Advertisement

Venoor ಬಾಹುಬಲಿಗೆ ಮಹಾಮಜ್ಜನ ಆರಂಭ: ಇಂದು ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಟಿ

12:03 AM Feb 23, 2024 | Team Udayavani |

ಬೆಳ್ತಂಗಡಿ: ಪೂರ್ಣ ಚಂದ್ರನನ್ನು ಹೋಲುವ ಹಸನ್ಮುಖೀ ತ್ಯಾಗಿ ಭಗವಾನ್‌ ಬಾಹುಬಲಿಯ ವರ್ಣಮಯವಾದ ಮಹೋನ್ನತ ಮಹಾಮಜ್ಜನವು 12 ವರುಷಗಳ ಬಳಿಕ ಗುರುವಾರ ವೇಣೂರನ್ನು ಶೋಭಾಯಮಾನವಾಗಿಸಿತು.

Advertisement

ವೇಣೂರಿನಲ್ಲಿ ಅಜಿಲ ಮನೆತನ ದವರು ಸ್ಥಾಪಿಸಿದ 35 ಅಡಿ ಎತ್ತರದ ಗೊಮ್ಮಟನಿಗೆ ಈ ಶತಮಾನದ 3ನೇ ಮಹಾ ಮಜ್ಜನ ಕಣ್ತುಂಬಿ ಕೊಳ್ಳುವ ಸದವಕಾಶ ಭಕ್ತಜನರಿಗಾಯಿತು.

ಜಲಾಭಿಷೇಕ ದಿಂದ ಮೊದಲ್ಗೊಂಡು ಎಳನೀರು, ಇಕ್ಷುರಸ, ಕ್ಷೀರ, ಕಲ್ಕ ಚೂರ್ಣ, ಅರಶಿನ, ಗಂಧ, ಚಂದನ ಮತ್ತಿತರ ಮಂಗಲ ದ್ರವ್ಯ ಅಭಿಷೇಕ ಮಾಡಲಾಯಿತು.

ಪರಮ ಪೂಜ್ಯ 108 ಶ್ರೀ ಅಮೋಘಕೀರ್ತಿ ಮಹಾರಾಜರು ಮತ್ತು ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಗುರುವಾರ ಮೂಡುಬಿದಿರೆ ಜೈನಮಠದ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಮ್ಮುಖ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ, ಅಳದಂಗಡಿ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರ ನೇತೃತ್ವದಲ್ಲಿ ಮಹಾಮಜ್ಜನವು ನಡೆದಾಗ “ಭಗವಾನ್‌ ಬಾಹುಬಲಿ ಸ್ವಾಮೀಕಿ ಜೈ’ ಘೋಷಣೆ ಮುಗಿಲು ಮುಟ್ಟಿತು.

ಬಾಹುಬಲಿಯ ಅಭಿಷೇಕಕ್ಕೆ ಕಾಶ್ಮೀರದ ಕೇಸರಿ, ಮೈಸೂರು -ತುಮಕೂರಿನಿಂದ ತಂದ ಗಂಧ, ಚಂದನ ಸಹಿತ ಮಜ್ಜನದ ದ್ರವ್ಯಗಳು ಸಿದ್ಧವಾಗಿದ್ದವು. ವಿರಾಟ್‌ ವಿರಾಗಿಯ ಮೂರ್ತಿಯು 35 ಅಡಿ ಎತ್ತರವಿದ್ದರೆ ಮಜ್ಜನಕ್ಕೆ 45 ಅಡಿ ಎತ್ತರದ ಅಟ್ಟಳಿಗೆಯನ್ನು ಸಿದ್ಧಪಡಿಸಲಾಗಿದೆ. 108 ಕಲಶಗಳನ್ನು ವಿಧಿಪೂರ್ವಕವಾಗಿ ರಚಿಸಿದ ಮಂಡಲದಲ್ಲಿ ಇರಿಸಿ ಪುರೋ ಹಿತರು ನೆರವೇರಿಸಿದ ಮಂತ್ರೋಕ್ತ ವಿಧಿವಿಧಾನಗಳ ಬಳಿಕ ಜಲ ಕಲಶದೊಂದಿಗೆ ಮಹಾಮಜ್ಜನ ಆರಂಭವಾಯಿತು.

