Advertisement

ಮಹಿಷವಾಡಗಿ; ಕೃಷ್ಣೆ ಬರಿದಾದಾಗ ಈಶ್ವರನಿಗೆ ಪೂಜೆ ಭಾಗ್ಯ!

05:55 PM Jun 17, 2023 | Team Udayavani |

ರಬಕವಿ-ಬನಹಟ್ಟಿ: ತಾಲೂಕಿನ ಬನಹಟ್ಟಿ ಸಮೀಪದ ಕೃಷ್ಣಾ ನದಿಯ ಒಡಲಿನಲ್ಲಿ ಹುದುಗಿ ಹೋಗಿದ್ದ ಪುರಾತನ ದೇವಸ್ಥಾನ ನೀರು ಕಡಿಮೆ ಆದ ಹಿನ್ನಲೆಯಲ್ಲಿ ಇದೀಗ ಗೋಚರಿಸುತ್ತಿದೆ. ಕೃಷ್ಣಾ ನದಿ ಖಾಲಿಯಾಗಿದ್ದರಿಂದ ಮಹಿಷವಾಡಗಿ ಬ್ಯಾರೇಜಿನ ಹಿಂಭಾಗದಲ್ಲಿ ಕಟ್ಟಿರುವ ಈ ದೇವಸ್ಥಾನ ಕಾಣತೊಡಗಿದ್ದು, ಕೃಷ್ಣೆ ಪೂರ್ತಿ ಬರಿದಾದಾಗ ಮಾತ್ರ ಕಾಣುತ್ತದೆ ಈ ದೇವಸ್ಥಾನ. ವರ್ಷದಲ್ಲಿ ಒಂದು ಬಾರಿ ಇಲ್ಲವೇ, 2ವರ್ಷ, 3 ವರ್ಷಕ್ಕೆ ಒಮ್ಮೆ ಕಾಣಸಿಗುತ್ತದೆ.

Advertisement

ಹೀಗೆ ಬರಗಾಲ ಬಂದಾಗ ಮಾತ್ರ ಇದು ಗೋಚರಿಸುವುದರ ಜತೆಗೆ ಕೆಲವೇ ದಿನಗಳು ಪೂಜೆಗೊಳ್ಳುವ ವಿಶೇಷ ದೇವಸ್ಥಾನವಾಗಿದೆ. ದಿನ ದಿನಕ್ಕೆ ನೀರು ಕಡಿಮೆಯಾದಂತೆ ಗೋಚರಿಸುವ ಈ ದೇವಾಲಯವು ಪೂರ್ವಕ್ಕೆ ಮುಖ ಮಾಡಿ ಕಟ್ಟಲಾಗಿದೆ, ದೇವಾಲಯದ ಗರ್ಭಗುಡಿಯಲ್ಲಿ ಲಿಂಗವಿದೆ. ವಿಶಾಲವಾದ ಪಡಶಾಲೆ ಇದೆ. ಮೂರು ಕಮಾನುಗಳ ಪ್ರವೇಶ ದ್ವಾರವಿದ್ದು, ನದಿಯ ಕಡೆ ಒಂದು ಬಾಗಿಲು, ಅದಕ್ಕೆ ಎದುರುಗಡೆ ಮತ್ತೊಂದು ಬಾಗಿಲು, ಬೃಹತ್‌ ಆಕಾರದ ಕರಿಕಲ್ಲಿನಿಂದ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಯಾವುದೇ ವಾಸ್ತು ಶಿಲ್ಪವಾಗಲಿ ಕೆತ್ತನೆಯ ಕೆಲಸವಾಗಲಿ ಇಲ್ಲ. ಅದರೂ ಅದು ನೋಡುಗರನ್ನು ಆರ್ಕಸುವಂತಿದೆ.

ರಬಕವಿಯ ಮರೆಗುದ್ದಿ ಮನೆತನದ ಹಿರಿಯ ಅಜ್ಜ ಬಾಳಪ್ಪ ಮರೆಗುದ್ದಿ ಕಟ್ಟಿಸಿದ್ದು ಎಂದು ತಿಳಿದು ಬಂದಿದ್ದು, ಈಗಲೂ ಆ ದೇವಸ್ಥಾನಕ್ಕೆ ಬಾಳಪ್ಪನ ಗುಡಿ ಎಂದು ಕರೆಯಲಾಗುತ್ತದೆ. ಆದರೆ ಅದು ಈಶ್ವರ ದೇವಸ್ಥಾನ. ಮರೆಗುದ್ದಿ ಮನೆತನದವರು ಹೇಳುವ ಪ್ರಕಾರ ನಮ್ಮ ಮುತ್ಯಾಗ ಗಂಡು ಸಂತಾನ ಇರಲಿಲ್ಲ. ಇಬ್ಬರು ಹೆಣ್ಣು ಮಕ್ಕಳು ಅವರದು ಮದುವೆ ಆಗಿತ್ತು. ಬಾಳಪ್ಪ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ ಹಂಗ್‌ ಚಿಲ್ಲರೆ ನಾಣ್ಯಗಳಿಂದ ಸಾಕಷ್ಟು ಹಣ ಕೂಡಿಸಿದ್ದ. ಆ ಹಣ ಏನು ಮಾಡುವುದು ಎಂಬ ವಿಚಾರ ಹಿರಿಯರನ್ನು ಕೇಳಿದಾಗ ಅವರು ಕೃಷ್ಣಾ ನದಿಯ ದಡದಲ್ಲಿ ಒಂದು ಗುಡಿ ಇಲ್ಲ. ಅಲ್ಲಿ ಗುಡಿ ಕಟ್ಟಿಸಿದರ ಹೋಗಿ ಬರುವ ಜನಕ್ಕೆ ಪೂಜೆ ಮಾಡಲಿಕ್ಕೆ ಒಂದು ಜಾಗ ಆಗುತ್ತದೆ ಮತ್ತು ಇದರಿಂದ ಬಹಳ ಜನರಿಗೆ ಅನುಕೂಲ ಆಗುತ್ತದೆ. ಅದಕ್ಕೆ ಅಲ್ಲೇ ಗುಡಿ ಕಟ್ಟಿಸು ಎಂದು ಸಲಹೆ ಇತ್ತರು.

