Advertisement

ಆಲಯವಷ್ಟೇ ಅಲ್ಲ , ಮಹಾಲಯ!

06:00 AM Sep 30, 2018 | Team Udayavani |

ಮತ್ತೂಮ್ಮೆ ಪಿತೃಪಕ್ಷ ಬಂದಿದೆ. ಗತಿಸಿದ ಜೀವಿಗಳ ಆತ್ಮಾನುಸಂಧಾನಕ್ಕೊಂದು ಪರ್ವಕಾಲ. ಭಾದ್ರಪದ ಕೃಷ್ಣಪಕ್ಷ,   ಅದರಲ್ಲೂ ಇದೇ ಅಮಾವಾಸ್ಯೆ ಪೂರ್ವಜರನ್ನು ಸ್ಮರಿಸಿಕೊಳ್ಳುವ ಪುಣ್ಯದಿನ. ತಮ್ಮ ಮನೆ, ಮಕ್ಕಳು ಮರಿ, ಸಂಬಂಧಿಕರನ್ನು ನೋಡಿಹೋಗಲು ಒದಗಿದ  ಸುದಿನ ಗತಿಸಿದವರಿಗೆ. ಅಂದು ಮನೆ  ಮಹಾಮನೆ (ಆಲಯ) ಯಾಗುತ್ತದೆ ಈರ್ವರಿಗೂ. ಅವರ ಪರೋಕ್ಷ ಆಶೀರ್ವಾದದ ಬೆಳಕಿನಿಂದ ಮನೆ ಬೆಳಗುತ್ತದೆ, ಬೆಳೆಯುತ್ತದೆಂಬುದು ಮಹಾಲಯಕ್ಕೆ ಫ‌ಲಶ್ರುತಿ. ಗತಿಸಿದ  ಜೀವಿಗಳ-ಭಾವ ಸಂಚಾರ ಅಂದು ಈ ಲೋಕದಲ್ಲಿ ! ಪಿತೃವರ್ಗವೆಂತಲೇ ಅಲ್ಲ ;  ಮರಣ ಹೊಂದಿದ ಅಂದರೆ  ಮನೆಯ ಋಣಾನುಬಂಧ ಹೊಂದಿದ ಪ್ರತಿಯೊಂದು ಜೀವಿಯೂ  ಇಲ್ಲಿ ತಾವು ಬದುಕಿ-ಬಾಳಿದ ಮನೆಗೆ ಬರುತ್ತಾರೆಂಬುದು ನಂಬಿಕೆ. ಮನೆಯ ಸಂಬಂಧ ಹೊಂದಿದ ಗತಿಸಿದ ಆಳು-ಕಾಳು, ಪಶು-ಪ್ರಾಣಿಯೂ ಇದರಲ್ಲಿ ಸೇರ್ಪಡೆ. ಹಾಗೆಂದೇ  ಮಹಾಲಯದಂದು ಅವರೆಲ್ಲರನ್ನೂ ಸ್ಮರಿಸಿಕೊಳ್ಳುವ ಕ್ರಮ.

Advertisement

ಮಾನವೀಯ ಸಂಬಂಧದ ಲೆಕ್ಕ, ಒಂದೊಂದ್ಲ ಒಂದು ಮಾತ್ರ ಅಲ್ಲ! ಅದು, ಒಂದು ಒಂದು ಹನ್ನೊಂದು. ಒಂದು ದಿನ ಈ ನಿಲ್ದಾಣಕ್ಕೆ ಬಂದು ಮತ್ತೂಂದು ದಿನ  ಹೊರಟುಹೋಗುವುದಕ್ಕೆ ಸೀಮಿತವಲ್ಲ.  ಇದಕ್ಕೆ  ಮುಕ್ತಾಯವಂತೂ ಇಲ್ಲವೇ ಇಲ್ಲ. ತಲೆ-ತಲೆಮಾರುಗಳ ಲೆಕ್ಕ.  ಅದೊಂದು ನಿರಂತರ ಪ್ರಯಾಣ. ಇದು ಕಾಲುನಡಿಗೆಯಲ್ಲ. ಕಾಲದ ನಡಿಗೆ. ಇದನ್ನು ಗಂಭೀರ ಸಂಭ್ರಮದ ದಿನ ಎನ್ನಬಹುದೇನೊ?      