Advertisement

ವಿದ್ಯುದ್ದೀಪ, ಪುಷ್ಪಗಳಿಂದ ಅಲಂಕೃತವಾದ ಸುಂದರ ಪ್ರಭಾವಳಿಯುಳ್ಳ ಅಟ್ಟಳಿಗೆಯ ಮೇಲು¤ದಿಯಲ್ಲಿ ನಿಂತು ವಿಶ್ವವಂದ್ಯನಿಗೆ ಮೊತ್ತಮೊದಲ ಕಲಶದಿಂದ ಅಜಿಲ ಅರಸರ ವಂಶಸ್ಥರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಅಭಿಷೇಕ ನೆರವೇರಿಸಿದರು. ಮಹೋನ್ನತ ಮೂರ್ತಿಯ ನೆತ್ತಿಯ ಮೇಲೆ ಅಜಿಲರು ಹಾಗೂ ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಕಲಶ ಜಲವನ್ನು ಧಾರೆ ಎರೆಯುತ್ತಿದ್ದಂತೆ ನೆರೆದಿದ್ದ ಜಿನಭಕ್ತರಲ್ಲಿ ಧನ್ಯತಾಭಾವ ಮೂಡಿತು. ಅಜಿಲ ಕುಟುಂಬಸ್ತರಾದ ಮಧುರಾ, ಪುಷ್ಪಲತಾ, ನೀತಿ ನಿಖೀಲ್‌, ಡಾ| ಪ್ರತೀತ್‌, ಡಾ| ದಿವ್ಯಾ, ಡಾ|ಪ್ರೌಷ್ಟಿಲ್‌ ಅಜಿಲ, ಶಿವಪ್ರಸಾದ್‌ ಅಜಿಲ, ರೇಖಾ ಅಜಿಲಾ, ದಿಶಾ, ಅಕ್ಷಯ್‌ ರಾಜ್‌ ಮಂಗಳೂರು, ಧೃತಿ ಅಜಿಲ ಕುಟುಂಬಸ್ಥರು ಮೊದಲ ದಿನದ ಸೇವಾಕರ್ತರಾಗಿ ಅಭಿಷೇಕ ಸಮರ್ಪಿಸಿದರು. ಪ್ರವೀಣ್‌ ಅಜ್ರಿ ಕುಕ್ಕೇಡಿ ಗುತ್ತು ಅಭಿಷೇಕದ ಪೂರ್ಣ ಉಸ್ತುವಾರಿ ವಹಿಸಿದ್ದರು.

ಇಂದು ಮಧ್ಯಾಹ್ನ ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಟಿ
ಇಂದಿನ ಮಹಾಮಜ್ಜನ ಸೇವಾಕರ್ತರಾದ ವಿ. ಪ್ರವೀಣ್‌ ಕುಮಾರ್‌ ಇಂದ್ರ ಅವರಿಂದ ಫೆ. 23ರಂದು ಹೆಲಿಕಾಪ್ಟರ್‌ ಮೂಲಕ ಮಧ್ಯಾಹ್ನ 1 ಗಂಟೆಗೆ ಪುಷ್ಪವೃಷ್ಟಿ ನೆರವೇರಲಿದೆ.

