Advertisement

ಸಾಂಕ್ರಾಮಿಕ ರೋಗ ತಡೆಗೆ ವರ್ಷಪೂರ್ತಿ ಎಚ್ಚರ…​​​​​​​

06:00 AM Jun 19, 2018 | Team Udayavani |

ಮಲ್ಪೆ: ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮಲೇರಿಯಾ, ಅತಿಸಾರ ಭೇದಿ, ಇನ್ನಿತರ ಸಾಂಕ್ರಾಮಿಕ ರೋಗಗಳ ತಡೆಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮಳೆಗಾಲದಲ್ಲಿ ಎಚ್ಚೆತ್ತು ಕೊಳ್ಳದೆ ವರ್ಷ ಪೂರ್ತಿ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಅದಕ್ಕೆ ಪೂರಕವಾದ ಔಷಧ ಮತ್ತು ಅಗತ್ಯ ವಸ್ತುಗಳ ಸಂಗ್ರಹಿಸಿ ಇಟ್ಟುಕೊಂಡು ರೋಗಿಗಳ ಸೇವೆಗೆ ಸದಾ ಸಿದ್ದವಾಗಿದೆ.

Advertisement

ಕಡೆಕಾರು, ಕುತ್ಪಾಡಿ, ಕನ್ನರ್ಪಾಡಿ, ತೆಂಕನಿಡಿಯೂರು, ಲಕ್ಷ್ಮೀನಗರ, ಪಾಳೆಕಟ್ಟೆ,  ಕೊಡವೂರು, ಪಡುಕರೆ, ತೊಟ್ಟಂ, ಕಿದಿಯೂರು ಕಲ್ಮಾಡಿ ವ್ಯಾಪ್ತಿಗೆ ಒಳಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಆರು ಉಪಕೇಂದ್ರಗಳನ್ನೊಳಗೊಂಡಿದೆ. ಇಲ್ಲಿನ ಆರೋಗ್ಯ ಕೇಂದ್ರದಲ್ಲಿ  ಪ್ರತಿನಿತ್ಯ 60ರಿಂದ 70 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ, ಮಳೆಗಾಲದಲ್ಲಿ ರೋಗಿಗಳ ಸಂಖ್ಯೆ ಸ್ವಲ್ಪ ಜಾಸ್ತಿ ಇರುತ್ತದೆ.

ಲಾರ್ವ ಸಮೀಕ್ಷೆ
ಮಳೆಗಾಲದಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಗಪ್ಪಿ ಮತ್ತು ಲಿಮಿಯಾ ಬ್ರಿàಡ್‌ಗಳನ್ನು ನೀರು ನಿಂತಿರುವ ಹೊಂಡ ಕೆರೆಗಳಿಗೆ ಬಿಡಲಾಗುತ್ತಿದೆ. ಅಂಗನವಾಡಿ ಮತ್ತು 12 ಮಂದಿ ಆಶಾ ಕಾರ್ಯಕರ್ತರ ನೆರವಿನೊಂದಿಗೆ ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ಸಿಬಂದಿಯಿಂದ ತ್ವರಿತಗತಿ ಯಲ್ಲಿ ಜ್ವರದ ಸಮೀಕ್ಷೆ ಕೈಗೊಂಡು ರಕ್ತ ಮಾದರಿಗಳನ್ನು ಸಂಗ್ರಹಿಸಿ ಜಿಲ್ಲಾ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸ ಲಾಗುತ್ತದೆ. ಸೊಳ್ಳೆ ಸಂತಾನೋತ್ಪತ್ತಿ ತಾಣಗಳ ನಿರ್ಮೂಲನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಅತಿಸಾರ ಭೇದಿ
ಈಗಾಗಲೇ ಮನೆ ಮನೆಗೆ ಭೇಟಿ ನೀಡಿ 5 ವರ್ಷ ಒಳಗಿನ ಮಕ್ಕಳಿಗೆ ಒಆರ್‌ಎಸ್‌ ಪ್ಯಾಕೇಟ್‌ ನೀಡಲಾಗಿದೆ. ಆದರ ಜತೆಯಲ್ಲಿ ಎದೆಹಾಲು ಉಣ್ಣುವ ಮಕ್ಕಳಿಗೆ ಕಡ್ಡಾಯವಾಗಿ ಎದೆಹಾಲು ನೀಡುವಂತೆ ತಾಯಂದಿರ ಮನ ಒಲಿಸುವ ಕೆಲಸವನ್ನು ಮಾಡಲಾಗಿದೆ. ಅಂಗನವಾಡಿಯಲ್ಲಿ ತಾಯಂದಿರ ಸಭೆಯಲ್ಲಿ ಈ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತದೆ.

