Advertisement

ಬೋಟ್‌ ನಾಪತ್ತೆ : ಮೀನುಗಾರರ ಗುಡುಗಿಗೆ ಹೆದ್ದಾರಿ ಸ್ತಬ್ಧ

04:05 AM Jan 07, 2019 | |

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಏಳು ಮೀನುಗಾರರ ಸುಳಿವು 23 ದಿನಗಳಾದರೂ ಪತ್ತೆಯಾಗದ ಕಾರಣ ಸರಕಾರದ ವಿರುದ್ಧ ಕ್ರುದ್ಧಗೊಂಡ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಮೀನುಗಾರರು ಮಲ್ಪೆ ಮೀನುಗಾರರ ಸಂಘದ ಕರೆಯಂತೆ ರವಿವಾರ ಮೀನುಗಾರಿಕೆಗೆ ರಜೆ ಸಾರಿ ಬೃಹತ್‌ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆ ನಡೆಸಿದರು. 

Advertisement

ಮಲ್ಪೆಯಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾ ಕರಾವಳಿ ಬೈಪಾಸ್‌ಗೆ ಬಂದು ಅಂಬಲಪಾಡಿ ಬೈಪಾಸ್‌ನಲ್ಲಿ
ಸಮಾಪನಗೊಂಡಿತು. ರಸ್ತೆ ಮಧ್ಯೆ ಪ್ರತಿಭಟನ ಸಭೆ ನಡೆಸಿದ ಪ್ರತಿಭಟನಕಾರರು ಹುದುಗಿದ್ದ ಅಸಮಾಧಾನವನ್ನು ತೋಡಿಕೊಂಡರು. ಉಪಸ್ಥಿತರಿದ್ದ ವಿವಿಧ ಜನಪ್ರತಿನಿಧಿಗಳು ತಾವು ಇದುವರೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿ
ದರು. ಸರಕಾರದ ಪರವಾಗಿ ಸಚಿವೆ ಡಾ| ಜಯಮಾಲಾ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. 

ಡಾ| ಜಯಮಾಲಾ ಭರವಸೆ
ನಿಮ್ಮ ಕಷ್ಟಗಳು ನನ್ನ ಕಷ್ಟಗಳೂ ಹೌದು. ಮೀನುಗಾರರ ಭಾವನೆ, ಕಷ್ಟ ಅರ್ಥವಾಗುತ್ತದೆ. ಇಡೀ ರಾಜ್ಯ ನಿಮ್ಮೊಂದಿಗೆ ಇದೆ. ಸೇನೆಯನ್ನು ಕರೆಸಿ ಕಾರ್ಯಾಚರಿಸಲೂ ಪತ್ರ ಬರೆದಿದ್ದೇವೆ ಎಂದು ಡಾ| ಜಯಮಾಲಾ ಹೇಳಿದರು. ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಭರವಸೆ ನೀಡಿದರು. 

ಕೇಂದ್ರ ರಕ್ಷಣಾ ಸಚಿವೆ, ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ, ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮನವಿ ನೀಡಿದ್ದೇವೆ. ಅವರೆಲ್ಲರೂ ಅವರವರ ವ್ಯಾಪ್ತಿಯ ಇಲಾಖೆಗಳಿಗೆ ಸ್ಪಷ್ಟ ಸೂಚನೆ ಕೊಟ್ಟಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಸಿಂಧುದುರ್ಗದಲ್ಲಿ ಸಿಕ್ಕಿದ ಪ್ಲಾಸ್ಟಿಕ್‌ ಕಂಟೈನರನ್ನು ಮೀನುಗಾರರು ಕಾಣೆಯಾದ
ಬೋಟಿನದ್ದು ಎಂದು ಗುರುತಿಸಿದ್ದಾರೆ. ಇದು ಹೇಗೆ ಬಂತೆಂದು ತನಿಖೆಯಾಗಬೇಕು. ಪ್ರಧಾನಿ ಭೇಟಿಗೂ ತಾನು ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. 

ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಅವರು ಜ. 8ರಂದು ಕುಮಟಾ, ಭಟ್ಕಳ, ಉಡುಪಿಗೆ ಬರುವುದಾಗಿ ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೀನುಗಾರರ ಬಗ್ಗೆ ನಿರ್ಲಕ್ಷ್ಯ ತಾಳುತ್ತಿವೆ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಆರೋಪಿಸಿದರು. ಎರಡೂ ಸರಕಾರಗಳ ಮೇಲೆ ಒತ್ತಡ ತರುವ ಕೆಲಸದಲ್ಲಿ ಒಗ್ಗೂಡಿ ಪ್ರಯತ್ನಿಸುತ್ತೇವೆ ಎಂದು ಶಾಸಕ ಡಾ| ವೈ. ಭರತ್‌ ಶೆಟ್ಟಿ ಹೇಳಿದರು. ದಿಲ್ಲಿಗೆ ತೆರಳಿ ಸಚಿವರ ಗಮನಕ್ಕೆ ತಂದ ವಿಚಾರವನ್ನು ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಮಾಜಿ ಸಚಿವರಾದ ಕೆ. ಜಯಪ್ರಕಾಶ್‌ ಹೆಗ್ಡೆ, ಪ್ರಮೋದ್‌ ಮಧ್ವರಾಜ್‌ ವಿವರಿಸಿದರು. 

Advertisement

ಮುಂದಿನ ಹೆಜ್ಜೆ ಬೇರೆ
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ತಮ್ಮ ಪ್ರಸ್ತಾವನೆಯಲ್ಲಿ, “ಸುವರ್ಣ ತ್ರಿಭುಜ’ ಬೋಟ್‌ನಲ್ಲಿ ತೆರಳಿದ 7ಮಂದಿ ನಾಪತ್ತೆಯಾದ ಕಾರಣ ಮೀನುಗಾರರಲ್ಲಿ ಕತ್ತಲು ಕವಿದಿದೆ. ಇದು ಕೇವಲ ಆರಂಭ. ಸರಕಾರ ಹೊಸ ತಂತ್ರಜ್ಞಾನದ ಮೂಲಕ ಬೋಟ್‌ ಎಲ್ಲಿಗೆ ಹೋಗಿದೆ ಎಂದು ಪತ್ತೆ ಹಚ್ಚಬೇಕು. ಇಲ್ಲವಾದರೆ ನಮ್ಮ ಮುಂದಿನ ಹೆಜ್ಜೆ ಬೇರೆ ಇದೆ ಎಂದು ಎಚ್ಚರಿಕೆ ನೀಡಿದರು.
 
ಹಗುರವಾಗಿ ನೋಡಬೇಡಿ
ಮೀನುಗಾರ ಮುಖಂಡ ಡಾ| ಜಿ. ಶಂಕರ್‌, ಮೀನುಗಾರರನ್ನು ಹಗುರವಾಗಿ ನೋಡಬೇಡಿ.  ಓರ್ವ ರೈತ ಸತ್ತರೆ 10  ಲ.ರೂ. ಘೋಷಣೆ ಮಾಡುವ ಸರಕಾರ ಈಗೇನು ಮಾಡುತ್ತಿದೆ ಎಂದು ಪ್ರಶ್ನಿಸಿದರಲ್ಲದೆ, ಸರಕಾರದಿಂದ ಆಗದೆ ಇದ್ದರೆ ನಾವೇ ಹುಡುಕುತ್ತೇವೆ ಎಂದರು. ನಾಪತ್ತೆಯಾದವರು ಸಿಗುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಹೇಳಿದರು. 

ಚೆಲ್ಲಾಟ ಬೇಡ
ಮೀನುಗಾರರ ಜತೆ ಚೆಲ್ಲಾಟ ಬೇಡ ಎಂದು ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ ಎಚ್ಚರಿಸಿದರು. ಕಣ್ಮರೆಯಾದ ಏಳು ಜನರಲ್ಲಿ ಐವರು ಉ.ಕ. ಜಿಲ್ಲೆಯವರು. ಸೂಕ್ತ ಪರಿಹಾರ ಕಂಡುಬಾರದೆ ಇದ್ದಲ್ಲಿ ನಮ್ಮದೇ ರೀತಿಯ ತೀವ್ರ ಹೋರಾಟ ನಡೆಸುವೆವು ಎಂದು ಉ.ಕ. ಜಿಲ್ಲೆಯ ಸಂಘಟನೆ ಅಧ್ಯಕ್ಷ ಗಣಪತಿ ಮಾಂಗ್ರೆ ಹೇಳಿದರು. 

