Advertisement

ನನ್ನ ಗೆಲ್ಲಿಸಿ, ನಿಮ್ಮನೆಗೆ ಬಾಡೂಟಕ್ಕೆ ಬರುವೆ

11:37 PM Apr 07, 2019 | Team Udayavani |

ಮಂಡ್ಯ: ಮದ್ದೂರು, ಮಂಡ್ಯ, ಪಾಂಡವಪುರ, ಮೇಲುಕೋಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಯುಗಾದಿ ದಿನವೂ ಪ್ರಚಾರ ನಡೆಸುವ ಮೂಲಕ ಮತದಾರರ ಒಲವು ಗಳಿಸಲು ಮುಂದಾದರು. ಅಲ್ಲದೆ, ಮಂಡ್ಯದಲ್ಲೇ ಹಬ್ಬ ಆಚರಿಸಿದರು. ರೈತ ಸಂಘದ ನಾಯಕಿ ಸುನೀತಾ ಪುಟ್ಟ ಣ್ಣಯ್ಯ, ಎಚ್‌. ಬಿ. ರಾಮು ಸಾಥ್‌ ನೀಡಿದರು.

Advertisement

ಹಬ್ಬದ ನಿಮಿತ್ತ ವಿಶ್ರಾಂತಿ ಪಡೆದಿದ್ದ ಯಶ್‌ ಹಾಗೂ ದರ್ಶನ್‌, ಸೋಮವಾರದಿಂದ ಮತ್ತೆ ಸುಮಲತಾ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ. ಈ ಮಧ್ಯೆ, ಜೆಡಿಎಸ್‌ ಅಭ್ಯರ್ಥಿ ನಿಖೀಲ್‌, ಹಬ್ಬದ ಮರುದಿನ ಭಾನುವಾರ ಜಿಲ್ಲೆಯ ವಿವಿಧೆಡೆ ಭರ್ಜರಿ ರೋಡ್‌ ಶೋ ನಡೆಸಿ, ತಮಗೆ ಮತ ನೀಡುವಂತೆ ಮನವಿ ಮಾಡಿದರು.

ಸುಮಲತಾ ರೋಡ್‌ ಶೋ:
ಶನಿವಾರ ಹಾಗೂ ಭಾನುವಾರ ಮದ್ದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ತೆರೆದ ವಾಹನದ ಮೂಲಕ ರೋಡ್‌ ಶೋ ನಡೆಸಿದ ಸುಮಲತಾ, ರಾಜಕಾರಣದಲ್ಲಿ ಅಂಬ ರೀಶ್‌ ಹಾದಿಯಲ್ಲೇ ನಾನೂ ನಡೆಯುತ್ತೇನೆ. ದ್ವೇಷ ಮತ್ತು ಸ್ವಾರ್ಥದ ರಾಜಕಾರಣ ಮಾಡುವ ಅಗತ್ಯವಿಲ್ಲ. ಒಳ್ಳೆಯ ರಾಜಕಾರಣ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನ ಪಡೆಯಬೇಕೆನ್ನುವುದು ನನ್ನ ಆಸೆ. ಅಂಬರೀಶ್‌ ಕನಸನ್ನು ನನಸು ಮಾಡಲು ನನಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

ದ್ವೇಷ ಹಾಗೂ ಕುತಂತ್ರ ರಾಜಕಾರಣ ಮಾಡುವ ಮೂಲಕ ಮಹಿಳೆಯನ್ನು ಅವಮಾನಿಸಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ 3 ಮಂದಿ ಸಚಿವರು, 8 ಮಂದಿ ಶಾಸಕರು ಹಾಗೂ 3 ಮಂದಿ ವಿಧಾನಪರಿಷತ್‌ ಸದಸ್ಯರು ನನ್ನನ್ನು ಮಣಿಸಲು ಇಲ್ಲಸಲ್ಲದ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ. ಇದಕ್ಕೆ ಜನರೇ ಉತ್ತರ ನೀಡಿ, ನನ್ನನ್ನು ಸಂಸತ್‌ಗೆ ಕಳುಹಿಸಿ. ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ನನ್ನ ವಿರುದ್ಧ ಸುಮ ಲತಾ ಎನ್ನುವ ಮೂವರು ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿದ್ದಾಗಿದೆ. ಈಗ ಅದರಲ್ಲಿ ಒಬ್ಬ ಸುಮಲತಾ ಎನ್ನುವವರಿಗೆ ನನ್ನನ್ನೇ ಹೋಲುವಂತೆ ಬಟ್ಟೆ ತೊಡಿಸಿ, ಕನ್ನಡಕ ಹಾಕಿಸಿ ಚುನಾವಣಾ ಆಯೋಗಕ್ಕೆ ಫೋಟೋ ಕಳುಹಿಸಿದ್ದಾರೆ. ಹಿಂಬಾಗಿಲ ರಾಜಕಾರಣ ಮಾಡುವುದು ಜೆಡಿಎಸ್‌ನವರದ್ದು. ನನ್ನ ದೇನಿದ್ದರೂ ನೇರ ರಾಜಕಾರಣ ಎಂದು ಹೇಳಿದರು. ಈ ಮಧ್ಯೆ, ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಸ್ಥಳೀಯರು ನಿರ್ಮಿಸಿರುವ ಅಂಬಿ ಪುತ್ಥಳಿಗೆ ಪೂಜೆ ಸಲ್ಲಿಸಿದರು.