ನನ್ನ ಆತ್ಮೀಯರಾದ 96ರ ಹಿರಿಯರೊಬ್ಬರು ಇತ್ತೀಚೆಗೆ ಹೇಳಿದ್ದು… “”ನನ್ನ ಅಪ್ಪನ 80 ನೇ ವರ್ಷದ ಶ್ರಾದ್ಧವನ್ನು ಮೊನ್ನೆ ಮಾಡಿದೆ. ಪ್ರತಿವರ್ಷ ನಮ್ಮ ಅಣ್ಣತಮ್ಮಂದಿರೆಲ್ಲ ಸೇರಿ ಮಾಡುತ್ತಿದ್ದೆವು. ಒಬ್ಬೊಬ್ಬರೇ ಕಳಚುತ್ತಿದ್ದಾರೆ. ಮೊದಲಿನಂತೆ  ಶ್ರಾದ್ಧವಿಧಿ ಮಾಡಲಾಗುತ್ತಿಲ್ಲ. ಸಾಂಕೇತಿಕವಾಗಿ ಮಾಡುತ್ತಿದ್ದೇನೆ” 

ನಮ್ಮ ಹಿರಿಯರನ್ನು ಮರೆಯುವುದು ಸುಲಭವಲ್ಲ. ಆ ದಿನವೆಂತಲೇ ಅಲ್ಲ, ಬೇರೆ ಬೇರೆ ಸಂದರ್ಭಗಳಲ್ಲಿ ಅವರು ನೆನಪಾಗುತ್ತಲೇ ಇರುತ್ತಾರೆ. ಮೃತತಿಥಿಯಂತೂ ಅದಕ್ಕಾಗಿ ಮೀಸಲು. ಬಹುತೇಕ ಎಲ್ಲ ಜಾತಿಜನಾಂಗದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಈ ನೆನಸಿಕೊಳ್ಳುವ ಆಚರಣೆ ಇವೆ. ರೀತಿಗಳು ವಿಭಿನ್ನ. ಅಂದರೆ ಅವರ ನೆನಪಿನಿಂದ ನಾವು ಒದ್ದೆಯಾಗುವುದು ! ಆತ್ಮಕ್ಕೆ ಯಾವ ಜಾತಿ? ಅದು ಗಂಡು-ಹೆಣ್ಣು ಜಾತಿ ಕೂಡ ಅಲ್ಲ !

ಮಹಾಲಯ, ದಿವಿ-ಬುವಿಗಳ ಸಂಬಂಧಕ್ಕೆ ಕಟ್ಟಿದ ಅಮೃತಸೇತುವೆ. ಉನ್ನತೋನ್ನತ ಸಂಸ್ಕೃತಿಯ  ಪ್ರತೀಕ. ಸಂಬಂಧಗಳ ಎಳೆ ಎಳೆದಷ್ಟೂ ಉದ್ದ. ಆದರೆ, ಎಳೆಯುವ ಮನಸ್ಸು , ಶ್ರದ್ಧೆಗಳಿಲ್ಲದಿದ್ದರೆ ಭಾವಗಳಿಗೆ ಬೆಲೆಯಿರುವುದಿಲ್ಲ. ಅದು ಪಿತೃಪಕ್ಷವೂ ಆಗುವುದಿಲ್ಲ, ಅದು ಶ್ರಾದ್ಧವೂ ಆಗುವುದಿಲ್ಲ. ಅದೊಂದು ಯಾಂತ್ರಿಕ ಕ್ರಿಯೆಯಾಗಬಹುದಷ್ಟೆ. “”    ನನ್ನ ಕಣ್ಣೆದುರಿಗೆ ಅಗ್ನಿಯಲ್ಲಿ ಭಸ್ಮವಾದ ಇಲ್ಲವೇ ಮಣ್ಣಲ್ಲಿ ಮಣ್ಣಾದ ನನ್ನಪ್ಪ, ಅಮ್ಮ ಅಥವಾ ಯಾರೇ ಆಗಲಿ ಮರಳಿ  ಬರುವುದಿದೆಯಾ? ಭಸ್ಮಿàಭೂತಸ್ಯ ದೇಹಸ್ಯ ಪುನರಾಗಮನಂ ಕುತಃ?  ಕಲ್ಪನೆಗೂ ಮಿತಿಬೇಡವಾ?” ಚಾರ್ವಾಕ ಪ್ರಶ್ನಿಸುತ್ತಾನೆ. ಅವನಮಟ್ಟಿಗೆ ಅದು ಸರಿ.  

