Advertisement

ಗೋವು ರಾಷ್ಟ್ರಪ್ರಾಣಿಯಾಗಲಿ ಹಂತಕರಿಗೆ ಜೀವಾವಧಿ ಆಗಲಿ

03:16 AM Jun 01, 2017 | Team Udayavani |

ಹೊಸದಿಲ್ಲಿ: ಗೋ ಮಾರಾಟ ನಿಷೇಧ ಕಾಯ್ದೆ ಜಾರಿ ದೇಶಾದ್ಯಂತ ಪಕ್ಷಗಳು, ಧರ್ಮ, ಜಾತಿಗಳ ನಡುವೆ ಒಡಕು, ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವುದು ಒಂದೆಡೆಯಾದರೆ, ಈ ಕುರಿತು ನ್ಯಾಯಾಂಗ ವ್ಯವಸ್ಥೆಯಲ್ಲೂ ಭಿನ್ನಾಭಿಪ್ರಾಯ ಕೇಳಿಬಂದಿದೆ. ಮದ್ರಾಸ್‌ ಹೈಕೋರ್ಟ್‌ ಕೇಂದ್ರದ ಅಧಿಸೂಚನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅದಕ್ಕೆ ತಡೆಯಾಜ್ಞೆ ತಂದ ಬೆನ್ನಲ್ಲೇ, ಬುಧವಾರ ಕೇರಳ ಹಾಗೂ ರಾಜಸ್ಥಾನ ಹೈಕೋರ್ಟ್‌ಗಳು ವಿಭಿನ್ನ ತೀರ್ಪು ನೀಡುವ ಮೂಲಕ ಗೋ ಮಾರಾಟ ನಿಷೇಧ ಕಾಯ್ದೆ ಮತ್ತಷ್ಟು ಕಗ್ಗಂಟಾಗಿದೆ.

Advertisement

‘ಹುಲಿ ಬದಲು ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು. ಗೋ ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜತೆ ಮಾತುಕತೆ ನಡೆಸಿ ಶೀಘ್ರ ಸೂಕ್ತ ತೀಮಾನಕ್ಕೆ ಬನ್ನಿ,’ ಎಂದು ರಾಜಸ್ಥಾನ ಹೈಕೋರ್ಟ್‌ ನ್ಯಾಯಮೂರ್ತಿ ಅಲ್ಲಿನ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದರೆ, ‘ಕೇಂದ್ರದ ಹೊಸ ಅಧಿಸೂಚನೆ, ವಧೆಗಾಗಿ ಜಾನುವಾರುಗಳನ್ನು ಮಾರುವುದನ್ನು ನಿಷೇಧಿಸುತ್ತದೆಯೇ ವಿನಾ, ಗೋಮಾಂಸ ಸೇವನೆ, ಹತ್ಯೆಯನ್ನು ನಿಷೇಧಿಸುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆೆ.

ಸುಮಾರು 100ಕ್ಕೂ ಹೆಚ್ಚು ಹಸುಗಳ ಹತ್ಯೆಗೆ ಕಾರಣವಾಗಿದ್ದ ಹಿಂಗೋನಿಯಾ ಗೋಶಾಲಾ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಮಹೇಶ್‌ ಚಂದ್‌ ಶರ್ಮಾ ಅವರಿದ್ದ ಏಕಸದಸ್ಯ ಪೀಠ, ‘ಹಸು ಭಾರತದ ರಾಷ್ಟ್ರೀಯ ಪ್ರಾಣಿಯಾಗಬೇಕು. ಅದನ್ನು ಕೊಲ್ಲುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಸಂಪೂರ್ಣ ಹಿಂದೂ ರಾಷ್ಟ್ರವಾಗಿರುವ ನೇಪಾಲದಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲಾಗಿದೆ. ಅದೇ ರೀತಿ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಜಾನುವಾರುಗಳ ಪಾಲನೆಯೂ ಅದರಡಿ ಬರುತ್ತದೆ. ಗೋವುಗಳಿಗೆ ಕಾನೂನು ರಕ್ಷಣೆ ನೀಡಲು ರಾಜ್ಯ ಸರಕಾರಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂವಿಧಾನದ 48 ಮತ್ತು 51ನೇ ಪರಿಚ್ಛೇದಗಳಲ್ಲಿ ಹೇಳಲಾಗಿದೆ. ಈ ಪ್ರಕಾರ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ಮುಖ್ಯ ಕಾರ್ಯದರ್ಶಿ ಹಾಗೂ ಅಡ್ವೊಕೇಟ್‌ ಜನರಲ್‌ರನ್ನು ಗೋ ರಕ್ಷಕರೆಂದು ಘೋಷಿಸಬೇಕು’ ಎಂದು 145 ಪುಟಗಳ ಆದೇಶದಲ್ಲಿ ಉಲ್ಲೇಖೀಸಿದ್ದಾರೆ. ಇದೇ ವೇಳೆ ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಯಾವುದೇ ವ್ಯಕ್ತಿ ಅಥವಾ ವರ್ಗಗಳಿಗೆ ನ್ಯಾಯಪೀಠವು ಮುಕ್ತ ಅವಕಾಶವನ್ನೂ ಕಲ್ಪಿಸಿದೆ.

