Advertisement

ಮಂಡ್ಯ, ಶ್ರೀರಂಗಪಟ್ಟಣ ಕೋವಿಡ್ ಹಾಟ್‌ಸ್ಪಾಟ್‌

12:23 PM Jan 11, 2022 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಪ್ರವಾಸ ಕೈಗೊಂಡಿದ್ದವರಲ್ಲಿಯೇ ಹೆಚ್ಚು ಸೋಂಕು ಪತ್ತೆಯಾಗಿದ್ದು, ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ ತಾಲೂಕುಗಳಲ್ಲಿ ಹೆಚ್ಚು ಸೋಂಕು ಕಂಡು ಬಂದಿದೆ. ಹಾಟ್‌ಸ್ಪಾಟ್‌ಗಳಾಗಿ ಪರಿಣಮಿಸಿದೆ.

Advertisement

ಪ್ರತಿದಿನ ಮೂರು ತಾಲೂಕುಗಳಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇನ್ನುಳಿಂದ ಮದ್ದೂರು, ನಾಗಮಂಗಲ, ಪಾಂಡವಪುರದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆ.ಆರ್‌.ಪೇಟೆಯಲ್ಲಿ ಒಂದಂಕಿ ಸೋಂಕು ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿವೆ. 320 ಮಂದಿಗೆ ಸೋಂಕು: ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಪ್ರವಾಸ ಕೈಗೊಂಡಿದ್ದ ಜಿಲ್ಲೆಯ ಮಹಿಳಾ ಭಕ್ತರಲ್ಲಿ 320 ಮಂದಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ 5,308 ಮಂದಿ ತಮಿಳುನಾಡು ಪ್ರವಾಸ ಕೈಗೊಂಡಿದ್ದರು. ಎಲ್ಲರಿಗೂಕೋವಿಡ್‌ ಪರೀಕ್ಷೆ ನಡೆಸಿದಾಗ 320 ಮಂದಿಗೆ ಸೋಂಕು ದೃಢಪಟ್ಟಿದೆ.

ಆದರೂ ಪ್ರವಾಸ ನಿಂತಿಲ್ಲ. ಗುಂಪು ಪ್ರವಾಸವೇ ಕಾರಣ: ಗುಂಪಾಗಿ ಪ್ರವಾಸಕ್ಕೆ ತೆರಳುವುದರಿಂದ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಒಂದೇ ಬಸ್‌ನಲ್ಲಿ 70ಕ್ಕೂ ಹೆಚ್ಚು ಜನರು ತಮಿಳುನಾಡು ಪ್ರವಾಸ ಕೈಗೊಂಡಿದ್ದರಿಂದ ಸೋಂಕು ವೇಗವಾಗಿ ಹರಡಿದೆ. ಆದ್ದರಿಂದ ಕೆಲವರು ಒಂದಿಬ್ಬರು, ಮೂವರಂತೆ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶಬರಿ ಮಲೆಗೆ ತೆರಳುವವರಿಗೆ ಎಚ್ಚರಿಕೆ: ಈಗಾಗಲೇ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದವರಿಗೆ ಸೋಂಕು ದೃಢಪಟ್ಟಿರುವುದರಿಂದ ಶಬರಿ ಮಲೆಗೆ ತೆರಳುವವರು ಎಚ್ಚರಿಕೆಯಿಂದ ಇರಬೇಕಾಗಿದೆ. ಗುಂಪು ಗುಂಪಾಗಿ ತೆರಳುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಅಲ್ಲದೆ, ಈಗಾಗಲೇಮಳವಳ್ಳಿಯಲ್ಲಿ ಶಬರಿ ಮಲೆ ಪ್ರವಾಸ ಕೈಗೊಂಡಿದ್ದ 7 ಮಂದಿಗೆ ಸೋಂಕು ದೃಢಪಟ್ಟಿದೆ.

ಅಧಿಕಾರಿಗಳಿಗೂ ಕೋವಿಡ್‌: ಈಗಾಗಲೇ ಜಿಲ್ಲಾ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಎಸ್ಪಿ, ಎಎಸ್ಪಿ ಸೇರಿದಂತೆ 16 ಮಂದಿ ಪೊಲೀಸರಿಗೆ ಸಾಮೂಹಿಕವಾಗಿ ಸೋಂಕು ದೃಢಪಟ್ಟಿತ್ತು. ಅದರಂತೆ ತಾಲೂಕು ಆಡಳಿತ ತಹಶೀಲ್ದಾರ್‌ಗಳಲ್ಲೂ ಸೋಂಕು ಕಂಡು ಬಂದಿದೆ. ಮಂಡ್ಯ ತಹಶೀಲ್ದಾರ್‌ಗೆ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್‌. ಧನಂಜಯ ತಿಳಿಸಿದರು.