Advertisement

    ಆದರೆ, ಇದು ಮಿತಿಬೇಡುವ ಸಂಗತಿಯಲ್ಲ. ಭಾವನೆಗೆ ಬೇಲಿಯಿಲ್ಲ. ಬೆಲೆಕಟ್ಟುವುದಂತೂ ಸಾಧ್ಯವಿಲ್ಲ. ನಮ್ಮ ಸನಾತನ ಭಾರತೀಯನ ನಂಬಿಕೆ, ಭಾವನೆ, ಶ್ರದ್ಧೆ ಲಘುವಾದುದಲ್ಲ, ತೆಳುವಾದುದಲ್ಲ ! ಮೇಲುನೋಟಕ್ಕೆ ಕಾಣುವಷ್ಟು ಸುಲಭವಲ್ಲ. ತರ್ಕದಾಚೆಗೂ ಏನೋ ಇದೆ ಅವನ ದೃಷ್ಟಿಯಲ್ಲಿ. 
ಅದಕ್ಕೊಂದು ಅಮರ ಬುನಾದಿಯಿದೆ. ಅದೇ ಆತ್ಮ ಅಜರಾಮರವೆಂಬ ಸಿದ್ಧಾಂತ. ಮಾನವಪ್ರಪಂಚದ ಎಲ್ಲ ಸಂಬಂಧ-ಅನುಬಂಧಗಳೂ ಈ ಆತ್ಮತಣ್ತೀದ  ಸುತ್ತಲೇ ಸುತ್ತು¤ತ್ತಿರುತ್ತವೆ ! 

ಗತಿಸಿದ ನನ್ನಪ್ಪ ಅಖಂಡವಾದ ಆತ್ಮದಿಂದ ಬಂದವನು. ಆ ಅಖಂಡದಲ್ಲೇ ಲೀನವಾದ. ಆ ಆತ್ಮ ನನ್ನಲ್ಲೂ ಇದೆ. ಹಾಗಾಗಿ ಇದು ಅನಿತ್ಯವಾದ ಶರೀರದ ಸಂಬಂಧವಲ್ಲ, ನಿತ್ಯವಾದ ಆತ್ಮದ ಸಂಬಂಧ. ಗತಿಸಿದ ನನ್ನಪ್ಪ -ಅಮ್ಮ ನನ್ನಲ್ಲೂ ಇದ್ದಾರೆ ! ನಿಮಗೆ ಅಚ್ಚರಿಯಾಗಬಹುದು- ಗತಿಸಿದ ಹಿರಿಯರಿಗೆ, ಜ್ಞಾನಕೊಟ್ಟ ಋಷಿಮುನಿಗಳಿಗೆ, ಭೂತಜಗತ್ತನ್ನು ಕರುಣಿಸಿದ ದೇವತೆಗಳಿಗೆ ನಿತ್ಯತರ್ಪಣ (ಜಲಾಂಜಲಿ) ಕೊಡುವ ಕ್ರಮವಿದೆ. ಅವರ ನಿರಭಿಲಷಿತ ಉಪಕಾರದ ಋಣಕ್ಕೆ ನಿತ್ಯವೂ ಕೃತಜ್ಞತಾಸಮರ್ಪಣೆ. ನಾವೆಷ್ಟು ಅರ್ಪಿಸಿದರೂ ಋಣಚುಕ್ತವಾಗದಷ್ಟು ಭಾರ ನಮ್ಮ ಮೇಲಿರುತ್ತದೆಂಬುದು ಇದರ ಹಿಂದಿರುವ ತಾತ್ಪರ್ಯ.   

