Advertisement

ತನ್ನ ವಚನಗಳ ಮೂಲಕ ಸಮಾಜದ ಅಂಕು -ಡೊಂಕುಗಳನ್ನು ತಿದ್ದಿದ ಮಹಾನ್ ವ್ಯಕ್ತಿತ್ವ ಮಡಿವಾಳ ಮಾಚಿದೇವ

05:39 PM Feb 01, 2022 | Suhan S |

ಸೊರಬ: 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದು, ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಈರೇಶ ಮೇಸ್ತ್ರಿ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಪಂ, ಪುರಸಭೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಶ್ರೀ ಮಾಚಿದೇವ ಮಡಿವಾಳ ಸಂಘದಿಂದ ಹಮ್ಮಿಕೊಂಡ ಶ್ರೀ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಚನಗಳ ಮೂಲಕ ಸರ್ವರಿಗೂ ಸಮಪಾಲು – ಸಮಬಾಳು ಒದಗಿಸುವ ನಿಟ್ಟಿನಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಿದ ಶ್ರೇಷ್ಠ ವಚನಕಾರ ಮಡಿವಾಳ ಮಾಚಿದೇವರು ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಜನರಿಗೆ ಹತ್ತಿರವಾಗುವ ಭಾಷೆಯಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದರು. ವಚನಗಳ ಸಾರವನ್ನು ಪ್ರತಿಯೊಬ್ಬರು ಅರಿತು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಡಿವಾಳ ಸಮಾಜದವರು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಿಗಾಗಿ ಈ ಹಿಂದೆ ನಿವೇಶನ ನೀಡುವಂತೆ ಪುರಸಭೆಗೆ ಮನವಿ ಸಲ್ಲಿಸಿದ್ದರು. ಪುರಸಭೆಯ ಸಭೆಯಲ್ಲಿ ತೀರ್ಮಾನಿಸಿ ನಿವೇಶನವನ್ನು ಗುರುತಿಸಲಾಗಿದ್ದು, ಸರ್ಕಾರದ ನೀತಿ ನಿಯಮಗಳ ಅನ್ವಯ ಮಡಿವಾಳ ಸಂಘದವರು ಪಡೆದುಕೊಳ್ಳಲು ಮುಂದಾಗಬೇಕು. ಈಗಾಗಲೇ ಹಲವಾರು ಹಿಂದುಳಿದ ಸಮುದಾಯದವರು ಪರಿಶಿಷ್ಟ ಜಾತಿಯ ಮೀಸಲಾತಿಗೆ ಹೋರಾಟ ನಡೆಸುತ್ತಿದ್ದಾರೆ. ಹೋರಾಟ ನಿರಂತರವಾಗಿದ್ದಾಗ ಗೆಲುವು ಪಡೆಯಲು ಸಾಧ್ಯ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ ಮಾತನಾಡಿ, ಬಸವಣ್ಣನವರು ಸೇರಿದಂತೆ ಅನೇಕ ಶರಣರು ಸಮ ಸಮಾಜ ನಿರ್ಮಾಣಕ್ಕಾಗಿ ವಚನಗಳ ಮೂಲಕ ಜನರಲ್ಲಿರುವ ಮೌಢ್ಯಗಳನ್ನು ತೊಲಗಿಸಲು ಯತ್ನಿಸಿದ್ದಾರೆ. ಅಂತಹ ಮಹಾನ್ ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸಲ್ಲದು ಎಂದರು.

Advertisement

ಮಡಿವಾಳ ಮಾಚಿದೇವರ ಜೀವನ ಮತ್ತು ಸಂದೇಶಗಳ ಕುರಿತು ಶಿಕ್ಷಕ ಎನ್. ಗಣಪತಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ಮಾಚಿದೇವ ಮಡಿವಾಳ ಸಂಘದಿಂದ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಕುರಿತು ಮೈಸೂರು ವಿಶ್ವವಿದ್ಯಾಲಯದ ಪ್ರೊ. ಅನ್ನಪೂರ್ಣಮ್ಮ ನೀಡಿರುವ ವರದಿಯನ್ನು ಶೀಘ್ರವೇ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಸಲಾಯಿತು.

ಶ್ರೀ ಮಾಚಿದೇವ ಮಡಿವಾಳ ಸಂಘದ ಅಧ್ಯಕ್ಷ ಕೆ.ಪಿ. ಗುಡ್ಡಪ್ಪ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಮಂಜುಳಾ ಹೆಗಡಾಳ್, ಶಿರಸ್ತೆದಾರರಾದ ಎಸ್. ವಿಜಯಕುಮಾರ್, ನಿರ್ಮಲಾ, ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯೆ ಪ್ರೇಮಾ, ಪ್ರಮುಖರಾದ ಹುಚ್ಚರಾಯಪ್ಪ ದ್ಯಾವಾಸ, ಈಶ್ವರ ಚನ್ನಪಟ್ಟಣ, ಜಯಶೀಲಪ್ಪ, ಕಂದಾಯ ಇಲಾಖೆಯ ಸಿಬ್ಬಂದಿ ಪ್ರವೀಣ್ ಕುಮಾರ್, ಬಿ.ಜೆ. ವಿನೋದ್, ಅರುಣ್ ಕುಮಾರ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next