ದೇಶದಲ್ಲಿ ಧರ್ಮ, ಸಂಸ್ಕಾರದ ಸಮಾಜ ಸಾಕಾರ : ಶ್ರೀ ಅಮೋಘಕೀರ್ತಿ ಮಹಾರಾಜರು

ಮಹಾ ಮಸ್ತಕಾಭಿಷೇಕದ ಮುಖಾಂತರ ದೇಶದಲ್ಲಿ ಧರ್ಮ ಮಯ ಹಾಗೂ ಸಂಸ್ಕಾರಯುತ ಸಮಾಜ ಬೆಳೆಯಲಿ. ಯುವಕರಲ್ಲಿ ಧರ್ಮಜಾಗೃತಿಯ ಕಾರ್ಯ ನಡೆದು ಶಾಂತಿ ಸಾಮರಸ್ಯದ ಜೈನ ಧರ್ಮವು ಜಗತ್ತಿನಲ್ಲಿ ಪಸರಿಸಲಿ ಎಂದು ಯುಗಳ ಮುನಿಶ್ರೀಗಳಾದ 108 ಶ್ರೀ ಅಮೋಘಕೀರ್ತಿ ಮಹಾರಾಜರು ಆಶೀರ್ವದಿಸಿದರು.

ವೇಣೂರು ಭಗವಾನ್‌ ಶ್ರೀ ಬಾಹುಬಲಿಸ್ವಾಮಿಗೆ ಆಯೋಜನೆ ಗೊಂಡಿರುವ ಮಹಾ ಮಸ್ತಕಾಭಿಷೇಕ ಮಹೋತ್ಸವದ ಗುರುವಾರ ನಡೆದ ಉದ್ಘಾಟನ ಸಮಾರಂಭದಲ್ಲಿ ಅವರು ಅಶೀರ್ವಚನವಿತ್ತರು.

ಒಂದೇ ಆಸನದಲ್ಲಿ ನಿಂತುಕೊಂಡು, ಒಂದು ವರ್ಷ, ಗಾಳಿ ಮಳೆ ಚಳಿ ಲೆಕ್ಕಿಸದೆ ಆಹಾರವನ್ನೇ ಸೇವಿಸದೆ ನಿಶ್ಚಲವಾಗಿ ಯೋಗಿಹಠದ ಮೂಲಕ ಧ್ಯಾನ ನಡೆಸಿ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಭಗವಾನ್‌ ಬಾಹುಬಲಿ ಸ್ವಾಮಿಯು ಇತಿಹಾಸ ದಲ್ಲೇ ಪ್ರಥಮ ಮಹಾ ಪುರುಷ ಎಂಬ ಗೌರವಕ್ಕೆ ಪಾತ್ರ ರಾಗಿದ್ದಾರೆ. ಅಂತಹ ಬಾಹುಬಲಿಗೆ ನಡೆ ಯುವ ಮಹಾ ಮಸ್ತಕಾಭಿ ಷೇಕದಲ್ಲಿ ನಾವೆಲ್ಲ ಪಾಲ್ಗೊಂಡಿ  ದ್ದು ಸೌಭಾಗ್ಯ ಎಂದರು.

ಬಾಹುಬಲಿಯಿಂದ ವಿಶ್ವಶಾಂತಿ ಸಂದೇಶ
108 ಶ್ರೀ ಅಮರಕೀರ್ತಿ ಮುನಿ ಮಹಾರಾಜರು ಆಶೀರ್ವಚನ ನೀಡಿ, 365 ದಿನ ಅನ್ನ ಆಹಾರವಿಲ್ಲದೆ ತ್ಯಾಗ, ತಪಸ್ಸಿನ ಮೂಲಕವೇ ಜಗತ್ತಿಗೆ ಶಾಂತಿ, ಅಹಿಂಸೆಯ ಸಂದೇಶ ಸಾರಿದ ಬಾಹುಬಲಿ ಮಾನವ ಜೀವನಕ್ಕೆ ಆದರ್ಶ. ಇನ್ನೊಬ್ಬರಿಗೆ ತೊಂದರೆ ಆಗದಂತೆ ಬದುಕಿದರೆ ಮನುಷ್ಯ ಶಾಂತಿ, ಅಹಿಂಸೆಯಲ್ಲಿ ಬದುಕಲು ಸಾಧ್ಯವಿದೆ ಎಂದು ಹೇಳಿದರು.

ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್‌ ಪೂಂಜ, ಈ ಪುಣ್ಯ ಕಾರ್ಯದಲ್ಲಿ ಸರ್ವರೂ ಭಾಗವಹಿಸೋಣ ಎಂದರು.

ಮಹಾಮಸ್ತಕಾಭಿಷೇಕದ ಪ್ರಧಾನ ಸಂಚಾಲಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೆàಂದ್ರ ಕುಮಾರ್‌, ಮಾಜಿ ಸಚಿವರಾದ ಬಿ.ರಮನಾಥ ರೈ, ಅಭಯಚಂದ್ರ ಜೈನ್‌, ವೇಣೂರು ಗ್ರಾ. ಪಂ. ಅಧ್ಯಕ್ಷ ನೇಮಯ್ಯ ಕುಲಾಲ್‌, ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ್‌ ಕುಮಾರ್‌ ಇಂದ್ರ, ಪ್ರಮುಖರಾದ ಜಯರಾಜ್‌ ಕಂಬಳಿ ಉಪಸ್ಥಿತರಿದ್ದರು. ಸ್ಮರಣ ಸಂಚಿಕೆ ಹಾಗೂ ವೈ.ಉಮಾನಾಥ ಶೆಣೈ ಬರೆದ ಪುಸ್ತಕ ಬಿಡುಗಡೆ ನಡೆಯಿತು.
ಅಳದಂಗಡಿ ಅರಮನೆಯ ಸ್ಥಾಪಕ ವಂಶೀಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಸ್ವಾಗತಿಸಿದರು. ಶಿವಪ್ರಸಾದ್‌ ಅಜಿಲರು ವಂದಿಸಿದರು. ವಿಶ್ರಾಂತ ಮುಖ್ಯೋಪಧ್ಯಾಯ ಮುನಿರಾಜ ರೆಂಜಾಳ ನಿರೂಪಿಸಿದರು.

ಯುದ್ಧ, ದ್ವಂದ್ವಗಳಿಗೆ ಬಾಹುಬಲಿ ಸಂದೇಶ ಪರಿಹಾರ: ಡಾ| ಹೆಗ್ಗಡೆ
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ವಿಶ್ವದಲ್ಲಿ ಯುದ್ಧ, ದ್ವಂದ್ವದ ಪರಿಸ್ಥಿತಿ ಇರುವಾಗ ಶಾಂತಿಯ ಸಂದೇಶ ಸಾರುವ ಬಾಹುಬಲಿ ಜೀವನವೇ ಆದರ್ಶ. ಸುಖ ದುಃಖ ಬದುಕಿನಲ್ಲಿ ಸಾಮಾನ್ಯ. ಸಮಚಿತ್ತ ದಿಂದ ನಿರ್ವಹಿಸುವ ಮನೋಗುಣ ನಮ್ಮಲ್ಲಿರಬೇಕು ಎಂದರು.

ಸರ್ವಧರ್ಮ ಪ್ರೀತಿ ಇರಲಿ: ಮೂಡುಬಿದಿರೆ ಶ್ರೀ
ಮೂಡುಬಿದಿರೆ ಜೈನಮಠದ ಡಾ| ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರಜಾಪ್ರಭುತ್ವದ ಈ ಕಾಲದಲ್ಲೂ ಅಜಿಲ ಅರಸರ ಪರಂಪರೆಯು ಸಾರ್ಥಕ ಕಾರ್ಯದೊಂದಿಗೆ ಜನಮಾನಸದಲ್ಲಿ ಗೌರವಕ್ಕೆ ಪಾತ್ರವಾಗಿದೆ. ಸರ್ವಧರ್ಮವನ್ನು ಪ್ರೀತಿಸುವ ಮನೋಗುಣ ಎಲ್ಲೆಡೆಯೂ ಪಸರಿಸಲಿ ಎಂದರು.

