Advertisement

Dharwad; ಮಹಾದಾಯಿ ವಿವಾದ ಬಗೆ ಹರಿಸದಿದ್ದರೆ ಹು-ಧಾ ನೀರು ಬಂದ್

06:49 PM Mar 05, 2024 | Team Udayavani |

ಧಾರವಾಡ: ಲೋಕಸಭಾ ಚುನಾವಣಾ ಘೋಷಣೆಗೂ ಮುನ್ನವೇ ಮಹಾದಾಯಿ ಯೋಜನೆಗೆ ಚಾಲನೆ ದೊರೆಯಬೇಕು. ಒಂದು ವೇಳೆ ದೊರೆಯದಿದ್ದಲ್ಲಿ ಮೊದಲನೆಯದಾಗಿ ಹು-ಧಾ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಅಮ್ಮಿನಬಾವಿಯಲ್ಲಿರುವ ಮಲಪ್ರಭಾ ನೀರಿನ ಜಾಕವೆಲ್ ಬಂದ್ ಮಾಡಲು ತೀರ್ಮಾನ. ಇದಾದ ಬಳಿಕ ಲೋಕಸಭಾ ಚುನಾವಣೆಯ ಮತದಾನವೇ ಬಹಿಷ್ಕಾರ..!

Advertisement

ಮಹದಾಯಿ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಒಂಬತ್ತು ತಾಲೂಕುಗಳ ಹೋರಾಟಗಾರರು ಕೈಗೊಂಡ ಒಮ್ಮತದ ನಿರ್ಧಾರವಿದು.

ನಗರದ ಕವಿಸಂನಲ್ಲಿ ನಡೆದ ಮಹಾದಾಯಿ ಹೋರಾಟಗಾರರ ಚಿಂತನಾ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ಕೈಗೊಂಡು, ಆ ಬಳಿಕ ಒಮ್ಮತದಿಂದ ಈ ತೀರ್ಮಾನ ಪ್ರಕಟಿಸಲಾಯಿತು.

ಮೊದಲ ಹಂತದಲ್ಲಿ ಹು-ಧಾ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ಅಮ್ಮಿನಬಾವಿಯಲ್ಲಿ ಇರುವ ಮಲಪ್ರಭಾ ನೀರಿನ ಜಾಕವೆಲ್ ಬಂದ್ ಮಾಡಲು ನಿರ್ಧರಿಸಲಾಗಿದ್ದು, ಇದರ ಮುಂದಿನ ಭಾಗವಾಗಿ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ಬಹಿಷ್ಕಾರ, ಅಸಹಕಾರ ಚಳುವಳಿ, ತೆರಿಗೆ ತುಂಬದಿರುವುದು ಸೇರಿದಂತೆ ದೆಹಲಿ ಮಾದರಿಯಲ್ಲಿ ಹೋರಾಟ ಕೈಗೊಳ್ಳಲು ನಿರ್ಧರಿಸಲಾಯಿತು. ಯಾವುದೇ ಕಾರಣಕ್ಕೂ ರೈತರ, ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದರೂ, ಜೈಲಿಗೆ ಕಳುಹಿಸಿದರೂ ಜಗ್ಗದೆ ದೆಹಲಿ ಮಾದರಿಯಲ್ಲಿ ಹೋರಾಟ ಮಾಡುವುದಾಗಿ ಹೋರಾಟಗಾರರು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡರು.

ಇದಕ್ಕೂ ಮುನ್ನ ಮಾತನಾಡಿದ ಹೋರಾಟಗಾರ ಬಸವರಾಜ ಸಾಬಳೆ, ಕೇಂದ್ರದಲ್ಲಿ ಮಾತ್ರವಲ್ಲದೇ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲೂ ಬಿಜೆಪಿ ಆಡಳಿತ ಇದ್ದಾಗಲೂ ಕುಡಿಯುವ ನೀರಿನ ಮಹಾದಾಯಿ ಯೋಜನೆ ಜಾರಿಗೆ ತರದೇ ಇರುವುದು ಈ ಭಾಗದ ಜನರ ದುರಂತ. ರಾಜಕಾರಣಿಗಳು ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ದೂರಿದರು.

Advertisement

ಕವಿಸಂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ರಾಜಕಾರಣಿಗಳು ರೈತರನ್ನು ಹಾಗೂ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಸಾಮಾನ್ಯ ಜನರು ರೊಚ್ಚಿಗೆದ್ದರೆ ಏನಾಗುತ್ತದೆ ಎಂಬುದನ್ನು ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಬೇಕಿದ್ದು,ಈ  ಹೋರಾಟಕ್ಕೆ ಬೆಂಬಲ ಇದೆ ಎಂದರು.

