Advertisement

Mala Ghat: ಎಚ್ಚರ ತಪ್ಪಿದರೆ ಅನಾಹುತ ಖಚಿತ: ಮಳೆಗಾಲದಲ್ಲಿ ವಿಶೇಷ ಗಸ್ತು ಪಡೆ ಅಗತ್ಯ

03:47 PM Jun 21, 2023 | Team Udayavani |

ಕಾರ್ಕಳ: ಮಳೆಗಾಲ ಬಂತೆಂದರೆ ಘಾಟಿ ಪ್ರದೇಶದಲ್ಲಿ ಸಂಚರಿಸುವುದೆಂದರೆ ಭಯ ಶುರುವಾಗುತ್ತದೆ. ಮಾಳ ಘಾಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ವೇಳೆಯಂತೂ ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯ. ಮಳೆಗಾಲ ಇಲ್ಲಿ ಸಂಚರಿಸುವಾಗ ತುಸು ಎಚ್ಚರ ತಪ್ಪಿದರೂ ಆಪತ್ತು ಕಟ್ಟಿಟ್ಟ ಬುತ್ತಿ.

Advertisement

ಕುದುರೆಮುಖ-ಮಾಳ ರಾಷ್ಟ್ರೀಯ ಹೆದ್ದಾರಿ ದಟ್ಟ ಅರಣ್ಯದೊಳಗೆ ಹಾದು ಹೋಗಿದೆ. ಈ ಭಾಗದಲ್ಲಿ ಮಳೆ ಹೆಚ್ಚಿರುತ್ತದೆ. ತಿರುವುಗಳಲ್ಲಿರುವ ಈ ಹೆದ್ದಾರಿಯಲ್ಲಿ ವಾಹನ ಚಲಾಯಿಸುವುದೇ ಸವಾಲು. ಕಳೆದ ವರ್ಷ ಮಳೆಗಾಲ ಇದೇ ಹೆದ್ದಾರಿಯಲ್ಲಿ ಅನೇಕ ಅವಘಡಗಳು ಸಂಭವಿಸಿತ್ತು. ಜೀವ ಹಾನಿಯೂ ಆಗಿತ್ತು. ಮಣ್ಣು ಸವಕಳಿಯಿಂದ ಮಳೆಗೆ ಗುಡ್ಡ ಜರಿತ, ರಸ್ತೆಗೆ ಮರ, ಕೊಂಬೆಗಳು ಬೀಳುವುದು ನಡೆದಿತ್ತು.

ದಾರಿ ಮಧ್ಯೆ ತುರ್ತು ವ್ಯವಸ್ಥೆಗಳಿಗೆ ಕಷ್ಟ
ಹೆದ್ದಾರಿ ನಡುವೆ ಅಪಘಾತವಾದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗೆ ಮಾರ್ಗ ಮಧ್ಯೆ ಆಸ್ಪತ್ರೆಗಳಿಲ್ಲ. ತುರ್ತು ಚಿಕಿತ್ಸೆ ಕೊಡಿಸಲು ಶೃಂಗೇರಿ ತಾ|ನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದಿರುವ ಕಾರಣ, ಗಾಯಾಳುಗಳನ್ನು ತುರ್ತಾಗಿ ಸೌಲಭ್ಯವಿರುವ ಆಸ್ಪತ್ರೆಗೆ ಸಾಗಿಸಲು ಕಾರ್ಕಳ ತಲುಪಿ ಮಂಗಳೂರು ಅಥವಾ ಮಣಿಪಾಲಕ್ಕೆ ಹೋಗಬೇಕಾದ ಅನಿವಾರ್ಯತೆ ಯಿದೆ. ದಾರಿ ಮಧ್ಯೆ ಅನಾಹುತಗಳಾದ ತೆರಳುವ ಇತರ ವಾಹನದವರು ಗೇಟ್‌ ಸಿಬಂದಿಗೆ ಮಾಹಿತಿ ನೀಡಿ ಅವರು ಸಂಬಂಧಿಸಿದವರನ್ನು ಸಂಪರ್ಕಿಸಿ ತಿಳಿಸಬೇಕಾದ ಸ್ಥಿತಿಯಿದೆ.

