Advertisement

ಅರಣ್ಯ ನೆಡುತೋಪಲ್ಲಿ ಮರಗಳ ಮಾರಣ ಹೋಮ

04:02 PM Aug 01, 2019 | Naveen |

ಮಂಡ್ಯ: ಅರಣ್ಯ ನೆಡುತೋಪಲ್ಲಿ ಮರಗಳ ಮಾರಣಹೋಮ ನಡೆಸಿರುವ ಘಟನೆ ತಾಲೂಕಿನ ಸಂತೆಕಸಲಗೆರೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರಣ್ಯದಲ್ಲಿ ಬೆಳೆದಿದ್ದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುವ ಪ್ರಯತ್ನಿಸಿದ್ದು, ಆತನ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

Advertisement

ತಾಲೂಕಿನ ಕೊತ್ತತ್ತಿ ಗ್ರಾಮದ ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಣ್ಣ ಅವರು ಅರಣ್ಯ ಇಲಾಖೆ ಅನುಮತಿ ಪಡೆಯದೆ ದೇವಸ್ಥಾನದ ವ್ಯಾಪ್ತಿಯಲ್ಲಿ ಬೆಳೆದಿದ್ದ ನೂರಾರು ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಹಾಕಿದ್ದಾರೆ. ಬೆಲೆ ಬಾಳುವ ಬೃಹದಾಕಾರದ ಎರಡು ಆಲದ ಮರ ಹಾಗೂ ಒಂದು ಅರಳೀಮರವನ್ನು ಧರೆಗುರುಳಿಸಿದ್ದಾರೆ.

ಅರಣ್ಯ ನೆಡುತೋಪಿನಲ್ಲಿದ್ದ 115 ನೀಲಗಿರಿ ಮರಗಳನ್ನು ಕಡಿದು ಉರುಳಿದಿದ್ದು, ಅದರಿಂದ 150 ನೀಲಗಿರಿ ಕಂಬಗಳನ್ನು ಬೇರ್ಪಡಿಸಿದ್ದಾರೆ. ಎರಡು ಆಲದ ಮರ ಹಾಗೂ ಒಂದು ಅರಳಿ ಮರವನ್ನು ಕಡಿದುರುಳಿಸಿ, ರೆಂಬೆ-ಕೊಂಬೆಗಳನ್ನು ಕೊಯ್ದು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಮರಗಳನ್ನು ಕಡಿದು ಹಾಕಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆಯ ಬಳಿಕ ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಣ್ಣ ನಾಪತ್ತೆಯಾಗಿದ್ದು, ಟ್ರಸ್ಟ್‌ನ ಇತರೆ ಪದಾಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮರ ಕೊಯ್ಯುವ ಯಂತ್ರ, ಒಂದು ಟಾಟಾ ಏಸ್‌, ಎಂಟು ಮಚ್ಚುಗಳು ಹಾಗೂ ಮರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

30 ವರ್ಷ ಟ್ರಸ್ಟ್‌ಗೆ ಗುತ್ತಿಗೆ: ಸಂತೆಕಸಲಗೆರೆ ಗ್ರಾಮದ 569ನೇ ಸರ್ವೆ ನಂಬರ್‌ ವ್ಯಾಪ್ತಿಯ 24 ಎಕರೆ ಅರಣ್ಯ ನೆಡುತೋಪಿನಲ್ಲಿ 4ರಿಂದ 6 ಸಾವಿರ ನೀಲಗಿರಿ ಮರಗಳು ಬೆಳೆದು ನಿಂತಿವೆ. ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನವಿರುವ ಜಾಗದ ಸುತ್ತ ಸುಮಾರು 70 ವರ್ಷ ಹಳೆಯದಾದ ಆಲ ಮತ್ತು ಅರಳಿ ಮರಗಳು ಬೆಳೆದು ನಿಂತಿದ್ದವು.