ಮಹದಾಯಿ ಹೋರಾಟಗಾರ ಲೋಕನಾಥ ಹೆಬಸೂರ ಮಾತನಾಡಿ, ಮಹಾದಾಯಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರೀ ಸುಳ್ಳಿನ ಮಾಲೆಯನ್ನು ಹಾಕಿದ್ದಾರೆಯೇ ಹೊರತು ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ. ಹಸಿರು ಟಾವೆಲ್ ಹಾಕಿ ಶಾಸಕರು, ಮಂತ್ರಿಗಳಾದರು.

ಸ್ವಾರ್ಥಕ್ಕಾಗಿ ಯೋಜನೆ ಬಳಸಿಕೊಂಡು ಈಗ ಮತ್ತೊಂದು ಚುನಾವಣೆಗೆ ಮತ ಕೇಳಲು ಬರುತ್ತಿದ್ದಾರೆ. ಅವರಿಗೆ ನಮ್ಮೂರುಗಳಲ್ಲಿ ಬರದಂತೆ, ಭಾಷಣ ಮಾಡಿ ಮತ ಕೇಳುವುದನ್ನು ತಡೆಯುವ ನಿಟ್ಟಿನಲ್ಲಿ ಹೋರಾಟ ಗಟ್ಟಿಗೊಳಿಸಬೇಕು ಎಂಬ ಸಲಹೆ ನೀಡಿದರು.

ಚಿಂತಕ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಈ ಯೋಜನೆ ವಿಚಾರವಾಗಿ ನಾಲ್ಕು ಜಿಲ್ಲೆಗಳ ಮತದಾರರು ಚುನಾವಣಾ ಬಹಿಷ್ಕಾರ ಹಾಕಬೇಕು. ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜಾಕವೆಲ್ ಬಂದ್ ಮಾಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಜಿಎಸ್‌ಟಿ ಹಾಗೂ ತೆರಿಗೆ ಕಟ್ಟುವಂತಿಲ್ಲ ಮತ್ತು ಅಸಹಕಾರ ಚಳುವಳಿ ಮೂಲಕ ಹೋರಾಟವನ್ನು ಗಟ್ಟಿಗೊಳಿಸಬೇಕು ಎಂದರು.

ರಾಮದುರ್ಗದ ಕೃಷ್ಣಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಿವಾನಂದ ಪಾಟೀಲ, ಶಂಕರಗೌಡ ಹಾಗೂ ನರಗುಂದ, ನವಲಗುಂದ, ಬೆಳಗಾವಿ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಹು-ಧಾ ಅವಳಿ ನಗರಕ್ಕೆ ಕುಡಿಯುವ ನೀರು ಒದಗಿಸುವದೇ ಮಹಾದಾಯಿ ಯೋಜನೆ ಪ್ರಮುಖ ಉದ್ದೇಶ. ಅದಕ್ಕಾಗಿ ರೈತರು ಹೋರಾಟ ಮಾಡುತ್ತಿದ್ದು, ಅವಳಿ ನಗರದ ಜನತೆಯಿಂದ ಹೋರಾಟಕ್ಕೆ ಸ್ಪಂದನೆಯೇ ಇಲ್ಲವಾಗಿದೆ. ಅವಳಿ ನಗರದ ಜನತೆ ಹೋರಾಟಕ್ಕೆ ಸ್ಪಂದನೆ ನೀಡಿದರೆ, ನಮ್ಮ ಹೋರಾಟಕ್ಕೆ ಕೈ ಜೋಡಿಸಿದರೆ ಮಾತ್ರ ಜಾಕವೆಲ್ ಬಂದ್ ಮಾಡುವ ತೀರ್ಮಾನದಿಂದ ಹೊರ ಬರಲಾಗುವುದು ಎಂದು ಮಹದಾಯಿ ಹೋರಾಟಗಾರ ಶಂಕರ ಅಂಬಲಿ ಹೇಳಿದರು.

ಕಳೆದ ಚುನಾವಣೆ ಸಮಯದಲ್ಲಿ ಮಹದಾಯಿ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಆಗಿರುವುದಾಗಿ ಬಿಜೆಪಿ ಮುಖಂಡರು ಸಿಹಿ ಹಂಚಿ ವಿಜಯೋತ್ಸವ ಮಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆ ಎದುರು ಹೋರಾಟ ನಡೆಸಿದಾಗ ಒಂದು ತಿಂಗಳಲ್ಲಿ ಪರಿಸರ ಇಲಾಖೆಯಿಂದ ಪರವಾನಗಿ ಕೊಡಿಸುವುದಾಗಿ ಭರವಸೆ ನೀಡಿದರು. ಆರು ತಿಂಗಳಾದರೂ ಯೋಜನೆ ಜಾರಿಗೆ ಬರುತ್ತಿಲ್ಲ. ಟೆಂಡರ್ ಕರೆಯುತ್ತಿಲ್ಲ. ಹೀಗಾಗಿ ನಾವು ಎಚ್ಚೆತ್ತುಗೊಂಡು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ಬಸವರಾಜ ಸಾಬಳೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next