ಸವಾರರೇ ಇಲ್ಲಿ ಎಚ್ಚರವಹಿಸಬೇಕು
ಕಾರ್ಕಳ ತಾಲೂಕಿನ ಗಡಿಭಾಗದಲ್ಲಿರುವ ಎಸ್ಕೆ ಬಾರ್ಡರ್‌ನಿಂದ ಮೇಲೆ ಹೋಗುವ ಈ ರಸ್ತೆ ಬಲು ಅಪಾಯಕಾರಿ. ರಸ್ತೆಯುದ್ದಕ್ಕೂ ತಿರುವಿದೆ. ರಸ್ತೆ ಅದೆಷ್ಟೋ ಪ್ರಾಣಗಳನ್ನು ಬಲಿಪಡೆದಿದೆ. ಕೆಳಗಿಳಿಯುವ ವಾಹನಗಳು ಕೂಡ ಬ್ರೇಕ್‌ ಅನ್ನು ಹತೋಟಿಯಲ್ಲಿಟ್ಟುಕೊಂಡೇ ಸಾಗಬೇಕು. ಒಂದು ವೇಳೆ ಬ್ರೆಕ್‌ ವೈಫ‌ಲ್ಯ ಕಂಡರೆ, ಎದುರಾಗುವ ಆಪತ್ತಿನಿಂದ ದೇವರೇ ರಕ್ಷಿಸಬೇಕು.

ಅತೀ ಹೆಚ್ಚು ಪ್ರವಾಸಿಗರು ಸಂಚಾರ
ಘಾಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಓಡಾಡುತ್ತಾರೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು, ಕೊಲ್ಲೂರುಗೆ ತೆರಳುವ ಯಾತ್ರಾರ್ಥಿಗಳು ಮಾಳ ಮುಳ್ಳೂರು ಘಾಟಿ ರಸ್ತೆಯಾಗಿ ಬೆಳ್ತಂಗಡಿ ತೆರಳುತ್ತಾರೆ. ಕಳಸ, ಕುದುರೆಮುಖ, ಶೃಂಗೇರಿ ಮತ್ತು ಕೊಪ್ಪ ಕಡೆಯಿಂದ ಅಸಂಖ್ಯಾಕ ಪ್ರವಾಸಿಗರು ಕರಾವಳಿ ಜಿಲ್ಲೆಗಳಿಗೆ ಪ್ರಕೃತಿಯ ಕೊಡುಗೆಯನ್ನು ವೀಕ್ಷಿಸಲು ಆಗಮಿಸುತ್ತಿರುತ್ತಾರೆ.

Advertisement

ಅಪಾಯಕಾರಿ ಗಿಡಮರ ಬಳ್ಳಿ ತೆರವು
ಮಳೆಗಾಲದಲ್ಲಿ ಅನಾಹುತ ತಡೆಯುವ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ ಅರಣ್ಯ ಇಲಾಖೆ ಜೂ.19ರಂದು ಹೆದ್ದಾರಿ ಬದಿಯಲ್ಲಿ ರಸ್ತೆಗೆ ಬಾಗಿದ ಮರಗಳ ಕೊಂಬೆ ಕತ್ತರಿಸುವ, ರಸ್ತೆ ಬದಿಯ ಗಿಡಬಳ್ಳಿಗಳನ್ನು ಕತ್ತರಿಸಿ, ಸುರಕ್ಷಿತ ಸಂಚಾರಕ್ಕೆ ಕ್ರಮವಹಿಸಿದೆ. ಆದರೂ ಮಳೆಗಾಲದಲ್ಲಿ ಗುಡ್ಡ ಜರಿತದಂತಹ ಘಟನೆಗಳು ಪುನರಾವರ್ತನೆಯಾಗುತ್ತಿರುತ್ತದೆ.

