Advertisement

2025 ರೊಳಗೆ ಮಲೇರಿಯಾ ಮುಕ್ತ ಭಾರತ

02:26 PM Apr 26, 2019 | Suhan S |

ಕೋಲಾರ: ದೇಶದಲ್ಲಿ ಮಲೇರಿಯಾ ರೋಗವನ್ನು 2025 ರೊಳಗಾಗಿ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶವನ್ನು ಹೊಂದಲಾಗಿದ್ದು ಅದಕ್ಕಾಗಿ ಪ್ರತಿಯೊಬ್ಬ ಸಾರ್ವಜನಿಕರು ಸ್ವ ಪ್ರೇರಿತರಾಗಿ ಕೈಜೋಡಿಸಬೇಕು ಎಂದು ಆರೋಗ್ಯ ಕುಟುಂಬ ಕಲ್ಯಾಣಾಕಾರಿ ಡಾ.ವಿಜಯ್‌ಕುಮಾರ್‌ ತಿಳಿಸಿದರು.

Advertisement

ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ಗುರುವಾರ ವಿಶ್ವ ಮಲೇರಿಯಾ ದಿನದ ಅಂಗವಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೇರಿಯಾ ನಿರ್ಮೂಲನೆ ಮಾಡಲು ಕೇವಲ ಆರೋಗ್ಯ ಇಲಾಖೆಯು ಮಾತ್ರ ಕೆಲಸ ಮಾಡಿದರೆ ಸಾಲದು, ಅದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಪ್ರತಿ ವರ್ಷ ವಿಶ್ವ ಮಲೇರಿಯಾ ದಿನವನ್ನು ಏ. 25 ರಂದು ಆಚರಿಸಲಾಗುತ್ತದೆ. ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಾರ್ಯಕ್ರಮದಡಿ ದೇಶದಲ್ಲೇ ಮೊದಲ ಬಾರಿಗೆ ಮಲೇರಿಯಾ ನಿರ್ಮೂಲನೆ ಆಂದೋಲನವನ್ನು ಭಾರತದಲ್ಲಿ 2016 ಹಾಗೂ ರಾಜ್ಯದಲ್ಲಿ 2017 ರಿಂದ ಈ ಆಂದೋಲನವನ್ನು ಪ್ರಾರಂಭಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಮಲೇರಿಯಾ ನಿರ್ಮೂಲನೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಗ್ರಾಮಮಟ್ಟದ ಕಾರ್ಯಕ್ರಮ: ಮಲೇರಿಯಾ ನಿರ್ಮೂಲನೆಗಾಗಿ ಗ್ರಾಮ ಮಟ್ಟಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮಲೇರಿಯಾಗೆ ಕಾರಣವಾದ ಅನಾಫಿಲಿಸ್‌ ಎಂಬ ಹೆಣ್ಣು ಸೊಳ್ಳೆಯು ಶೇಖರಣೆಗೊಂಡ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ಹಾಗಾಗಿ ಹೆಚ್ಚು ದಿನ ಒಂದೇ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಈ ಕುರಿತು ಗ್ರಾಮ ಮಟ್ಟದಲ್ಲೂ ಸಹ ಆಶಾ ಕಾರ್ಯಕರ್ತೆಯರ ಮೂಲಕ ಹಾಗೂ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಮಲೇರಿಯಾ ನಿರ್ಮೂಲನೆ ಕುರಿತು ಕರಪತ್ರಗಳ ಮೂಲಕ ಹಾಗೂ ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮಗಳು, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆಗಳನ್ನು ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಉಚಿತರ ಪರೀಕ್ಷೆ: ಯಾವುದೇ ವ್ಯಕ್ತಿಗಳಿಗೆ ನಿರಂತರವಾಗಿ ಜ್ವರ ಕಾಣಿಸಿಕೊಂಡರೆ ಕೂಡಲೇ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗಿದ್ದು ಮಲೇರಿಯಾ ಪರೀಕ್ಷೆಯನ್ನು ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತಿದೆ. ಅದರಂತೆ ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ನೀಡಿ ಜ್ವರವಿರುವ ಪ್ರತಿಯೊಬ್ಬ ನಾಗರಿಕರ ರಕ್ತ ಲೇಪನವನ್ನು ಸಂಗ್ರಹಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತದೆ. ಅದನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಮಲೇರಿಯಾ ಇರುವುದು ದೃಢೀಕರಣಗೊಂಡರೆ ಅವರಿಗೆ ನಿಯಮಾನುಸಾರ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

