Advertisement

ಜಿಲ್ಲೆಯ ತಾಣಗಳಿಗೆ ಪ್ರವಾಸಿಗರ ಲಗ್ಗೆ

04:42 PM Nov 02, 2022 | Team Udayavani |

ಮಂಡ್ಯ: ದಸರಾ, ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ದಿನದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ಕೆಆರ್‌ಎಸ್‌, ರಂಗನತಿಟ್ಟು ಹಾಗೂ ಗಗನಚುಕ್ಕಿ ಫಾಲ್ಸ್‌ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. 2020 ಹಾಗೂ 2021ರಲ್ಲಿ ಕೊರೊನಾ ಸಂದರ್ಭದಲ್ಲಿ ಬಂದ್‌ ಆಗಿದ್ದರಿಂದ ನಷ್ಟ ಉಂಟಾಗಿತ್ತು. ಆದರೆ, 2022ರಲ್ಲಿ ಯಾವುದೇ ಕೊರೊನಾ ಸೋಂಕಿನ ಭಯವಿಲ್ಲದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

Advertisement

ಕೆಆರ್‌ಎಸ್‌ಗೆ ಒಂದು ಲಕ್ಷ ಮಂದಿ: ವಿಶ್ವ ಪ್ರಸಿದ್ಧವಾಗಿರುವ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ದಸರಾ ಹಬ್ಬದ ಸಂದರ್ಭದಲ್ಲಿ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ನಂತರ ದಿನಗಳಲ್ಲಿ 6ರಿಂದ 7 ಸಾವಿರ ಮಂದಿ ಆಗಮಿಸಿದ್ದಾರೆ. ಕಳೆದ 20 ದಿನಗಳಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಮಂದಿ ಕೆಆರ್‌ಎಸ್‌ ಜಲಾಶಯ, ಬೃಂದಾವನಕ್ಕೆ ಭೇಟಿ ನೀಡಿದ್ದಾರೆ.

ರಂಗನತಿಟ್ಟಿಗೂ ಭೇಟಿ: ದಸರಾ ವೇಳೆ ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮಕ್ಕೂ ಭೇಟಿ ನೀಡಿದ್ದಾರೆ. ಆದರೆ ಈ ವರ್ಷ ಹೆಚ್ಚು ಮಳೆಯಾಗುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರು ಹೆಚ್ಚಾದ ಸಂದರ್ಭಗಳಲ್ಲಿ ಪಕ್ಷಿಧಾಮದಲ್ಲಿ ಆಗಾಗ್ಗೆ ಬೋಟಿಂಗ್‌ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ಇದೇ ತಿಂಗಳ 12ರಿಂದ ಮತ್ತೆ ಬೋಟಿಂಗ್‌ ಸ್ಥಗಿತಗೊಳಿಸಲಾಗಿತ್ತು. ನಂತರ ನಾಲ್ಕು ದಿನಗಳಿಂದ ಬೋಟಿಂಗ್‌ ಪುನಾರಂಭಿಸಲಾಗಿದೆ. ಇದರಿಂದ ಪ್ರತಿದಿನ 2500ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಗಗನಚುಕ್ಕಿ ವೈಭವ ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು: ಮತ್ತೂಂದು ಆಕರ್ಷಣೀಯ ಸ್ಥಳವೆಂದರೆ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ. ಕಳೆದ ಇಪ್ಪತ್ತು ವರ್ಷಗಳಲ್ಲೇ ಪ್ರಸ್ತುತ ವರ್ಷ ಅತಿ ಹೆಚ್ಚು ದಾಖಲೆ ಮಳೆಯಾಗಿದೆ. ಇದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಅತಿ ಹೆಚ್ಚು ನೀರು ಹರಿದು ಬರುತ್ತಿದೆ. ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಯುತ್ತಿರುವುದರಿಂದ ಗಗನಚುಕ್ಕಿ ಫಾಲ್ಸ್‌ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೆಆರ್‌ಎಸ್‌ ಹಾಗೂ ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಿದವರು ಗಗನಚುಕ್ಕಿಗೂ ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಬಲಮುರಿ, ಎಡಮುರಿಗೂ ಭೇಟಿ: ಶ್ರೀರಂಗಪಟ್ಟಣದಲ್ಲೇ ಇರುವ ಎಡಮುರಿ, ಬಲಮುರಿ ಪ್ರವಾಸಿ ತಾಣಗಳಿಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಶನಿವಾರ, ಭಾನುವಾರ ಹಾಗೂ ವಿಶೇಷ ಹಬ್ಬದ ದಿನಗಳಲ್ಲಿ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ಭರ್ಜರಿ ವ್ಯಾಪಾರ : ಕೆಆರ್‌ಎಸ್‌ ಜಲಾಶಯದ ಅಕ್ಕಪಕ್ಕದ ಹೋಟೆಲ್‌, ಸಣ್ಣಪುಟ್ಟ ಅಂಗಡಿ, ಬೀದಿ ಬದಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ.

Advertisement

ದಸರಾ ಸಂದರ್ಭದಲ್ಲಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದರಿಂದ ಹೋಟೆಲ್‌, ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ಅಂಗಡಿ ಸೇರಿ ವಿವಿಧ ವರ್ತಕರಿಗೆ ಉತ್ತಮ ವ್ಯಾಪಾರ ನಡೆದಿದೆ. ಗಗನಚುಕ್ಕಿಯಲ್ಲೂ ಹೋಟೆಲ್‌, ಬೀದಿಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಜೋರಾಗಿದೆ.

ದಸರಾ ವೇಳೆ ಅತಿ ಹೆಚ್ಚು ಪ್ರವಾಸಿಗರು ಕೆಆರ್‌ಎಸ್‌ ಜಲಾಶಯಕ್ಕೆ ಭೇಟಿ ನೀಡಿದ್ದಾರೆ. ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದರು. ನಂತರ ಪ್ರತಿ ದಿನ 6ರಿಂದ 7 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಇದುವರೆಗೂ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. – ಫಾರೂಕ್‌ ಅಬು, ಎಇಇ, ಕಾವೇರಿ ನೀರಾವರಿ ನಿಗಮ, ಕೆಆರ್‌ಎಸ್‌ ವಿಭಾಗ

ಅ.12ರಿಂದ ನದಿಯಲ್ಲಿ ನೀರು ಹೆಚ್ಚಾಗಿದ್ದರಿಂದ ಬೋಟಿಂಗ್‌ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ನೀರು ಕಡಿಮೆಯಾಗಿರುವುದರಿಂದ ಬೋಟಿಂಗ್‌ ನಡೆಯುತ್ತಿದೆ. ಪ್ರತಿದಿನ 2500ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. – ಪುಟ್ಟಮಾದೇಗೌಡ, ಉಪವಲಯ ಅರಣ್ಯಾ ಧಿಕಾರಿ, ರಂಗನತಿಟ್ಟು ಪಕ್ಷಿಧಾಮ

Advertisement

Udayavani is now on Telegram. Click here to join our channel and stay updated with the latest news.

Next