ಆಗ ಬನಹಟ್ಟಿ ಜಮಖಂಡಿ ಸಂಸ್ಥಾನಕ್ಕೆ ಸೇರಿದ್ದರೇ, ರಬಕವಿ ಸಾಂಗ್ಲಿ ಸಂಸ್ಥಾನಕ್ಕೆ ಸೇರಿತ್ತು. ಆಗಿನ ಸಾಂಗ್ಲಿ ಸಂಸ್ಥಾನದಿಂದ ದೇವಾಲಯ ಕಟ್ಟಲು ಪರವಾನಿಗೆ ಪಡೆದು 1912ರ ಸುಮಾರಿಗೆ ಈ ದೇವಾಲಯವನ್ನು ನಿರ್ಮಿಸಲಾಯಿತು. ಧಾರ್ಮಿಕ ಕಾರ್ಯವಾಗಿದ್ದರಿಂದ ನಮ್ಮ ಮುತ್ಯಾ ಯಾವುದಕ್ಕೂ ನನ್ನ ಹೆಸರು ಬೇಡ ಅಂದರು. ಈ ದೇವಾಲಯ ಕಟ್ಟಿಸಿದರ ಬಗ್ಗೆ ಸಾಂಗ್ಲಿಯಲ್ಲಿ ದಾಖಲೆಗಳು ಮೋಡಿ ಭಾಷೆಯೊಳಗೆ ನೋಡಲು ಸಿಗುತ್ತಾವೆ ಎನ್ನುತ್ತಾರೆ ಮರೆಗುದ್ದಿ ಮನೆತನದವರು.

ಮೊದಲು ನದಿಯ ವ್ಯಾಪ್ತಿ ಬಹಳ ಕಡಿಮೆ ಇದ್ದ ಕಾರಣ ದೇವಾಲಯ ನದಿಯ ದಡದಲ್ಲಿ ಇತ್ತು. ಆದರೆ 1971ರಲ್ಲಿ ವೀರೇಂದ್ರ
ಪಾಟೀಲ ಸರ್ಕಾರ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ ನಿರ್ಮಿಸಲು ಅನುಮತಿ ನೀಡಿದರೆ, 1973ರಲ್ಲಿ ದೇವರಾಜ ಅರಸು ಸರ್ಕಾರವಿದ್ದಾಗ ಪ್ರಥಮ ಬಾರಿಗೆ ನೀರನ್ನು ತಡೆ ಹಿಡಿಯಲಾಯಿತು. ಕಾರಣ ದೇವಾಲಯ ನೀರೊಳಗೆ ಮುಳುಗಿ ಹೋಯಿತು. ಈಗ ಅದೇ ನದಿಯ ಮಧ್ಯ ಭಾಗವಾಯಿತು. ನಿಜಕ್ಕೂ ಒಂದು ಅಪರೂಪದ ದೇವಸ್ಥಾನವಾಗಿರುವ ಇದು ಶತಮಾನಗಳು ಕಳೆದರೂ ಯಾವುದೇ ನೀರಿಗೂ ಗರ್ಭಗುಡಿಯಲ್ಲಿರುವ ಮೂರ್ತಿಗಳು ಜಗ್ಗದೇ ಆಲುಗಾಡದೇ ಹಾಗೇ ನಿಂತಿರುವುದು ವಿಶೇಷವಾಗಿದೆ.

Advertisement

ಸದ್ಯ ಒಂದು ಶತಮಾನದಷ್ಟು ಹಳೆಯದಾದ ಈ ದೇವಾಲಯ ಅನೇಕ ಬರಗಾಲ ಹಾಗೂ ಪ್ರವಾಹಗಳಿಗೆ ಮೂಖ ಸಾಕ್ಷಿಯಾಗಿ ನಿಂತಿದ್ದು, ಮತ್ತೇ ಸದ್ಯದಲ್ಲಿ ಕೃಷ್ಣೆಯ ಗರ್ಭದಲ್ಲಿ ಲೀನವಾಗಲಿದೆ.

*ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next