Advertisement

ತೀವ್ರಗೊಂಡ ಮಹಾಲಿಂಗಪುರ ತಾಲೂಕು ಹೋರಾಟ

07:56 PM Apr 06, 2022 | Team Udayavani |

ಮಹಾಲಿಂಗಪುರ: ನಡೆಯಲಿರುವ ಬಾಗಲಕೋಟೆಯ ಕೆಡಿಪಿ ಸಭೆಯಲ್ಲಿ ಯಾವುದೇ ಕಾರಣಕ್ಕೂ ಮಹಾಲಿಂಗಪುರ ಪಟ್ಟಣ ಮತ್ತು ಸುತ್ತಲಿನ 9 ಹಳ್ಳಿಗಳನ್ನು ನೂತನ ತೇರದಾಳ ತಾಲೂಕಿಗೆ ಸೇರಿಸಬೇಡಿ, ಒಂದು ವೇಳೆ ಸೇರಿಸಿದರೇ ಉಗ್ರಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮಹಾಲಿಂಗಪೂರ ಹೋರಾಟ ಸಮೀತಿಯ ಸದಸ್ಯರು, ವಿವಿಧ ಪಕ್ಷಗಳ ಮುಖಂಡರುಗಳು ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಸಚಿವರುಗಳು, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

Advertisement

ಬುಧವಾರ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ 9 ಗ್ರಾಮಗಳ ಹಿರಿಯರು, ವಿವಿಧ ಪಕ್ಷಗಳು ಮುಖಂಡರ ನೇತೃತ್ವದಲ್ಲಿ ಮಹಾಲಿಂಗಪುರ ತಾಲೂಕಿಗೆ ಒತ್ತಾಯಿಸಿ ಹೋರಾಟ ಸಮಿತಿಯು ಕರೆನೀಡಿದ್ದ ಮಹಾಲಿಂಗಪುರ ಬಂದ್ ಹಾಗೂ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿವಿಧ ಪಕ್ಷಗಳ ಮುಖಂಡರು, ರೈತ ಸಂಘದ ಮುಖಂಡರು, ಹೋರಾಟ ಸಮಿತಿಯ ಮುಖಂಡರುಗಳು ಮಾತನಾಡಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಸಹ ಸರ್ಕಾರಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಈ ಬಾರಿಯ ಹೋರಾಟವು ಮಾಡು ಇಲ್ಲವೇ ಮಡಿ ಹೋರಾಟವಾಗಿರುವ ಕಾರಣ, ಈ ಬಾರಿ ಮಹಾಲಿಂಗಪುರ ತಾಲೂಕು ಘೋಷಣೆಯಾಗುವರೆಗೂ ಹೋರಾಟ ನಿರಂತರವಾಗಿ ಮುನ್ನಡೆಯುತ್ತದೆ ಎಂದರು.

ಈಗಿರುವ ಪಕ್ಷಾತೀತ ಮತ್ತು ಜಾತ್ಯಾತೀತ ಹೋರಾಟ ಸಮಿತಿಗೆ ಮಹಾಲಿಂಗಪುರ ಮತ್ತು 9 ಗ್ರಾಮಗಳ ಸಾರ್ವಜನಿಕರು, ಸರ್ವ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹೋರಾಟದ ಯಶಸ್ವಿಯಾಗಿ ತನು,ಮನ, ಧನದ ಮೂಲಕ ನಿರಂತರವಾಗಿ ಹೋರಾಟಕ್ಕೆ ಬೆಂಬಲಿಸಬೇಕು. ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ನೂತನ ತೇರದಾಳ ತಾಲೂಕಿಗೆ ಸೇರಿಸುವದು ಅವೈಜ್ಞಾನಿಕ, ಒಂದು ತಾಲೂಕು(ರಬಕವಿ-ಬನಹಟ್ಟಿ)ನ್ನು ದಾಟಿ ತಾಲೂಕಿಗೆ ಹೋಗಬೇಕಾಗುವದು. ಅದಕ್ಕಾಗಿ ಯಾವುದೇ ಕಾರಣ ಸೇರಿಸಬಾರದು ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡರಾದ ಸುಭಾಸ ಶಿರಬೂರ, ಗಂಗಾಧರ ಮೇಟಿ, ಬಂದು ಪಕಾಲಿ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಎಂ.ಎಸ್.ಉಳ್ಳೇಗಡ್ಡಿ, ಸಿದ್ದು ಕೊಣ್ಣುರ, ಸಂಗಪ್ಪ ಹಲ್ಲಿ, ಡಾ| ಎ.ಆರ್.ಬೆಳಗಲಿ, ಮನೋಹರ ಶಿರೋಳ, ಮಹಾದೇವ ಮಾರಾಪೂರ, ಯಲ್ಲನಗೌಡ ಪಾಟೀಲ, ಬಸವನಗೌಡ ಪಾಟೀಲ, ಧರೆಪ್ಪ ಸಾಂಗ್ಲಿಕರ್, ಎಂ.ಆಯ್.ಕೋಳಿಗುಡ್ಡ, ನಿಂಗಪ್ಪ ಬಾಳಿಕಾಯಿ, ಚನಬಸು ಹುರಕಡ್ಲಿ ಅವರು ಮಾತನಾಡಿ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ 9 ಗ್ರಾಮಗಳನ್ನು ಯಾವುದೇ ಕಾರಣಕ್ಕೂ ನೂತನ ತೇರದಾಳ ತಾಲೂಕಿಗೆ ಸೇರಿಸಬಾರದು, ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿ ಮಹಾಲಿಂಗಪುರ ನೂತನ ತಾಲೂಕನ್ನು ಘೋಷಿಸಬೇಕೆಂದು ಒತ್ತಾಯಿಸಿದರು.

