Advertisement

ತಂದವರಿಗೆ ಹೀಗೆ ಸಂದಾಯವಾದೀತೇ?

01:28 PM Oct 06, 2021 | Team Udayavani |

ಈ ನೆಲಕ್ಕೆ ನಮ್ಮನ್ನು ಕಾಣುವಂತೆ ತಂದವರು ತಂದೆತಾಯಿಗಳು. ನಮ್ಮ ದೇಹದ ನಿರ್ಮಾಣಕ್ಕೆ ಅವರ ದೇಹದ ಋಣವಿದೆ. ಅವರ ಸಂಬಂಧದ ಋಣ ಪರಿಹಾರದ ಶಾಸ್ತ್ರೀಯ ಪ್ರಕ್ರಿಯೆ, ವಿಶೇಷ ವಾಗಿ ಮಹಾಲಯ. ಶಿಕ್ಷಕರ ದಿನ, ಸ್ಥಾಪಕರ ದಿನ ಇರುವಂತೆ ಇದು ತಂದೆತಾಯಿಗಳ ಹದಿನೈದು ದಿನ. ಇದು ಪಿತೃಪಕ್ಷ.

Advertisement

ದೇವಪಿತೃಕಾರ್ಯಾಭ್ಯಾಂ ನ ಪ್ರಮದಿತವ್ಯಮ್‌. “ದೇವತೆಗಳ ಮತ್ತು ಪಿತೃಗಳ ಧಾರ್ಮಿಕ ಕರ್ಮಾ ಚರಣೆಯಿಂದ ಎಂದಿಗೂ ದೂರನಾಗಬೇಡ’ ಎಂದು ಕಲಿತವನಿಗೆ ಗುರುಗಳ ಕಡೆಯ ಎಚ್ಚರಿಕೆಯ ಮಾತು. ಸೋಮಾರಿತನ ತೊರೆದು ಶ್ರದ್ಧೆಯಿಂದ ಚೆನ್ನಾಗಿ ತಿಳಿದು ಲೋಪದೋಷಗಳಿಲ್ಲದೆ ದೇವ-ಪಿತೃಕರ್ಮಗಳನ್ನು ನಡೆಸಬೇಕು ಎಂದು ಇಲ್ಲಿ ಆದೇಶಿಸಲಾಗಿದೆ. ಗುರು ಆಜ್ಞೆಯಲ್ಲಿನ “ಪ್ರಮಾದ’ ಶಬ್ದವು ಇಷ್ಟೆಲ್ಲ ವಿಚಾರಗಳನ್ನು ಒಳಗೊಂಡಿದೆ.

ದೇವತಾರಾಧನೆಯ ಯಾಜ್ಞಕಮುಖಗಳನ್ನು ಅನೇಕ ರೀತಿಯಲ್ಲಿ ಸ್ವಲ್ಪ ಮಟ್ಟಿಗಾದರೂ ನಡೆಸುತ್ತಿರುವ ನಾವು ಇಂದು ಪಿತೃ ಸಮಾರಾಧನೆಯ ಪೂರ್ವಾಪರ ಕ್ರಮವಿಶೇಷಗಳನ್ನು ಇನ್ನೂ ಸ್ಪಷ್ಟವಾಗಿ ಪೂರ್ತಿ ತಿಳಿದಿಲ್ಲ.

