Advertisement

ವಚನಗಳಿಗೆ ಬೀಗ ಹಾಕಿ ಮಠಾಧಿಪತಿಗಳ ರಾಜಕೀಯ

03:28 PM Oct 12, 2021 | Team Udayavani |

ಕೋಲಾರ: ಬಸವಣ್ಣ ಧರ್ಮವನ್ನು ಸ್ಥಾಪಿಸಲಿಲ್ಲ, ಅವರ ವಚನಗಳೇ ಹೋರಾಟವಾಗಿದ್ದವು, ಈಗ ಅದಕ್ಕೆ ಬೀಗ ಹಾಕಿ ಮಠ ಸ್ಥಾಪಿಸಿ ಪೀಠಾಧಿಪತಿಯಾದವರು ಚುನಾವಾಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ಚುನಾವಣೆಗೆ ನಿಲ್ಲುವುದೊಂದು ಬಾಕಿ ಇದೆ ಎಂದು ಮಾಜಿ ಸ್ಪೀಕರ್‌, ಶಾಸಕ ರಮೇಶ್‌ ಕುಮಾರ್‌ ಮಠಾಧಿಪತಿಗಳ ರಾಜಕೀಯವನ್ನು ಲೇವಡಿ ಮಾಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಅನುಜಯ ಪ್ರಕಾಶನ, ಎಸ್‌.ಎಲ್‌.ಎನ್‌ ಪಬ್ಲಿಕೇಷನ್‌ ಹಾಗೂ ಜಿಲ್ಲಾ ಜಾನಪದ ಪರಿಷತ್‌ನಿಂದ ಪ್ರಾಧ್ಯಾಪಕ ಡಾ.ಆರ್‌.ಶಂಕರಪ್ಪ ರಚಿಸಿರುವ ಮರೆಯಲಾಗದ ಮಹಾನ್‌ ನಾಯಕ, ಮುಕ್ತ ವ್ಯಾಪಾರ ಮತ್ತು ಭಾರತದ ವಿದೇಶಾಂಗ ನೀತಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಮೌಲ್ಯ ಮಾಯ: ಬರೀ ಘೋಷಣೆ, ಭಾವೋಧ್ವೇಗ, ಸದಾಕಾಲ ಜನರನ್ನು ಆತಂಕಕ್ಕೆ ದೂಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದರಿಂದ ದೇಶದ ಉದ್ಧಾರವಾಗದು, ದೇಶಕ್ಕಾಗಿ ತ್ಯಾಗಬಲಿದಾನ ಮಾಡಿದ, ಸ್ವಾರ್ಥವನ್ನು ತೊರೆದಿದ್ದ ನಾಯಕರನ್ನು ಮಹಾನ್‌ ನಾಯರೆಂದು ಬಣ್ಣಿಸುತ್ತೇವೆ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳಲ್ಲಿ ಈ ದೇಶದ ನಾಯಕರ ಸಾಮಾಜಿಕ ಮೌಲ್ಯಗಳನ್ನು ಹೊಂದಿದ್ದರು. ಆದರೆ, ಈಗ ಅಧಿಕಾರಿ, ಜನಪ್ರತಿನಿಧಿಗಳ ಹೊಟ್ಟೆ, ಹೃದಯ ಮತ್ತು ತಲೆಯಲ್ಲಿ ವ್ಯಾಪಾರವೇ ತುಂಬಿಕೊಂಡಿದೆ ಎಂದು ವ್ಯಂಗ್ಯವಾಡಿದರು.

