Advertisement

ಮಡಿಕೇರಿ: ದೇವಸ್ಥಾನಗಳ ಘಂಟೆಗಳೇ ಇವರ ಟಾರ್ಗೆಟ್! ಸೊತ್ತು ಸಹಿತ ನಾಲ್ವರ ಸೆರೆ

12:08 AM Jan 11, 2023 | Team Udayavani |

ಮಡಿಕೇರಿ: ಕೊಡಗು ಹಾಗೂ ನೆರೆಯ ಜಿಲ್ಲೆಗಳ ದೇವಾಲಯಗಳಲ್ಲಿನ ಘಂಟೆಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಕೊಡಗು ಜಿಲ್ಲಾ ಪೊಲೀಸ್‌ ವಿಶೇಷ ತಂಡ ಬಂಧಿಸಿದೆ.

Advertisement

ಮೈಸೂರಿನ ಆರ್‌.ಎಸ್‌. ನಾಯ್ಡು ನಗರದ ಅಮ್ಜದ್‌ ಆಹಮ್ಮದ್‌ (37), ಅಜ್ಜು ಲೇಜೌಟ್‌ನ ಸಮಿವುಲ್ಲಾ (22), ಹೈದರ್‌ (36) ಹಾಗೂ ಕೆಸರೆ ನಗರದ ಜುಲ್ಪಿಕರ್‌ (36) ಬಂಧಿತರು.

ಕಳವು ಮಾಡಿದ ಸುಮಾರು 750 ಕೆ.ಜಿ. ತೂಕದ ವಿವಿಧ ಮಾದರಿಯ ಲೋಹದ ಘಂಟೆಗಳು ಹಾಗೂ ಕಾರು ಸೇರಿದಂತೆ ಒಟ್ಟು 10 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ತಿಳಿಸಿದ್ದಾರೆ.

ಗೋಣಿಕೊಪ್ಪ ಪೊಲೀಸ್‌ ಠಾಣೆ ವ್ಯಾಪ್ತಿಯ ಮಾಯಮುಡಿ ಕಮಟೆ ಶ್ರೀ ಮಹದೇವ ದೇವಸ್ಥಾನ, ಪೊನ್ನಂಪೇಟೆ ಠಾಣೆ ವ್ಯಾಪ್ತಿಯ ನಿಟ್ಟೂರು ಕಾರ್ಮಾಡಿನ ಶ್ರೀ ಕಾಲಭೈರವೇಶ್ವರ ದೇವಸ್ಥಾನ, ಬಿಳೂರಿನ ಕಲ್ಲುಗುಡಿ ಶ್ರೀ ಈಶ್ವರ ದೇವಸ್ಥಾನ, ಬೆಸಗೂರಿನ ಶ್ರೀ ಮಹಾದೇವ ದೇವಸ್ಥಾನ ಮತ್ತು ಶ್ರೀ ದುರ್ಗಿ ದೇವಸ್ಥಾನ ಹಾಗೂ ಹಳ್ಳಿಗಟ್ಟಿನ ಭದ್ರಕಾಳಿ ದೇವಸ್ಥಾನ, ವೀರಾಜಪೇಟೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕರಡ ಮಲೆತಿರಿಕೆ ಈಶ್ವರ ದೇವಸ್ಥಾನ, ಕೆದಮಳ್ಳೂರಿನ ಶ್ರೀ ಮಹದೇವ ದೇವಸ್ಥಾನ, ನಾಪೋಕ್ಲು ಠಾಣೆ ವ್ಯಾಪ್ತಿಯ ಮಕ್ಕಿ ಶಾಸ್ತಾವು ದೇವಸ್ಥಾನಗಳಿಂದ

2022ನೇ ಸಾಲಿನ ಫೆಬ್ರವರಿಯಿಂದ ಅಕ್ಟೋಬರ್‌ ವರೆಗೆ ಸುಮಾರು 800 ಕೆ.ಜಿ. ತೂಕದ ಘಂಟೆಗಳು ಕಳ್ಳತನವಾದ ಬಗ್ಗೆ ಗೋಣಿಕೊಪ್ಪ ಪೊನ್ನಂಪೇಟೆ, ವೀರಾಜಪೇಟೆ ಗ್ರಾಮಾಂತರ ಹಾಗೂ ನಾಪೋಕ್ಲು ಠಾಣೆಗಳಲ್ಲಿ ಪ್ರತ್ಯೇಕವಾಗಿ ಒಟ್ಟು 18 ಪ್ರಕರಣಗಳು ದಾಖಲಾಗಿದ್ದವು.

Advertisement

ಪೊಲೀಸ್‌ ಅಧೀಕ್ಷಕ ಕ್ಯಾಪ್ಟನ್‌ ಎಂ.ಎ. ಅಯ್ಯಪ್ಪ, ವೀರಾಜಪೇಟೆ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ನಿರಂಜನ್‌ ರಾಜೇ ಆರಸ್‌ ಅವರ ಮಾರ್ಗದರ್ಶನದಲ್ಲಿ ವಿವಿಧ ವೃತ್ತಗಳ ಪ್ರಮುಖ ಪೊಲೀಸ್‌ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

3 ತಿಂಗಳ ಸತತ ಕಾರ್ಯಾಚರಣೆ
ಕಳವು ನಡೆದ ದೇವಸ್ಥಾನಗಳಿಂದ ಸಂಗ್ರಹಿಸಿದ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ಮೈಸೂರಿನವರೆಂದು ಪೊಲೀಸರಿಗೆ ದೃಢಪಟ್ಟಿತ್ತು. ಅದರಂತೆ ಪೊಲೀಸರ ತಂಡವು ಮೂರು ತಿಂಗಳ ಕಾಲ ಮೈಸೂರಿನಲ್ಲಿ ಠಿಕಾಣಿ ಹೂಡಿ ಆರೋಪಿಗಳ ಚಲನವಲನದ ಮೇಲೆ ಕಣ್ಣಿರಿಸಿ ಬಲೆಗೆ ಬೀಳಿಸಿದ್ದಾರೆ.

ಹೆಚ್ಚಾಗಿ ಹಳೆಯ ದೇವಸ್ಥಾನಗಳೇ ಕಳ್ಳರ ಗುರಿಯಾಗಿದ್ದವು. ಹಿಂದಿನ ಕಾಲದ ಘಂಟೆಗಳು ಹೆಚ್ಚು ಬೆಲೆಬಾಳುವವಾಗಿದ್ದು, ಅವುಗಳನ್ನು ಕರಗಿಸಿ ಮಾರಾಟ ಮಾಡುವ ಯೋಜನೆ ಅವರದಾಗಿತ್ತು. ಆದರೆ ಅದಕ್ಕೂ ಮುನ್ನ ಸೊತ್ತು ಸಹಿತ ಪೊಲೀಸರ ವಶವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next