Advertisement

ಮನಿ ಬಿನ್‌ಗೆ ಮನೆಯ ಕಸ ಹಾಕಿ ಕಾಸು ಗಳಿಸಿ

06:00 AM Feb 27, 2019 | Team Udayavani |

ಬೆಂಗಳೂರು: ಮಹಾನಗರಗಳಲ್ಲಿ ನಿಮ್ಮ ಮನೆಯ ಕಸ ವಿಲೇವಾರಿ ಮಾಡಬೇಕೆಂದರೆ ಕಡ್ಡಾಯವಾಗಿ ಸೆಸ್‌ ಪಾವತಿಸಬೇಕು. ಆದರೆ, ಇಲ್ಲಿ ಕಸ ಹಾಕಿದರೆ ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ! ಹೌದು, ಇಂಥದೊಂದು ವಿನೂತನ ವೈಜ್ಞಾನಿಕ ತ್ಯಾಜ್ಯ ಸಂಗ್ರಹ ತಂತ್ರಜ್ಞಾನ ಒಂದನ್ನು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ.

Advertisement

ಪ್ರಸ್ತುತ ಬೆಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದೆ. ನಿತ್ಯ ಸಾವಿರ ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ ಮನೆಗಳಲ್ಲಿ ಉತ್ಪತ್ತಿಯಾಗುವ ಬಹುತೇಕ ತ್ಯಾಜ್ಯವನ್ನು ಪಾಲಿಕೆ ಸಂಗ್ರಹಿಸುತ್ತದೆ. ಆದರೆ, ಸಾರ್ವಜನಿಕ ವಲಯಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಇಂದಿಗೂ ಚಿಂದಿ ಆಯುವವರನ್ನೇ ಅವಲಂಬಿಸಬೇಕಿದೆ.

ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರೇ ಸ್ವಹಿತಾಸಕ್ತಿಯಿಂದ ತ್ಯಾಜ್ಯ ಸಂಗ್ರಹಿಸುವಂತೆ ಪ್ರೇರೇಪಿಸಲು “ಮನಿ ಬಿನ್‌’ ಎಂಬ ಆ್ಯಪ್‌ ತಂತ್ರಜ್ಞಾನ ಆಧಾರಿತ ಕಸದ ಬುಟ್ಟಿಯನ್ನು ನಗರದ ಬನಶಂಕರಿಯ ಬಿಎನ್‌ ತಾಂತ್ರಿಕ ವಿದ್ಯಾಯಲದ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ. ಶಿಕ್ಷಕರ ಸದನದಲ್ಲಿ ನಡೆಯುತ್ತಿರುವ ಅನ್ವೇಷಣಾ ವಿಜ್ಞಾನ ಮತ್ತು ಇಂಜಿನಿಯರಿಂಗ್‌ ವಸ್ತು ಪ್ರದರ್ಶನಲ್ಲಿ “ಮನಿ ಬಿನ್‌’ ಪ್ರದರ್ಶನಕ್ಕಿದೆ.

ಏನಿದು “ಮನಿ ಬಿನ್‌’ ಆ್ಯಪ್‌: ಮನಿ ಬಿನ್‌ ಎಂದರೆ ಕಸ ಹಾಕಿದರೆ ಹಣ ನೀಡುವ ಕಸದ ಬುಟ್ಟಿ ಎಂದರ್ಥ. ಆ್ಯಪ್‌ ಹಾಗೂ ತಂತ್ರಜ್ಞಾನ ಆಧಾರಿತ ಸ್ವಯಂ ನಿರ್ವಹಣೆಯ ಕಸದ ಬುಟ್ಟಿ ಸಿದ್ಧಪಡಿಸಲಾಗಿದೆ. ಮೊದಲು ಆ್ಯಪ್‌ನಲ್ಲಿನ ನೇವಿಗೇಷನ್‌ ಸಹಾಯದಿಂದ ಸಮೀಪದಲ್ಲಿರುವ ಮನಿ ಬಿನ್‌ ಕಸದ ಬುಟ್ಟಿಯನ್ನು ಹುಡುಕಬೇಕು. ಬುಟ್ಟಿ ಬಳಿ ತೆರಳಿ, ಆ್ಯಪ್‌ನಲ್ಲಿರುವ ಓಪನ್‌ ಆಯ್ಕೆಯನ್ನು ಕ್ಲಿಕ್‌ ಮಾಡಿದರೆ ಕಸದ ಬುಟ್ಟಿ ತೆರೆದುಕೊಳ್ಳುತ್ತದೆ.

