ಬೆಂಗಳೂರು: ನಗರದಲ್ಲಿ ಮಹಾಲಯ ಅಮಾವಾಸ್ಯೆ ಅಂಗವಾಗಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಮುಖ ದೇವಸ್ಥಾನಗಳಲ್ಲಿ ಹಿರಿಯರ ಸ್ಮರಣಾರ್ಥ ವಿಶೇಷ ಪೂಜೆ, ತರ್ಪಣ ಬಿಡುವುದು, ಅನ್ನದ ಬುತ್ತಿ ಅರ್ಪಿಸುವುದು ಕಂಡುಬಂತು. ಇದರಿಂದ ಪ್ರಮುಖ ದೇವಸ್ಥಾನಗಳು ಎಂದಿಗಿಂತ ಹೆಚ್ಚು ಜನದಟ್ಟಣೆಯಿಂದ ಕೂಡಿತ್ತು.
ನಗರದ ಚಿRಕಪೇಟೆಯಲ್ಲಿರುವ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನಜಾವ 6 ಗಂಟೆಯಿಂದಲೇ ದರ್ಶನಕ್ಕಾಗಿ ಜನ ಸಾಲುಗಟ್ಟಿ ನಿಂತಿದ್ದರು. ದೇವಸ್ಥಾನದ ಮುಂಭಾಗದಲ್ಲಿ ಪುರೋಹಿತರು, ಬರುವ ಭಕ್ತರಿಂದ ಹಿರಿಯರಿಗೆ ತರ್ಪಣ ಬಿಟ್ಟು, ಮೋಕ್ಷ ಕೊಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಪೂಜೆ ಸಲ್ಲಿಸಿ ತರ್ಪಣ ಬಿಟ್ಟ ಮೇಲೆ ಊಟ ಮಾಡಿದರು.
ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನವೊಂದಕ್ಕೇ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ. ತರ್ಪಣ ಬಿಟ್ಟು, ಸ್ವಾಮಿಯ ದರ್ಶನ ಮಾಡಿ ತೀರ್ಥವನ್ನು ಮನೆಗೆ ತೆಗೆದುಕೊಂಡು ಹೋಗುವುದು, ನಂತರ ಮನೆಸುತ್ತಲೂ ಪ್ರೋಕ್ಷಣೆ ಮಾಡುವುದು ಸಾಮಾನ್ಯವಾಗಿತ್ತು. ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸುಮಾರು ನೂರು ವರ್ಷಗಳಿಂದ ಈ ಆಚರಣೆ ನಡೆಯುತ್ತಿದೆ.
“ನಾನು ಈ ದೇವಸ್ಥಾನಕ್ಕೆ ಕಳೆದ ಐದು ವರ್ಷಗಳಿಂದ ನಿಯಮಿತವಾಗಿ ಬರುತ್ತಿದ್ದೇನೆ. ಇಲ್ಲಿ ಪೂಜೆ ಮಾಡಿಸಿ ತರ್ಪಣ ಬಿಟ್ಟರೆ ಕಾಶಿಗೆ ಹೋಗಿ ನಮ್ಮ ಪೂರ್ವಜರಿಗೆ ಮೋಕ್ಷ ಕೊಡಿಸಿದಂತೆ ಎಂಬ ನಂಬಿಕೆ ಇದೆ. ಪೂಜೆ ಮುಗಿದ ಮೆಲೆ ಸ್ವಾಮಿಯ ದರ್ಶನ ಮಾಡುವುದು ಸಂಪ್ರದಾಯ’ ಎಂದು ನಗರದ ಆರ್. ಭೂಪತಿ ತಿಳಿಸಿದರು.
ಅದೇ ರೀತಿ, ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲೂ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಕೆಲವರು ತಮ್ಮ ಗ್ರಾಮಗಳಿಗೆ ತೆರಳಿ ಅಥವಾ ನದಿ ದಡದಲ್ಲಿ ತರ್ಪಣ ಬಿಡುವ ಮೂಲಕ ಹಿರಿಯರಿಗೆ ಪೂಜೆ ಸಲ್ಲಿಸಿದರು. ನಂತರ ಅಲ್ಲಿಯೇ ಊಟ ಮಾಡಿ ನಗರಕ್ಕೆ ವಾಪಸ್ಸಾದರು.
ಗಣ್ಯರಿಂದ ವಿಶೇಷ ಪೂಜೆ: ಈ ಮಧ್ಯೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನಡೆಸಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪೂಜೆಯಲ್ಲಿ ಭಾಗವಹಿಸಿದ್ದರು. ಅದೇ ರೀತಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಗರದ ಸರ್ಕಲ್ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.