ಗೋ ಮಾಂಸ ಭಕ್ಷಣೆಗೆ ನಿಷೇಧವಿಲ್ಲ!: ಇನ್ನೊಂದೆಡೆ ಗೋ ಮಾರಾಟ ನಿಷೇಧ ಕಾಯ್ದೆ ಜಾರಿ ಮೂಲಕ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕೇರಳದ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಟಿ.ಜಿ.ಸುನೀಲ್‌ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾ ಮಾಡಿದೆ. ನ್ಯಾಯಮೂರ್ತಿ ಪಿ.ಬಿ.ಸುರೇಶ್‌ ಕುಮಾರ್‌ ಅವರಿದ್ದ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ, ‘ಕೊಲ್ಲುವ ಉದ್ದೇಶದಿಂದ ಹಸುಗಳನ್ನು ಜಾನುವಾರು ಮಾರುಕಟ್ಟೆಯಲ್ಲಿ ಮಾರುವುದನ್ನು ಕಾಯ್ದೆ ನಿಷೇಧಿಸುತ್ತದೆಯೇ ಹೊರತು ಹಸುಗಳ ಮಾಂಸ ಭಕ್ಷಣೆ, ಕೊಲ್ಲುವಿಕೆ ಮತ್ತು ಮಾರಾಟಕ್ಕೆ ಕೇಂದ್ರದ ಕಾಯ್ದೆ ನಿಷೇಧ ಹೇರುವುದಿಲ್ಲ,’ ಎಂದಿದ್ದಾರೆ. 

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್‌ ನಿರ್ದೇಶನ ನೀಡಿದ ಅನಂತರ ಹಾಗೂ ‘ಗೋ ಮಾರಾಟ ನಿಷೇಧವನ್ನು ಒಮ್ಮತದಿಂದ ವಿರೋಧಿಸುವ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ,’ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿಕೆ ನೀಡಿದ ಬೆನ್ನಲ್ಲೇ ಕೇರಳ ಹೈಕೋರ್ಟ್‌ ಈ ತೀರ್ಪು ನೀಡಿದೆ.