ಅದರಲ್ಲಿ ಕಸ ಹಾಕಿದರೆ, ಬುಟ್ಟಿಯಲ್ಲಿರುವ ಸೆನ್ಸಾರ್‌ ತಂತ್ರಜ್ಞಾನವು ಕಸ ವಿಂಗಡಿಸಿ ಅದರ ಮೌಲ್ಯಕ್ಕೆ ಪಾಯಿಂಟ್ಸ್‌ ನಿಗದಿ ಪಡಿಸಿ ಪಕ್ಕದಲ್ಲಿರುವ ಡಬ್ಬಿಗಳಿಗೆ ಕಸವನ್ನು ತಳುತ್ತದೆ. ಕಸ ಹಾಕಿದ ಆ್ಯಪ್‌ ಬಳಕೆದಾರರಿಗೆ ಪಾಯಿಂಟ್ಸ್‌ ಸಿಗುತ್ತದೆ. ಈ ಪಾಯಿಂಟ್‌ಗಳನ್ನು ಡಿಜಿಟಲ್‌ ಕರೆನ್ಸಿಯಾಗಿ ಪರಿವರ್ತಿಸಿಕೊಂಡು ಬ್ಯಾಂಕ್‌ ಖಾತೆಗೆ ಅಥವಾ ಆನ್‌ಲೈನ್‌ ವ್ಯಾಲೆಟ್‌ಗಳಾದ ಪೇಟಿಎಂ, ಫೋನ್‌ ಪೇಯಲ್ಲಿ ಬಳಸಬಹುದು.

Advertisement

ಇನ್ನು ಡಬ್ಬಿ ತುಂಬಿದ ಬಳಿಕ ಸ್ಥಳೀಯ ಸಂಸ್ಥೆಗಳಿಗೆ (ಬಿಬಿಎಂಪಿ) ಸಂದೇಶ ಹೋಗುತ್ತದೆ. ಅವರು ಬಂದು ಡಬ್ಬಿ ಬದಲಿಸಿ ಹೋಗಬಹುದು. ಸಂಗ್ರಹವಾದ ಕಸವನ್ನು ತ್ಯಾಜ್ಯ ಸಂಗ್ರಹ ಘಟಕಕ್ಕೆ ಅಥವಾ ಮರುಬಳಕೆದಾರರಿಗೆ ನೀಡಿ ಬರುವ ಹಣವನ್ನು ಮತ್ತೆ ವಿನಿಯೋಗಿಸಿ ಸುಲಭವಾಗಿ ಈ ತಂತ್ರಜ್ಞಾನ ನಿರ್ವಹಣೆ ಮಾಡಬಹುದು. ಇನ್ನು ಈ ಮಾದರಿಯ ಒಂದು ಕಸದ ಬುಟ್ಟಿ ಸಿದ್ಧಪಡಿಸಲು ಕನಿಷ್ಠ 5 ಸಾವಿರ ರೂ. ವೆಚ್ಚವಾಗಲಿದ್ದು, ದೀರ್ಘ‌ಕಾಲ ಬಾಳಿಕೆ ಬರುತ್ತದೆ ಎನ್ನುತ್ತಾರೆ ಸಂಶೋಧಕ ವಿದ್ಯಾರ್ಥಿ ಮನು.

ಕಸ ಕೂಡ ಆದಾಯ ಮೂಲ. ಆದರೆ, ಈ ಅಂಶವನ್ನು ಸುಲಭಗೊಳಿಸಿದರೆ “ಸ್ವತ್ಛ ಭಾರತ’ ಕಲ್ಪನೆ ಸಾಕಾರಗೊಳಿಸಬಹುದು. ಈ ಆಲೋಚನೆಯಡಿ ಕಸ ಹಾಕಿ ಹಣ ಗಳಿಸುವ ತಂತ್ರಜ್ಞಾನ ರೂಪಿಸಿದ್ದೇವೆ. ಯೋಜನೆ ಸಾರ್ವಜನಿಕ ವಲಯಕ್ಕೆ ಬಂದರೆ ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸುತ್ತಾರೆ. ಆ ಮೂಲಕ ನಗರ ಪ್ರದೇಶದ ಸಾರ್ವಜನಿಕ ಸ್ಥಳಗಳ ಕಸದ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು.

ಯಾವುದಾದರೂ ಪ್ಲಾಸ್ಟಿಕ್‌ ಪುನರ್‌ಬಳಕೆ ಮಾಡುವ ಕಂಪನಿಗಳು ಅಥವಾ ಸ್ಥಳೀಯ ಸಂಸ್ಥೆಗಳು ಜತೆಗೆ ಗೂಡಿದರೆ ಈ ವ್ಯವಸ್ಥೆಯನ್ನು ಸುಲಭವಾಗಿ ಅಳವಡಿಸಿ ಯಶಸ್ಸು ಕಾಣಬಹುದು.
-ನಿಹಾರಿಕಾ, ವಿದ್ಯಾರ್ಥಿನಿ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next