ಅಂತಃಕರಣ ಒಂದೆ: ಮಹಾನ್‌ ನಾಯಕರ ಪುಸ್ತಕದಲ್ಲಿ ಬಣ್ಣಿಸಿರುವ ಗಾಂಧೀಜಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಮತ್ತು ಅಂಬೇಡ್ಕರ್‌ ಅವರ ಮಾತುಗಳ ಪದಕೋಶ ಬೇರೆಯಾಗಿದ್ದರೂ, ಈ ನಾಯಕರ ಹಿನ್ನೆಲೆ ಬೇರೆಯಾಗಿದ್ದರೂ ಅಂತಃಕರಣ ಒಂದೇ ಆಗಿತ್ತು ಎಂದು ವಿವರಿಸಿದರು. ಅಗರ್ಭ ಶ್ರೀಮಂತರಾಗಿದ್ದ ಮಾಜಿ ಪ್ರಧಾನಿ ಜವಾ ಹರಲಾಲ್‌ ನೆಹರು ಅವರಿಗೆ ಹಸಿವಿನ ನೋವು ತಿಳಿದಿ ದ್ದರೂ ಶೋಷಿತ ಸಮಾಜದ ಬದುಕಿನ ಆತಂಕಗಳನ್ನು ಅರಿತಿದ್ದರೂ ಅದರಿಂದಾಗಿಯೇ ಅವರು ದೇಶದ ಮಹಾನ್‌ ನಾಯಕರಲ್ಲಿ ಒಬ್ಬರೆನಿಸಿಕೊಂಡರು ಎಂದು ಹೇಳಿದರು.

ಇದನ್ನೂ ಓದಿ:- ವೀರಶೈವ ಧರ್ಮಕ್ಕೆ ಶಿವಾಗಮಗಳೇ ಮೂಲ

Advertisement

 ಸಾಲ ಮಾಡದಂತ ಸ್ವಾಭಿಮಾನಿ: ಗಾಂಧೀಜಿ ತನ್ನ ತತ್ವಗಳಿಗೆ ವಿರುದ್ಧವಾಗಿ ಬದುಕಿದ ಮಗನನ್ನೇ ದೂರವಿಟ್ಟಿದ್ದರು, ಅಂಬೇಡ್ಕರ್‌ ಮಗ ಸತ್ತಾಗ ಹೊದಿಸಲು ಬಟ್ಟೆ ಇರಲಿಲ್ಲ, ಶಾಸ್ತ್ರೀಜಿಯವರ ಮಗಳ ಚಿಕಿತ್ಸೆಗೆ ಹಣವಿರಲಿಲ್ಲವಾದರೂ ಸಾಲ ಮಾಡದಂತಹ ಸ್ವಾಭಿಮಾನಿಯಾಗಿದ್ದರೆಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಾಡೋಜ ಡಾ.ವೊಡೆ ಪಿ.ಕೃಷ್ಣ, ಅಂಬೇ ಡ್ಕರ್‌ ಅವರನ್ನು ಮಹಿಳಾ ದಿನದಂದೇ ನೆನಪಿಸಿಕೊಳ್ಳ ಬೇಕು, ಏಕೆಂದರೆ ಹೆಣ್ಣು ಮಕ್ಕಳಿಗೆ ಅಧಿಕಾರ ನೀಡಿದ್ದಾರೆ, ಅಂಬೇಡ್ಕರ್‌ ಪ್ರತಿ ಭಾರತೀಯನಿಗೆ ಸೇರಿದ್ದರೂ ದಲಿತ ವರ್ಗಕ್ಕೆ ಸೀಮಿತಗೊಳಿಸುವುದು ದುರ್ದೈವದ ಸಂಗತಿಯಾಗಿದೆ. ಗಾಂಧಿಜೀಯನ್ನು ಪಕ್ಷದ ದೃಷ್ಟಿಕೋನದಿಂದ ನೋಡದೇ, ವ್ಯಕ್ತಿತ್ವ ಆದರ್ಶ ನೋಡುವ ಮೂಲಕ ನಾವು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

 ಒಂದು ಜಾತಿಗೆ ಕಟ್ಟಿ ಹಾಕಬೇಡಿ: ಮಹನೀಯರಾದ ಕುವೆಂಪು, ಬಸವಣ್ಣ ವಿಶ್ವಮಾನವರು. ಅವರನ್ನು ಒಂದು ಜಾತಿಗೆ ಕಟ್ಟಿಹಾಕುವ ಕೆಲಸ ಆಗುತ್ತಿದೆ. ಗಾಂಧಿಜೀ ಬಿಟ್ಟು ಭಾರತ ಇಲ್ಲ ಭಾರತ ಬಿಟ್ಟು ಗಾಂಧಿ ಇಲ್ಲ ಗಾಂಧೀಜಿ ವಿಷಯದಲ್ಲಿ ಸತ್ಯಕ್ಕಿಂತ ಸುಳ್ಳು ಹೇಳಿ ಒಂದೆರಡು ಚುನಾವಣೆ ಗೆಲ್ಲಬಹುದು. ಆದರೆ, ನಾಟಕ ಬಹುದಿನ ಉಳಿಯುವುದಿಲ್ಲ, ಜನ ಹಣದ ಹಿಂದೆ ಹೋಗುತ್ತಿಲ್ಲ, ಅಧಿಕಾರದ ಹಿಂದೆ ಹೋಗುತ್ತಿದ್ದಾರೆ.

