ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಘಟಪ್ರಭಾ ನದಿಗೆ ಬರುತ್ತಿರುವ ನೀರಿನ ಪ್ರಮಾಣವು ಸತತ ಮೂರನೇ ದಿನವು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಕಳೆದ ನಾಲ್ಕು ದಿನಗಳಿಂದ ಢವಳೇಶ್ವರ-ಢವಳೇಶ್ವರ, ನಂದಗಾಂವ- ಅವರಾದಿ, ಅಕ್ಕಿಮರಡಿ-ಮಿರ್ಜಿ ಸೇತುವೆಗಳು ಜಲಾವೃತಗೊಂಡು ಬೆಳಗಾವಿ ಜಿಲ್ಲೆಯ ಗಡಿಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇದರಿಂದಾಗಿ ಪ್ರಯಾಣಿಕರು ಮುಧೋಳ ಮತ್ತು ಗೋಕಾಕ ಮಾರ್ಗವಾಗಿ ಸುತ್ತುವರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಲಗದ್ದೆಗಳು ಜಲಾವೃತ: ಘಟಪ್ರಭಾ ನದಿಯು ಉಕ್ಕಿ ಹರಿಯುತ್ತಿರುವ ಕಾರಣ ಸೇತುವೆಗಳನ್ನು ದಾಟಿ ನೂರಾರು ಎಕರೆ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಕೆಲಗ್ರಾಮಗಳಲ್ಲಿ ರೈತರ ಅಳವಡಿಸಿದ್ದ ಪಂಪಸೆಟ್ಗಳು ಸಹ ನೀರಲ್ಲಿ ಕೊಚ್ಚಿಕೊಂಡು ಹೋಗಿ, ರೈತರು ಸಂಕಟ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಧುಪದಾಳ ಜಲಾಶಯಕ್ಕೆ ಸುಮಾರು 24480 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಅದರಲ್ಲಿ 23625 ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಮತ್ತು 855 ಕ್ಯೂಸೆಕ್ ನೀರನ್ನು ಘಟಪ್ರಭಾ ಎಡದಂಡೆ ಕಾಲುವೆ ಹರಿಸಲಾಗುತ್ತಿದೆ. ಹೆಚ್ಚಿನ ಪ್ರವಾಹ ಉಂಟಾಗಬಹುದ ಆತಂಕ ನದಿ ಪಾತ್ರದ ಗ್ರಾಮಗಳ ಜನರನ್ನು ಕಾಡುತ್ತಿದೆ.
ಅಧಿಕಾರಿಗಳ ಭೇಟಿ: ನಂದಗಾಂವ, ಢವಳೇಶ್ವರ ಮತ್ತು ಮಾರಾಪೂರ ಗ್ರಾಮಗಳ ಪ್ರವಾಹ ಸ್ಥಳಕ್ಕೆ ರಬಕವಿ-ಬನಹಟ್ಟಿ ತಾಲೂಕು ಕಂದಾಯ ಇಲಾಖೆ ಅಧಿಕಾರಿ ಬಿ.ಆರ್.ತಾಳಿಕೋಟಿ, ನೊಡಲ್ ಅಧಿಕಾರಿಗಳಾದ ಬಿ.ಆರ್.ಕಮತಗಿ, ಡಿ.ಬಿ. ಪಠಾಣ, ಬಸಪ್ಪ, ಮಹಾಲಿಂಗಪುರ ಠಾಣಾ ಧಿಕಾರಿ ಜಿ.ಎಸ್. ಉಪ್ಪಾರ, ಗ್ರಾಮಲೆಕ್ಕಾ ಧಿಕಾರಿ ತ್ರಿವೇಣಿ ದೇವರಮನಿ, ಗ್ರಾಪಂ ಪಿಡಿಒ ಭೇಟಿ ನೀಡಿದ್ದರು.