Advertisement

ಕೆ.ಆರ್‌.ಆಸ್ಪತ್ರೆಗೆ ವಾರದೊಳಗೆ ಮೇಜರ್‌ ಸರ್ಜರಿ

05:05 PM Aug 08, 2021 | Team Udayavani |

ಮೈಸೂರು: ಶಾಶ್ವತ ಸಮಸ್ಯೆಗಳಲ್ಲಿ ಮುಳುಗಿರುವ ನಗರದ ಕೆ.ಆರ್‌.ಆಸ್ಪತ್ರೆಗೆ ಮೇಜರ್‌ ಸರ್ಜರಿ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಕೋವಿಡ್‌ 3ನೇ ಅಲೆ ಎದುರಿಸಲು ಕೈಗೊಂಡಿರುವ ಕ್ರಮಗಳ ಸಂಬಂಧ ಶನಿವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೆ.ಆರ್‌.ಆಸ್ಪತ್ರೆಯ ಸಮಸ್ಯೆಗಳ ಕುರಿತು ನನಗೆ ಸಂಪೂರ್ಣ ಮಾಹಿತಿ ಇದೆ. ಅದಕ್ಕೆ ಮೇಜರ್‌ ಸರ್ಜರಿಯೇ ಆಗಬೇಕಿದ್ದು, ಅದನ್ನೂ ಒಂದು ವಾರದ ಒಳಗೆ ಮಾಡಲಾಗುವುದು ಎಂದು ಹೇಳಿದರು.

ಆಸ್ಪತ್ರೆ ಮುಚ್ಚಿ: ಸಭೆಯಲ್ಲಿ ಕೆ.ಆರ್‌. ಆಸ್ಪತ್ರೆಯ ಬಗ್ಗೆ ವಿಷಯ ಪ್ರಸ್ತಾಪಿಸಿದ ಶಾಸಕ ಎಲ್‌.ನಾಗೇಂದ್ರ, ಮೂಲಸೌಕರ್ಯಗಳಿಲ್ಲದೆ ಸೊರಗಿರುವ ಈ ಆಸ್ಪತ್ರೆ ಯನ್ನು ಮುಚ್ಚುವುದೇ ಲೇಸು. ಇಲ್ಲವೇ ಇದನ್ನು ವ್ಯವಸ್ಥಿತವಾಗಿ ನಡೆಸಬೇಕು. ಅದಕ್ಕಾಗಿ ಅಗತ್ಯ ಇರುವ ಎಲ್ಲ ಸೌಲಭ್ಯ ಕಲ್ಪಿಸಿಕೊಡಬೇಕು. ಆದರೆ, ಈ ಕೆಲಸ ವಾಗಿಲ್ಲ. ಸಮಸ್ಯೆಗಳೂ ಬಗೆಹರಿಯುತ್ತಿಲ್ಲ. ನಮ್ಮ ಸರ್ಕಾರ ಇರಲಿ, ಯಾವುದೇ ಸರ್ಕಾರದಲ್ಲೂ ಇದಕ್ಕೆ ಶಾಶ್ವತವಾದ ಪರಿಹಾರ ಕೊಡಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸ ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ದುಡ್ಡು ಕೊಡುತ್ತದೆ. ಬೇರೆ ಆಸ್ಪತ್ರೆಗಳಿಗೂ ಸೌಲಭ್ಯ ಕೊಡಲಾಗುತ್ತದೆ. ಆದರೆ, ಕೆ.ಆರ್‌.ಆಸ್ಪತ್ರೆಯನ್ನು ಮಾತ್ರ ಏಕೆ ನಿರ್ಲಕ್ಷಿಸಲಾಗುತ್ತದೆ ಎಂದು ಪ್ರಶ್ನಿಸಿದರು. ಇತ್ತೀಚೆಗೆ ಈ ಆಸ್ಪತ್ರೆಯಲ್ಲೇ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ.ಘಟನೆಯ ಬಳಿಕವೂ ಎಚ್ಚೆತ್ತುಕೊಂಡಿಲ್ಲ. ಇಷ್ಟು ದಿನವಾದರೂ ಅಲ್ಲಿಯ ಭದ್ರತಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿಲ್ಲ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ದೇಶಕ ಡಾ.ನಂಜರಾಜ್‌ ವಿರುದ್ಧ ಹರಿಹಾಯ್ದರು. ಆಗ ಪ್ರತಿಕ್ರಿಯೆ ನೀಡಿದ ಸಚಿವರು, ಈ ವಿಷಯದ ಕುರಿತು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.ಬಳಿಕ ಮಾತನಾಡಿದ ಸಚಿವರು, 1ನೇ, 2ನೇ ಕೊರೊನಾ ಅಲೆಯಲ್ಲಿ ಉಂಟಾದ ಸಮಸ್ಯೆಗಳು 3ನೇ ಅಲೆಯಲ್ಲಿ ಪುನರಾವರ್ತನೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

