Advertisement

ಕೊರೊನಾ+ಹಕ್ಕಿಜ್ವರದ ಆತಂಕ

12:51 PM Mar 18, 2020 | Naveen |

ಮಲೇಬೆನ್ನೂರು: ಕೊರೊನಾ ವೈರಸ್‌ ಬಗ್ಗೆ ಗಾಬರಿ ಪಡುವ ಅಗತ್ಯವಿಲ್ಲ. ಶೀತ, ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ ಎಂದು ವೈದ್ಯಾಧಿಕಾರಿ ಡಾ| ಲಕ್ಷ್ಮೀದೇವಿ ಸಲಹೆ ನೀಡಿದರು.

Advertisement

ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ನಡೆದ ಕೊರೊನಾ ವೈರಸ್‌ ಸೊಂಕು ಹರಡದಂತೆ ತಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದರು. ಕೊರೊನಾ ವೈರಸ್‌ ಬಾರದಂತೆ ಜನರು ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್‌ ಅಥವಾ ಸೋಪಿನಿಂದ ಕೈಯನ್ನು ಸ್ವತ್ಛಗೊಳಿಸುತ್ತಿರಬೇಕು. ಕೈಯಿಂದ ಪದೇ ಪದೇ ಕಣ್ಣು, ಮೂಗು, ಮುಖ ಮುಟ್ಟಿಕೊಳ್ಳಬಾರದು. ವ್ಯಕ್ತಿಗಳಿಂದ ಕನಿಷ್ಟ ಒಂದು ಮೀಟರ್‌ನಷ್ಟು ಅಂತರ ಕಾಯ್ದುಕೊಳ್ಳಬೇಕು ಎಂದರು.

ಕರೊನಾ ರೋಗ ಲಕ್ಷಣಗಳು ಕಂಡು ಬಂದರೆ, ಕೂಡಲೇ ಅಂಥವರನ್ನು ಆಸ್ಪತ್ರೆಗೆ ಕರೆತರಬೇಕು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು 8 ಬೆಡ್‌ಗಳ ಪ್ರತ್ಯೇಕ ಕೋಣೆಯನ್ನು ಮೀಸಲಿರಿಸಿದ್ದೇವೆ ಎಂದರು.

ಹರಿಹರ ತಾಲೂಕಿನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಹಂದಿಗಳನ್ನು ಊರಿಂದ ಹೊರಗೆ ಸಾಗಿಸಬೇಕಿದೆ. ಕೋಳಿ, ಕುರಿ, ಮಟನ್‌ ಮಾರುಕಟ್ಟೆಗಳನ್ನು ಬಂದ್‌ ಮಾಡಿಸಬೇಕಿದೆ ಎಂದರು.

ಹಂದಿಗಳಿಂದ ಸಾರ್ವಜನಿಕರಿಗೆ ರೋಗ ಹರಡುವ ಸಾಧ್ಯತೆಯಿದ್ದು, ಇಂದೇ ಹಂದಿಗಳನ್ನು ಸ್ಥಳಾಂತರಿಸದಿದ್ದರೆ, ಕಠಿಣ ಕ್ರಮ ಜರುಗಿಸುವುದಾಗಿ ಪುರಸಭೆ ಸದಸ್ಯರಾದ ರಾಜಪ್ಪ, ಯೂಸುಫ್‌, ಆರೀಫ್‌, ಪುರಸಭೆ ಅಧಿಕಾರಿಗಳು ಹಂದಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

Advertisement

ಉಪ ತಹಶೀಲ್ದಾರ್‌ ಆರ್‌.ರವಿ ಮಾತನಾಡಿ, ವಾರ್ಡ್‌ಗಳಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕು. ಕೊರೊನಾ ಕುರಿತು ಬಸ್‌ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಮಾಡುವುದು ಉತ್ತಮ ಎಂದರು. ಕೊರೋನಾ ವೈರಸ್‌ ಹಾಗೂ ಹಕ್ಕಿ ಜ್ವರ ಹರಡದಂತೆ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿನ ಕೋಳಿ, ಕುರಿ, ಮಟನ್‌ ಮಾರುಕಟ್ಟೆ ಬಂದ್‌ ಮಾಡುವಂತೆ ನೋಟಿಸ್‌ ಕೊಟ್ಟಿದ್ದು, ಈಗಾಗಲೇ ಬಂದ್‌ ಮಾಡಲಾಗಿದೆ ಎಂದು ಪ್ರಭಾರಿ ಮುಖ್ಯಧಿಕಾರಿ ಉಮೇಶ್‌ ತಿಳಿಸಿದರು. ಕಂದಾಯ ಮತ್ತು ಪುರಸಭೆ ಅಧಿಕಾರಿಗಳು, ಸದಸ್ಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next