ಇನ್ನೊಬ್ಬರ ಸಹಾಯದಿಂದಲೇ ಜೀವಿಸುವವ ಜೀವ. ಯಾರೊಬ್ಬರ ಏನೂ ಸಂಬಂಧವಿರದೆ ಇರುವವನೇ ದೇವ. ಈತ ಸ್ವತಂತ್ರ. ನಾವೆಲ್ಲ ಜೀವರು ಪರತಂತ್ರರೆ. ಪ್ರತಿಯೊಬ್ಬ ಜೀವನ ಎಚ್ಚರ-ಕನಸು-ನಿದ್ದೆಗಳೆಲ್ಲವೂ ಆ ದೇವನ ಅಧೀನ. ಎಚ್ಚರಿಸುವ ದೇವರ ರೂಪವೇ ವಿಶ್ವ; ಕನಸು ಕಾಣಿಸುವ ದೇವರು ತೈಜಸ; ಹಾಗೆಯೆ ನಿದ್ದೆ ಬರಿಸುವವ ಪ್ರಾಜ್ಞ. ದೇಹದೊಡನೆಯ ಜೀವನ ಶಾಶ್ವತ ನಿದ್ದೆಯೇ ಮರಣ. ಹೀಗೊಂದು ರೀತಿಯಲ್ಲಿ ಪ್ರಾಜ್ಞನ ಸಂಬಂಧ ಇಲ್ಲಿ ಸತ್ತ ಬಳಿಕದ ಸಂಸ್ಕಾರದಲ್ಲಿ ಕಂಡಿದೆ. ಪ್ರಾಣನ ಮಾಧ್ಯಮದಲ್ಲಿಯೇ ಜೀವನಿಗೆ ದೇವನ ಸಂಬಂಧವಿರುವುದು. ಹೀಗೆಂದೆ ಕರ್ಣಸೂಕ್ತದಲ್ಲಿ ಮತ್ತೆಮತ್ತೆ ನೆನಪಿಸುವ ಕರೆಯಿದು- “ಇಂದ್ರಾಯೇಂದೋ ಪರಿಸ್ರವ’ ಎಂದು. ಹೀಗಾಗಿ ಪ್ರಾಣಸ್ಥ ಪ್ರಾಜ್ಞನ ಚಿಂತನೆಯಲ್ಲಿ ಇಲ್ಲಿ ಎಲ್ಲೆಡೆ ಮಾತುಗಳು ಮೂಡಿವೆ.

ನಮ್ಮ ಒಂದು ಸಣ್ಣಮಟ್ಟಿನ ವಾಸ್ತವಿಕವೋ ಶಾಬ್ದಿ ಕವೋ ಆದ ಕಳಪೆ ನಿರ್ಮಿತಿಯಲ್ಲಿ ಅಲ್ಲಲ್ಲಿ ನಮ್ಮ ನಾಮಾಂಕನ ಚಿಹ್ನೆ ಬಾರಿ ಬಾರಿ ಜಾಹೀರಾತು ಎಲ್ಲ ನಡೆಸುವಾಗ ಈ ದೊಡ್ಡ ರೀತಿಯ ಪರಲೋಕಪಯ ಣದ ಧರ್ಮಕರ್ಮಗಳಲ್ಲಿ ಪ್ರಾಣಪ್ರಾಜ್ಞರ ಸೊಗಸಾದ ಹಲವು ಬಾರಿಯ ನೆನಪು ಕೃತಜ್ಞತೆಯ ದೃಷ್ಟಿಯಿಂದ ಬೇಕೇ ಬೇಕು. ಬಿಡಲಾಗದು, ಬಿಡಬಾರದು.

Advertisement

ಇದನ್ನೂ ಓದಿ:ಐಪಿಎಲ್‌: ಯೋಜನೆಯಂತೆ ಗೆದ್ದ ಮುಂಬೈ ಇಂಡಿಯನ್ಸ್‌

ಮೃತನ ಸದ್ಗತಿಯಲ್ಲಿ ಅಸ್ಥಿಯ ಮೂಲಕ ವ್ಯಕ್ತಿಯ ಪಾಪನಿರ್ಮೂಲನದಲ್ಲಿ ಗಂಗೆ ಮಹಾತೀರ್ಥ ಮುಖ್ಯ ಪಾತ್ರ ವಹಿಸಿದಂತೆ ಶರೀರಪುರುಷನಾದ ಶಿವನು ಗಂಗಾಧರನಾಗಿ ಮಂಗಳ ಮಾಡಿದಂತೆ ಗಂಗಾಜನಕ ನಾರಾಯಣನು ಜನನದೋಷ ನಿವಾರಕನಾಗಿ ಮುಂದಿನ ಜನ್ಮರಾಶಿಗಳ ಅರ್ದನನಾಗಿ ಜನಾರ್ದನ ರೂಪದಿಂದ ಇಲ್ಲಿ ಎಲ್ಲೆಡೆ ನಾಮಸ್ಮರಣೆಯಿಂದಲೂ ಉಪಾಸ್ಯನಾಗಿದ್ದಾನೆ.

