Advertisement

ಮಲೆನಾಡು-ಅರೆ ಮಲೆನಾಡು ಸಮಸ್ಯೆ ಮುಕ್ತಿ

11:50 AM Apr 21, 2022 | Kavyashree |

ಶಿವಮೊಗ್ಗ: ಅರಣ್ಯ ಇಲಾಖೆಗೆ ಸಂಬಂಧಿಸಿದ ವಿಚಾರಗಳನ್ನು ಕಾನೂನಾತ್ಮಕವಾಗಿ ಕೈಗೆತ್ತಿಕೊಳ್ಳಲು ಮೇ ಮೊದಲನೇ ವಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಡ್ವೋಕೇಟ್‌ ಜನರಲ್‌ ಹಾಗೂ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳ ಸಮಸ್ಯೆಗಳಿಗೆ ಕೆಲವು ಸ್ಪಷ್ಟನೆ ನೀಡಬೇಕು. ಕೆಲವು ಕಾನೂನಾತ್ಮಕ ಬದಲಾವಣೆಗಳನ್ನು ತರಬೇಕು. ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಳ್ಳುವುದಿದೆ. ಇವೆಲ್ಲದ್ದಕ್ಕೂ ಕ್ರಮ ಜರುಗಿಸಲಾಗುವುದು. ಕೆಲವು ವಿಷಯ ಗಳಿಗೆ ತಕ್ಷಣವೇ ಪರಿಹಾರ ನೀಡಲಾಗುವುದು. ಕೆಲವಕ್ಕೆ ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರ ಸರ್ಕಾರದಿಂದ ತೀರುವಳಿ ಪಡೆಯಲು ಪ್ರಯತ್ನ ಮಾಡಲಾಗುವುದು ಎಂದರು.

ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸಲು ಈ ಭಾಗದ ಜನರ ಇಚ್ಛೆ ಈಡೇರಿಸಲು ಸ್ಪಂದಿಸಲಾಗುವುದು. ಕೈಗಾರಿಕೋದ್ಯಮಕ್ಕೆ ಶಿವಮೊಗ್ಗದಲ್ಲಿ ವಿಫುಲ ಅವಕಾಶಗಳಿದ್ದು, ಈ ಬಗ್ಗೆಯೂ ವಿಶೇಷ ಗಮನ ಹರಿಸಲಾಗುವುದು. “ಬಿಯಾಂಡ್‌ ಬೆಂಗಳೂರು’ ಕಾರ್ಯಕ್ರಮದಡಿ ಎಲ್ಲಾ ಮೂಲ ಸೌಕರ್ಯಗಳು ಇಲ್ಲಿವೆ. ಹೆಚ್ಚಿನ ಸೌಲಭ್ಯಗಳನ್ನು ಸೇರಿಸಿದರೆ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು ಸಾಧ್ಯವಿದೆ. ಇಲ್ಲಿ ಕೌಶಲ್ಯವೂ ಇದ್ದು, ಇದರ ಸದುಪಯೋಗ ಪಡೆಯಲು ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಎಂದರು.

ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್‌ ಸಮಿಟ್‌ನಲ್ಲಿ ಐಟಿ, ಬಿಟಿ ಪ್ರಮುಖರು ಆಗಮಿಸುತ್ತಾರೆ. ಅವರಿಗೆ ಬಿಯಾಂಡ್‌ ಬೆಂಗಳೂರು ವಿಚಾರ ತಿಳಿಸಿ, ಐಟಿಗೆ ಮೀಸಲಿಟ್ಟಿರುವ ಸ್ಥಳದ ಉಪಯೋಗ ಮಾಡಿಕೊಂಡು ಟೈಯರ್‌-2 ನಗರಗಳಲ್ಲಿ ಐಟಿ ಸಂಸ್ಥೆಗಳ ಸ್ಥಾಪನೆಗೆ ಪ್ರಯತ್ನಿಸಲಾಗುವುದು. ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಬೇಕು ಎಂಬ ಚಿಂತನೆ ಇದೆ. ಬಜೆಟ್‌ ಕೂಡ ರೂಪುರೇಷೆಗಳನ್ನು ಇಟ್ಟುಕೊಂಡು ಸಿದ್ಧವಾಗಿದೆ ಎಂದರು.

