Advertisement

ಕೃಷಿಯಲ್ಲಿ ಆಧುನಿಕ ತಂತಜ್ಞಾನ ಬಳಸಿ ಆರ್ಥಿಕ ಸದೃಢತೆ ಸಾಧಿಸಿ

03:31 PM Dec 30, 2017 | |

ಸಿಂದಗಿ: ಕೃಷಿ ಇಲಾಖೆಯಲ್ಲಿನ ಯೋಜನೆಗಳನ್ನು ರೈತರ ಮನೆ ಮನೆಗೆ ಹೋಗಿ ಮಾಹಿತಿ ನೀಡುವ ಕೆಲಸ ಕೃಷಿ ಅಧಿಕಾರಿಗಳು ಮಾಡಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಹೇಳಿದರು.

Advertisement

ಶುಕ್ರವಾರ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿನ ಕೃಷಿ ಕೇಂದ್ರದ ಸಭಾಭವನದಲ್ಲಿ ಜಿಪಂ, ಕೃಷಿ ಇಲಾಖೆ ಸಿಂದಗಿ ಹಾಗೂ ಕೃಷಿಕ ಸಮಾಜ ಸಿಂದಗಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರೈತರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಷ್ಟೋ ಜನ ರೈತರು ಕೃಷಿ ಇಲಾಖೆಯ ಬಾಗಿಲು ನೋಡಿಲ್ಲ. ಬೆರಳಣಿಕೆಯಷ್ಟು ಜನ ಇಲಾಖೆಗೆ ಬಂದು ಹೋಗುತ್ತಾರೆ. ಇದರಿಂದ ಕೃಷಿಯಲ್ಲಿ ಯಾವುದೇ ತರೆನಾದ ಕ್ರಾಂತಿಯಾಗುವುದಿಲ್ಲ. ಕೃಷಿ ಅಧಿಕಾರಿಗಳ ನಡೆ ರೈತರ ಮನೆ ಕಡೆಗೆ ಆದಾಗ ರೈತರ ಬದುಕು ಬಂಗಾರವಾಗುತ್ತದೆ. ಅಧಿಕಾರಿಗಳು ಇಚ್ಛಾಶಕ್ತಿ ತೋರಿಸಬೇಕು ಎಂದರು.

ಕೃಷಿ ಇಲಾಖೆಯಲ್ಲಿ ರಿಯಾಯತಿ ದರದಲ್ಲಿ ಸಿಗುವ ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಉಪಕರಣಗಳನ್ನು ಪಡೆಯಲು ಮಾತ್ರ ಸೀಮಿತವಾಗಬಾರದು. ಬಿಡುವಿನ ಸಮಯದಲ್ಲಿ ಕೃಷಿ ಇಲಾಖೆಗೆ ಬಂದು ಕೃಷಿ ವಿಜ್ಞಾನಿಗಳ ಜೊತೆಗೆ, ಕೃಷಿ ತಂತ್ರಜ್ಞರ ಜೊತೆಗೆ ಚರ್ಚಿಸಬೇಕು. ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಲ್ಲಿ ಯಾರು ವಂಚಿತರಾಗಬಾರದು ಎಂದರು.

ರೈತರು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳುವ ಜೊತೆಯಲ್ಲಿ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ, ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳುವ ಮೂಲಕ ತಮ್ಮ ಆರ್ಥಿಕ ಜೀವನ ಮಟ್ಟ ಸುಧಾರಿಸಿಕೊಳ್ಳು ರೈತರು ಮುಂದಾಗಬೇಕು. ಕೃಷಿಯಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನದ ಕುರಿತು ಮಾಹಿತಿ ಪಡೆದುಕೊಂಡು ಬರಲು ತಾಲೂಕು ಕೃಷಿಕ ಸಮಾಜದ ವತಿಯಿಂದ ತಾಲೂಕಿನ 25 ರೈತರನ್ನು ಮಹಾರಾಷ್ಟದಲ್ಲಿನ ಕೃಷಿ ಪದ್ಧತಿ ಅಧ್ಯಯನ ಮಾಡಿಕೊಂಡು ಬರಲು ವಾರದವರೆಗೆ ಪ್ರವಾಸ ಕೈಕೊಳ್ಳಲಾಗಿತ್ತು ಎಂದರು.