ಸಿಬಂದಿ ಕೊರತೆ
5 ಹಾಸಿಗೆಗಳುಳ್ಳ ಈ ಆರೋಗ್ಯ ಕೇಂದ್ರದಲ್ಲಿ 1 ಫಾರ್ಮಾಸಿಸ್ಟ್‌, ಒಬ್ಬರು ಹಿರಿಯ ಆರೋಗ್ಯ ಸಹಾಯಕಿ, ಇಬ್ಬರು ಲ್ಯಾಬ್‌ ಟೆಕ್ನಿಶಿಯನ್‌, ಇಬ್ಬರು ಕಿರಿಯ ಆರೋಗ್ಯ ಸಹಾಯಕಿಯರು, ಇಬ್ಬರು ಗ್ರೂಪ್‌ ಡಿ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಕಿರಿಯ ಆರೋಗ್ಯ ಪುರುಷ ಸಹಾಯಕರ ಹುದ್ದೆಗಳು ಖಾಲಿ ಇದ್ದು ಸದ್ಯಕ್ಕೆ ಇದ್ದವರೆ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಸ್ಟಾಫ್‌ ನರ್ಸ್‌ ಸೇರಿದಂತೆ ಹೆಚ್ಚುವರಿ ಪುರುಷ ಮತ್ತು ಮಹಿಳಾ ಕಿರಿಯ ಆರೋಗ್ಯ ಸಹಾಯಕರ ಅಗತ್ಯವಿದೆ. ಬೆಳಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ವೈದ್ಯರು ಲಭ್ಯರಿರುತ್ತಾರೆ.

Advertisement

ಮಲೇರಿಯಾ ವರದಿಯಾಗಿಲ್ಲ
ಮೀನುಗಾರಿಕೆ ಬಂದರಿನಲ್ಲಿ  ಕಾರ್ಮಿಕರಾಗಿ ದುಡಿಯುವ ಹೊರ ಜಿಲ್ಲೆಯ ಮಂದಿ ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಮಳೆಗಾಲದ ಮೂರು ತಿಂಗಳು ಹೆಚ್ಚಾಗಿ ಮಲೇರಿಯಾ ಪ್ರಕರಣಗಳು ಕಂಡು ಬರುತ್ತಿದ್ದು ಈ ಸಲ ಮೇ ಮತ್ತು ಜೂನ್‌ ತಿಂಗಳ ಇವತ್ತಿನ ವರೆಗೆ ಯಾವುದೇ ಮಲೇರಿಯಾ, ಡೆಂಗ್ಯೂ ಸೇರಿದಂತೆ ಸೊಳ್ಳೆಯಿಂದ ಹರಡುವ ರೋಗ ವರದಿಯಾಗಿಲ್ಲ.

ಸಂಪರ್ಕ ಸಂಖ್ಯೆ
ಡಾ| ರವೀಂದ್ರ ಬೋರ್ಕರ್‌, ಆಡಳಿತ ವೈದ್ಯಾಧಿಕಾರಿ : 8277505961

ನಮ್ಮ ಟೀಮ್‌ ರೆಡಿ
ನಾವು ಮಳೆಗಾಲ ಅಂತ ಹೇಳಿ ಅಲ್ಲ, ವರ್ಷವಿಡೀ ದಿನವೂ ಜನರ ಸೇವೆಗೆ ನಮ್ಮ ತಂಡ ಸಿದ್ದವಾಗಿದೆ.  12 ಮಂದಿ ಆಶಾ ಕಾರ್ಯಕರ್ತೆರೊಂದಿಗೆ ನಮ್ಮ ಸಿಬಂದಿ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಸೊಳ್ಳೆಯಿಂದ ಹರಡುವ ಎಲ್ಲ ರೋಗಗಳಿಗೆ ಪೂರಕವಾದ ಶೇ. 100ರಷ್ಟು ಔಷಧಿ ಲಭ್ಯವಿವೆ. ಕುತ್ಪಾಡಿ ಪರಿಸರದಲ್ಲಿ ಸೊಳ್ಳೆ ಪರದೆಯ ವಿತರಣೆಯೂ ನಡೆಯಲಿದೆ.
ಡಾ|  ರವೀಂದ್ರ ಬೋರ್ಕರ್‌,
 ಆಡಳಿತ ವೈದ್ಯಾಧಿಕಾರಿ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next