Advertisement

ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಕಾರಿ ಡಾ.ಕಮಲಮ್ಮ ಮಾತನಾಡಿ, ಮಲೇರಿಯಾ, ಡೇಂಘಿ, ಚಿಕೂನ್‌ಗುನ್ಯಾ, ಮೆದುಳು ಜ್ವರ ನಿಯಂತ್ರಣಕ್ಕಾಗಿ ಸಾಕಷ್ಟು ಮುಂಜಾಗ್ರತಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಸೊಳ್ಳೆಗಳ ನಿಯಂತ್ರಣಕ್ಕೆ ಲಾರ್ವ ಸಮೀಕ್ಷೆಯನ್ನು ಮಾಡಿ ನೀರಿನ ತೊಟ್ಟಿಗಳನ್ನು ವಾರಕ್ಕೆ 2 ಬಾರಿಯಾದರೂ ಸ್ವಚ್ಛಗೊಳಿಸುವ ಹಾಗೂ ಕೀಟನಾಶಕಗಳನ್ನು ಸಿಂಪಡಿಸುವ ಕುರಿತು ಅರಿವು ಮೂಡಿಸಲಾಗುತ್ತಿದೆ ಜತೆಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ಜಿಲ್ಲಾ ಕೀಟ ತಜ್ಞರಾದ ವೇಣುಗೋಪಾಲ್, ಕೋಲಾರ ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ್‌, ಶ್ರೀನಿವಾಸಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ವಿಜಯಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್‌ ಬಾಬು, ಶಿವಾರೆಡ್ಡಿ, ಮಹೇಶ್‌, ಮಂಜುನಾಥ್‌ ಇತರರಿದ್ದರು.

ಕೋಲಾರ ಜಿಲ್ಲೆಯಲ್ಲಿ ಪ್ರಕರಣಗಳ ಇಳಿಮುಖ:

ಜಿಲ್ಲೆಯಲ್ಲಿ 2019 ರ ಮಾರ್ಚ್‌ ಅಂತ್ಯದ ವೇಳೆಗೆ ಸುಮಾರು 67,040 ಮಂದಿಯ ರಕ್ತಲೇಪನ ಸಂಗ್ರಹಿಸಲಾಗಿದ್ದು ಇದುವರೆಗೂ ಯಾವುದೇ ಮಲೇರಿಯಾ ಪ್ರಕರಣ ಕಂಡುಬಂದಿಲ್ಲ. 2018 ರಲ್ಲಿ ರಲ್ಲಿ ಸುಮಾರು 2,84,370 ರಕ್ತ ಲೇಪನವನ್ನು ಸಂಗ್ರಹಿಸಲಾಗಿದ್ದು, 8 ರಕ್ತ ಲೇಪನದಲ್ಲಿ ಮಲೇರಿಯಾ ಕಂಡು ಬಂದಿತ್ತು. 2017 ರಲ್ಲಿ ಒಟ್ಟು 11 ಹಾಗೂ 2016 ರಲ್ಲಿ ಒಟ್ಟು 14 ಮಲೇರಿಯಾ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಜಿಲ್ಲೆಯಲ್ಲಿ 2019 ರ ಮಾರ್ಚ್‌ ಅಂತ್ಯದ ವೇಳೆಗೆ 12 ಡೆಂಘೀ ಪ್ರಕರಣಗಳು, 2018 ರಲ್ಲಿ 15 ಹಾಗೂ 2017 ರಲ್ಲಿ 225 ಪ್ರಕರಣಗಳು ಕಂಡು ಬಂದಿದ್ದು ವರ್ಷದಿಂದ ವರ್ಷಕ್ಕೆ ಡೆಂಘೀ ಪ್ರಕರಣಗಳು ಕಡಿಮೆಯಾಗಿದೆ. ಅದೇ ರೀತಿ, ಚಿಕೂನ್‌ಗುನ್ಯಾ ಜಿಲ್ಲೆಯಲ್ಲಿ 2019 ರ ಮಾರ್ಚ್‌ ಅಂತ್ಯದ ವೇಳೆಗೆ 10 ಚಿಕೂಗುನ್ಯ ಪ್ರಕರಣಗಳು, 2018 ರಲ್ಲಿ 30 ಹಾಗೂ 2017 ರಲ್ಲಿ 111 ಪ್ರಕರಣಗಳು ಕಂಡು ಬಂದಿದ್ದು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next