Advertisement

ಪರ್ಯಾಯ ರಂಗದ ಕಸರತ್ತು ಫ‌ಲಿಸೀತೆ?

04:40 AM May 08, 2019 | Team Udayavani |

ಬಾಕಿ ಉಳಿದಿರುವ ಎರಡು ಹಂತಗಳ ಮತದಾನ ಮುಗಿದು ಫ‌ಲಿತಾಂಶ ಪ್ರಕಟವಾಗಲು 15 ದಿನಗಳಷ್ಟೇ ಬಾಕಿ ಉಳಿದಿದೆ. ಅದರ ನಡುವೆಯೇ ಕಾಂಗ್ರೆಸ್‌-ಬಿಜೆಪಿ ರಹಿತ ಪರ್ಯಾಯ ರಂಗ ರಚನೆಗೆ ಪ್ರಯತ್ನಗಳು ವೇಗ ಪಡೆದುಕೊಂಡಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಟಿಆರ್‌ಎಸ್‌ ಸಂಸ್ಥಾಪಕ ಕೆ.ಚಂದ್ರಶೇಖರ ರಾವ್‌ ನಡುವೆ ಸೋಮವಾರ ನಡೆದ ಮಾತುಕತೆ ಅದಕ್ಕೊಂದು ಪುಷ್ಟಿ ಕೊಟ್ಟಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ಮಹಾಮೈತ್ರಿ ಕೂಟ ನಡೆಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿರುವಂತೆಯೇ ಕಳೆದ ವರ್ಷ ಈ ಪ್ರಯತ್ನ ನಡೆದಿದ್ದರೂ, ಅದು ಅರ್ಧಕ್ಕೇ ನಿಂತು ಹೋದಂತೆ ಇತ್ತು. ಇದೀಗ ಕಾಂಗ್ರೆಸ್‌ ಅಥವಾ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ ಸಿಗಲಾರದು ಎಂಬ ಹಲವು ಅಭಿಪ್ರಾಯಗಳ ನಡುವೆಯೇ 1989 ರಿಂದ 1991ರ ಅವಧಿಯ ರಾಷ್ಟ್ರೀಯ ರಂಗ (ನ್ಯಾಷನಲ್ ಫ್ರಂಟ್) ಮತ್ತು ‘1996’ ಪ್ರಯೋಗವನ್ನು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮತ್ತೆ ಮುಂಚೂಣಿಗೆ ತರುವ ಯತ್ನವಾಗಿದೆ.

Advertisement

ನವದೆಹಲಿಯಲ್ಲಿ ದಕ್ಷಿಣ ಭಾರತದಿಂದ ಪ್ರಧಾನಿಯಾಗುವ ವ್ಯಕ್ತಿಯನ್ನು ಆಯ್ಕೆ ಮಾಡುವ ವಿಷಯ ವಿಜಯನ್‌ ಮತ್ತು ರಾವ್‌ ನಡುವಿನ ಮಾತುಕತೆಯಲ್ಲಿ ಪ್ರಸ್ತಾಪವಾಗಿದೆ ಎಂಬ ಹಲವು ಮಾಧ್ಯಮ ವರದಿಗಳಿಂದಾಗಿ ಭೇಟಿಯ ಬಗ್ಗೆ ಮತ್ತಷ್ಟು ಕುತೂಹಲ ಉಂಟಾಗಿದೆ. ಪಿಣರಾಯಿ ವಿಜಯನ್‌ ಹೇಳಿಕೆ ಪ್ರಕಾರ ಪ್ರಧಾನಮಂತ್ರಿ ಆಯ್ಕೆ ಬಗ್ಗೆ 23ರ ಬಳಿಕ ಚರ್ಚೆ ನಡೆಸಲಾಗುತ್ತದೆ. ಆದರೆ, ಕೇಂದ್ರದಲ್ಲಿ ದೇಶದ ಒಕ್ಕೂಟ ವ್ಯವಸ್ಥೆಗೆ ಗೌರವ ನೀಡುವ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಹೀಗಾಗಿ ಈ ಸಭೆ ಮಹತ್ವದ್ದೇ ಆಗಿದೆ ಎಂದಿದ್ದಾರೆ.

ದಕ್ಷಿಣದಿಂದ ಪ್ರಧಾನಿ ಆಯ್ಕೆ ಆದರೆ ಅದು ಯಾರಾಗಲಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಈ ನಿಟ್ಟಿನಲ್ಲಿ ಮೊದಲು ಕೇಳಿಬರುವ ಹೆಸರು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರದ್ದು. ಅತಂತ್ರ ಫ‌ಲಿತಾಂಶ ಬರಲಿದೆ ಎಂಬ ಅಭಿಪ್ರಾಯಗಳ ನಡುವೆಯೇ, ಅವರು ನವದೆಹಲಿಯಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳ ನಾಯಕರ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ಕಾರಣಕ್ಕಾಗಿಯೇ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದ ಕುನ್ವರ್‌ ಡ್ಯಾನಿಷ್‌ ಅಲಿ ಅವರಿಗೆ ಬಿಎಸ್‌ಪಿ ಸೇರ್ಪಡೆಗೆ ಅವಕಾಶ ನೀಡಿ, ಅಗತ್ಯ ಬಿದ್ದರೆ ಮಾಯಾವತಿ ಬೆಂಬಲ ಗಳಿಸುವ ನಿಟ್ಟಿನಲ್ಲಿ ಜೆಡಿಎಸ್‌ ವರಿಷ್ಠ ಮುಂದಾಲೋಚನೆ ಮಾಡಿದ್ದು ಇರಬಹುದು.

