Advertisement

ಬೆಟ್ಟದ ಮೇಲೊಂದು ಚಿತ್ರ ಮಾಡಿ

12:15 PM Jan 26, 2018 | Team Udayavani |

ಕನ್ನಡದಲ್ಲಿ ಮಕ್ಕಳ ಚಿತ್ರಗಳ ಸಂಖ್ಯೆಗೇನೂ ಕಮ್ಮಿ ಇಲ್ಲ. ಈಗ ಆ ಸಾಲಿಗೆ “ಬೆಟ್ಟದ ದಾರಿ’ ಎಂಬ ಮಕ್ಕಳ ಚಿತ್ರವೂ ಒಂದು. ಶೀರ್ಷಿಕೆಯೇ ಹೇಳುವಂತೆ, ಇದೊಂದು ಅಪ್ಪಟ ಮಕ್ಕಳ ಕುರಿತಾದ ಕಥೆ. ಇಲ್ಲಿ ಮಕ್ಕಳ ಮೇಲೆ ಕಥೆ ಸಾಗಿದರೂ, ಒಂದಷ್ಟು ಕಮರ್ಷಿಯಲ್‌ ಅಂಶಗಳೊಂದಿಗೆ “ಬೆಟ್ಟದ ದಾರಿ’ ಹಿಡಿದಿದ್ದಾರೆ ನಿರ್ದೇಶಕ ಮಾ.ಚಂದ್ರು. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿತು. ಮಕ್ಕಳ ಚಿತ್ರವಾದ್ದರಿಂದ “ಚಿನ್ನಾರಿ ಮುತ್ತ’ ವಿಜಯ್‌ ರಾಘವೇಂದ್ರ ಅವರು ಚಿತ್ರಕ್ಕೆ ಕ್ಲಾಪ್‌ ಮಾಡುವ ಮೂಲಕ ಶುಭಹಾರೈಸಿದರು. ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಶುಭಕೋರಿದರು.

Advertisement

ಮಾತಿಗಿಳಿದ ನಿರ್ದೇಶಕ ಮಾ.ಚಂದ್ರು, “ಇದೊಂದು ಕುಡಿಯುವ ನೀರಿನ ಸಮಸ್ಯೆ ಮೇಲೆ ಸಾಗುವ ಕಥೆ. ಉತ್ತರಕರ್ನಾಟಕದಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ನೀರಿಗೆ ಹಾಹಾಕಾರ ಇರುವುದು ಗೊತ್ತೇ ಇದೆ. ಬರ ಇರುವಂತಹ ಒಂದು ಹಳ್ಳಿಯಲ್ಲಿ ಕುಡಿಯೋಕು ನೀರು ಇಲ್ಲದೆ ಅಲ್ಲಿನ ಜನ ಒದ್ದಾಡುತ್ತಾರೆ. ಸರ್ಕಾರ, ಅಧಿಕಾರಿಗಳಿಂದ ಆಗದಂತಹ ಕೆಲಸವನ್ನು ಆ ಊರಿನ ಐದು ಮಕ್ಕಳು ಮಾಡುತ್ತಾರೆ. ಅವರು ಆ ಊರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಯಾವ ಜಾಡು ಹಿಡಿಯುತ್ತಾರೆ ಎಂಬುದು ಕಥೆ. ಇಲ್ಲಿ ಮಾಸ್ಟರ್‌ ನಿಶಾಂತ್‌ ಟಿ. ರಾಥೋಡ್‌, ಮಾಸ್ಟರ್‌ ಅಂಕಿತ್‌ ನವನಿಧಿ, ಬೇಬಿ ಲಕ್ಷ್ಮೀಶ್ರೀ, ಮಾಸ್ಟರ್‌ ರಂಗಸ್ವಾಮಿ, ಮಾಸ್ಟರ್‌ ರೋಹಿತ್‌ ಗೌಡ, ಮಾಸ್ಟರ್‌ ವಿಘ್ನೇಶ್‌, ಬ್ಯಾಂಕ್‌ ಜನಾರ್ದನ್‌, ಉಮೇಶ್‌ ಇತರರು ನಟಿಸುತ್ತಿದ್ದಾರೆ. ಈ ಹಿಂದೆ “ಮೂಕ ಹಕ್ಕಿ’ ನಿರ್ಮಿಸಿದ್ದ ಚಂದ್ರಕಲಾ ಅವರು ಈ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. “ಕಳೆದ ಬಾರಿ ವಿತರಣೆ ಸರಿಹೋಗದಿದ್ದರಿಂದ “ಮೂಕಹಕ್ಕಿ’ ಸೋಲುಂಡಿತು. ಆದರೆ, ಮಾಧ್ಯಮಗಳಿಂದ ಉತ್ತಮ ಪ್ರಶಂಸೆ ಸಿಕ್ಕಿತ್ತು. ಅದೇ ಧೈರ್ಯದಿಂದ ಈ ಬಾರಿ ಮಕ್ಕಳ ಚಿತ್ರ ಮಾಡುತ್ತಿದ್ದೇನೆ. ಈ ಮೂಲಕ ಒಂದು ಸಂದೇಶ ಕೊಡುವ ಪ್ರಯತ್ನ ನನ್ನದು. ಒಳ್ಳೆಯ ಕಥೆ, ಉದ್ದೇಶ ಇಲ್ಲಿರುವುದರಿಂದ ನಿಮ್ಮಗಳ ಸಹಕಾಚರ ಬೇಕು’ ಎಂದರು ಚಂದ್ರಕಲಾ.

ಸಂಗೀತ ನಿರ್ದೇಶಕ ವೀರ್‌ ಸಮರ್ಥ್ ಅವರು ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಕೊಡುತ್ತಿದ್ದಾರೆ. ಎಲ್ಲವೂ ಮಾಂಟೇಜ್‌ ಹಾಡುಗಳು. “ಹಳ್ಳಿಸೊಗಡಿನ ಮೇಲೆ, ಮಕ್ಕಳ ಗೆಳೆತನ ಹಾಗು ನೀರಿಗಾಗಿ ಹೋರಾಡುವ ಮತ್ತು ಪರಿತಪಿಸುವ ಕುರಿತ ಗೀತೆಗಳಿವೆ. ಉತ್ತರಕರ್ನಾಟಕ ಶೈಲಿಯಲ್ಲೊಂದು ಹಾಡಿದೆ. ಹೇಳುವಂತಹ ಹಾಡದು’ ಎಂದರು ವೀರ್‌ಸಮರ್ಥ್.

Advertisement

Udayavani is now on Telegram. Click here to join our channel and stay updated with the latest news.

Next