ಅಧಿಕಾರ ಬಂದರೆ ಹಣ ಬರುತ್ತದೆ, ಓಟಿನ ರಾಜಕಾರಣ ನಡೆಯುತ್ತಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಉತ್ತರ ನೀಡುವ ಶಕ್ತಿ ಜನರಿಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃತಿಯ ಲೇಖಕ ಡಾ.ಆರ್‌.ಶಂಕರಪ್ಪ, ಸ್ಪರ್ಧಾತ್ಮಕ ಪುಸ್ತಕದ ಜತೆಗೆ ಆಧುನಿಕ ಯುಗದಲ್ಲಿ ಮರೆಯ ಲಾಗದ ನಾಯಕರನ್ನು ಪರಿಚರಿಯಿಸುವ ಕೆಲಸ ಮಾಡುತ್ತಾ ಇದ್ದೇನೆ, ಗಾಂಧೀಜಿ, ಶಾಸ್ತ್ರಿ, ಪಟೇಲ್‌, ಅಂಬೇಡ್ಕರ್‌, ತತ್ವ ಅಳವಡಿಸಿಕೊಂಡಾಗ ಪ್ರಜಾಪ್ರಭುತ್ವ ಸದೃಢಗೊಳಿಸಬಹುದು ಎಂದು ಹೇಳಿದರು. ತತ್ವವನ್ನು ಸಮಾಜಕ್ಕೆ ತಿಳಿಸಿ ವರ್ಗಕ್ಕೆ ಸೀಮಿತ ಗೊಳಿಸಬಾರದು ಪ್ರಜ್ಞೆ ಮೂಡಿಸುವ, ದೇಶೀಯ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ತಮ್ಮ ಚಿಂತನೆಗಳನ್ನು ಪುಸ್ತಕ ರೂಪದಲ್ಲಿ ಇಳಿಸಿದ್ದೇನೆ.

ಪುಸ್ತಕದಿಂದ ಸಿಗುವ ಹಣವನ್ನು ರೈತರ ಮಕ್ಕಳ ಹಾಗೂ ಸೈನಿಕರ ಮಕ್ಕಳ ಶಿಕ್ಷಣಕ್ಕೆ ಬಳಸುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್‌, ವೇಣು ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್‌ .ಬಿ.ಗೋಪಾಲಗೌಡ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಪ್ರೊ.ಎ.ವಿ.ರೆಡ್ಡಿ ಅಧ್ಯಕ್ಷತೆ ವಹಿಸಿ ದ್ದರು. ಶಿಕ್ಷಕಿ ಭವಾನಿ ಪ್ರಾರ್ಥಿಸಿದರು. ಪ್ರಾಧ್ಯಾಪಕ ನರೇಂದ್ರ ಸ್ವಾಗತಿಸಿದರು.

ಗಾಂಧಿಯಿಂದ ದೇಶ ವಿಭಜನೆ ಆಯ್ತು ಎಂಬುದು ಸುಳ್ಳು ಗಾಂಧೀಜಿಯಿಂದ ದೇಶ ವಿಭಜನೆ ಆಯಿತು ಎಂಬುದು ಸುಳ್ಳು, ಇಂತಹ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದೆ. ಗಾಂಧಿಯನ್ನು ಓದಿ ಪ್ರಶ್ನಿಸಿ, ಉತ್ತರಿಸಿ ಅದು ಬಿಟ್ಟು, ಓದದೆ ಉತ್ತರ ನೀಡಲು ಹೋಗಬೇಡಿ ಎಂದು ಯುವಕರಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಮನವಿ ಮಾಡಿದರು.

