Advertisement

ಗ್ರಾಮದ ಬೆಳವಣಿಗೆಯ ಜತೆಗೆ ಸಮಸ್ಯೆಗಳೂ ಬೆಳೆಯುತ್ತಿವೆ!

07:57 PM Aug 07, 2021 | Team Udayavani |

ಮಳೆಗಾಲ, ಬೇಸಗೆ ಕಾಲಗಳಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ, ಹೆದ್ದಾರಿ ದಾಟಲು ಸಂಕಷ್ಟ ಎದುರಿಸುವ ಸ್ಥಿತಿಯಿಂದ ಬಪ್ಪನಾಡು ಗ್ರಾಮಸ್ಥರಿಗೆ ಮುಕ್ತಿ ದೊರೆಯಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನ ಇಂದಿನ “ಉದಯವಾಣಿ ಸುದಿನ’ದ “ಒಂದು ಊರು – ಹಲವು ದೂರು’ ಸರಣಿಯಲ್ಲಿ  ಮಾಡಲಾಗಿದೆ.

Advertisement

ಮೂಲ್ಕಿ: ದ.ಕ. ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಬಪ್ಪನಾಡು ಗ್ರಾಮದ ಬಹುತೇಕ ಪ್ರದೇಶವು ಶಾಂಭವಿ ನದಿಯನ್ನು ಆವರಿಸಿಕೊಂಡಿದೆ. ಹೆದ್ದಾರಿ ಸಮಸ್ಯೆ ಹಾಗೂ ಬಾವಿ ಇದ್ದರೂ ಕೂಡ ಕುಡಿಯುವ ನೀರಿಗೆ ತತ್ವಾರ ಪಡೆಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಈ ಗ್ರಾಮವು ಎದುರಿಸುತ್ತಿದೆ.

ನದಿಗೆ ತಾಗಿಕೊಂಡಿರುವ ಪ್ರದೇಶ ಇದಾಗಿದ್ದು, ಮಳೆಗಾಲದಲ್ಲಿ ಬಾವಿಗಳಲ್ಲಿ ಕೆಂಪು ನೀರು ತುಂಬಿಕೊಳ್ಳುವುದು ಹಾಗೂ ಬೇಸಗೆಯಲ್ಲಿ ನೀರಿನ ಮಟ್ಟ ಇಳಿದಂತೆ ಉಪ್ಪು ನೀರು ಬರುವುದು ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಮೂಲ್ಕಿ ನಗರ ಪಂಚಾಯತ್‌ ವತಿಯಿಂದ ಈಗಾಗಲೇ ಸುಮಾರು 16.50 ಕೋಟಿ ರೂ. ವೆಚ್ಚದಲ್ಲಿ ದಿನದ 24 ಗಂಟೆಗಳ ಅವಧಿಯಲ್ಲಿ ಮೂಲ್ಕಿಗೆ ನೀರು ಕೊಡುವ ಯೋಜನೆಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ ಅಳವಡಿಸಲಾದ ಪೈಪ್‌ ಮೂಲಕ ನೀರು ಹರಿದು ಬರುವ ಕುರಿತು ಪ್ರಾಯೋಗಿಕ ಪ್ರಾತ್ಯಕ್ಷಿಕೆ ಮಾಡಿ ಕಾಮಗಾರಿಯ ಬಗ್ಗೆ ಖಾತರಿ ಪಡಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಮೂಲ್ಕಿ ನಗರದಿಂದ ಬಪ್ಪನಾಡು ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆ ಉಂಟಾಗುತ್ತಿದೆ. ಈ ಬಹುಕಾಲದ ಸಮಸ್ಯೆಗೆ ಇನ್ನು ಮುಕ್ತಿ ಸಿಗದಿರುವುದು ಖೇದಕರ.

Advertisement

ಏಳೆಂಟು ದಶಕಗಳ ಹಿಂದೆ ಬಪ್ಪನಾಡು ಗ್ರಾಮವು ಮೂಲ್ಕಿ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಅಲ್ಲದೇ ಮೂಲ್ಕಿ ಬಂದರು ಕೂಡ ಇದೇ ಗ್ರಾಮದಲ್ಲಿತ್ತು. ಗ್ರಾಮ ಚಾವಡಿ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಸರಕಾರಿ ಕಾಲೇಜು, ಸರಕಾರಿ ಆಸ್ಪತ್ರೆ, ಪೊಲೀಸ್‌ ಠಾಣೆ ಮತ್ತು ಪ್ರಧಾನ ಅಂಚೆ ಕಚೇರಿ ಗ್ರಾಮದಲ್ಲಿವೆ. ಮೂಲ್ಕಿ ವಿಜಯ ಕಾಲೇಜು, ವಿವಿಧ ಶಿಕ್ಷಣ ಸಂಸ್ಥೆಗಳು, ರಾಷ್ಟ್ರಮಟ್ಟದ ದಾಖಲೆಯಲ್ಲಿ ಇರುವ ಜೈನ ಬಸದಿ ಮಾನಸ್ತಂಭ, ಬಪ್ಪನಾಡು ದೇವಸ್ಥಾನ ಅಲ್ಲದೆ ಹಿಂದೂ, ಮುಸ್ಲಿಂ, ಕ್ರೈಸ್ತರ ಹಲವು ಪ್ರಮುಖ ಧಾರ್ಮಿಕ ಕೇಂದ್ರಗಳು ಕೂಡ ಇಲ್ಲಿವೆ.