Advertisement

2005ರಲ್ಲಿ ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ಗೆ ಅರಣ್ಯ ನೆಡುತೋಪು ಜಾಗವನ್ನು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ 30 ವರ್ಷ ಗುತ್ತಿಗೆಗೆ ನೀಡಲಾಗಿತ್ತು. ಗುತ್ತಿಗೆ ಪತ್ರದ ಷರತ್ತಿನಲ್ಲಿ ಅರಣ್ಯ ನೆಡುತೋಪು ಪ್ರದೇಶದಲ್ಲಿ ಬೆಳೆದು ನಿಂತಿರುವ ಮರಗಳನ್ನು ಕಡಿಯಬಾರದು. ಆ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸದಂತೆ ಷರತ್ತು ವಿಧಿಸಲಾಗಿತ್ತು.

ಆದರೆ, ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ತಮ್ಮಣ್ಣ ಅವರು ಅರಣ್ಯ ಇಲಾಖೆ ಅನುಮತಿಯನ್ನು ಪಡೆಯದೆ, ಅಕ್ರಮವಾಗಿ ಬೆಲೆ ಬಾಳುವ ಮರಗಳನ್ನು ಕಡಿದು ಹಾಕಿದ್ದಾರೆ. ಮರಗಳನ್ನು ಯಾರಿಗೂ ಗೊತ್ತಾಗದಂತೆ ಮಾರಿ ಹಣ ಲಪಟಾಯಿಸುವ ಸಂಚು ನಡೆಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಸುಂದರ ಪರಿಸರ ಮಾಯ: ಶ್ರೀ ಭೂಮಿ ಸಿದ್ದೇಶ್ವರ ದೇವಸ್ಥಾನದ ಸುತ್ತಲೂ ಅರಳಿ, ಆಲದ ಮರಗಳು ಬೆಳೆದು ನಿಂತು ಸುಂದರ ಪರಿಸರವನ್ನು ಸೃಷ್ಟಿಸಿಕೊಟ್ಟಿದ್ದವು. ಇದೇ ಅರಣ್ಯ ನೆಡುತೋಪಿನಲ್ಲಿ ಸಾವಿರಾರು ನೀಲಗಿರಿ ಮರಗಳು ಬೆಳೆದು ನಿಂತಿದ್ದವು. ಮರಗಳನ್ನು ಕಡಿದು ಉರುಳಿಸಿರುವುದರಿಂದ ಆ ಪರಿಸರದಲ್ಲಿ ಈಗ ಬೋಳಾದ ವಾತಾವರಣ ಕಂಡು ಬರುತ್ತಿದೆ. ಮರದ ರೆಂಬೆ-ಕೊಂಬೆಗಳನ್ನು ಮನಸೋಇಚ್ಛೆ ಕಡಿದು ಹಾಕಿರುವುದರಿಂದ ಅಂಗಹೂನವಾದ ಮರಗಳು ವಿಲಕ್ಷಣವಾಗಿ ಕಾಣುತ್ತಿವೆ. ತಬ್ಬಿ ಹಿಡಿಯಲು ಸಾಧ್ಯವಾಗದ ಮರಗಳು ಧರಶಾಹಿಯಾಗಿರುವುದನ್ನು ಕಂಡು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿಗಳ ಸುಳಿವಿಲ್ಲ: ಮೂರ್‍ನಾಲ್ಕು ದಿನಗಳ ಹಿಂದಷ್ಟೇ ಮಂಡ್ಯ ಸಮೀಪದ ಇಂಡುವಾಳು ಪ್ರಕೃತಿ ಉದ್ಯಾನದಲ್ಲಿ ಬೆಲೆ ಬಾಳುವ ತೇಗದ ಮರವೊಂದನ್ನು ಕಡಿದು ಸಾಗಿಸುವ ವೇಳೆ ವಾಹನ ಅಪಘಾತಕ್ಕೀಡಾಗಿದ್ದರಿಂದ ಮರಗಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಹುಣಸೂರು ಮೂಲದ ಮರಗಳ್ಳರು ಮರ ಕಡಿದು ಸಾಗಿಸುವ ಪ್ರಯತ್ನ ನಡೆಸಿದ್ದರೆಂದು ಗೊತ್ತಾಗಿತ್ತು. ವಾಹನದ ಚಾಲಕ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ನಿಜವಾದ ಕಳ್ಳರು ಯಾರೆಂಬುದನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯವರಿಗೆ ಇದುವರೆಗೂ ಸಾಧ್ಯವಾಗಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next