ದಕ್ಷಿಣದ ಮತ್ತೂಬ್ಬ ಪ್ರಮುಖ ನಾಯಕ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌, ಅವರೂ ಕೂಡ ಅವಕಾಶ ಸಿಕ್ಕಿದರೆ ಪ್ರಧಾನಿಯಾಗಲು ಸಿದ್ಧ ಎಂದು ಪರೋಕ್ಷವಾಗಿ ಅಭಿಲಾಶೆ ವ್ಯಕ್ತಪಡಿಸಿದವರೇ. ಹೀಗಾಗಿ, ಮತ್ತೂಮ್ಮೆ ರಾಷ್ಟ್ರೀಯ ರಂಗ ರಚನೆಯಾಗುವುದಾದರೆ, ಅದರ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಜತೆಗೆ ಚಂದ್ರಶೇಖರ ರಾವ್‌ ಮಾಡಬೇಕಾಗಿದ್ದ ಭೇಟಿಯೂ ಆಗಿಲ್ಲ. 90ರ ಅವಧಿಯ ಪ್ರಯೋಗ ಗಮನಿಸುವುದಾದರೆ, ಮೂವರು ಪ್ರಧಾನಿಗಳು ಅಧಿಕಾರಕ್ಕೆ ಏರಿದ್ದರು. 1996ರ ಪ್ರಯೋಗದಲ್ಲಿ ದೇವೇಗೌಡರು ಮತ್ತು ಐ.ಕೆ.ಗುಜ್ರಾಲ್ ಅಧಿಕಾರ ನಡೆಸಿದ್ದರು. ಅದೂ ಕಾಂಗ್ರೆಸ್‌ ಬೆಂಬಲದ ಜತೆಗೆ. ತೃತೀಯ ರಂಗದ ಪ್ರಸ್ತಾಪವೇ ಮೈನಸ್‌ ಕಾಂಗ್ರೆಸ್‌ ಮೈನಸ್‌ ಬಿಜೆಪಿ.

ಮೈತ್ರಿಕೂಟ ರಚನೆಯ ಪ್ರಯತ್ನ ತಪ್ಪಲ್ಲ. ಆದರೆ, ನಿರ್ದಿಷ್ಟ ಯೋಜನೆ, ಗುರಿ, ನಾಯಕ ಇಲ್ಲದ ರಾಜಕೀಯ ಒಕ್ಕೂಟದ ಅಸ್ತಿತ್ವವೇ ಪ್ರಶ್ನಾರ್ಹ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಜತೆಗೆ ಇತ್ತೀಚೆಗೆ ಮಹಾಮೈತ್ರಿ ಬಗ್ಗೆ ಮಾತನಾಡಿದ್ದರು. ಅದು ಜಂಟಿ ಸುದ್ದಿಗೋಷ್ಠಿಗೆ ಮಾತ್ರ ಸೀಮಿತವಾಗಿತ್ತು. ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರಿಗೂ ರಾಷ್ಟ್ರ ಮಟ್ಟದಲ್ಲಿ ಕಿಂಗ್‌ ಮೇಕರ್‌ ಆಗುವ ಉಮೇದು ಬಹಿರಂಗ ರಹಸ್ಯ.

Advertisement

ದಕ್ಷಿಣ ಭಾರತದಲ್ಲಿ ಒಟ್ಟು 123 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ ತೃತೀಯ ರಂಗದ ಪಕ್ಷಗಳು ಎಂದು ಹೇಳಿಕೊಳ್ಳುವ ಪಕ್ಷಗಳಿಗೆ ಅವುಗಳದ್ದೇ ಆದ ಲೆಕ್ಕಾಚಾರವಿದೆ. ಕರ್ನಾಟಕದಲ್ಲಿ ಬಿಜೆಪಿ ಪ್ರಬಲವಾಗಿದೆ. ಉಳಿದಂತೆ ಕಾಂಗ್ರೆಸ್‌, ಸಿಪಿಎಂ, ಪಿಎಂಕೆ, ಡಿಎಂಕೆ, ಎಂಡಿಎಂಕೆ, ಟಿಆರ್‌ಎಸ್‌, ಜೆಡಿಎಸ್‌, ಎಐಎಡಿಎಂಕೆ, ಎಂಐಎಂ ಹೀಗೆ ಹಲವು ಪಕ್ಷಗಳು ಇವೆ. ತಮಿಳುನಾಡಿನಲ್ಲಿರುವ ಕೆಲವು ಪಕ್ಷಗಳು ಎನ್‌ಡಿಎ ಜತೆಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿವೆ. 2 ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿದ ಮೈತ್ರಿಕೂಟ ರಚನೆಯೇ ಈಗಿನ ಹಂತದಲ್ಲಿ ಪ್ರಶ್ನಾರ್ಹವೇ ಸರಿ. ಏಕೆಂದರೆ ಅವುಗಳನ್ನು ಹಿಂದಿನ ಸಂದರ್ಭಗಳಲ್ಲಿ ರಚಿಸಿದ ಬಳಿಕದ ಫ‌ಲಿತಾಂಶ ದೇಶದ ಜನರ ಮುಂದೆ ಇದೆ. ಅದನ್ನು ಮುಂದಿಟ್ಟುಕೊಂಡೇ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆ ಎಂದು ಲೇವಡಿ ಮಾಡಿದ್ದುಂಟು. ಅದಕ್ಕಾಗಿಯೇ ಗ್ರಾಮೀಣ ಭಾಗದಲ್ಲಿ ಹೇಳುವ ‘ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದರು’ ಮಾತನ್ನು ಅನ್ವಯಿಸದೆ ವಿಧಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next