Advertisement

ನವಿಲು ಬ್ರಹ್ಮಚಾರಿ!
‘ರಾಷ್ಟ್ರ ಪಕ್ಷಿಯಾಗಿರುವ ನವಿಲು ಬ್ರಹ್ಮಚಾರಿ’. ಇದು, ‘ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಘೋಷಿಸಬೇಕು,’ ಎಂದು ಸಲಹೆ ನೀಡಿರುವ ರಾಜಸ್ಥಾನ ಹೈಕೋರ್ಟ್‌ ನ್ಯಾ| ಮಹೇಶ್‌ ಚಂದ್‌ ಶರ್ಮಾ ಅವರ ಅಭಿಪ್ರಾಯ. ‘ಸಿಎನ್‌ಎನ್‌ -ನ್ಯೂಸ್‌18ಗೆ,’ ಸಂದರ್ಶನ ನೀಡಿರುವ ನ್ಯಾ| ಶರ್ಮಾ, ‘ಬ್ರಹ್ಮಚಾರಿಯಾಗಿರುವ ನವಿಲು ಹೆಣ್ಣು ನವಿಲಿನ ಜೊತೆ ಲೈಂಗಿಕ ಸಂಪರ್ಕ ಹೊಂದುವುದಿಲ್ಲ. ಗಂಡು ನವಿಲಿನ ಕಣ್ಣೀರು ಸೇವಿಸುವ ಮೂಲಕ ಹೆಣ್ಣು ನವಿಲು ಗರ್ಭಧರಿಸುತ್ತದೆ,’ ಎಂದಿದ್ದಾರೆ. ಅಲ್ಲದೆ, ‘ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಆದೇಶಿಸುವ ಮೊದಲು ನಾನು ಸಾಕಷ್ಟು ಅಧ್ಯಯನ ನಡೆಸಿದ್ದೇನೆ ಎಂದಿದ್ದಾರೆ. ನಾನು ನನ್ನ 140 ಪುಟಗಳ ತೀರ್ಪಿನಲ್ಲಿ, ಋಗ್ವೇದ, ಅಥರ್ವಣವೇದ, ಯಜುರ್ವೇದ ಮತ್ತು ಸಾಮವೇದವ ಸಾಲುಗಳನ್ನು ಉಲ್ಲೇಖೀಸಿದ್ದೇನೆ. ಉತ್ತರಾಖಂಡ ಹೈಕೋರ್ಟ್‌ ಹೇಗೆ ಗಂಗೆ ಮತ್ತು ಯಮುನೆಗೆ ‘ಮಾನವ’ ಸ್ಥಾನಮಾನ ಕೊಟ್ಟಿತೋ, ಅದೇ ರೀತಿ ಗೋವುಗಳಿಗೂ ಅಂಥದ್ದೇ ಸ್ಥಾನಮಾನ ಕೊಡಬೇಕು ಎಂದಿದ್ದಾರೆ. ಜತೆಗೆ, ಗೋವು ಕಾಸ್ಮಿಕ್‌ ಶಕ್ತಿಯನ್ನು ಒಳಗೆಳೆದುಕೊಂಡು, ಆಮ್ಲಜನಕವನ್ನು ಹೊರಬಿಡುವ ವಿಶಿಷ್ಟ ಪ್ರಾಣಿ ಎಂದಿದ್ದಾರೆ.

ಹುಲಿಯೇ ರಾಷ್ಟ್ರೀಯ ಪ್ರಾಣಿಯಾದದ್ದೇಕೆ?
1972ರಲ್ಲಿ ದೇಶಾದ್ಯಂತ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾಯಿತು. ಅದೇ ವರ್ಷ ‘ರಾಯಲ್‌ ಬೆಂಗಾಲ್‌ ಟೈಗರ್‌’ ಅನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಯಿತು. ಇದಕ್ಕೂ ಮುನ್ನ ಸಮಿತಿಯೊಂದನ್ನು ರಚಿಸಲಾಯಿತು. ಸಾಕಷ್ಟು ವನ್ಯ ಮೃಗಗಳನ್ನು ಪರಿಗಣಿಸಿದ ಸಮಿತಿ ಕಡೆಗೆ ಬಂಗಾಲದ ಹುಲಿಗೆ ‘ರಾಷ್ಟ್ರ ಪ್ರಾಣಿ’ ಸ್ಥಾನಮಾನ ನೀಡುವ ತೀರ್ಮಾನಕ್ಕೆ ಬಂದಿತು. ಅದು ಒಂದು ಸ್ಪುರದ್ರೂಪಿ ವನ್ಯಮೃಗ ಎಂಬ ಒಂದೇ ಕಾರಣಕ್ಕೆ ರಾಷ್ಟ್ರೀಯ ಪ್ರಾಣಿಯಾಗಿ ಆಯ್ಕೆಯಾಗಲಿಲ್ಲ. ಬದಲಿಗೆ, ಹುಲಿ ಹೊಂದಿರುವ ಸಾಮರ್ಥ್ಯ, ಚಾಕಚಕ್ಯತೆ ಹಾಗೂ ಸದೃಢ ಮೈಕಟ್ಟನ್ನು ಪರಿಗಣಿಸಿ ಅದಕ್ಕೆ ಆ ಮಾನ್ಯತೆ ನೀಡಲಾಗಿದೆ. ದೇಶದಲ್ಲಿ ಕಾಣಸಿಗುವ 8ಬಗೆಯ ಹುಲಿಗಳ ಪೈಕಿ ಬಂಗಾಲದ ಹುಲಿ ಸಂತತಿ ಅಳಿವಿನಂಚಿನಲ್ಲಿರುವುದನ್ನು ಪರಿಗಣಿಸಿ, 1973ರಲ್ಲಿ ‘ಹುಲಿ ಸಂರಕ್ಷಣಾ ಯೋಜನೆ’ ಜಾರಿಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next