ಕಲಬುರಗಿ: ಭಾರತದ ದೇಶದಲ್ಲಿ ಅತ್ಯಂತ ಪ್ರಾಚೀನವಾಗಿರುವ ಜೈನ ಧರ್ಮವು ಭವ್ಯ ಪರಂಪರೆ ಹೊಂದಿದ್ದು, ಭಗವಾನ ಮಹಾವೀರರು ಸಾರಿದ ಈ ಧರ್ಮದ ಸತ್ಯ ಮತ್ತು ಅಹಿಂಸೆಯ ಸಂದೇಶ ಇಡೀ ಮಾನವ ಜನಾಂಗಕ್ಕೆ ದಾರಿದೀಪವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ರವಿವಾರ ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಭಗವಾನ ಮಹಾವೀರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಭಗವಾನ ಮಹಾವೀರರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಗವಾನ ಮಹಾವೀರರು ಭಾರತ ದೇಶದಾದ್ಯಂತ ಸಂಚರಿಸಿ ಮಾನವ ಜನಾಂಗದ ರ್ಥಕ ಬದುಕಿಗಾಗಿ ವ್ಯಾಮೋಹ ತ್ಯಜಿಸಿ ಸತ್ಯ ಮತ್ತು ಅಹಿಂಸೆ ಸನ್ಮಾರ್ಗದಲ್ಲಿ ನಡೆಯಬೇಕೆಂಬ ಸಂದೇಶ ಸಾರಿದರು. ಭಾರತದ ಅತಿ ಶ್ರೇಷ್ಠ ದಾರ್ಶನಿಕರಲ್ಲಿ ಭಗವಾನ್ ಮಹಾವೀರರು ಮತ್ತು ಬುದ್ಧ ಅವರು ತಮ್ಮ ಅನುಭವಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಿದ್ದಾರೆ ಎಂದರು.
ಇದರೊಂದಿಗೆ ವಿಶ್ವಾಸಾರ್ಹತೆಯ ಬದುಕಿನ ಮತ್ತು ಸಕಲ ಜೀವಿಗಳನ್ನು ಪ್ರೀತಿಸುವ ಮತ್ತು ಗೌರವಿಸುವ ಸಂದೇಶ ತಲುಪಿಸುವ ಕಾರ್ಯವನ್ನು ಕೈಗೊಂಡಿದ್ದಾರೆ. ಇವರ ಸಂದೇಶಗಳನ್ನು ಸ್ಮರಿಸುವುದರೊಂದಿಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾಗದರ್ಶನದಂತೆ ನಡೆಯುವ ಪ್ರಾಮಾಣಿಕ ಯತ್ನ ಮಾಡುವುದೇ ಈ ಜಯಂತ್ಯುತ್ಸವದ ಆಶಯವಾಗಿದೆ ಎಂದು ಹೇಳಿದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಜೈನ್ ಅಸೋಶಿಯೇಶನ್ ಗ್ರೂಪ್ ಅಧ್ಯಕ್ಷ ಶ್ರೇಯಾನ್ಸ್ ಕೋಠಾರಿ, ಸರಾಫ್ ಬಜಾರದ ಮಹಾವೀರ ದಿಗಂಬರ್ ಜೈನ ಮಂದಿರದ ಅಧ್ಯಕ್ಷ ಚಂದ್ರಮೋಹನ ಶಾಹ, ಶ್ರೀ ಸಂಕೇಶ್ವರ ಪಾರ್ಶ್ವನಾಥ ಜೈನ ಶ್ವೇತಾಂಬರ್ ಸಂಘದ ಅಧ್ಯಕ್ಷ ಸೂರ್ಯಪ್ರಕಾಶ ಸಿಂಘಿ, ಚಕ್ಕರ ಕಟ್ಟಾದ ಮಹಾವೀರ ದಿಗಂಬರ್ ಜೈನ ಮಂದಿರದ ಅಧ್ಯಕ್ಷ ನಾಗನಾಥ ಚಿಂದೆ, ಜೈನ್ ಮಿಲನ್ ಅಧ್ಯಕ್ಷ ರತನಚಂದ ಕಾಸರ್, ಚುನಾವಣಾ ತಹಶೀಲ್ದಾರ ಡಿ.ದಯಾನಂದ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು.
ಸೊಲ್ಲಾಪುರ ವಾಲ್ಚಂದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ| ಮಹಾವೀರ ಶಾಸ್ತ್ರೀ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು. ಕಲಾವಿದ ರಾಘವೇಂದ್ರ ಬಡಶೇಷಿ ಭಗವಾನ ಮಹಾವೀರರ ಸಂದೇಶ ಸಾರುವ ಭಕ್ತಿಗೀತೆಗಳನ್ನು ಹಾಡಿದರು.
ರವೀಂದ್ರ ಕುಲಕರ್ಣಿ ತಬಲಾ ಮತ್ತು ವಿಷ್ಣು ಬಡಸೇಷಿ ಹಾರ್ಮೋನಿಯಂ ಸಾಥ್ ನೀಡಿದರು. ಇದಕ್ಕೂ ಮುನ್ನ ಅಂದು ಬೆಳಗ್ಗೆ ಭಗವಾನ ಮಹಾವೀರರ ಭಾವಚಿತ್ರದ ಬೃಹತ್ ಮೆರವಣಿಗೆಯು ತಮಟೆ ಮತ್ತು ಡೊಳ್ಳು ಕುಣಿತ ಜಾನಪದ ಕಲಾ ತಂಡಗಳೊಂದಿಗೆ ಕಲಬುರಗಿಯ ಚೌಕ್ ಪೊಲೀಸ ಠಾಣೆ, ಚಕ್ಕರ ಕಟ್ಟಾ, ಸರಾಫ್ ಬಜಾರ್ ಮೂಲಕ ಗಾಜಿಪುರ ಜೈನ್ ಮಂದಿರದವರೆಗೆ ಆಗಮಿಸಿತು.