ಬನ್ನೂರು: ರಾಜ್ಯದ ಎಲ್ಲಾ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಿದ ಕೀರ್ತಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಲ್ಲಬೇಕೆಂದು ಯಾಚೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವೈ.ಎನ್.ಶಂಕರೇಗೌಡ ತಿಳಿಸಿದರು. ಪಟ್ಟಣದ ಅತಿಥಿ ಗೃಹಕ್ಕೆ ಆಗಮಿಸಿದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಉತ್ತಮ ಕೆಲಸವನ್ನು ನಿರ್ವಹಿಸುತ್ತಿದೆ. ಕಾಂಗ್ರೆಸ್ ಮಾಡಿರುವ ಸಾಧನೆಯನ್ನು ಮನೆ ಮನೆಗೂ ತಿಳಿಸುವ ಕಾರ್ಯವನ್ನು ಶೀಘ್ರದಲ್ಲೇ ಹಮ್ಮಿಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಬೇಕೆಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಇಂದು ತಾವು ನರಸೀಪುರ ಕ್ಷೇತ್ರದಲ್ಲಿ ಎಲ್ಲಾ ವಿಧದಲ್ಲೂ ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡುತ್ತಿದ್ದು, ಯಾವುದೇ ಪ್ರಚಾರದ ಗೀಳಿಗೆ ಇಳಿಯಲಿಲ್ಲ. ತಾವು ಒಬ್ಬ ಜನಪರ ಕಾರ್ಯವನ್ನು ನಿರ್ವಹಿಸುವ ಉದ್ದೇಶ ಹೊಂದಿದ್ದು ಆ ನಿಟ್ಟಿನಲ್ಲಿಯೇ ಕೆಲಸವನ್ನು ಮಾಡುತ್ತಿರುವುದಾಗಿಯೂ ತಿಳಿಸಿದರು.
ಜಾತಿಯನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಬಂದವರಲ್ಲ. ಅಭಿವೃದ್ಧಿಯೇ ತಮ್ಮ ಮೂಲ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿಯೇ ತಮಗೆ ವೋಟನ್ನು ಹಾಕದಿರುವ ಹಳ್ಳಿಗಳಿಗೂ ರಸ್ತೆ ಅಭಿವೃದ್ಧಿಗಾಗಿ ನೂರಾರು ಕೋಟಿರೂ.,ಗಳನ್ನು ಬಿಡುಗಡೆ ಮಾಡಿಸಿದ್ದೇನೆಂದು ತಿಳಿಸಿದರು. ಸೈಯಾದ್ ಯಾಯ್ಯ, ಬಸವರಾಜು, ರಮೇಶ್, ಚಾಮನಹಳ್ಳಿ ಶ್ರೀನಿವಾಸ್, ಬೀಡನಹಳ್ಳಿ ಚೆನ್ನಕೇಶವ, ಕೃಷ್ಣ, ಯಾಚೇನಹಳ್ಳಿ ಕ್ಯಾತೇಗೌಡ, ಮಹೇಂದ್ರ, ಮಹದೇವಸ್ವಾಮಿ ಮತ್ತಿತರರಿದ್ದರು.