Advertisement

ಹಣಕಾಸಿನ ವಿಷಯದಲ್ಲಿ ಶಿಸ್ತು ರೂಢಿಸಿಕೊಳ್ಳಿ

08:28 PM May 05, 2019 | Sriram |

ವಯಸ್ಸಾಗಿ ದುಡಿಯುವ ಸಾಮರ್ಥ್ಯ ಕುಗ್ಗಿದಾಗ, ಅಸೌಖ್ಯ ಉಂಟಾದಾಗ ಕೂಡಿಟ್ಟ ಹಣ ಸಹಕಾರಿಯಾಗುವುದು. ಹಾಗಾಗಿ ಹಣಕಾಸಿನ ವಿಷಯದಲ್ಲಿ ಪ್ರತಿಯೊಬ್ಬರೂ ಶಿಸ್ತು ರೂಢಿಸಿಕೊಳ್ಳುವುದು ಅಗತ್ಯ. ಕುಟುಂಬದ ದೈನಂದಿನ ಅಗತ್ಯಗಳಿಗೆ ಗಮನ ನೀಡುತ್ತಾ, ಭವಿಷ್ಯದ ಹಿತಾಸಕ್ತಿಗಳ ಕಡೆಗೂ ಎಚ್ಚರ ವಹಿಸವುದು ಅನಿವಾರ್ಯ.

Advertisement

ಪ್ರತಿಯೊಬ್ಬರು ತನ್ನ ವಯಸ್ಸು, ಆವಶ್ಯಕತೆ, ಆದಾಯ, ಖರ್ಚು ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯದ ಪ್ರಮಾಣವನ್ನು ನಿರ್ಧರಿಸಬೇಕು. ಸೋದ್ಯೋಗಿಗಳು, ಅಸಂಘಟಿತ ವರ್ಗದ ನೌಕರರು, ಇನ್ನಿತರ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಜನರು ಉಳಿತಾಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿರುವುದಿಲ್ಲ. ಆದ್ದರಿಂದ ಆರ್ಥಿಕ ಸಂಕಷ್ಟ ಎದುರಿಸುವುದನ್ನು ತಡೆಯಲು ಅಂತಹವರು ಸಣ್ಣ ಪ್ರಮಾಣದ ಉಳಿತಾಯ ಯೋಜನೆಯಲ್ಲಿ ತೊಡಗಿಕೊಳ್ಳಬೇಕು.
ವೃತ್ತಿ ಜೀವನದ ಆರಂಭದಲ್ಲಿಯೇ ಸಣ್ಣ ಪ್ರಮಾಣದ ಉಳಿತಾಯದ ಕಡೆಗೆ ಗಮನ ಹರಿಸಿದರೆ ಮೊದಲಿಗೆ ಕಷ್ಟವಾದರೂ ಬಳಿಕ ಅದು ರೂಢಿಯಾಗಿ ಬಿಡುತ್ತದೆ. ಉಳಿತಾಯ ಮಾಡುವಾಗ ಸೂಕ್ತ ಬಡ್ಡಿ ದೊರೆಯುವ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ವ್ಯವಸ್ಥಿತ ಪಾಲನೆ ಅಗತ್ಯ
ದಕ್ಷ ಹಣಕಾಸು ಪದ್ಧತಿ (ವ್ಯವಸ್ಥೆ)ಯಿಂದ ಆರ್ಥಿಕ ಅಭಿವೃದ್ಧಿ ಅತಿ ವೇಗದಲ್ಲಿ ಸಾಧಿಸಬಹುದು. ಹಣಕಾಸು ನಿರ್ವಹಣೆ, ನೀತಿ- ನಿಯಮಗಳ ಅನುಷ್ಠಾನ, ವ್ಯವಸ್ಥಿತ ಪಾಲನೆ ಅಗತ್ಯ. ಜತೆಗೆ ದೈನಂದಿನ ವ್ಯವಹಾರಗಳಲ್ಲಿ ಸಂವಹನ ಕೌಶಲ, ದೂರದೃಷ್ಟಿತ್ವ ಮತ್ತು ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಬೇಕು.

ಹಣಕಾಸು ವಿಷಯದಲ್ಲಿ ಶುದ್ಧತೆ, ಬೌದ್ಧಿಕ ಸಾಮರ್ಥ್ಯವು ಮುಖ್ಯವಾದ್ದರಿಂದ ಆರ್ಥಿಕ ಯೋಜನೆಗಳ ಬಗ್ಗೆ ಮನೆಯವರೊಂದಿಗೆ ಮುಕ್ತವಾಗಿ ಚರ್ಚಿಸಿ ಅನುಷ್ಠಾನಿಸಿಕೊಳ್ಳುವುದು ಉತ್ತಮ. ಉಳಿತಾಯ ಮತ್ತು ಹೂಡಿಕೆ ಎನ್ನುವುದು ಒಂದು ದಿನದ ಕೆಲಸವಲ್ಲ. ಇದು ನಿರಂತರ ಪ್ರಕ್ರಿಯೆ. ಹಾಗಾಗಿ ಪ್ರತಿದಿನ ಈ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಬೇಕು.