ನಿರಂತರ ಅಪಘಾತ:

ಹೆದ್ದಾರಿ ಬಪ್ಪನಾಡು ದೇವಸ್ಥಾನ, ಮೂಲ್ಕಿ ಬಸ್‌ನಿಲ್ದಾಣ ಹಾಗೂ ವಿಜಯ ಸನ್ನಿಧಿ ಕಟ್ಟಡದ ಕಿನ್ನಿಗೋಳಿ ರಾಜ್ಯ ರಸ್ತೆ ಸೇರುವಲ್ಲಿ ದಿನಕ್ಕೆ ಒಂದು ಬಾರಿಯಾದರೂ ಅಪಘಾತಗಳು ಸಂಭವಿಸುತ್ತಲೇ ಇವೆ. ಅಭಿವೃದ್ಧಿ ಹೊಂದುತ್ತಿರುವ ಬಪ್ಪನಾಡು ಗ್ರಾಮದಲ್ಲಿ ದಿನಕ್ಕೊಂದರಂತೆ ಸಮಸ್ಯೆಗಳು ಕೂಡ ಸೃಷ್ಟಿಯಾಗುತ್ತಿವೆ. ಇದಕ್ಕೆ ಶೀಘ್ರ ಮುಕ್ತಿ ನೀಡಲು ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಮುಂದಾಗಬೇಕಿದೆ.

ಇತರ ಸಮಸ್ಯೆಗಳೇನು? :

  • ಬಪ್ಪನಾಡು ಗ್ರಾಮದ ವ್ಯಾಪ್ತಿಯಲ್ಲಿ ಬಹಳಷ್ಟು ವಸತಿ ಸಂಕೀರ್ಣಗಳು ಮತ್ತು ಬಹು ಮಹಡಿಯ ಕಟ್ಟಡಗಳು ಇದ್ದರೂ ಈ ವ್ಯಾಪ್ತಿಗೆ ಈ ವರೆಗೆ ಒಳಚರಂಡಿ ವ್ಯವಸ್ಥೆ ಇಲ್ಲದೆ ತ್ಯಾಜ್ಯ ನೀರು ನಿರ್ವಹಣೆಗೆ ಅನ್ಯ ಮಾರ್ಗ ಇಲ್ಲ. ಒಳಚರಂಡಿ ಯೋಜನೆ ಕೂಡ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದೆ.
  • ಹೆದ್ದಾರಿಯ ಕಾಮಗಾರಿ, ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ಎಡವಟ್ಟಿನಿಂದ ಹಲವು ಜನ ಜೀವ ಕಳೆದುಕೊಂಡಿದ್ದಾರೆ. ಆದರೂ ಕೂಡ ಇದಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ.
  • ಬಪ್ಪನಾಡು ವ್ಯಾಪ್ತಿಯಲ್ಲಿ ಇರುವ ಬಸ್‌ ನಿಲ್ದಾಣ ಮತ್ತು ಹೆದ್ದಾರಿ ಸಂಪರ್ಕ ಸಾರ್ವಜನಿಕರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ. ಹಲವಾರು ಬಾರಿ ಸಂಸದರು, ಶಾಸಕರು ಮತ್ತು ಹೆದ್ದಾರಿ ಹಾಗೂ ಪೊಲೀಸ್‌ ಇಲಾಖೆಯ ಮತ್ತು ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಪರಿಶೀಲಿಸಿ ಹೋಗುವುದಕ್ಕೆ ಸೀಮಿತವಾಗಿದೆ. ವಿನಾ ಸಂಪೂರ್ಣ ಪರಿಹಾರ ಕಂಡುಕೊಂಡಿಲ್ಲ.
  • ಕೊಳಚಿಕಂಬಳ, ಬಡಗಿತ್ಲು, ಕಡವಿನಬಾಗಿಲು ಪ್ರದೇಶಕ್ಕೆ ಪ್ರತಿ ಮಳೆಗಾಲದಲ್ಲಿ ನೆರೆ ಸಮಸ್ಯೆ ಕಾಡುತ್ತಿದೆ.

 

-ಎಂ. ಸರ್ವೋತ್ತಮ ಅಂಚನ್‌ ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next