Advertisement

ಅಧ್ಯಯನ ಮಾಡಿದ ರೈತರ ಭಾಗಪ್ಪಗೌಡ ಪಾಟೀಲ ಮಾತನಾಡಿ, ರೈತರಿಗೆ ಅಧ್ಯಯನ ಅತ್ಯವಶ್ಯಕ. ತಾಲೂಕು ಕೃಷಿಕ ಸಮಾಜದ ವತಿಯಿಂದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಕಾರ್ಯದರ್ಶಿ ಸಹಾಯಕ ಕೃಷಿ ನಿರ್ದೇಶಕ ಡಾ| ಎಚ್‌.ವೈ. ಸಿಂಗೆಗೊಳ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ರೈತರಿಗೆ ಮಹಾರಾಷ್ಟರದಲ್ಲಿನ ಆಧುನಿಕ ಕೃಷಿ
ಪದ್ಧತಿ ಅಧ್ಯಯನ ಮಾಡಲು ಕೈಗೊಂಡಿದ್ದ ಪ್ರವಾಸ ಅತ್ಯಂತ ಮಹತ್ವದ್ದಾಗಿತ್ತು. ನಾವೆಲ್ಲರೂ ಅಧ್ಯಯನ ಮಾಡಿಕೊಂಡು ಬಂದು ನಮ್ಮ ಸುತ್ತಮುತ್ತಲಿನ ರೈತರಿಗೆ ಅರಿವು ಮೂಡಿಸಿದ್ದೇವೆ ಎಂದರು. 

ಕಲಕೇರಿಯ ಸಂಗಾರೆಡ್ಡಿ ದೇಸಾಯಿ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ತಾಲೂಕು ಕೃಷಿಕ ಸಮಾಜದ ಕಾರ್ಯದರ್ಶಿ ಸಹಾಯಕ ಕೃಷಿ ನಿರ್ದೇಶಕ ಡಾ| ಎಚ್‌.ವೈ. ಸಿಂಗೆಗೊಳ ಅವರು ಮಾತನಾಡಿದರು.

ರೈತರಾದ ನಿಂಗನಗೌಡ ಪಾಟೀಲ, ಸಿದ್ರಾಮಪ್ಪ ಚಿಂಚೊಳ್ಳಿ, ಜಿ.ಸಿ. ಮಾರ್ಸನಳ್ಳಿ, ಗುರುಪಾದ ನೆಲ್ಲಗಿ, ರಾಜು ಸಾತಿಹಾಳ, ಮಹಾಂತೇಶ ಉಪ್ಪಿನ, ಪರಶುರಾಮ ಹೂನಳ್ಳಿ, ಶಾಂತಗೌಡ ಬಿರಾದಾರ, ಮಹೆಬೂಬ ರಂಜಣಗಿ, ಬಸಣ್ಣ ಕಡಗಂಚಿ, ಎ.ಎಂ.ಬಿರಾದಾರ, ಶ್ರೀನಿವಾಸ ಓಲೇಕಾರ, ಕೃಷಿ ಅಧಿಕಾರಿಗಳಾದ ಸಿ.ಎಸ್‌.ವಾಲೀಕಾರ, ಆರ್‌.ಬಿ. ಸೀತಿಮನಿ, ಜಿ.ಎಸ್‌.ರಾಠೊಡ, ಡಿ.ಎಸ್‌.ಅವಜಿ, ಎಲ್‌.ಆರ್‌.ರಾಠೊಡ, ಎಸ್‌.ಸಿ.ಚೌದ್ರಿ, ಎ.ಆರ್‌. ನಾಯಕ, ಎಸ್‌.ಕೆ.ಮಸಳಿ, ಸುಧಾಕರ ಇಸೂರ, ಅನಿಲ ಬರಡೋಲ ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next