Advertisement

ಶ್ರೀರಂಗಪಟ್ಟಣ, ಮಂಡ್ಯದಲ್ಲಿ ಹೆಚ್ಚಳ :

ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗಿದೆ. ಮಂಡ್ಯದಲ್ಲಿ ಪ್ರಕರಣಗಳು ಶತಕ ದಾಟುತ್ತಿದೆ. ಶ್ರೀರಂಗಪಟ್ಟಣದಲ್ಲಿ 50ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಇನ್ನುಳಿದಂತೆ ಮದ್ದೂರು, ಮಳವಳ್ಳಿಯಲ್ಲೂ ದಾಖಲಾಗುತ್ತಿವೆ. ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ತಾಲೂಕುಗಳಲ್ಲಿ ತಮಿಳುನಾಡಿನ ಓಂ ಶಕ್ತಿ ದೇವಾಲಯ ಪ್ರವಾಸದಿಂದ ಸೋಂಕು ಹೆಚ್ಚಳವಾದರೆ, ಮಳವಳ್ಳಿ ಯಲ್ಲಿ ಶಬರಿ ಮಲೆ ಹಾಗೂ ಓಂ ಶಕ್ತಿ ಪ್ರವಾಸ  ದಿಂದಲೂ ಸೋಂಕು ಕಂಡು ಬಂದಿದೆ.

ಜಿಲ್ಲೆಯಲ್ಲಿ 121 ವಿದ್ಯಾರ್ಥಿಗಳಿಗೆ ಸೋಂಕು :  ಜಿಲ್ಲೆಯಾದ್ಯಂತ 121 ವಿದ್ಯಾರ್ಥಿಗಳಿಗೆ ಸೋಂಕು ಕಂಡು ಬಂದಿದೆ. ಆರೋಗ್ಯ ಇಲಾಖೆಯಿಂದ ಮಂಡ್ಯ ಮೆಡಿಕಲ್‌ ಕಾಲೇಜು ಸೇರಿದಂತೆ ಶಾಲೆಗಳಲ್ಲೂ ಸಾವಿರಾರು ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 121 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿತ್ತು. ಯಾವುದೇ ಲಕ್ಷಣ  ಗಳಿಲ್ಲದಿದ್ದರೂ ಸೋಂಕು ದೃಢಪಟ್ಟಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ. ಇದರಲ್ಲಿ ಕೆಲವರುಗುಣಮುಖರಾಗಿದ್ದಾರೆ. ಇನ್ನೂ ಕೆಲವರು ಚಿಕಿತ್ಸೆಪಡೆಯುತ್ತಿದ್ದಾರೆ. ಈಗಾಗಲೇ ಎಲ್ಲ ಶಾಲೆಗಳಲ್ಲೂಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಸಹಜ ಸ್ಥಿತಿಗೆ ಮರಳಿದ ಮಂಡ್ಯ :

ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ಸ್ತಬ್ಧವಾಗಿದ್ದ ಮಂಡ್ಯ, ಸೋಮವಾರ ಸಹಜ ಸ್ಥಿತಿಗೆ ಮರಳಿತ್ತು. ಮುಂಜಾನೆ 5 ಗಂಟೆಯಿಂದಲೇ ಸಾರ್ವಜನಿಕರು ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ವಾರಾಂತ್ಯ ಕರ್ಫ್ಯೂನಿಂದ ಬಿಕೋ ಎನ್ನುತ್ತಿದ್ದ ರಸ್ತೆಗಳು ವಾಹನಗಳಿಂದ ತುಂಬಿದ್ದವು. ನಗರದ ಎಲ್ಲ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ಜನಸಂದಣಿಯಿಂದ ಸೋಮವಾರ ಮಂಡ್ಯ ನಗರ ಗಿಜಿಗುಟ್ಟಿತು.ಸಾರ್ವಜನಿಕರ ಸಂಚಾರ ಎಂದಿನಂತಿತ್ತು. ಸೋಂಕು ಹೆಚ್ಚುತ್ತಿದ್ದರೂ ನಿರ್ಲಕ್ಷ್ಯ ಮುಂದುವರಿದಿದೆ. ಶನಿವಾರ ಹಾಗೂ ಭಾನುವಾರ ಮಾಸ್ಕ್ ಹಾಕದ ಸಾರ್ವಜನಿಕರಿಗೆ ದಂಡ ವಿಧಿಸಲಾಗಿತ್ತು. ಆದರೆ ಸೋಮವಾರ ಸಾರ್ವಜನಿಕರು ಯಾವುದೇ ಮಾಸ್ಕ್, ಸಾಮಾಜಿಕ ಅಂತರ ಕಂಡು ಬರಲಿಲ್ಲ. ಕೆಲವರು ಮಾಸ್ಕ್ ಧರಿಸಿ ಸಂಚರಿಸುತ್ತಿದ್ದರೆ, ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂದಿತು.

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next