Advertisement

ಪ್ರೀತಿಗೆ ವಿರೋಧ;ಪ್ರಿಯತಮೆ ಮನೆಯಲ್ಲೇ ಆಕೆಯ ಹತ್ಯೆಗೆ ಯತ್ನ, ಪ್ರಿಯತಮನೂ ಆಸ್ಪತ್ರೆಗೆ ದಾಖಲು

04:42 PM Nov 10, 2021 | Team Udayavani |

ಚೆನ್ನೈ: ತಮ್ಮ ಸಂಬಂಧಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕ್ರೋಶಗೊಂಡ ಯುವಕ ಪ್ರಿಯತಮೆಯ ಗಂಟಲು ಸೀಳಿ ಹತ್ಯೆಗೈಯಲು ಯತ್ನಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ರಾಜಸ್ಥಾನ : ಟ್ಯಾಂಕರ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್, ಹನ್ನೆರಡು ಮಂದಿ ಸಜೀವ ದಹನ

ತಮಿಳುನಾಡಿನ ಮಿಂಜೂರ್ ನಿವಾಸಿ ಅಜಿತ್ ಎಂಬ ಯುವಕ ಪ್ರಿಯತಮೆಯನ್ನು ಕೊಲ್ಲಲು ಯತ್ನಿಸಿದ ನಂತರ ತಾರಾಮಣಿಯಲ್ಲಿರುವ ಆಕೆಯ ಮನೆಯಲ್ಲೇ ತಾನೂ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆ ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೊಬೈಲ್ ಮಾರಾಟದ ಶೋರೂಂನಲ್ಲಿ ಅಜಿತ್ ಮತ್ತು ಯುವತಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಇಬ್ಬರಿಗೂ ಸ್ನೇಹವಾಗಿದ್ದು, ಬಳಿಕ ಅಜಿತ್ ಯುವತಿಯನ್ನು ಪ್ರೀತಿಸಲು ಆರಂಭಿಸಿದ್ದ ಎಂದು ವರದಿ ವಿವರಿಸಿದೆ.

ಏತನ್ಮಧ್ಯೆ ಇವರಿಬ್ಬರ ಪ್ರೇಮಕ್ಕೆ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಆಕೆಯನ್ನು ಬೇರೊಬ್ಬನ ಜತೆ ವಿವಾಹ ಮಾಡಿಕೊಡುವ ಸಿದ್ಧತೆ ನಡೆಸಿದ್ದರು. ಈ ವಿಷಯ ತಿಳಿದು ಕುಪಿತಗೊಂಡ ಅಜಿತ್ ತಾರಾಮಣಿಯಲ್ಲಿರುವ ಯುವತಿಯ ಮನೆಗೆ ಭೇಟಿ ನೀಡಿದ್ದ.

Advertisement

ಯುವತಿಯ ಕೋಣೆಯೊಳಕ್ಕೆ ನುಗ್ಗಿದ್ದ ಯುವಕ ಗಲಾಟೆ ಮಾಡುತ್ತಿದ್ದದ್ದನ್ನು ಕೇಳಿ ಹೊರಗೆ ಇದ್ದ ಪೋಷಕರು ಕೋಣೆಯೊಳಗೆ ಹೋಗಿ ನೋಡಿದಾಗ ಮಗಳು ರಕ್ತದ ಮಡಿವಿನಲ್ಲಿ ಬಿದ್ದಿದ್ದಳು. ಯುವಕ ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದ. ನಂತರ ಆತ ಮತ್ತೊಂದು ಕೋಣೆಯೊಳಕ್ಕೆ ನುಗ್ಗಿ ಬಾಗಿಲು ಹಾಕಿಕೊಂಡಿರುವುದಾಗಿ ವರದಿ ತಿಳಿಸಿದೆ.

ಪೋಷಕರು ಕೂಡಲೇ ಮಗಳನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮನೆಯ ಬಾಗಿಲನ್ನು ಒಡೆದು ಒಳ ಹೋದಾಗ ಅಜಿತ್ ನೇಣು ಹಾಕಿಕೊಂಡಿದ್ದು, ಆತನನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿ ಹೇಳಿದೆ.

ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಾರಾಮಣಿ ಪೊಲೀಸರು ತಿಳಿಸಿದ್ದಾರೆ. ಯುವಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅಜಿತ್ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next