 ಸಂವಿಧಾನ ರಚನೆ ಓದಿ: ಇವತ್ತು ಮತ ಭೇದ ಬಿಟ್ಟು ಮನ ಭೇದದ ವಿಷ ಕಾಡುತ್ತಿದೆ, ಗಾಂಧೀಜಿಯವರ ನಡೆ, ವಿವೇಕಾನಂದರ ನುಡಿ ನಮಗೆ ಸ್ಫೂರ್ತಿ. ಅಂಬೇಡ್ಕರ್‌ ಎಲ್ಲವನ್ನೂ ಧಾರೆ ಎರೆದು ದೇಶಕ್ಕೆ ಸಂವಿಧಾನ ನೀಡಿದ್ದಾರೆ. ಶಾಸನ ಸಭೆಗಳಿಗೆ, ಸಂಸತ್‌ಗೆ ಹೋಗುವವರು ಸಂವಿಧಾನ ರಚನೆ ಸಂದರ್ಭದಲ್ಲಿ ನಡೆದ ಚರ್ಚೆ ಬಗ್ಗೆ ಓದಿದರೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ವಿವರಿಸಿದರು.

ವಿಶ್ವನಾಥ್‌ಗೆ ತಲೆಕೆಟ್ಟಿದೆ, ಹುಚ್ಚ: ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಕೋಲಾರ: ತಮ್ಮ ವಿರುದ್ಧ ಅರಣ್ಯ ಭೂಮಿ ಕಬಳಿಕೆ ಆರೋಪ ಮಾಡಿರುವ ಮಾಜಿ ಸಚಿವ, ಎಂಎಲ್ಸಿ ಎಚ್‌.ವಿಶ್ವನಾಥ್‌ ತಲೆ ಕೆಟ್ಟಿದೆ ಆತ, ಹುಚ್ಚ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಕೆಂಡಾಮಂಡಲವಾದರು. ಮೈಸೂರಿನಲ್ಲಿ ಎಚ್‌.ವಿಶ್ವನಾಥ್‌ ತಮ್ಮ ವಿರುದ್ಧ ಮಾಡಿರುವ ಅರಣ್ಯ ಭೂಮಿ ಕಬಳಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ ಬಿಜೆಪಿ ಎಂಎಲ್‌ಸಿ ಎಚ್‌.ವಿಶ್ವನಾಥ್‌ ವಿರುದ್ಧ ಹರಿಹಾಯ್ದರು.

ಅರಣ್ಯ ಭೂಮಿ ಒತ್ತುವರಿ ಪ್ರಕರಣ ಹೈಕೋರ್ಟ್‌ವರೆಗೂ ಹೋಗಿ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೇನ್‌ ತಲೆ ಕೆಟ್ಟಿದ್ಯಾ. ಜ್ಞಾಪಕ ಶಕ್ತಿ ಇಲ್ಲದೆ ಮತ್ಸರದಿಂದ ಆತ ಸಾಯ್ತಾ ಇದ್ದರೆ ನಾನ್‌ ಏನ್‌ ಮಾಡ್ಲಿ. ಒಂದು ಪಕ್ಷದ ಅಧ್ಯಕ್ಷರಾಗಿದ್ದವರಿಗೆ ಬುದ್ಧಿ ಇಲ್ವಾ, ಕನಿಷ್ಠ ಜ್ಞಾನ ಇಲ್ಲವಾ, ಬುದ್ಧಿ ಹಾಳಾಗಿ, ಹೊಟ್ಟೆಗೆ ಎನ್‌ ತಿಂತಾ ಇದ್ದೇವೆ ಎಂದು ಗೊತ್ತಿಲ್ಲ ಅಂದ್ರೆ ಹೇಗೆ. ಕೋಟ್‌ ìಲ್ಲಿ ಇತ್ಯರ್ಥವಾಗಿದೆ, ಆತನಿಗೇನ್‌ ಹೇಳ್ತಾನೆ ಹುಚ್ಚ, ನಿಮಗೇನ್‌ ಬುದ್ಧಿ ಇಲ್ವಾ. ಬೇಕಾದ್ರೆ ಸುಪ್ರೀಂ ಕೋರ್ಟ್‌ಗೆ ಬೇಕಾದ್ರೆ ಹೋಗಲಿ ಬಿಡಿ ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next