ಗೆದ್ದ ಮೇಲೆ ಬಾಡೂಟಕ್ಕೆ ಬರುವೆ:
ಅಂಬ ರೀಶ್‌ಗೂ ಮಂಡ್ಯ ಬಾಡೂಟಕ್ಕೂ ಅವಿನಾಭಾವ ಸಂಬಂಧವಿದೆ. ಅಂಬರೀಶ್‌ಗೆ ಮಂಡ್ಯದ ನಾಟಿ ಕೋಳಿ ಸಾರು, ಕೈಮಾ ಉಂಡೆ, ಬಿರಿಯಾನಿ ಮುಖ್ಯವಾದ ಭೋಜ ನವಾಗಿತ್ತು. ಯುಗಾದಿ ಹಬ್ಬದ ಮಾರನೇ ದಿನ ವರ ದಡುವಿನಲ್ಲಿ ನೀವುಗಳು ಮನೆಗ ಳಲ್ಲಿ ನಾಟಿ ಕೋಳಿ, ಮಾಂಸದಡುಗೆ ಮಾಡುತ್ತೀರಿ. ಮನೆ ಮಂದಿ ಕುಳಿತು ಒಟ್ಟಿಗೇ ಊಟ ಮಾಡುವಾಗ ಸುಮಲತಾಗೆ ಓಟ್‌ ಮಾಡಿ ಆಶೀರ್ವಾದ ಮಾಡಬೇಕು ಎಂದು ನಿಮ್ಮ ಕುಟುಂಬದವರಿಗೆ ಹೇಳಿ ಎಂದು ಮನವಿ ಮಾಡಿದರು.

Advertisement

ಮೇ 23ರಂದು ಬರುವ ಫಲಿತಾಂಶವೇ ನಮಗೆ ನಿಜವಾದ ಯುಗಾದಿ ಹಬ್ಬ. ನಂತರ ನಾನು ಖಂಡಿತಾ ನಿಮ್ಮ ಮನೆಗೆ ಬಂದು ಅಂಬಿಗೆ ಇಷ್ಟವಾಗುವ ಮಂಡ್ಯದ ನಾಟಿ ಸ್ಟೈಲಿನ ಮಾಂಸದೂಟವನ್ನು ಮಾಡುತ್ತೇನೆ ಎಂದರು.

ಅಭಿಮಾನಿಗಳೊಂದಿಗೆ ನಿಖೀಲ್‌ ಪ್ರಚಾರ:
ಇದೇ ವೇಳೆ, ಭಾರತೀನಗರ ಸುತ್ತಮುತ್ತ ಪ್ರಚಾರ ನಡೆಸಿದ ಜೆಡಿಎಸ್‌ ಅಭ್ಯರ್ಥಿ ನಿಖೀಲ್‌, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ನನ್ನ ಕುಟುಂಬ ಹಾಗೂ ಜೆಡಿಎಸ್‌ ಪಕ್ಷದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಆದರೆ, ನನ್ನ ತಾತ ಇಳಿವಯಸ್ಸಿನಲ್ಲೂ ಹೋರಾಟದ ಹಾದಿಯಲ್ಲಿ ಸಾಗುತ್ತಿದ್ದಾರೆ. ಜೊತೆಗೆ, ನಮ್ಮ ತಂದೆ ಜಿಲ್ಲೆಯ ಅಭಿವೃದ್ಧಿಗಾಗಿ ಮತ್ತು ರೈತರ ಕಷ್ಟಸುಖಗಳಿಗಾಗಿ ಸ್ಪಂದಿಸಿದ್ದಾರೆ. ರೈತಪರ, ಜನಪರ ಕಾಳಜಿ ಇರುವ ನಮ್ಮ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.

ಮೈತ್ರಿ ಸರ್ಕಾರ ಇರುವುದರಿಂದ ನಿಖೀಲ್‌ ಪರ ರಾಹುಲ್‌ ಗಾಂಧಿಯವರು ಪ್ರಚಾರಕ್ಕೆ ಬರುತ್ತಿದ್ದಾರೆ. ಅದರಲ್ಲಿ ವಿಶೇಷವೇನೂ ಇಲ್ಲ. ನನಗೆ ಬಿಜೆಪಿ ನಾಯಕರು ಬಾಹ್ಯ ಬೆಂಬಲ ನೀಡಿದ್ದಾರೆ. ಆದರೆ, ಬಿಜೆಪಿ ನಾಯಕರ ಸಂಪರ್ಕದಲ್ಲಿ ನಾನಿಲ್ಲ. ಅವರು ಪ್ರಚಾರಕ್ಕೆ ಬರುವ ಬಗ್ಗೆ ಏನು ನಿರ್ಧಾರ ಕೈಗೊಳ್ಳುವರೋ ಗೊತ್ತಿಲ್ಲ.
– ಸುಮಲತಾ

ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರು ಈಗಾಗಲೇ ಗೆದ್ದಾಗಿದೆ. ಎಷ್ಟು ಮತಗಳ ಅಂತರದಿಂದ ಗೆದ್ದಿದ್ದಾರೆ ಎಂಬುದು ಮಾತ್ರ ತಿಳಿಯಬೇಕಾಗಿದೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next