ಸರಿ, ಆತ್ಮದಲ್ಲಿ ಲೀನವಾದಮೇಲೆ ಮುಗೀತಲ್ಲ? ಮುಗಿಯುವುದಿಲ್ಲ ; ಕಾರಣ ಅವರು  ಬಿಟ್ಟುಹೋದ ನೆನಪುಗಳು ಮುಗಿಯುವುದಿಲ್ಲವಲ್ಲ ! ಅವರ ಹೆಜ್ಜೆ ಗುರುತುಗಳು ಎಲ್ಲೆಲ್ಲೂ ಕಾಣಿಸುತ್ತಿದೆ. ಅವರು ನನಗಾಗಿ, ನನ್ನ ಒಳಿತಿಗಾಗಿ  ಮಾಡಿದ ತ್ಯಾಗ ನೆನಪಾಗುತ್ತಿದೆ. ಅವ ಪಟ್ಟ ಕಷ್ಟ,  ಹೃದಯವನ್ನು ಕಲಕುತ್ತಿದೆ,  ಕರಗಿಸುತ್ತಿದೆ. ನನ್ನ ಏಳಿಗೆ ಕಂಡು ಅಪ್ಪ ಅನುಭವಿಸಿದ್ದ ಆನಂದ ನನಗೆ ರೋಮಾಂಚನ ಉಂಟುಮಾಡುತ್ತಿದೆ. ಅಂದು ಅವನ ಮಾತನ್ನು ನಾನು ಕೇಳಲಿಲ್ಲವಲ್ಲಾ ಎಂದು ಇಂದು ವಿಷಾದವಾಗುತ್ತಿದೆ. ಈ ಎಲ್ಲ ಭಾವನೆಗಳ ತರಂಗ ಅಂತರಂಗವನ್ನು ಕಾಡಿದಾಗ ಅದರ  ಋಣಸಂದಾಯಕ್ಕಾಗಿ ನಾವು ಶ್ರದ್ಧೆಯಿಂದ ಮಾಡುವ ಕ್ರಿಯೆಯೇ (ವಿಭಿನ್ನ ಆಚರಣೆ) ನಿಜವಾದ ಶ್ರಾದ್ಧ. ಅದೇ ಸಾರ್ಥಕ ಮಹಾಲಯವಾಗುತ್ತದೆ. 
ಹಾಗೆಂದು, ಅವರ ನೆನಪಿನಲ್ಲಿ ಕರ್ತವ್ಯ ಮರೆಯಬಾರದು. ಹೊಸಸ್ಫೂರ್ತಿ ಪಡೆದು ಹೊಸಮನುಷ್ಯರಾಗುತ್ತ ಹೋಗಬೇಕು. 

ಸ್ವರ್ಗ-ನರಕಗಳ ಭಯ 
ದೇವರು, ಧರ್ಮ, ಸ್ವರ್ಗ-ನರಕಗಳ ಬಗೆಗಿನ ಭಯ-ಅಭಯ ಇಂದು ನಿನ್ನೆಯದಲ್ಲ. ಬಹುಶಃ ಮನುಷ್ಯನಿಗೆ ಬುದ್ಧಿಬಲಿತ ದಿನದಿಂದಲೇ ಇದು ಪ್ರಾರಂಭವಾಗಿರಬೇಕು. ಮರಣಭಯ, ಸ್ವರ್ಗ-ನರಕಗಳ ಆನಂದ-ಯಾತನೆಗಳಿಲ್ಲದೇ ಹೋಗಿದ್ದರೆ (ಕಲ್ಪನೆ ಎಂದಿಟ್ಟುಕೊಂಡರೂ) ಮನುಷ್ಯ ಏನಾಗುತ್ತಿದ್ದ? ಊಹಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಪಿತೃಪಕ್ಷದ ಆಚರಣೆ,  ಗರುಡಪುರಾಣ ಹೇಳುವ ಪುಣ್ಯ-ಪಾಪ, ಸ್ವರ್ಗ-ನರಕಗಳ  ಸಂಗತಿಗಳನ್ನು ಪರಿಶೀಲಿಸಬೇಕು. 