2ನೇ ಅಲೆಯ ಗಂಭೀರ ಪರಿಣಾಮವನ್ನು ಊಹಿಸಲು ಆಗಲಿಲ್ಲ. ಸಿದ್ಧತೆಯೂ ಇರಲಿಲ್ಲ. ಇದರಿಂದ ಆಕ್ಸಿಜನ್‌, ಐಸಿಯು, ಸಾಮಾನ್ಯ ಹಾಸಿಗೆಗಳ ಕೊರತೆ, ಔಷಧ ಅಭಾವ ಇನ್ನಿತರ ಸಮಸ್ಯೆಗಳು ತೀವ್ರವಾಗಿ ಕಾಡಿವೆ. 3ನೇ ಅಲೆಯಲ್ಲಿ ಈ ರೀತಿ ಯಾವುದೇ ಸಮಸ್ಯೆಗಳು ಉಂಟಾಗಬಾರದು. 3ನೇ ಅಲೆ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದರು.

Advertisement

ಮಾಹಿತಿ: ಕೋವಿಡ್‌ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಚಾರ ಮಾಡುವ ಮೂಲಕ ಪ್ರತಿ ಮನೆಗಳಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು. ನಿತ್ಯ ಜಿಲ್ಲಾಧಿಕಾರಿ ಮೂಲಕ ಮಾಧ್ಯಮಗಳಿಗೆ ಆಯಾ ದಿನದ ಮಾಹಿತಿ ನೀಡಬೇಕು. ಇದರೊಂದಿಗೆ
ಇನ್ನಿತರ ಪ್ರಚಾರ ಕಾರ್ಯಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಮೇಯರ್‌ ಅನ್ವರ್‌ಬೇಗ್‌, ಶಾಸಕರಾದ
ಎಚ್‌.ಪಿ.ಮಂಜುನಾಥ್‌, ಹರ್ಷವರ್ಧನ್‌, ಎಂಎಲ್‌ಸಿ ಸಂದೇಶ್‌ ನಾಗರಾಜ್‌, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಜಿಪಂ ಸಿಇಒ ಎ.ಎಂ. ಯೋಗೇಶ್‌, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಎಸ್‌ಪಿ ಆರ್‌.ಚೇತನ್‌ ಇದ್ದರು.

ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಹರಿಹಾಯ್ದ
ಸಿಎಸ್‌ಆರ್‌ ಅನುದಾನದಲ್ಲಿ ಖರೀದಿ ಮಾಡಿದ ಉಪಕರಣಗಳು ಜಿಲ್ಲಾಸ್ಪತ್ರೆಗೆ ಹೋಗುವ ಬದಲು ಅಧಿಕಾರಿಯೊಬ್ಬರ ಮನೆಗೆ ಹೋಗಿದೆ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳುವ ಮೂಲಕ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಆರೋಪ ಮಾಡಿದರು. ಜಿಲ್ಲಾಕೋವಿಡ್‌ ಆಸ್ಪತ್ರೆಗಾಗಿ ಆರ್‌ಬಿಐ ನೋಟು ಮುದ್ರಣಾಲಯ ಸಂಸ್ಥೆಯು ತನ್ನ ಸಿಎಸ್‌ಆರ್‌ ಅನುದಾನದಲ್ಲಿಕುಡಿಯುವ ನೀರಿಗೆ
ಸಂಬಂಧಿಸಿದ ಉಪಕರಣಗಳನ್ನು ಖರೀದಿಸಿ ಜಿಲ್ಲಾಡಳಿತದ ಮೂಲಕ ನೀಡಿದೆ. ಆದರೆ, ಅದು ಆಸ್ಪತ್ರೆಗೆ ತಲುಪಿಲ್ಲ. ಅದು ಯಾರ ಮನೆಗೆ ಹೋಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ತಡಬಡಾಯಿಸಿದ ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಡಾ.ರಾಜೇಶ್ವರಿ, ಉಪಕರಣಗಳು ಖರೀದಿಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ. ಈ ಸಂಬಂಧ ಮಾಹಿತಿ, ದಾಖಲೆ ನೀಡಲಾಗುವುದಾಗಿ ಎಂದು ಸಮಜಾಯಿಷಿಕೊಟ್ಟರು.

