Advertisement

ಮಳೆಗಾಲದಲ್ಲಿ ಕಣ್ಮನ ಸೆಳೆಯುವ ಕೊಂಡಜಲಪಾತ

07:43 PM Sep 26, 2019 | Team Udayavani |

ಮಂಡ್ಯ: ಪ್ರಕೃತಿ ಸಿರಿ ವೈಭವದಲ್ಲಿ ರಾರಾಜಿಸುತ್ತಿರುವ ಕನ್ನಡನಾಡಿನಲ್ಲಿ ಜಲಪಾತಗಳಿಗೆ ಭರವಿಲ್ಲ. ಕೆಲವು ಜಲಪಾತಗಳು ನಿತ್ಯ ಸತ್ಯವಾದರೆ ಮತ್ತೆ ಕೆಲವು ಜಲಪಾತಗಳು ಮಳೆಗಾಲದಲ್ಲಿ ಮಾತ್ರ ಗೋಚರಿಸುವಂಥವು.

Advertisement

ಈ ರೀತಿ ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಧಾರೆಯೊಂದು ಮಳವಳ್ಳಿ ತಾಲೂಕಿನಲ್ಲಿದೆ. ಅದುವೇ ಕೊಂಡ ಜಲಪಾತ. ಮಳವಳ್ಳಿ ತಾಲೂಕಿನ ಹಲಗೂರು ಬಳಿ ಶಿಂಷಾನದಿ ಸೃಷ್ಟಿಸಿರುವ ಜಲಪಾತವೊಂದು ರಮಣೀಯವಾಗಿದೆ.

ಇದನ್ನು ಹೆಚ್ಚು ಮಂದಿ ವೀಕ್ಷಿಸಿಲ್ಲ. ಶಿಂಷಾ ಜಲಪಾತ, ಕೊಂಡ ಜಲಪಾತ, ಮಂಡ್ಯ ನಯಾಗರಾ, ಬೆಂಕಿ ಜಲಪಾತ ಎಂದೇ ಕರೆಸಿಕೊಳ್ಳುವ ಈ ಜಲಪಾತಕ್ಕೆ ಸರಿಯಾದ ಹೆಸರೇ ಇಲ್ಲ.

ಕೊಂಡ ಜಲಪಾತ: ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗದಲ್ಲಿ 5 ಕಿ.ಮೀ. ಚಲಿಸಿ ಬೀರೋಟ ಮಾರ್ಗದಲ್ಲಿ 10-12 ಕಿ.ಮೀ. ಚಲಿಸಿದರೆ ಕೊಂಡ ಜಲಪಾತ ಗೋಚರಿಸುತ್ತದೆ. ಜಲಪಾತಕ್ಕೆ ಒಂದು ಸರಿಯಾದ ಹೆಸರೂ ಇಲ್ಲದಿರುವುದರಿಂದ ಸ್ಥಳೀಯರು ಈ ಜಲಪಾತಕ್ಕೆ ತಮ್ಮ ಕಲ್ಪನೆಯ ಹೆಸರಿಟ್ಟಿದ್ದಾರಂತೆ.

ಈ ಜಲಪಾತ ಕೊಂಡದಮ್ಮನ ದೇವಸ್ಥಾನದ ಬಳಿ ಇರುವುದರಿಂದ ಕೊಂಡ ಜಲಪಾತ ಎಂತಲೂ, ಶಿಂಷಾ ನದಿಯ ಜಲಪಾತವಾದ್ದರಿಂದ ‘ಶಿಂಷಾ ಫಾಲ್ಸ್‌’ ಎಂತಲೂ ಇದಕ್ಕೆ ಹೆಸರು ಬಂದಿದೆ ಯಂತೆ. ಇನ್ನು ‘ಬೆಂಕಿ ಜಲಪಾತ’ ಎಂಬ ಹೆಸರು ಹೇಗೆ ಬಂತು ಎಂಬುದು ಸ್ಥಳೀಯರಿಗೂ ತಿಳಿದಿಲ್ಲ.