ರೋಗ, ಮುಪ್ಪು, ಸಾವು- ಈ ಮೂರು ಇಲ್ಲದೇ ಹೋಗಿದ್ದರೆ ಏನಾಗುತ್ತಿತ್ತು? ಅಥವಾ ಇವುಗಳನ್ನು ದಾಟಲು ಏನು ಮಾಡಬೇಕು? ಈ ಸಮಸ್ಯೆ, ಜಿಜ್ಞಾಸೆ ತೀವ್ರವಾಗಿ ಕಾಡತೊಡಗಿದಾಗ ಸಿದ್ಧಾರ್ಥ ಕಾಡಿಗೆ ಹೊರಟಿದ್ದು. ಇವುಗಳ ಕಾರಣವನ್ನು ಕಂಡುಕೊಂಡ ದಿನ ಸಿದ್ಧಾರ್ಥ ಬುದ್ಧನಾದ ! ಇವುಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ, ಇವುಗಳನ್ನು ಮೀರಿ ಶಾಂತಿಯನ್ನು ಪರಮಶಾಂತಿಯನ್ನು ಹೊಂದಲು ಸಾಧ್ಯವಿದೆಯೆಂದು ಬುದ್ಧ ಹೇಳುತ್ತಾನೆ. ಸ್ವರ್ಗ-ನರಕಗಳ ಬಗ್ಗೆ ಭಗವದ್ಗೀತೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಮಾತನ್ನಾಡಿದೆ. ಧರ್ಮಮಯವಾದ ಜೀವನ ನಡೆಸಿದವನು ಊಧ್ವìಗಾಮಿಯಾಗುತ್ತಾನೆ. (ಇಲ್ಲಿ ಊಧ್ವìಗಾಮಿ ಪದ ಬಹಳ ಮಾರ್ಮಿಕವಾಗಿದೆ) ರಾಜಸಜೀವಿ ಮತ್ತೆ ಮತ್ತೆ ಇಲ್ಲಿಗೆ ಬರುತ್ತಾನೆ. ತಾಮಸೀಪ್ರವೃತ್ತಿಯವನು ಕೆಳಕ್ಕೆ (ನರಕ) ಹೋಗುತ್ತಾನೆ. 

ಸ್ವರ್ಗ-ನರಕಗಳ ವಿಷಯ ಯಾವುದೋ ಲೋಕದ್ದಲ್ಲ; ಮನುಷ್ಯ ಹೀನಸ್ಥಿತಿಗೆ ಹೋಗುವುದಕ್ಕೆ ನರಕವೆಂದು, ಆತ್ಮೋನ್ನತಿ ಪಡೆಯುವುದು ಸ್ವರ್ಗವೆಂದು ಹೇಳಿದೆ. ಗಮನಿಸಿ… 
ಊಧ್ವಂ  ಗಚ್ಛಂತಿ  ಸತ್ವಸ್ಥಾಃ ಮಧ್ಯೇ  ತಿಷ್ಠಂತಿ ರಾಜಸಾಃ 
ಜಘನ್ಯಗುಣವೃತ್ತಿಸ್ಥಾಃ  ಅಧೋ  ಗತ್ಛಂತಿ ತಾಮಸಾಃ || (ಗೀತೆ, 14-18) 

ಭಾಸ್ಕರ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next