ಯೋಜನೆ ರೂಪಿಸಿ
ಯೋಜನಬದ್ಧ ಹಣಕಾಸು ನಿರ್ವಹಣೆ ಅತೀ ಅಗತ್ಯ. ಅದಕ್ಕಾಗಿ ಗಳಿಸುವ ಒಟ್ಟು ಆದಾಯವನ್ನು ಮೂರು ಪಾಲು ಮಾಡಬೇಕು. ದೈನಂದಿನ ಖರ್ಚು ವೆಚ್ಚ, ಬಂಡವಾಳ ಹೂಡಿಕೆ, ಉಳಿತಾಯ ಎಂದು ಪ್ರತ್ಯೇಕ ವಿಭಾಗಗಳನ್ನಾಗಿ ಮಾಡಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಹೂಡಿಕೆಗೆ ಸಾಕಷ್ಟು ಆಯ್ಕೆಗಳಿವೆ. ಮ್ಯೂಚ್ಯುವಲ್‌ ಫ‌ಂಡ್‌, ಜೀವವಿಮೆ, ಆರೋಗ್ಯ ವಿಮೆ, ಬ್ಯಾಂಕ್‌ಗಳ ನಿಶ್ಚಿತ ಠೇವಣಿ, ಸಾರ್ವಜನಿಕ ಭವಿಷ್ಯ ನಿಧಿ, ಅಂಚೆ ಕಚೇರಿಗಳಲ್ಲಿ ಆರ್‌ಡಿ, ಚಿನ್ನಾಭರಣ ಖರೀದಿ, ಷೇರ್‌ ಮಾರುಕಟ್ಟೆ ಮುಂತಾದ ಅನೇಕ ಯೋಜನೆ ಗಳಲ್ಲಿ ಹಣ ಹೂಡಿಕೆ ಮಾಡಬಹುದು.

Advertisement

ಆಮಿಷಗಳಿಗೆ ಮರುಳಾಗದಿರಿ
ಹಲವು ಮಂದಿ ಜೇಬಿನಲ್ಲಿ ಒಂದಷ್ಟು ದುಡ್ಡಿದ್ದಾಗ ಅದನ್ನು ಪೂರ್ತಿ ಖರ್ಚು ಮಾಡದೆ ಮನೆಗೆ ಮರಳುವುದಿಲ್ಲ. ಕೆಲವರು ಸ್ವಲ್ಪ ಡಿಸ್ಕೌಂಟ್‌ ದರದಲ್ಲಿ ಸಿಗುತ್ತದೆ ಅಂತ ಉಪಯೋಗಕ್ಕೆ ಬಾರದ ವಸ್ತುಗಳನ್ನು ಖರಿದಿಸುತ್ತಾರೆ. ಹಾದಿ ಬದಿ ಕಂಡುಬರುವ ಎಷ್ಟೋ ಆಮಿಷಗಳು ದುಡ್ಡು ಖರ್ಚು ಮಾಡಲು ಪ್ರೇರೇಪಿಸುತ್ತವೆ. ಆದ್ದರಿಂದ ಯಾವುದನ್ನಾದರೂ ಖರೀದಿಸುವಾಗ ನಿಜಕ್ಕೂ ಅವು ನಿಮಗೆ ಅನಿವಾರ್ಯವೇ ಎಂದು ಯೋಚಿಸಿ ನಿರ್ಧರಿಸಿ.

ಮಾಸಿಕ ಬಜೆಟ್‌ ತಯಾರಿಸಿ
ನಿಮ್ಮ ಉದ್ಯೋಗ ಮತ್ತು ಆದಾಯ ಯಾವುದೇ ಆಗಿರಲಿ, ಮಾಸಿಕ ಬಜೆಟ್‌ ತಯಾರಿಸಿಕೊಂಡು ಅದಕ್ಕನುಗುಣವಾಗಿ ಖರ್ಚು ವೆಚ್ಚಗಳನ್ನು ಮಾಡುತ್ತ ವ್ಯವಹರಿಸಬೇಕು. ಬಜೆಟ್‌ ಮಿತಿ ತಪ್ಪಬಾರದು. ಇದರಿಂದ ಹಣ ಉಳಿತಾಯವಾಗುತ್ತದೆ.

ಸಕಾಲದಲ್ಲಿ ಬಿಲ್‌ ಪಾವತಿಸಿ
ಕ್ರೆಡಿಟ್‌ ಕಾರ್ಡ್‌ ಬಿಲ್‌,ಗೃಹ ಸಾಲ, ವೈಯಕ್ತಿಕ ಸಾಲದ ಕಂತು, ವಿದ್ಯುತ್‌ ಬಿಲ್‌ ಫೋನ್‌ ಬಿಲ್‌ ಇತ್ಯಾದಿಗಳನ್ನು ಸಕಾಲದಲ್ಲಿ ಪಾವತಿಸಿ ದಂಡ ಕಟ್ಟುವುದನ್ನು ತಪ್ಪಿಸಿ.
ಫಾಸ್ಟ್‌ ಫ‌ುಡ್‌ಗಳಿಂದ ದೂರವಿರಿ ವಿಹಾರ ಮತ್ತಿತರ ಸಂದರ್ಭಗಳಲ್ಲಿ ಆರೋಗ್ಯಕ್ಕೆ ಅಷ್ಟು ಹಿತಕರವಲ್ಲದ ಫಾಸ್ಟ್  ಫ‌ುಡ್‌, ಕರುಕುಲು ತಿಂಡಿಗಳನ್ನು ಸ್ವಲ್ಪ ದೂರ ಇಡುವುದು ಉತ್ತಮ. ಅವುಗಳಿಂದ ಹಣ ಉಳಿಯುತ್ತದೆ.

-   ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next