಪಿಎಸ್‌, ಕ್ಯೂಎಂಎಸ್‌ ಮತ್ತು ಆಟೋಮೆಟಿಕ್‌ ಟ್ರಾಫಿಕ್‌ ಆ್ಯಂಡ್‌ ಕ್ಲಾಸಿಫೈರ್ಸ್‌ ( ಎಟಿಸಿಎಫ್‌) ಮೂಲಕ ಮಾಹಿತಿ ಸಂಗ್ರಹಿಸಿ ರಸ್ತೆಯ ಯಾವ ಭಾಗದಲ್ಲಿರುವ ಸಂಚಾರ ಮತ್ತು ವೇಗದ ಪ್ರಮಾಣ ಕುರಿತು ನಿಖರ ಮಾಹಿತಿ ಒದಗಿಸಲಾಗುತ್ತದೆ ಅಲ್ಲದೆ ರಸ್ತೆಯಲ್ಲಿ ಯಾವ ವಿಧದ ಎಷ್ಟು ವಾಹನಗಳು ಚಲಿಸುತ್ತಿವೆ ಎನ್ನುವ ನಿಖರ ಮಾಹಿತಿ ಕೂಡ ದೊರೆಯುತ್ತದೆ.

ಪರಿಶೀಲಿಸಬಹುದಾದ ಸಾಧ್ಯತೆಗಳು
ಸಂಚಾರ ವ್ಯವಸ್ಥೆಯ ಮರುಹೊಂದಾಣಿಕೆ, ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆಯನ್ನು ಒಂದಷ್ಟು ಪರಿಹರಿಸಬಹುದು. ಈ ನಿಟ್ಟಿನಲ್ಲಿ ಕೆಲವು ಸಾಧ್ಯತೆಗಳನ್ನು ಪರಿಶೀಲಿಸಬಹುದಾಗಿದೆ.
-ಟ್ರಾಫಿಕ್‌ಜಾಮ್‌ ನಿವಾರಣೆಗೆ ಪೂರಕವಾಗಿ ಕೆಲವು ರಸ್ತೆಗಳನು ಏಕಮುಖಗೊಳಿಸುವುದು
-ಪರ್ಯಾಯ ರಸ್ತೆಗಳನ್ನು ಗುರುತಿಸಿ ವಾಹನಗಳ ಸಂಚಾರವನ್ನು ಡೈವರ್ಟ್‌ ಮಾಡುವುದು
-ಏಕಸಮಯದಲ್ಲಿ ಶಾಲೆಗಳ ಆರಂಭ ಮತ್ತು ಬಿಡುವುದರ ಬದಲು ಸಮಯದಲ್ಲಿ ವ್ಯತ್ಯಾಸ ಮಾಡಿಕೊಳ್ಳುವುದು
-ಶಾಲೆಗಳನ್ನು ಮಕ್ಕಳನ್ನು ಕರೆತರಲು ಶಾಲೆಗಳ ವತಿಯಿಂದಲೇ ವಾಹನಗಳನ್ನು ನಿಯೋಜಿಸುವುದು
-ಖಾಸಗಿಯಾಗಿ ಶಾಲಾ ಟ್ರಿಪ್‌ಗ್ಳನ್ನು ಮಾಡುವ ವಾಹನಗಳು ರಸ್ತೆಯಲ್ಲಿ ನಿಲ್ಲುವ ಬದಲು ಶಾಲಾ ಆವರಣದಲೇ ಪಾರ್ಕಿಂಗ್‌ ಜಾಗ ಒದಗಿಸುವುದು -ನಗರದೊಳಗೆ ಪ್ರಮುಖ ತಾಣಗಳಲ್ಲಿ ಪಾರ್ಕಿಂಗ್‌ ಝೋನ್‌ ನಿರ್ಮಾಣ -ರಸ್ತೆಗಳ ಬದಿಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್‌ಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ – ಸಂಚಾರ ನಿಬಿಡ ರಸ್ತೆಗಳಲ್ಲಿ ಬಸ್‌ನಿಲ್ದಾಣಗಳಲ್ಲಿ ಸಿಟಿಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರಿಗಾಗಿ ಕಾಯುವುದಕ್ಕೆ ಅವಕಾಶ ನೀಡದಿರುವುದು
-ಕಂಡ ಕಂಡಲ್ಲಿ ಬಸ್‌ಗಳ ನಿಲುಗಡೆಗೆ ಕಡಿವಾಣ ಹಾಕುವುದು
-ಕೆಲವು ಜಂಕ್ಷನ್‌ಗಳಲ್ಲಿ ಫ್ಲೈಒವರ್‌ಗಳ ನಿರ್ಮಾಣ

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next