Advertisement

Maharaja Trophy: ಶಿವಮೊಗ್ಗಕ್ಕೆ ಗೆಲುವಿನ ಹ್ಯಾಟ್ರಿಕ್‌

12:18 AM Aug 18, 2023 | Team Udayavani |

ಬೆಂಗಳೂರು: “ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20′ ಪಂದ್ಯಾವಳಿಯಲ್ಲಿ ಶಿವಮೊಗ್ಗ ಲಯನ್ಸ್‌ ಹ್ಯಾಟ್ರಿಕ್‌ ಜಯದೊಂದಿಗೆ ಘರ್ಜಿಸಿದೆ. ಗುರುವಾರದ ಮೊದಲ ಪಂದ್ಯದಲ್ಲಿ ಅದು ಹಾಲಿ ಚಾಂಪಿಯನ್‌ ಗುಲ್ಬರ್ಗ ಮಿಸ್ಟಿಕ್ಸ್‌ಗೆ 3 ವಿಕೆಟ್‌ಗಳ ಸೋಲುಣಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ವಿಜಯ್‌ ಕುಮಾರ್‌ ವೈಶಾಖ್‌ ಸಾರಥ್ಯದ ಗುಲ್ಬರ್ಗ 6 ವಿಕೆಟಿಗೆ 175 ರನ್ನುಗಳ ಬೃಹತ್‌ ಮೊತ್ತವನ್ನೇ ಪೇರಿಸಿತ್ತು. ಶಿವಮೊಗ್ಗ ತೀವ್ರ ಕುಸಿತದ ಬಳಿಕವೂ ದಿಟ್ಟ ಹೋರಾಟ ನಡೆಸಿ 19.5 ಓವರ್‌ಗಳಲ್ಲಿ 7 ವಿಕೆಟಿಗೆ 179 ರನ್‌ ಬಾರಿಸಿತು. ಇದು ಗುಲ್ಬರ್ಗಕ್ಕೆ ಎದುರಾದ ಹ್ಯಾಟ್ರಿಕ್‌ ಸೋಲಿನ ಆಘಾತ.

ಚೇಸಿಂಗ್‌ ವೇಳೆ ಶಿವಮೊಗ್ಗ 4.3 ಓವರ್‌ಗಳಾಗುವಷ್ಟರಲ್ಲಿ 39 ರನ್ನಿಗೆ 5 ವಿಕೆಟ್‌ ಉದುರಿಸಿ ಕೊಂಡಿತ್ತು. ಸೋಲು ಖಚಿತವಾಗಿತ್ತು. ಆದರೆ ನಾಯಕ ಶ್ರೇಯಸ್‌ ಗೋಪಾಲ್‌ (52), ಅಭಿನವ್‌ ಮನೋಹರ್‌ (28), ಎಸ್‌. ಶಿವರಾಜ್‌ (ಔಟಾಗದೆ 27) ಮತ್ತು ಎಸ್‌.ಎಸ್‌. ಶರತ್‌ (ಔಟಾಗದೆ 31) ಅವರ ಅಮೋಘ ಬ್ಯಾಟಿಂಗ್‌ ಸಾಹಸದಿಂದ ಗುಲ್ಬರ್ಗ ಮೇಲೆ ತಿರುಗಿ ಬಿತ್ತು.

ಶಿವರಾಜ್‌-ಶರತ್‌ ಮುರಿಯದ 8ನೇ ವಿಕೆಟಿಗೆ 2.4 ಓವರ್‌ಗಳಿಂದ 39 ರನ್‌ ಸೂರೆಗೈದು ತಂಡಕ್ಕೆ ಅಮೋಘ ಜಯವನ್ನು ತಂದಿತ್ತರು. ಶರತ್‌ ಅವರಂತೂ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಕೇವಲ 11 ಎಸೆತಗಳಿಂದ 31 ರನ್‌ ಸಿಡಿಸಿದರು (2 ಬೌಂಡರಿ, 3 ಸಿಕ್ಸರ್‌). ಗುಲ್ಬರ್ಗ ಪರ ಆರಂಭಕಾರ ಆದರ್ಶ್‌ ಪ್ರಜ್ವಲ್‌ ಸರ್ವಾಧಿಕ 43, ಸ್ಮರಣ್‌ ಆರ್‌. 40 ರನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next