ಗಾಂಧಿ ಗೊತ್ತು, ಭಗತ್‌ ಸಿಂಗ್‌ ಕೂಡ ಗೊತ್ತು
ನಮಗೆ ಗಾಂಧೀಜಿಯವರಂತೆ ಅಹಿಂಸಾತ್ಮಕ ಹೋರಾಟ ನಡೆಸಲು ಗೊತ್ತಿದೆ. ಭಗತ್‌ ಸಿಂಗ್‌ರಂತೆ ಹೋರಾಡಲೂ ಗೊತ್ತಿದೆ ಎಂದು ನಾಡದೋಣಿ ಮೀನುಗಾರರ ಸಂಘಟನೆಯ ಅಧ್ಯಕ್ಷ ಆನಂದ ಖಾರ್ವಿ ಎಚ್ಚರಿಸಿದರು. ಇಲಾಖೆ ಕೇಂದ್ರ ಕರಾವಳಿಗೆ ಬರಲಿ ಮೀನುಗಾರರ ವಿಶ್ವರೂಪ ತೋರುತ್ತಿದೆ. ಹಿಮಪಾತಕ್ಕೆ ಸಿಲುಕಿದರೆ ಕೋಟ್ಯಂತರ ರೂ. ಖರ್ಚು ಮಾಡಿ ಹುಡುಕುವುದಿಲ್ಲವೆ? ಕೊಳವೆ ಬಾವಿಯಲ್ಲಿ ಮಗು ಬಿದ್ದಾಗ ದೃಶ್ಯ ಮಾಧ್ಯಮಗಳು ಮೂರ್‍ನಾಲ್ಕು ದಿನ ತೋರಿಸುವುದಿಲ್ಲವೆ? ಇಲಾಖೆಗಳ ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುವುದು ಬೇಡ; ಅದು ಕರಾವಳಿಯಲ್ಲಿ ನೆಲೆಸಲಿ ಎಂದು ಉಪ್ಪುಂದ ಮೀನುಗಾರರ ಸಂಘಟನೆ ಅಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಆಗ್ರಹಿಸಿದರು. 

ಉದ್ಯಮಿ ಆನಂದ ಸಿ. ಕುಂದರ್‌, ಮೀನುಗಾರ ಕ್ರಿಯಾ ಸಮಿತಿ ಅಧ್ಯಕ್ಷ ಮನೋಹರ ಬೋಳೂರು, ಭಟ್ಕಳ ಪರ್ಸಿನ್‌ ಬೋಟ್‌ ಮಾಲಕರ ಸಂಘದ ವಸಂತ ಖಾರ್ವಿ, ಮಲ್ಪೆ ಘಟಕದ ಮುಖಂಡ ಕಿಶೋರ್‌ ಸುವರ್ಣ ಮಾತನಾಡಿದರು. ಭಟ್ಕಳ ಶಾಸಕ ಸುನಿಲ್‌ ನಾಯ್ಕ, ಯು.ಆರ್‌.ಸಭಾಪತಿ, ಉದ್ಯಮಿ ಉದಯಕುಮಾರ ಶೆಟ್ಟಿ, ಜನಾರ್ದನ ತೋನ್ಸೆ, ಗೀತಾಂಜಲಿ ಸುವರ್ಣ, ಮೊಗವೀರ ಯುವ ಸಂಘ ಟನೆ ಜಿಲ್ಲಾಧ್ಯಕ್ಷ ವಿನಯ ಕರ್ಕೇರ ಉಪಸ್ಥಿತರಿದ್ದರು. ಮಲ್ಪೆ ಮೀನುಗಾರರ ಸಂಘ ಕಾರ್ಯದರ್ಶಿ ಗೋಪಾಲ್‌ ಆರ್‌.ಕೆ. ಸ್ವಾಗತಿಸಿ ಚಂದ್ರೇಶ್‌ ಪಿತ್ರೋಡಿ ಕಾರ್ಯಕ್ರಮ ನಿರ್ವಹಿಸಿದರು. 