ಇಂದಿನ ಕಾರ್ಯಕ್ರಮ
ಫೆ. 23ರಂದು ಪೂಜ್ಯ 108 ಶ್ರೀ ಅಮೋಘ ಕೀರ್ತಿ ಮುನಿ ಮಹಾರಾಜ ಹಾಗೂ ಶ್ರೀ ಅಮರ ಕೀರ್ತಿ ಮುನಿ ಮಹಾರಾಜ, ನರಸಿಂಹರಾಜಪುರ ಜೈನ ಮಠದ ಡಾ| ಲಕ್ಷಿ$¾àಸೇನ ಭಟ್ಟಾರಕ ಪಟ್ಟಾ ಚಾರ್ಯ ವರ್ಯ ಮಹಾಸ್ವಾಮೀಜಿ, ಲಕ್ಕವಳ್ಳಿ ಜೈನ ಮಠದ ಶ್ರೀ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀ ಜಿ ಅವರ ಸಾನಿಧ್ಯದಲ್ಲಿ ಮಧ್ಯಾಹ್ನ 3 ಕ್ಕೆ ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ನ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ. ಸಚಿವ ಜಮೀರ್‌ ಅಹಮದ್‌ ಭಾಗಿ. ಎಕ್ಸಲೆಂಟ್‌ ಮೂಡು ಬಿದಿರೆಯ ಎಂಡಿ ಡಾ| ಬಿ.ಸಂಪತ್‌ ಕುಮಾರ್‌ ಕನ್ನಡ ಕವಿ ಗಳು ಕಂಡ ಬಾಹುಬಲಿ ಚಿತ್ರಣ ಬಗ್ಗೆ ಉಪನ್ಯಾಸ.

ಸಾಂಸ್ಕೃತಿಕ ಕಾರ್ಯಕ್ರಮ

ಮುಖ್ಯ ವೇದಿಕೆ: ಸಂಜೆ 6ರಿಂದ ನವೀನ್‌ ಜಾಂಬ್ಳೆವರ ಸುಗಮ ಸಂಗೀತ, ರಾತ್ರಿ 7.30ಕ್ಕೆ ಆಳ್ವಾಸ್‌ ಸಾಂಸ್ಕೃತಿಕ ವೈಭವ. ವಸ್ತು ಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7 ರಿಂದ 8.30ರ ವರೆಗೆ ರಸಮಂಜರಿ, ರಾತ್ರಿ 8.30ರಿಂದ ನೃತ್ಯಾಂಜಲಿ.

ಅಭಿಷೇಕ ದ್ರವ್ಯಗಳು
ಕಲಶಾಭಿಷೇಕ-108 ಕಲಶ
ಎಳನೀರು- 250
ಕಬ್ಬಿನ ರಸ (ಇಕ್ಷುರಸ)-250 ಲೀ.
ಹಾಲು- 650 ಲೀ.
ಕಲ್ಕಚೂರ್ಣ (ಅಕ್ಕಿ ಹಿಟ್ಟು)- 60 ಕೆ.ಜಿ.
ಅರಸಿನ- 75 ಕೆ.ಜಿ.
ಕಷಾಯ – 300 ಲೀ.
ಕಾಶ್ಮೀರಿ ಕೇಸರಿ-100 ಗ್ರಾಂ.
ಶ್ರೀಗಂಧ- 75 ಕೆ.ಜಿ,
ಚಂದನ- 75 ಕೆ.ಜಿ.
ಅಷ್ಟ ಗಂಧ -75 ಕೆ.ಜಿ.
ಪುಷ್ಪವೃಷ್ಟಿ- 8 ಬುಟ್ಟಿ
ಕನಕಾಭಿಷೇಕ (ಬೆಳ್ಳಿ ಹೂ, ಚಿನ್ನದ ಹೂ, ನಾಣ್ಯ)
ಹೂ ಮಾಲೆ- 38 ಅಡಿ.

ವರದಿ:  ಚೈತ್ರೇಶ್‌ ಇಳಂತಿಲ
ಫೋಟೋ: ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next