ದಿನಕ್ಕೆ 3 ಸಾವಿರ ಸೋಂಕು ಬಂದರೂನಿರ್ವಹಣೆಗೆ ಸನ್ನದ್ಧ
ಜಿಲ್ಲೆಯಲ್ಲಿ ದಿನಕ್ಕೆ 3 ಸಾವಿರ ಕೋವಿಡ್‌ ಪ್ರಕರಣಗಳು ಪತ್ತೆಯಾದ್ದರೂ ನಿರ್ವಹಣೆ ಮಾಡಲು ಸನ್ನದ್ಧವಾಗಿದೆ. ಶೇ.2ರಷ್ಟು ವೆಂಟಿಲೇಟರ್‌ ಮತ್ತು
ಐಸಿಯು ಬೆಡ್‌ಗಳು ಬೇಕಾಗಬಹುದು. ಸೋಂಕು ತಡೆ, ಪರೀಕ್ಷೆ-ಪತ್ತೆ ಮತ್ತು ನಿಯಂತ್ರಣ-ಔಷಧ ಸಂಗ್ರಹ ಎಂಬ ಮೂರು ಸೂತ್ರಗಳ ಅಡಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌ ತಿಳಿಸಿದರು.

ಕೋವಿಡ್‌ 3ನೇ ಅಲೆ ನಿರ್ವಹಣೆಗೆ ಜಿಲ್ಲೆಯಲ್ಲಿ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು,8,600 ಹಾಸಿಗೆಗಳಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಪೈಕಿ ಶೇ.17ರಷ್ಟು ಬೆಡ್‌ಗಳನ್ನು ಮಕ್ಕಳಿಗೆ ಮೀಸಲಿಡಲಾಗಿದೆ ಎಂದರು.

ಮಕ್ಕಳಿಗೆ 3ನೇ ಅಲೆ ಬಾಧಿಸಬಹುದು ಎಂಬು ಅಂದಾಜಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪತ್ತೆ
ಮಾಡಿ ತಪಾಸಣೆ ಮಾಡಲಾಗುತ್ತಿದೆ. ಅವರಿಗೆ ತಜ್ಞ ರಿಂದಲೂ ಚಿಕಿತ್ಸೆ ಕೊಡಿಸಿ ರೋಗನಿರೋಧಕ ಶಕ್ತಿ ವೃದ್ಧಿಸಲು ಕ್ರಮ ವಹಿಸಲಾಗಿದೆ ಎಂದರು.

ಪ್ರತಿ ತಾಲೂಕಿನಲ್ಲೂ 5 ಐಸಿಯು ಬೆಡ್‌ ಈಗಾಗಲೇ ಕಾಯ್ದಿಟ್ಟಿದ್ದು, ಐಸಿಯುದಲ್ಲಿರುವ ಮಕ್ಕಳ ಆರೈಕೆ ನಿರ್ವಹಣೆ ಕುರಿತು ವೈದ್ಯರು, ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಜಿಲ್ಲಾದ್ಯಂತ 400 ವಿಶೇಷ ಹಾಸಿಗೆಗಳ ವ್ಯವಸ್ಥೆ ಮಾಡಿದ್ದು, ಚೆಲುವಾಂಬ ಆಸ್ಪತ್ರೆಯಲ್ಲಿ 153, ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 75, ಖಾಸಗಿಆಸ್ಪತ್ರೆಗಳಲ್ಲಿ120ಹಾಸಿಗೆ ಇದರಲ್ಲಿ ಸೇರಿವೆ. 600 ಆಕ್ಸಿಜನ್‌ ಬೆಡ್‌, ಎಲ್ಲ ತಾಲೂಕು, ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕ ನಿರ್ಮಿಸಿ ಆಮ್ಲಜನಕ ಕೊರತೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next