Advertisement

ನಾಲ್ಕನೇ ದಿನಕ್ಕೆ ಕಾಲಿಟ್ಟ ಮಹದಾಯಿ ಧರಣಿ

01:34 PM Dec 26, 2017 | |

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಮಲ್ಲೇಶ್ವರ ಬಿಜೆಪಿ ಕಚೇರಿ ಎದುರು ಮಹದಾಯಿ ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

Advertisement

ಯಡಿಯೂರಪ್ಪ ಸ್ಥಳಕ್ಕೆ ಧಾವಿಸಿ ತಮ್ಮ ಮನವಿ ಸ್ವೀಕರಿಸಿ ಸ್ಪಷ್ಟ ನಿಲುವು ತಿಳಿಸುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಧರಣಿ ನಿರತರು ಪಟ್ಟುಹಿಡಿದ್ದಿದ್ದಾರೆ. ಈ ಮಧ್ಯೆ ಪರಿವರ್ತನಾ ಯಾತ್ರೆಯಲ್ಲಿ ತೊಡಗಿಕೊಂಡಿರುವ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು, ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಭೇಟಿಯಾಗಿ ಅವರ ಮನವೊಲಿಸುವ ಸಾಧ್ಯತೆ ಇದೆ.

ಗಣ್ಯರ ಬೆಂಬಲ: ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ನೂರಾರು ಮಹದಾಯಿ ಹೋರಾಟಗಾರರು ಬಿಜೆಪಿ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಆರಂಭಿಸಿದ್ದು, ಇದು ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿತ್ತು. ಈ ಮಧ್ಯೆ ಹಲವು ರಾಜಕೀಯ ಪಕ್ಷಗಳೂ ಧರಣಿ ನಿರತರಿಗೆ ಕೈಜೋಡಿಸಿದ್ದರು. ಅಲ್ಲದೆ, ಹೋರಾಟಗಾರರಿಗೆ ಜೆಡಿಎಸ್‌ ನಾಯಕರು, ಕನ್ನಡಪರ ಸಂಘಟನೆಗಳು, ಚಲನಚಿತ್ರ ವಾಣಿಜ್ಯ ಚಿತ್ರಮಂಡಳಿಯ ಸದಸ್ಯರು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಬೆಂಬಲ ಸೂಚಿಸಿದ್ದಾರೆ. 

ಉಪಾಹರಕ್ಕೆ ಮನವೊಲಿಕೆ: ಭಾನುವಾರ ಧರಣಿ ನಿರತರಿಗೆ ಉಪಹಾರ ಒದಗಿಸಲು ವಿಫ‌ಲ ಯತ್ನ ಮಾಡಿದ್ದ ವಿಧಾನಪರಿಷತ್‌ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಸೋಮವಾರವೂ ರೈತರಿಗೆ ಉಪಾಹಾರ ನೀಡಲು ಮುಂದಾದರು. ಆದರೆ, ಪ್ರತಿಭಟನಾ ನಿರತರು ಉಪಾಹಾರವನ್ನು ನಿರಾಕರಿಸಿ ರೈತರ ಸಮಸ್ಯೆ ಮೊದಲು ಬಗೆಹರಿಸುವಂತೆ ಪಟ್ಟುಹಿಡಿದರು.

ಯಾವುದೇ ಪಕ್ಷದ ಜನಪ್ರತಿನಿಧಿಯಿಂದ ಏನನ್ನೂ ಸ್ವೀಕರಿಸುವುದಿಲ್ಲ ಎಂದು ಹೇಳಿದರು. ಮನವೊಲಿಕೆ ಬಳಿಕ ಉಪಾಹಾರ ಸೇವಿಸಿದರು. ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡಿ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಮತ್ತು ಸಂಸದ ಪ್ರಹ್ಲಾದ ಜೋಷಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ರೈತರಿಗೆ ಭರವಸೆ ನೀಡಿದರು.

Advertisement

ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ ಬೆಂಬಲ ಸೂಚಿಸಿದರು.ಎಸ್‌ಡಿಪಿಐ ಕಾರ್ಯಕರ್ತರು, ಆಟೋ ರಿಕ್ಷಾ ಚಾಲಕರ ಯೂನಿಯನ್‌ ಸೇರಿದಂತೆ ಸಾರ್ವಜನಿಕರು ಬಿಜೆಪಿ ಕಚೇರಿ ಬಳಿ ಆಗಮಿಸಿ ಹೋರಾಟಗಾರರಿಗೆ ಬೆಂಬಲ ಸೂಚಿಸಿದರು.

ಹೋರಾಟಗಾರರಿಗೆ ಆರೋಗ್ಯ ಸಮಸ್ಯೆ: ರೈತ ಅಸ್ವಸ್ಥ
3 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ಮಹದಾಯಿ ಹೋರಾಟಗಾರರಲ್ಲಿ ಕೆಲವರು ಅಸ್ವಸ್ಥಗೊಂಡಿದ್ದು, ತೀವ್ರ ಅಸ್ವಸ್ಥಗೊಂಡ ನರಗುಂದದ ರೈತ ಹನುಮಂತಪ್ಪ ಎಂಬುವರನ್ನು ಕೆ.ಸಿ.ಜನರಲ್‌ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅವರು ಗುಣಮುಖರಾಗಿದ್ದಾರೆ.

ಕೆಲವರು ಚಳಿ ಜ್ವರದಿಂದ ಬಳಲುತ್ತಿರುವ ಕಾರಣ ಆಂಬ್ಯುಲೆನ್ಸ್‌ನು° ಸ್ಥಳದಲ್ಲಿಯೇ ಇಡಲಾಗಿದ್ದು, ಹೋರಾಟಗಾರರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕೆಲವರು ಮಹಿಳೆಯರ ಆರೋಗ್ಯದಲ್ಲಿಯೂ ಏರುಪೇರಾಗಿದೆ. ಹೋರಾಟದಲ್ಲಿ ಪಾಲ್ಗೊಂಡಿರುವ ಮಕ್ಕಳನ್ನು ವೈದ್ಯರು ತಪಾಸಣೆ ಮಾಡಿದ್ದಾರೆ. ಕೆಲವು ಮಹಿಳೆಯರು ಮತ್ತು ಮಕ್ಕಳಿಗೆ ಚಿಕಿತ್ಸೆಯನ್ನೂ ನೀಡಿದ್ದಾರೆ.

ದೇವೇಗೌಡರ ಬೆಂಬಲ: ಮಹದಾಯಿ ಹೋರಾಟಗಾರರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೋರಾಟದ ನೇತೃತ್ವ ವಹಿಸಿರುವ ವೀರೇಶ್‌ ಸೊಬರದ ಮಠ ಅವರನ್ನು ಸೋಮವಾರ ದೂರವಾಣಿ ಮೂಲಕ ಸಂಪರ್ಕಿಸಿದ ಅವರು, ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ.

ನಾನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಹೋರಾಟಕ್ಕೆ ಬೆಂಬಲ ಘೋಷಿಸುತ್ತೇನೆ ಎಂದು ತಿಳಿಸಿದರು. ಮಾಜಿ ಸಚಿವ ಬಸವರಾಜ ಹೊರಟ್ಟಿ  ಪ್ರತಿಕ್ರಿಯಿಸಿ ಕಾಂಗ್ರೆಸ್‌, ಬಿಜೆಪಿ ನಾಯಕರು ಒಪ್ಪಿದರೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲು ಸಿದ್ಧ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next