39 ಕಿ.ಮೀ. ದೂರ ಸಂಪರ್ಕ ಅಸಾಧ್ಯ
ತನಿಕೋಡು ಅರಣ್ಯ ತಪಾಸಣ ಕೇಂದ್ರದಿಂದ ಮಾಳ ಅರಣ್ಯ ತಪಾಸಣ ಕೇಂದ್ರದವರೆಗೆ ಒಟ್ಟು 39 ಕಿ.ಮೀ. ವ್ಯಾಪ್ತಿಯಲ್ಲಿ ಸಂವಹನಕ್ಕೆ ಸಂಬಂಧಿಸಿ ದಂತೆ ವಯರ್‌ಲೆಸ್‌ ಮೊಬೈಲ್‌ ಸಂಪರ್ಕದ ವ್ಯವಸ್ಥೆ ಸಮರ್ಪಕವಾಗಿಲ್ಲ. ಮಾಳ ಅರಣ್ಯ ಇಲಾಖೆಯ ತಪಾಸಣ ಗೇಟು, ಎಸ್‌ಕೆ ಬಾರ್ಡರ್‌ ದಾಟಿ ಮುಂದಕ್ಕೆ ಕಳಸ, ಶೃಂಗೇರಿ ಹಾಗೂ ಇನ್ನಿತರ ಸ್ಥಳಗಳಿಗೆ ಸಾಗುವ ದಾರಿ ಮಧ್ಯೆ ಮಾಳ ತಪಾಸಣೆ ಗೇಟ್‌ನಿಂದ ಕುದುರೆಮುಖ ಹಾಗೂ ಶೃಂಗೇರಿಗೆ ಕವಲೊಡೆಯುವ ಜಂಕ್ಷನ್‌ ತನಕದ ನಡುವಿನ ಪ್ರದೇಶದಲ್ಲಿ ಮಧ್ಯೆ ಗಂಭೀರ ಸಮಸ್ಯೆಗಳಿವೆ. ರಸ್ತೆಯು ಕಿರಿದಾಗಿದ್ದು, ಈ ರಸ್ತೆಯಲ್ಲಿ ಡಿಸೇಲ್‌, ಪೆಟ್ರೊಲ್‌ ಸೋರಿಕೆಯಾಗಿ ಅಪಘಾತಗಳು ಸಂಭವಿಸುತ್ತವೆ.

ರಕ್ಷಣ ವ್ಯವಸ್ಥೆ ಇಲ್ಲ
ಪ್ರವಾಸೀ ವಾಹನಗಳು ಇತರ ವಾಹನಗಳ ನಡುವೆ ಅಪಘಾತಗಳು ಸಂಭವಿಸಿ, ಗಲಾಟೆ ಘರ್ಷಣೆಗಳು ಆಗಾಗ ನಡೆಯುತ್ತಿರುತ್ತದೆ. ರಾತ್ರಿ ಹೊತ್ತಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಬೆಳಗ್ಗಿನ ಜಾವದ ತನಕ ಏನೂ ಮಾಡುವಂತಿಲ್ಲ. ರಕ್ಷಣೆಗೆ ಯಾವ ವ್ಯವಸ್ಥೆಗಳೂ ಇಲ್ಲ. ಕನಿಷ್ಠ ಮಳೆಗಾಲದ ಅವಧಿಯಲ್ಲಾದರೂ ಘಾಟಿ ಮಾರ್ಗದಲ್ಲಿ 24 ತಾಸುಗಳ ವಿಶೇಷ ಕಾರ್ಯಪಡೆ, ಗಸ್ತು ಪಡೆಯಂತಹ ತಂಡ ನಿಯೋಜಿಸುವುದು ಅಗತ್ಯ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಡೇಂಜರ್‌ ಸ್ಪಾಟ್‌ಗಳನ್ನು ಗುರುತಿಸುವಂತೆ ಆರ್‌ಟಿಒ
ಇಲಾಖೆಗೆ ಮಾಹಿತಿ ನೀಡಿದ್ದೇವೆ. ಅವಘಡ, ಅನಾಹುತಗಳಾಗದಂತೆ ಏನೇನು ಸುರಕ್ಷಾ ಕ್ರಮಗಳನ್ನು ನಮ್ಮ ವ್ಯಾಪ್ತಿಯೊಳಗೆ ತೆಗೆದುಕೊಳ್ಳಲು ಸಾಧ್ಯವಿದೆಯೋ ಅದೆಲ್ಲವನ್ನು ಇಲಾಖೆಗಳ ಸಮನ್ವಯದೊಂದಿಗೆ ತೆಗೆದುಕೊಳ್ಳುತ್ತಿದ್ದೇವೆ. ಸವಾರರು ಜಾಗೃತರಾಗುವುದೇ ಇಲ್ಲಿ ಬಹುಮುಖ್ಯ. ಇದುವರಗೆ ಘಾಟಿ ರಸ್ತೆ ಸಹಿತ ಸಂಭವಿಸಿದ ಅನಾಹುತಗಳಲ್ಲಿ ಬಹುತೇಕ ಸವಾರರ ನಿರ್ಲಕ್ಷ್ಯದ ಚಾಲನೆಯಿಂದಲೇ ಆಗಿದೆ. ಸವಾರರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು.
-ನಾಗರಾಜ್‌ ಟಿ.ಡಿ.,
ವೃತ್ತ ನಿರೀಕ್ಷರು ಕಾರ್ಕಳ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next