ಭೂಗಳ್ಳತನಕ್ಕೆ ಪರಿಹಾರ: ಭೂಗಳ್ಳತನಕ್ಕೆ ಸಂಬಂಧಿಸಿದಂತೆ ರೈತರು ಬೆಂಗಳೂರಿಗೆ ಓಡಾಡುತ್ತಿರುವ ವಿಷಯ ಗಮನಕ್ಕೆ ಬಂದಿದೆ. ವಿಧಾನಸಭೆ ಯಲ್ಲಿಯೂ ಚರ್ಚೆಯಾಗಿದೆ. ಸರ್ಕಾರ ಶೀಘ್ರ ದಲ್ಲೇ ಈ ಬಗ್ಗೆ ತೀರ್ಮಾನ ಮಾಡಲಿದೆ. ಭೂಕಬಳಿಕೆ ಪ್ರಾರಂಭವಾಗಿದ್ದು ಬೆಂಗಳೂರಿನಲ್ಲಿ. ಕಾನೂನು ರೂಪಿಸುವಾಗ ಇಡೀ ಕರ್ನಾಟಕದ ವ್ಯಾಪ್ತಿಗೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಭೂಗಳ್ಳತನ ಪ್ರಕರಣಗಳು ಹೆಚ್ಚಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಒಕ್ಕಲುತನ ಅಥವಾ ಸಣ್ಣ ನಿವೇಶನಗಳನ್ನು ಮಾಡಿಕೊಂಡಿರಬಹುದು. ಹೀಗಾಗಿ ಇದನ್ನು ಭೂಕಬಳಿಕೆಗೆ ಹೋಲಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಬಂದಿದ್ದರಿಂದ ಕಾನೂನನ್ನು ಇಡೀ ರಾಜ್ಯಕ್ಕೆ ರೂಪಿಸಿರುವುದು ಸರಿಯಲ್ಲ. ಆದಷ್ಟು ಬೇಗ ಈ ಬಗ್ಗೆ ಆದೇಶ ಹೊರಡಿಸಲಾಗುವುದು. ಭೂಗಳ್ಳತನ ಬೆಂಗಳೂರು ಮತ್ತು ಇತರ ಮೆಟ್ರೋ ಪಾಲಿಟನ್‌ ನಗರಗಳಿಗೆ ಸೀಮಿತವಾಗಿಸಿ, ಗ್ರಾಮೀಣ ಮತ್ತು ಸಣ್ಣ ನಗರಗಳನ್ನು ಈ ಭೂಕ ಬಳಿಕೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿಟ್ಟು ಆದೇಶ ಹೊರಡಿಸಲಾಗುವುದು ಎಂದರು.