Advertisement

ಬೃಹತ್ ಪ್ರತಿಭಟನಾ ಮೇರವಣಿಗೆ : ಮಹಾಲಿಂಗಪುರ ತಾಲೂಕಾ ಘೋಷಣೆಗೆ ಒತ್ತಾಯಿಸಿ ತಾಲೂಕಾ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಬಸವವೃತ್ತದಿಂದ ಡಬಲ್ ರಸ್ತೆ, ನಡಚೌಕಿ, ಜವಳಿಬಜಾರ, ಗಾಂಧಿವೃತ್ತ ಮಾರ್ಗವಾಗಿ ಚನ್ನಮ್ಮ ವೃತ್ತಕ್ಕೆ ಬಂದು ಟೈಯರ್‌ಗೆ ಬೆಂಕಿ ಹಚ್ಚಿ, ಮಾನವ ಸರಪಳಿ ನಿರ್ಮಿಸಿ ಅರ್ಧಗಂಟೆಗಳ ಕಾಲ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯನ್ನು ಬಂದ ಮಾಡಿ, ಘೋಷಣೆಗಳನ್ನು ಕೂಗಿ, ಪ್ರತಿಭಟನೆ ನಡೆಸಿದರು.

ಅಲ್ಲಿಂದ ಪುರಸಭೆಗೆ ಆಗಮಿಸಿ ರಬಕವಿ-ಬನಹಟ್ಟಿ ಉಪ ತಹಶೀಲ್ದಾರ ಎಸ್.ಎಲ್.ಕಾಗಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಂತರ ಮಹಾಲಿಂಗಪುರ ಹಾಗೂ ಸುತ್ತಲಿನ 9 ಗ್ರಾಮಗಳಿಂದ 20ಕ್ಕೂ ಹೆಚ್ಚು ವಾಹನಗಳ ಮೂಲಕ ಬಾಗಲಕೋಟೆ ಕೆಡಿಪಿ ಸಭೆಗೆ ಹೋಗಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಚಿವರು, ಶಾಸಕರು, ಅಧಿಕಾರಿಗೆ ಮುತ್ತಿಗೆ ಹಾಕಿ ಯಾವುದೇ ಕಾರಣಕ್ಕೂ ಮಹಾಲಿಂಗಪುರ ಹಾಗೂ 9 ಗ್ರಾಮಗಳನ್ನು ನೂತನ ತೇರದಾಳ ತಾಲೂಕಿಗೆ ಸೇರಿಸದಂತೆ ಪ್ರತಿಭಟನೆ ನಡೆಸಲು ತೀರ್ಮಾಣಿಸಲಾಯಿತು. ಗುರುವಾರ ಬಾಗಲಕೋಟೆಯಲ್ಲಿ ನಡೆಯುವ ಬೆಳವಣಿಗೆಯನ್ನು ನೋಡಿಕೊಂಡು, ಬರುವ ಶನಿವಾರ ಏ.9ರಂದು ಮುಂಜಾನೆ 10-30 ಕ್ಕೆ ತಾಲೂಕಾ ಹೋರಾಟದ ಮುಂದಿನ ರೂಪರೇಶೆಗಳ ಕುರಿತು ಬೃಹತ್ ಸಭೆ ನಡೆಸಲು ನಿರ್ಣಯಿಸಿ, ಸಭೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗ ಸೇರಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು, ಮುಖಂಡರು ಭಾಗವಹಿಸಲು ತಿಳಿಸಲಾಯಿತು.

ತಾಲೂಕಾ ಹೋರಾಟಕ್ಕೆ ಪಟ್ಟಣದ ಅಂಗಡಿಕಾರರು ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ ಮಾಡಿದ್ದರು. ಹೋರಾಟದಲ್ಲಿ ತಾಲೂಕಾ ಹೋರಾಟ ಸಮಿತಿ ಸದಸ್ಯರು, ಸರ್ವ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಠಾಣಾಧಿಕಾರಿ ವಿಜಯ ಕಾಂಬಳೆ ಮತ್ತು ಪೊಲೀಸ್ ಸಿಬ್ಬಂದಿ ಸೂಕ್ತಬಂದೋಬಸ್ತ್ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next