Advertisement

ಚರಂಡಿಗೆ ಉರುಳಿ ಬಿದ್ದ ಕಾರು: ಮಲ್ಯಾಡಿ ಮೂಲದ ಉದ್ಯಮಿ ಸಾವು

12:57 PM Feb 22, 2022 | Team Udayavani |

ಸಿದ್ದಾಪುರ, ಫೆ. 21: ಬೆಂಗಳೂರಿನಿಂದ ಹಾಲಾಡಿ ಮಾರ್ಗವಾಗಿ ಶಾನಾಡಿಗೆ ತೆರಳುತ್ತಿದ್ದ ಮಾರುತಿ ಬಲೆನೋ ಕಾರು ಸೋಮವಾರ ಮಧ್ಯಾಹ್ನ ಬೈಂದೂರು-ವೀರಾಜಪೇಟೆ ರಾಜ್ಯ ಹೆದ್ದಾರಿಯ ಆರ್ಡಿ ಕೊಂಜಾಡಿ ಬಳಿ ಚರಂಡಿಗೆ ಉರುಳಿ ಬಿದ್ದಿದೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಂದಾಪುರ ತಾಲೂಕು ಮಲ್ಯಾಡಿ ಬೆಟ್ಟಿನಮನೆ ಮೂಲದ ಬೆಂಗಳೂರು ಉದ್ಯಮಿ ತೇಜರಾಜ್‌ ಶೆಟ್ಟಿ (65) ಸಾವನ್ನಪ್ಪಿದ್ದಾರೆ.

Advertisement

ಪುತ್ರ ಕಾರು ಚಲಾಯಿಸುತ್ತಿದ್ದ ಕಾರಿನಲ್ಲಿ ತೇಜರಾಜ್‌ ಶೆಟ್ಟಿ ಹಾಗೂ ಮಗ ರಕ್ಷಕ್‌ ಶೆಟ್ಟಿ ಪ್ರಯಾಣಿಸುತ್ತಿದ್ದರು. ಮಗ ರಕ್ಷಕ್‌ ಶೆಟ್ಟಿ (26) ಅವರು ಕಾರು ಚಾಲಾಯಿಸುತ್ತಿದ್ದು, ಆರ್ಡಿ ಕೊಂಜಾಡಿ ಬಳಿ ಕಾರು ಚರಂಡಿಗೆ ಉರುಳಿ ಬಿದ್ದಿದೆ. ಬೆಳ್ವೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಕೊಡಿಸಿದರೂ, ತಲೆ ಭಾಗಕ್ಕೆ ಪೆಟ್ಟು ಬಿದ್ದಿದ್ದ ಪರಿಣಾಮ ತೇಜರಾಜ್‌ ಶೆಟ್ಟಿ ಮೃತಪಟ್ಟರು. ಮಗ ರಕ್ಷಕ್‌ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೇಜರಾಜ್‌ ಶೆಟ್ಟಿ ಅವರು ಬೆಂಗಳೂರಿನಲ್ಲಿ ಕ್ಯಾಟರಿಂಗ್‌, ಬೇಕರಿ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಮಗ ರಕ್ಷಕ್‌ ಎಂಜಿನಿಯರ್‌. ಮೃತರು ಪತ್ನಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಶಂಕರನಾರಾಯಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರಿಗೆ ಚೂರಿಯಿಂದ ಇರಿದ ಕಳ್ಳ
ಮಂಗಳೂರು, ಫೆ. 21: ತನ್ನನ್ನು ಹಿಡಿಯಲು ಬಂದ ಮಂಗಳೂರು ಉತ್ತರ ಠಾಣೆಯ ಪೊಲೀಸರಿಗೆ ಚೂರಿಯಿಂದ ಇರಿದು ಕಳ್ಳನೋರ್ವ ಪರಾರಿಯಾದ ಘಟನೆ ನಗರದ ಸೆಂಟ್ರಲ್‌ ಮಾರ್ಕೆಟ್‌ ಬಳಿ ಸೋಮವಾರ ಸಂಜೆ ಸಂಭವಿಸಿದೆ. ಪೊಲೀಸ್‌ ಸಿಬಂದಿ ವಿನೋದ್‌ ಅವರಿಗೆ ಕಳ್ಳ ಚೂರಿಯಂತಹ ಆಯುಧದಿಂದ ಇರಿದು ಪರಾರಿ ಯಾಗಿದ್ದಾನೆ. ವಿನೋದ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯ ಆಗಿಲ್ಲ. ಕಾಸರಗೋಡು ಮೂಲದ ಕಳ್ಳ ಕದ್ದ ವಾಚ್‌ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದನೆಂಬ ಮಾಹಿತಿ ಲಭ್ಯವಾಗಿತ್ತು ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next