ಹೀಗೆ ಆಯಾ ಕರ್ಮಾಂಗಗಳಿಗೆ ಉಪಕರ್ಮ ಗಳಿಗೂ ಅನ್ವಯಿಸುವಂತೆ ದೋಷಗಳ ನಿವೃತ್ತಿ ಯಲ್ಲಿ ಎಲ್ಲೆಡೆ ವಿಷ್ಣುಸ್ಮರಣೆ ಹಾಗೆಯೇ ನ್ಯೂನಾತಿರಿಕ್ತ ಪ್ರಾಯಶ್ಚಿತ್ತ ರೂಪವಾಗಿ ಕರ್ಮಫ‌ಲ ಪ್ರಾಪ್ತಿಯಲ್ಲಿನ ನಾಮತ್ರಯಜಪವೂ ಇಲ್ಲಿ ಹರಡಿದೆ.

ಹುಟ್ಟಿದವನಿಗೆ ದೇಹದ ಮಾಧ್ಯಮದಲ್ಲಿ ನಾಮ ಕರಣ, ಅನ್ನಾಶನ ಮುಂತಾದ ಹತ್ತುಹದಿನಾರು ಸಂಸ್ಕಾರ ಗಳು ನಡೆಯುತ್ತವೆ. ಹೀಗೆಯೆ ಸತ್ತಬಳಿಕವೂ ದೇಹ ಮಾಧ್ಯಮದಿಂದ ಆತನಿಗೆ ಹದಿನಾರು ಸಂಸ್ಕಾರಗಳು ನಡೆಯಲಿವೆ. ಇದನ್ನು ಅಪರಕರ್ಮಗಳೆಂದು ಗುರುತಿಸುವರು.
ಸತ್ತ ಬಳಿಕ ಹತ್ತು ದಿನಗಳ ಪಿಂಡಗಳು ಸೇರಿ ಶವಕ್ಕೆ ಸಂಬಂಧಿಸಿದಂತೆ ಶವ ಇದ್ದ ಸ್ಥಾನದಲ್ಲಿ, ದ್ವಾರದಲ್ಲಿ, ಅರ್ಧದಾರಿಯಲ್ಲಿ, ಚಟ್ಟದಲ್ಲಿ, ಹೆಣದ ಕೈಯಲ್ಲಿ ಮತ್ತೆ ಅಸ್ಥಿಸಂಚಯನದಲ್ಲಿ ಹಾಕಿದ ಆರು ಪಿಂಡಗಳು ಸೇರಿ ಹದಿನಾರು ಮಲಿನ ಶ್ರಾದ್ಧಗಳು. ವಿಷ್ಣು, ಶಿವ, ಯಮಪರಿವಾರ, ಸೋಮ, ಹವ್ಯವಾಹ, ಕವ್ಯವಾಹ, ಕಾಲ, ರುದ್ರ, ಪುರುಷ, ಪ್ರೇತ, ವಿಷ್ಣು, ಬ್ರಹ್ಮ, ವಿಷ್ಣು, ಶಿವ, ಯಮ, ತತು³ರುಷರಿಗೆ ನೀಡುವ ಪಿಂಡಗಳು ಮಧ್ಯಮ 16 ಶ್ರಾದ್ಧಗಳು. 12 ತಿಂಗಳು ಮತ್ತೆ ಪಾಕ್ಷಿಕ, ತ್ರಿಪಾಕ್ಷಿಕ, ಊನಷಾಣಾ¾ಸಿಕ, ಊನಾಬ್ದಿಕ ಸೇರಿ ಹದಿನಾರು ಉತ್ತಮ ಶ್ರಾದ್ಧಗಳು. ಹೀಗೆ ಪಿತೃಪಂಕ್ತಿ ಸೇರಲು 48 ಶ್ರಾದ್ಧಗಳು ಮೃತವ್ಯಕ್ತಿಗೆ ಆಗಬೇಕು. 48 ಶ್ರಾದ್ಧ ಮಾಡದೆ ಹೋದರೆ ಆತ ಪ್ರೇತನಾಗುವನು. ಸದ್ಗತಿ ಪಡೆಯಲಾರನೆಂದು ಗರುಡನಿಗೆ ಶ್ರೀಕೃಷ್ಣನು ಹೇಳಿದ ಮಾತಿನ ಅರ್ಥ.

ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ ಪೂರ್ತಿಯಾಗಿ ಪಿತೃಗಳ ಉದ್ದಿಶ್ಯ ಶ್ರಾದ್ಧ ಮತ್ತು ತಿಲತರ್ಪಣವನ್ನು ನಡೆಸಬೇಕು. ಅಶೌಚಾದಿ ವಿಘ್ನ ಬಂದಲ್ಲಿ ಮುಂದಿನ ತಿಂಗಳ ಆಶ್ವಯುಜ ಕೃಷ್ಣಪಕ್ಷದಂದು ಪಿತೃಕಾರ್ಯವನ್ನು ಮಾಡಬೇಕು.

ಏಳ ಪಿತೃಗಳು: ಮೂರ್ತರು – ಸುಕಾಲರು, ಆಂಗೀರಸರು, ಸುಸ್ವಧರು, ಸೋಮಪರು. ಅಮೂರ್ತರು- ವೈರಾಜರು, ಅಗ್ನಿಷ್ವಾತ್ತರು, .ಹೀಗೆ ನಮ್ಮ ಋಣಪರಿಹಾರಕ್ಕೆ ನಡೆಸುವ ದೇವ ಯಜ್ಞ, ಭೂತಯಜ್ಞ, ನೃಯಜ್ಞ, ಋಷಿಯಜ್ಞಗಳಂತೆ ಪಿತೃಯಜ್ಞವೂ ಹರಿಯ ಪೂಜೆಯಲ್ಲಿಯೇ ಕೊನೆಗೊಳ್ಳುವಂತಿರಬೇಕು. ಹೀಗೆ ಪಿತೃಯಜ್ಞದಲ್ಲಿ ಹರಿಯ ಹಿಂದಿನದಿನದ ನಿರ್ಮಾಲ್ಯ ಗಂಧ ಪುಷ್ಪ ಪತ್ರ ವಸ್ತ್ರಗಳ ಮತ್ತು ಅಂದಿನ ತೀರ್ಥ ನೈವೇದ್ಯಗಳ ವಿನಿಯೋಗದ ರಹಸ್ಯ.

ಮಹಾಭಾರತದ ಧರ್ಮರಾಜನ ಯಮಾ ವತಾರನ ಉತ್ತರದಂತೆ ಅವಲೋಕಿಸಿದರೆ ಶ್ರಾದ್ಧವು ಬ್ರಾಹ್ಮಣ ಸಿಕ್ಕಾಗ, ಯೋಗ್ಯ ಪಾತ್ರ ದೊರೆತಾಗ ಮುಖ್ಯವಾಗಿ ಮಾಡಲಿರುವ ಕೈಂಕರ್ಯವೆಂದು ಸ್ಪಷ್ಟವಾಗುವುದು. ಈ ಹಿನ್ನೆಲೆಯಲ್ಲಿ ಶ್ರಾದ್ಧವು ಶ್ರದ್ಧೆಯಿಂದ ನಡೆವಂತೆ ಯೋಗ್ಯ ಅರಿವಿನಿಂದಲೂ ಕಾಲ, ದೇಶ, ದ್ರವ್ಯ, ಪಾತ್ರ, ತಂತ್ರ, ಮಂತ್ರಗಳ ಶುದ್ಧತೆಯಿಂದಲೂ ನಡೆಯುವಂತಾಗಲಿ. ಎಲ್ಲರೂ ತಂದವರ ನೆನಪಿನಲ್ಲಿ ಈ ಹದಿನೈದು ದಿನಗಳಲ್ಲಿ ಅಥವಾ ಒಂದಾದರೂ ದಿನದಲ್ಲಿ ವಿಶೇಷವಾಗಿ ಮಹಾಲಯ ಅಮಾವಾಸ್ಯೆಯಂದಾಗಲೀ ಅವರ ಹೆಸರಿನಲ್ಲಿ ದಾನ-ಧರ್ಮಗಳನ್ನು ಅನ್ನವಿತರಣೆಗಳನ್ನು ಶ್ರದ್ಧೆಯಿಂದ ನಡೆಸಬೇಕು.

– ಡಾ| ಉಡುಪಿ ರಾಮನಾಥ ಆಚಾರ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next