24,000 ಜನರಿಗೆ ಭೋಜನ
ಪ್ರತಿಭಟನಕಾರರಿಗೆ ಮಧ್ಯಾಹ್ನ ಶ್ಯಾಮಿಲಿ ಸಭಾಂಗಣದ ವಠಾರದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಾರು, ಸಾಂಬಾರು, ಪಲ್ಯ, ಅನ್ನ, ಉಪ್ಪಿನಕಾಯಿ ಒಳಗೊಂಡ ಊಟವನ್ನು ಸುಮಾರು 24,000 ಜನರು ಸ್ವೀಕರಿಸಿದರು ಎಂದು ಮೂಲಗಳು ತಿಳಿಸಿವೆ. ಮಲ್ಪೆ ಮಸೀದಿ, ಕಲ್ಮಾಡಿ ಚರ್ಚ್‌ನಿಂದ ಕುಡಿಯುವ ನೀರು, ಆದಿಉಡುಪಿ ಮಸೀದಿಯಿಂದ ಪಾನೀಯವನ್ನು ಒದಗಿಸಿದ್ದರು. 

ಸ್ವತ್ಛತಾ ಕ್ರಮ
ಪ್ರತಿಭಟನಕಾರರಿಗೆ ಕುಡಿಯಲು ಬಾಟಲಿ ನೀರನ್ನು ಕೊಡಲಾಯಿತು. ಇವುಗಳನ್ನು ಕಾರ್ಯಕ್ರಮ ಮುಗಿದ ಬಳಿಕ ತೆಗೆದು ಸ್ವತ್ಛಗೊಳಿಸಲಾಯಿತು.

ಬಿಗಿ ಪೊಲೀಸ್‌ ಬಂದೋಬಸ್ತ್
ಪ್ರತಿಭಟನೆಗೆ ಬಿಗಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಯಿತು. ಸುಮಾರು 400 ಪೊಲೀಸರು, ಮೂರು ಕೆಎಸ್‌ಆರ್‌ಪಿ ತುಕಡಿ, ಆರು ಸಶಸ್ತ್ರ ಮೀಸಲು ಪಡೆ ತುಕಡಿಯನ್ನು ಬಳಸಲಾಗಿತ್ತು. ಮೂರು ಜಿಲ್ಲೆಗಳ ಪೊಲೀಸರನ್ನು ಬಳಸಿಕೊಳ್ಳಲಾಗಿದ್ದು, ವೀಡಿಯೋ, ಡ್ರೋನ್‌ ಕೆಮರಾ ಸಹಾಯ ಪಡೆಯಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಸುದ್ದಿಗಾರರಿಗೆ ತಿಳಿಸಿದರು. 

ಕಂಟೈನರ್‌ ತನಿಖೆ ಮುಂದುವರಿಕೆ
ಸಿಂಧುದುರ್ಗದಲ್ಲಿ  ಸಿಕ್ಕಿದ ಕಂಟೈನರ್‌ ಕುರಿತು ತನಿಖೆ ನಡೆಯುತ್ತಿದೆ. ಇದುವರೆಗೆ ಹೆಚ್ಚಿನ ಮಾಹಿತಿ ಇಲ್ಲ  ಎಂದು ಎಸ್‌ಪಿ ಸುದ್ದಿಗಾರರಿಗೆ ಹೇಳಿದರು. 

ಸಂಚಾರಕ್ಕೆ ಬದಲಿ ಮಾರ್ಗ
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚರಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಅಂಬಾಗಿಲು, ಪೆರಂಪಳ್ಳಿ, ಮಣಿಪಾಲ, ಬೀಡಿನಗುಡ್ಡೆ ಮಾರ್ಗವಾಗಿ ಉದ್ಯಾವರ ಬಲಾಯಿಪಾದೆ ಮೂಲಕ ತೆರಳಲು ಅವಕಾಶ ನೀಡಲಾಯಿತು. ಆ್ಯಂಬುಲೆನ್ಸ್‌ಗಳಿಗೆ ಸಂಚರಿಸಲು ಅವಕಾಶ ಕೊಡಲಾಯಿತು. 

ನಾಪತ್ತೆಯಾದವರ ಭಾವಚಿತ್ರ ಪ್ರದರ್ಶನ
ಪ್ರತಿಭಟನ ಸ್ಥಳದಲ್ಲಿ ವಾಹನವನ್ನೇ ವೇದಿಕೆಯನ್ನಾಗಿ ಮಾಡಲಾಗಿತ್ತು. ನಾಪತ್ತೆಯಾದ ಏಳು ಜನರ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನಕಾರರು ಘೋಷಣೆಗಳನ್ನು ಕೂಗುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next