Advertisement

ಕಚ್ಚಾ ರಸ್ತೆ: ಇಂತಹದೊಂದು ಜಲಧಾರೆಯ ಸೌಂದರ್ಯ ನಿಜಕ್ಕೂ ರೋಮಾಂಚನ, ಗಗನಚುಕ್ಕಿ-ಭರಚುಕ್ಕಿಯಷ್ಟೇ ಪ್ರಕೃತಿ ವೈಭವ ಹೊಂದಿರುವ, ಅವುಗಳ ಚೆಲುವನ್ನೂ ನಾಚಿಸುವ ಈ ಜಲಪಾತ ಹೆಚ್ಚು ಜನರನ್ನು ಆಕರ್ಷಿಸದಿರುವುದು ನಿಜಕ್ಕೂ ದುರಂತ. ಕೇವಲ ಕಾಲು ಹಾದಿಯಂತಿರುವ ಕಚ್ಚಾರಸ್ತೆಯಲ್ಲಿ ಮೂರ್‍ನಾಲ್ಕು ಕಿ.ಮೀ. ಚಲಿಸಿ, ಅಲ್ಲಲ್ಲಿ ಕಣಿವೆಯಂತಾಗಿರುವ ರಸ್ತೆಯನ್ನು ದಾಟಿ, ನುಜ್ಜುಗಲ್ಲುಗಳ ಮೇಲೆ ನರ್ತಿಸುತ್ತಾ ಹೋಗುವಾಗ ಜಲಧಾರೆಯ ಭೋರ್ಗರೆತ ಕಿವಿಗೆ ಅಪ್ಪಳಿಸುತ್ತದೆ.

ದಾರಿಯೇ ಇಲ್ಲದ ದಾರಿಯಲ್ಲಿ ಗಿಡಗಂಟಿಗಳನ್ನು ಸರಿಸುತ್ತಾ ಮುನ್ನುಗ್ಗಿದರೆ ಒಮ್ಮೆಲೆ ಕೊಂಡ ಜಲಪಾತದ ವೈಭವ ಕಣ್ಣಿಗೆ ರಾಚುತ್ತದೆ.

ರೋಮಾಂಚಕ ಅನುಭವ: ನಿಂತು ಜಲಪಾತ ವೀಕ್ಷಿಸಲೂ ಅಲ್ಲಿ ಸ್ಥಳವಿಲ್ಲ. ಅತಿ ಕಡಿದಾದ ಸಣ್ಣ ಕಾಲು ದಾರಿಯಲ್ಲಿ ಜಲಪಾತದ ಕೆಳಕ್ಕೆ ಇಳಿದರೆ ಜಲಪಾತದ ವೈಭವ ಕಣ್ಮನ ತಣಿಸುತ್ತದೆ. ಕಲ್ಲುಗಳ ಮೇಲೆ ನಡೆದು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಎದುರಾಗುವ ಬಂಡೆಗಳನ್ನು ದಾಟಿದರೆ ಜಲಪಾತ ಮುಟ್ಟಲೂ ಬಹುದು. ಆದರೆ ಭಾರೀ ಇಳಿಮುಖವಾಗಿ ರುವ, ಕಾಲಿಟ್ಟರೆ ಜಾರುವ ಬಂಡೆಗಳನ್ನು ದಾಟುವುದು ರೋಮಾಂಚಕ ಅನುಭವ.

ಮೂಲ ಸೌಲಭ್ಯ ಕಲ್ಪಿಸಿ: ಹಲವಾರು ಕವಲುಗಳಾಗಿ ಸುಮಾರು ನೂರು ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಭೋರ್ಗರೆತ ನಮ್ಮೆಲ್ಲಾ ಆಯಾಸಗಳನ್ನು ಒಮ್ಮೆಲೆ ದೂರವಾಗಿಸುತ್ತದೆ. ಇಂತಹ ಜಲಪಾತ ವೀಕ್ಷಿಸಲು ಸಂಬಂಧಪಟ್ಟವರು ಅನುಕೂಲ ಮಾಡಿಕೊಡದಿರುವುದು ಬೇಸರವನ್ನೂ ತರಿಸುತ್ತದೆ.

ಗಿಡಗಂಟಿಗಳೇ ಪ್ರಧಾನವಾಗಿರುವ ಈ ಸ್ಥಳವನ್ನು ಸ್ವಚ್ಛಗೊಳಿಸಿ, ಭೂಮಿಯನ್ನು ಮಟ್ಟಮಾಡಿ, ರಸ್ತೆ
ಅಭಿವೃದ್ದಿಪಡಿಸಿದರೆ ಈ ಸ್ಥಳ ಒಂದು ದಿನದ ಉಲ್ಲಾಸಕ್ಕೆ ಹೇಳಿ ಮಾಡಿಸಿದಂತಹ ಸ್ಥಳವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next