Advertisement

ಸ್ವಾತಂತ್ರ್ಯ ಸಂಗ್ರಾಮದ ನೆನಪಿಗೆ ‘ಮಂಗಲ್‌ ಪಾಂಡೆ ಚೌಕ’

12:58 PM Aug 11, 2018 | |

ಪುತ್ತೂರು: ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶದ ದ್ವಿತೀಯ ಹಾಗೂ ದಕ್ಷಿಣ ಭಾರತದ ಪ್ರಥಮ ಹುತಾತ್ಮ ಸೈನಿಕರ ನೆನಪಿನ ಅಮರ್‌ ಜವಾನ್‌ ಜ್ಯೋತಿ ಸ್ಮಾರಕ ಉದ್ಘಾಟನೆಗೆ ಸಾಕ್ಷಿಯಾಗಿದ್ದ ಪುತ್ತೂರು ಈ ಬಾರಿ ಪುನರ್‌ ನಿರ್ಮಾಣಗೊಂಡ 1857ರ ಮಹಾ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕವಾದ ಧ್ವಜಸ್ತಂಭ ‘ಮಂಗಲ್‌ ಪಾಂಡೆ ಚೌಕ’ ಉದ್ಘಾಟನೆಗೆ ಸಾಕ್ಷಿಯಾಗುತ್ತಿದೆ.

Advertisement

ಸೈನಿಕರಿಗೆ ಗೌರವ ಸಲ್ಲಿಸುವ ಮತ್ತು ಯುವ ಸಮುದಾಯದಲ್ಲಿ ರಾಷ್ಟ್ರ ಪ್ರೇಮವನ್ನು ಉದ್ದೀಪನಗೊಳಿಸುವ ಉದ್ದೇಶವಿದೆ. ನಿತ್ಯ 24 ಗಂಟೆಗಳೂ ಉರಿಯುವ ಅಮರ್‌ ಜವಾನ್‌ ಜ್ಯೋತಿ ಹಾಗೂ ಸ್ಮಾರಕವನ್ನು ನಿರ್ಮಿಸಿದ್ದ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆ ಇದರ ರೂವಾರಿ. ಜ್ಯೋತಿ ಸ್ಮಾರಕದ ಪಕ್ಕದಲ್ಲೇ ಇರುವ 1857ರ ಮಹಾ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವದ ನೆನಪಿನಲ್ಲಿ 1957ರಲ್ಲಿ ನಿರ್ಮಿಸಲಾದ ಧ್ವಜಸ್ತಂಭಕ್ಕೆ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಅಮೃತ ಶಿಲೆಯ ಸುಂದರ ಚೌಕವನ್ನು ನಿರ್ಮಿಸಿ ‘ಮಂಗಲ್‌ ಪಾಂಡೆ ಚೌಕ’ ಹೆಸರಿನೊಂದಿಗೆ ಆ. 14ರಂದು ಲೋಕಾರ್ಪಣೆಗೊಳಿಸುತ್ತಿದೆ.

ಮಂಗಲ್‌ ಪಾಂಡೆಗೆ ಗೌರವ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದು ಶತಮಾನ ಆಚರಿಸಿದ ಐತಿಹಾಸಿಕ ದಿನದ ನೆನಪಿನಲ್ಲಿ 1957ರಲ್ಲಿ ಕಿಲ್ಲೆ ಮೈದಾನದ ಮೇಲ್ಭಾಗದಲ್ಲಿ, ಮಿನಿ ವಿಧಾನಸೌಧದ ಮುಂಭಾಗದಲ್ಲಿ ಧ್ವಜಸ್ತಂಭವನ್ನು ಆಗಿನ ಪುತ್ತೂರು ಪಂಚಾಯತ್‌ ಆಡಳಿತ ನಿರ್ಮಿಸಿದೆ ಎನ್ನಲಾಗುತ್ತಿದೆ. ಧ್ವಜಸ್ತಂಭದ ಫಲಕದಲ್ಲಿ ಪ್ರಥಮ ಸ್ವಾತಂತ್ರ್ಯಸಂಗ್ರಾಮದ ನೆನಪಿನಲ್ಲಿ ನಿರ್ಮಿಸಿರುವ ಕುರಿತು ಮಾಹಿತಿ ಇದೆ. ಆದರೆ ಯಾರು ನಿರ್ಮಿಸಿದ್ದಾರೆ ಎನ್ನುವ ಮಾಹಿತಿ ಇಲ್ಲ. ಹೆಚ್ಚಿನ ದಾಖಲೆಗಳೂ ಇಲ್ಲ. ಆ ನೆನಪನ್ನು ಅಮರವಾಗಿಸುವ ನಿಟ್ಟಿನಲ್ಲಿ ಧ್ವಜಸ್ತಂಭಕ್ಕೆ ಅಮೃತಶಿಲೆಯ ಕಟ್ಟೆ ಕಟ್ಟಿ 4 ಲಕ್ಷ ರೂ. ಮಿಕ್ಕಿ ವೆಚ್ಚದಲ್ಲಿ ಪುನರ್‌ ನಿರ್ಮಾಣಗೊಳಿಸಲಾಗುತ್ತಿದ್ದು, ಪ್ರಥಮ ಸ್ವಾತಂತ್ರ್ಯ  ಸಂಗ್ರಾಮಕ್ಕೆ ನಾಂದಿ ಹಾಡಿದ ಸಿಪಾಯಿ ಮಂಗಲ್‌ ಪಾಂಡೆಯ ಹೆಸರನ್ನು ಚೌಕಕ್ಕೆ ಇರಿಸಿ ಗೌರವ ಸಲ್ಲಿಸಲಾಗುತ್ತಿದೆ.

