Advertisement
ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಭೂ ಸುಧಾರಣಾ ಕಾಯ್ದೆ 1961ರ ತಿದ್ದುಪಡಿ ತರಲಾಗಿದ್ದು ಇದರಲ್ಲಿ ರಾಜ್ಯದಲ್ಲಿರುವ 58 ಸಾವಿರ ಗೊಲ್ಲರ ಹಟ್ಟಿ, ಲಂಬಾಣಿ ತಾಂಡಾ, ವಡ್ಡರ ಹಟ್ಟಿ, ಕುರುಬರ ಹಟ್ಟಿ, ನಾಯಕರ ಹಟ್ಟಿ, ಮಜಾರೆ ಗ್ರಾಮ, ದೊಡ್ಡಿ, ಪಾಳ್ಯ, ಕ್ಯಾಂಪ್, ಗೌಳಿ ದೊಡ್ಡಿ, ಕಾಲೋನಿಯಂತಹ ದಾಖಲೆ ಇಲ್ಲದ ಜನ ವಸತಿಗಳನ್ನು ಇನ್ನು ಮುಂದೆ ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಸರ್ಕಾರದ ಎಲ್ಲ ಸವಲತ್ತು ದೊರೆಯುವಂತೆ ಮಾಡುವುದು ಈ ವಿಧೇಯಕದ ಪ್ರಮುಖಾಂಶ. ಈ ವಿಧೇಯಕ ಅನ್ವಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸುವ ದಿನದವರೆಗೂ ಕೃಷಿ ಕಾರ್ಮಿಕರು ಸೇರಿ ಬಡಕುಟುಂಬಗಳು ತಾವು ವಾಸಿಸುವ ಮನೆ ಹಾಗೂ ಮನೆಗೆ ಹೊಂದಿಕೊಂಡಿರುವ ಜಾಗಕ್ಕೆ ನಿಯಮಗಳ ವ್ಯಾಪ್ತಿಗೊಳಪಟ್ಟು, ಅವರನ್ನೇ ಮಾಲಿಕರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
Related Articles
Advertisement
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ತಳ ಸಮುದಾಯದವರಿಗೆ ಹಕ್ಕು ನೀಡುವ ಮಹತ್ವದ ವಿಧೇಯಕ ಸರ್ವಾನುಮತದಿಂದ ಅಂಗೀಕಾರವಾಗಿರುವುದು ಎಲ್ಲರಿಗೂ ಖುಷಿಯಾಗಿದೆ. ಈಗ ಸರ್ಕಾರ ಇದನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕಿದೆ. ಸರ್ಕಾರ ಕಾನೂನು ರೂಪಿಸಿದರೂ ಅಧಿಕಾರಿಗಳು ಯಾವುದಾದರೊಂದು ಕೊಕ್ಕೆ ಹಾಕಿ ಅದನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಾರೆ. ಆ ರೀತಿ ಆಗದಂತೆ ಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದರು.
ಸ್ಪೀಕರ್ ಕೆ.ಬಿ. ಕೋಳಿವಾಡ್, ಪಿ. ರಾಜೀವ, ಅಶೋಕ ಖೇಣಿ, ಶಿವರಾಜ್ ತಂಗಡಗಿ, ಎಂ.ಪಿ. ರವೀಂದ್ರ, ಪರಮೇಶ್ವರ್ ನಾಯಕ್, ಬಿ.ಬಿ. ನಿಂಗಯ್ಯ ಸೇರಿದಂತೆ ಅನೇಕ ಸದಸ್ಯರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ವಿಧೇಯಕ ಅಂಗೀಕಾರಕ್ಕೆ ನಿರಂತರ ಒತ್ತಡ ಹಾಕುತ್ತಿದ್ದ ಶಾಸಕ ಶಿವಮೂರ್ತಿ ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸಿದರು.