Advertisement

ಮಂಡ್ಯ : ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು

08:45 PM Jun 11, 2021 | Team Udayavani |

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ಮೋದೂರು ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಯುವಕರಿಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಯು ಇಂದು ಮಧ್ಯಾಹ್ನ ನಡೆದಿದೆ.

Advertisement

ಮೋದೂರು ಗ್ರಾಮದ ರಮೇಶ ಅವರ ಪುತ್ರ ರಾಜು(18) ಮತ್ತು ಮತ್ತೊಬ್ಬ ರಮೇಶ ಅವರ ಪುತ್ರ ಪ್ರದೀಪ(19) ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ದೊಡ್ಡಕೆರೆಯಲ್ಲಿ ಈಜಲು ಹೋಗಿ ಇಬ್ಬರೂ ಮೃತಪಟ್ಟಿದ್ದಾರೆ.

ಘಟನೆ ವಿವರ : ಸ್ನೇಹಿತರಾದ ಪ್ರದೀಪ ಮತ್ತು ರಾಜು ಇಬ್ಬರೂ ಕೆರೆಯಲ್ಲಿ ಈಜಾಡಿ ಸ್ನಾನಮಾಡಿಕೊಂಡು ಕೈಕಾಲು ಮುಖತೊಳೆದು ಬರೋಣ ಕೆರೆಯು ಭರ್ತಿಯಾಗಿದೆ ಎಂದು ಇಬ್ಬರೂ ಮಾತನಾಡಿಕೊಂಡು ಕೆರೆಯ ಬಳಿ ಹೋದಾಗ ಗ್ರಾಮದ ಇನ್ನಷ್ಟು ಚಿಕ್ಕಹುಡುಗರು ಸೇರಿಕೊಂಡು ಈಜಾಡಲು ಆರಂಭಿಸಿದ್ದಾರೆ. ಪ್ರದೀಪನಿಗಿಂತಲೂ ಚಿಕ್ಕವನಾಗಿರುವ ರಾಜುವಿಗೆ ಈಜು ಅಷ್ಟೇನು ಚೆನ್ನಾಗಿ ಬರುತ್ತಿರಲಿಲ್ಲವಾದ್ದರಿಂದ ಆತನಿಗೆ ಬೆಂಗಾವಲಾಗಿದ್ದ ಪ್ರದೀಪ ಈಜು ಬರದೇ ನೀರಿನಲ್ಲಿ ಮುಳುಗುತ್ತಿದ್ದ ರಾಜುವನ್ನು ರಕ್ಷಿಸಲು ಹೋಗಿ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ ಇದನ್ನು ಕಂಡ ಇತರೆ ಈಜುಗಾರ ಹುಡುಗರು ಪ್ರದೀಪ ಮತ್ತು ರಾಜು ಈಜಲು ಹೋಗಿ ಇಬ್ಬರೂ ಮುಳುಗಿಹೋದರು ಎಂದು ಸುದ್ದಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ:ಐಸಿಎಂಆರ್ ಸಮ್ಮತಿಸಿದ ಯಾವುದೇ ರೀತಿಯ ಕೋವಿಡ್ ತಪಾಸಣೆ ಆಗಿದ್ದಲ್ಲಿ ಗೋವಾಗೆ ಮುಕ್ತ ಪ್ರವೇಶ

ಗ್ರಾಮದ ಹಿರಿಯರು ಆತಂಕದಿಂದ ಕೆರೆಯ ಬಳಿ ಬಂದಾಗ ಇಬ್ಬರೂ ಹುಡುಗರು ನೀರಿನಲ್ಲಿ ಮುಳುಗಿ ನೆಲವನ್ನು ಹಿಡಿದುಕೊಂಡಿದ್ದು ಇಬ್ಬರ ಸುಳಿವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡ ನಾಗರಾಜು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ನೀರಿನಲ್ಲಿ ಮುಳುಗಿರುವ ಇಬ್ಬರು ಬಾಲಕರ ಮೃತ ದೇಹವನ್ನು ಪತ್ತೆಮಾಡಿಕೊಡುವಂತೆ ಮನವಿ ಮಾಡಿದ್ದಾರೆ.  ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ಪ್ರದೀಪ ಮತ್ತು ರಾಜು ಅವರ ಮೃತ ದೇಹಗಳನ್ನು ಹುಡುಕಿ ಪೋಷಕರಿಗೆ ಒಪ್ಪಿಸಿದ್ದಾರೆ.

Advertisement

ಘಟನೆಯ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ನಿರವಮೌನ ಆವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next