Advertisement

ಗುರಿ ಮೀರಿ ಸಂಪನ್ಮೂಲ ಕ್ರೋಢೀಕರಣ: ಆಗಸ್ಟ್‌ 2021ರವರೆಗೂ ನಮ್ಮ ಸಂಪನ್ಮೂಲ ಕ್ರೋಢೀಕರಣ ಕೋವಿಡ್‌ ಕಾರಣದಿಂದ 5 ಸಾವಿರ ಕೋಟಿ ಕಡಿಮೆಯಿತ್ತು. ಹಲವು ಸಭೆಗಳನ್ನು ಕರೆದು ಸಂಪನ್ಮೂಲ ಕ್ರೋಢೀಕರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೇಲೆ ವಾಣಿಜ್ಯ ತೆರಿಗೆ ಒಂದರಲ್ಲೇ 11 ಸಾವಿರ ಕೋಟಿ ರೂ.ಗಳನ್ನು ಗುರಿ ಮೀರಿ ಸಂಗ್ರಹ ಮಾಡಲಾಗಿರುವುದು ದಾಖಲೆ. ಒಟ್ಟು 15 ಸಾವಿರ ಕೋಟಿ ನಮ್ಮ ಗುರಿಗಿಂತ ಹೆಚ್ಚು ಸಂಗ್ರಹವಾಗಿದೆ. ಒಟ್ಟಾರೆ ಆರ್ಥಿಕತೆ ಹೆಚ್ಚಾಗಿದ್ದರಿಂದ ಕೇಂದ್ರ ಸರ್ಕಾರದಿಂದಲೂ ಹೆಚ್ಚು ಅನುದಾನ ಬಂದಿದೆ. ಮಾ.29ರಂದು 23 ಸಾವಿರ ಕೋಟಿ ಅಧಿ ಕವಾಗಿರುವ ಪೂರಕ ಆಯವ್ಯಯವನ್ನು ಮಂಡಿಸಲಾಗಿದೆ ಆರ್ಥಿಕತೆ ಉತ್ತಮವಾಗಿದೆ. ತೆರಿಗೆ ಸಂಗ್ರಹಕ್ಕೆ ಶ್ರಮ ಕೂಡ ಹೆಚ್ಚಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವ ಬಗ್ಗೆ ವಿಶ್ವಾಸವಿದೆ ಎಂದು ಸಿಎಂ ಹೇಳಿದರು.

63,100 ಕೋಟಿ ಮಾತ್ರ ಸಾಲ: ಕಳೆದ ವರ್ಷ ಬಜೆಟ್‌ನಲ್ಲಿ 67, 100 ಕೋಟಿ ರೂ.ಸಾಲ ಪಡೆಯುವುದಾಗಿ ಹೇಳಲಾಗಿತ್ತು. ಆದರೆ ಆರ್ಥಿಕತೆ ಚೇತರಿಕೆ ಕಂಡಿದ್ದರಿಂದ 63,100 ಕೋಟಿ ರೂ.ಗಳ ಸಾಲ ಮಾತ್ರ ಪಡೆಯಲಾಗಿದೆ. 4 ಸಾವಿರ ಕೋಟಿ ಸಾಲ ಪಡೆಯಲು ಅವಕಾಶವಿದ್ದರೂ ನಿಯಂತ್ರಣ ಮಾಡಲಾಗಿದೆ. ಈ ವರ್ಷ ಕೇಂದ್ರ ಸರ್ಕಾರ ನೀಡಿರುವ ಶೇ.3.5 ಗುರಿಯ ಒಳಗೆ ಶೇ. 3.2ಗೆ ನಿಯಂತ್ರಿಸಿ ಬಜೆಟ್‌ ಮಂಡಿಸಲಾಗಿದೆ. ಸಾಲವನ್ನು ಕೂಡ ಕಡಿಮೆ ಮಾಡಬಹುದು. ಕಳೆದ ವರ್ಷ ವಿತ್ತೀಯ ಕೊರತೆ ಇತ್ತು. 15 ಸಾವಿರ ಕೋಟಿ ರೂ.ಗಳ ಕೊರತೆಯಾಗಬಹುದು ಎಂಬ ನಿರೀಕ್ಷೆ ಇತ್ತು. ವರ್ಷಾಂತ್ಯಕ್ಕೆ 6 ಸಾವಿರ ಕೋಟಿ ಮಾತ್ರ ಕೊರತೆಯಾಗಿದೆ. 9 ಸಾವಿರ ಕೋಟಿ ರೂ. ಗಳನ್ನು ಪಡೆ ಯಲು ಸಾಧ್ಯವಾಗಿದೆ. ಈ ವರ್ಷವೂ ಕೂಡ ವಿತ್ತೀಯ ಕೊರತೆ ನೀಗಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next