ಪುತ್ತೂರಿನ ಶ್ರೀರಾಮ ಕನ್‌ಸ್ಟ್ರಕ್ಷನ್ಸ್‌ ನವರು ಧ್ವಜಸ್ತಂಭ ಅಭಿವೃದ್ಧಿಯ ಕಾಮಗಾರಿ ನಡೆಸುತ್ತಿದ್ದು, ಪ್ರಥಮ ಸ್ವಾತಂತ್ರ್ಯ  ಸಂಗ್ರಾಮದ ಶತಮಾನೋತ್ಸವದಲ್ಲಿ ಧ್ವಜಸ್ತಂಭ ನಿರ್ಮಿಸಿರುವ ಕುರಿತ ಫಲಕವನ್ನು, ಮೂಲ ಅಡಿಪಾಯವನ್ನು ಉಳಿಸಿಕೊಂಡು ಅಭಿವೃದ್ಧಿಗೊಳಿಸಲಾಗುತ್ತಿದೆ. 27×27 ಅಡಿ ವಿಸ್ತಾರದಲ್ಲಿ ಎರಡು ಅಂತರದಲ್ಲಿ ಸುತ್ತು ಪೌಳಿಯನ್ನು ಮಂಗಲ್‌ ಪಾಂಡೆ ಚೌಕ ಹೊಂದಿದ್ದು, ಅಮೃತ ಶಿಲೆಯ ಸ್ಮಾರಕವಾಗಿ ಕಂಗೊಳಿಸಲಿದೆ.

ಕಾರ್ಗಿಲ್‌ ಸೈನಿಕನಿಂದ ಉದ್ಘಾಟನೆ
ಧ್ವಜಸ್ತಂಭದ ಮಂಗಲ್‌ ಪಾಂಡೆ ಚೌಕದ ಲೋಕಾರ್ಪಣೆ ಆ. 14ರಂದು ಅಪರಾಹ್ನ ನಡೆಯಲಿದ್ದು, ಕಾರ್ಗಿಲ್‌ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಅಂಗಹೀನರಾದ ವೀರ ಸೈನಿಕ ರಂಗಪ್ಪ ಆಲೂರು ಬಾಗಲಕೋಟೆ ಉದ್ಘಾಟಿಸಲಿದ್ದಾರೆ. ವೈಸ್‌ ಏರ್‌ ಮಾರ್ಷಲ್‌ ರಮೇಶ್‌ ಕಾರ್ಣಿಕ್‌, ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಸ್ಥಳೀಯಾಡಳಿತ ನಗರಸಭೆಗೆ ಮಂಗಲ್‌ ಪಾಂಡೆ ಚೌಕವನ್ನು ಹಸ್ತಾಂತರಿಸಲಾಗುತ್ತದೆ.

Advertisement

ಈ ಬಾರಿ ಸ್ವಾತಂತ್ರ್ಯೋತ್ಸವದ ದಿನ ಇಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತದೆ. ಅಮರ್‌ ಜವಾನ್‌ ಜ್ಯೋತಿ ಸ್ಮಾರಕ ಬಳಿ ಸ್ವಾತಂತ್ರ್ಯೋತ್ಸವ, ಸೈನಿಕರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿವೆ.

ಹೆಮ್ಮೆಯಿದೆ
ರಾಷ್ಟ್ರದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣವಾಗಿಡುವ ಸೈನಿಕರ ನೆನಪಿನಲ್ಲಿ ಅಮರ್‌ ಜವಾನ್‌ ಜ್ಯೋತಿ ಸ್ಮಾರಕ, ಈಗ ಪ್ರಥಮ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ಮಂಗಲ್‌ ಪಾಂಡೆ ನೆನಪಿನ ಧ್ವಜ ಚೌಕ ನಿರ್ಮಿಸಲು ಸಿಕ್ಕಿದ ಅವಕಾಶದ ಕುರಿತು ಅತ್ಯಂತ ಹೆಮ್ಮೆಯಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಯುವ ಸಮುದಾಯದಲ್ಲಿ ದೇಶಭಕ್ತಿ ಉದ್ದೀಪನಗೊಳಿಸಬೇಕು. ದೇಶ ರಕ್ಷಕರ ಕುರಿತು ಗೌರವ ಹೆಚ್ಚಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದೇವೆ.
– ಸುಬ್ರಹ್ಮಣ್ಯ ನಟ್ಟೋಜ
ಸಂಚಾಲಕರು, ಅಂಬಿಕಾ ಸಮೂಹ ವಿದ್ಯಾಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next