Advertisement

ಮದುವೆ ಮನೆಯಲ್ಲಿ ದುರಂತ; ಕುದಿಯುವ ರಸಂ ಹಂಡೆಯೊಳಗೆ ಬಿದ್ದು ಕೊನೆಯುಸಿರೆಳೆದ ವಿದ್ಯಾರ್ಥಿ

12:33 PM May 01, 2023 | Team Udayavani |

ಚೆನ್ನೈ: ರಸಂ ತಯಾರಿಸುತ್ತಿದ್ದ ವೇಳೆ ಯುವಕನೊಬ್ಬ ಆಕಸ್ಮಿಕವಾಗಿ ದೊಡ್ಡ ಹಂಡೆಯೊಳಗೆ ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:LPG : ಗ್ರಾಹಕರಿಗೆ ಸಿಹಿಸುದ್ದಿ- ವಾಣಿಜ್ಯ ಬಳಕೆ LPG ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ

ಮೃತ ದುರ್ದೈವಿ ಕಾಲೇಜು ವಿದ್ಯಾರ್ಥಿಯಾಗಿದ್ದು, ಈತ ರಜೆಯ ಹಿನ್ನೆಲೆಯಲ್ಲಿ ಕೆಟರಿಂಗ್‌ ಸಂಸ್ಥೆಯಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದ. ಕಳೆದ ವಾರ ವಿವಾಹ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ಊಟ ಬಡಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಡುಗೆ ಚಪ್ಪರದಲ್ಲಿ ರಸಂ ಕುದಿಸುತ್ತಿದ್ದ ದೊಡ್ಡ ಹಂಡೆಯೊಳಗೆ ಯುವಕ ಬಿದ್ದಿದ್ದು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.

ಮೃತನನ್ನು ಎನ್ನೋರ್‌ ಸಮೀಪದ ಪುದುನಗರ್‌ ನ ಅಥಿಪಟ್ಟು ನಿವಾಸಿ ವಿ.ಸತೀಶ್‌ ಎಂದು ಗುರುತಿಸಲಾಗಿದೆ. ಈತ ಕೊರುಕ್ಕುಪೇಟ್‌ ನ ಖಾಸಗಿ ಕಾಲೇಜಿನ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಪ್ರಕರಣದ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next