ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ಅಣೆಕಟ್ಟೆ ಮೇಲೆ ಫೆ.9ರಂದು 4 ಗಂಟೆ ವೇಳೆ ಯುವಕನೊಬ್ಬನಿಗೆ ಸರ್ಕಾರಿ ವಾಹನ ನೀಡಿ ಚಲಾಯಿಸಿದ ಹಿನ್ನೆಲೆಯಲ್ಲಿ ವಾಹನ ಕೊಟ್ಟು ಚಿತ್ರೀಕರಣ ಮಾಡಿದ್ದ ಕರ್ನಾಟಕ ಭದ್ರತಾ ಪಡೆಯ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕೆಆರ್ಎಸ್ ಜಲಾಶಯದ ಮೇಲೆ ಪೊಲೀಸ್ ಜೀಪ್ ಚಲಾಯಿಸಿದ್ದಲ್ಲದೇ ಅದನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದ ಆರೋಪದ ಮೇಲೆ ಅಧಿಕಾರಿ ಎಸ್.ಬಿ.ಸ್ವಾಮಿಯನ್ನು ಅಮಾನತು ಮಾಡಲಾಗಿದೆ. ಸ್ವಾಮಿ ಕರ್ನಾಟಕ ಕೈಗಾರಿಕಾ ಭದ್ರತೆಯ 3ನೇ ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಆ ದಿನ ಯುವಕ ಸರ್ಕಾರಿ ಜೀಪ್ ಚಲಾಯಿಸುತ್ತಿದ್ದರೆ ಪೊಲೀಸ್ ಅಧಿಕಾರಿ ಎಸ್.ಬಿ.ಸ್ವಾಮಿ ಪಕ್ಕದಲ್ಲಿ ಕೂತು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದರು. ಈ ಕುರಿತು ಫೆ.27ರಂದು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆ ಮಾಡಿದ ಸುದ್ದಿಯೂ ಬಂದಿತ್ತು.
ಇದನ್ನೂ ಓದಿ:ನಿವೃತ್ತಿಗೊಂಡು ತವರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಸಾಂಪ್ರದಾಯಿಕ ಸ್ವಾಗತ
ಪೊಲೀಸ್ ಇಲಾಖೆ ಆಂತರಿಕ ಭದ್ರತಾ ವಿಭಾಗದ ಹಿರಿಯ ಅಧಿಕಾರಿಗಳು ಅಮಾನತು ಆದೇಶ ಹೊರಡಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಅಣೆಕಟ್ಟೆ ಮೇಲೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದರೂ ಯುವಕನಿಗೆ ದರ್ಬಾರ್ ಮಾಡಲು ಅವಕಾಶ ನೀಡಿರುವುದರಿಂದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.