Advertisement

Madikeri ಅಪಹರಣ-ದರೋಡೆ ಪ್ರಕರಣ: 8 ಮಂದಿ ಸೆರೆ

12:40 AM Apr 08, 2024 | Team Udayavani |

ಮಡಿಕೇರಿ: ಕುಶಾಲನಗರ ಪಟ್ಟಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎ. 4ರಂದು ವ್ಯಕ್ತಿಯೋರ್ವರನ್ನು ಅಪಹರಿಸಿ ಚಿನ್ನಾಭರಣ ಮತ್ತು ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಹೇಳಿದ್ದಾರೆ.

Advertisement

ಮೈಸೂರು ರಾಜೀವ್‌ ನಗರ 2ನೇ ಹಂತದ ನಿವಾಸಿ ಯಾಸಿನ್‌ (21), ಶ್ರೀರಾಮ್‌ಪುರ ನಿವಾಸಿ ರುಕ್ಸಾನಾ (23), ಗೌಸಿಯ ನಗರ ರಿಯಾಜ್‌ ಜಿನ್ನಾ ಮಸೀದಿ ಸಮೀಪದ ನಿವಾಸಿ ಸಹಬಾಜ್‌ (28), ಗೌಸಿಯ ನಗರ 10ನೇ ಕ್ರಾಸ್‌ ನಿವಾಸಿ ಅಬ್ದುಲ್‌ (21) ರೇಣುಕಾ ದೇವಿ ಬ್ಲಾಕ್‌, 3ನೇ ಕ್ರಾಸ್‌, ಗೌಸಿಯ ನಗರದ ಸುಹೇಲ್‌ ಅಹಮ್ಮದ್‌(30), ಪಿರಿಯಾಪಟ್ಟಣ ನಿವಾಸಿ ಯಾಸಿನ್‌ (23), ಗೌಸಿಯಾ ನಗರದ ಪೈಜಲ್‌ ಖಾನ್‌ (23), ಮೈಸೂರು ರಾಜೀವ್‌ ನಗರ 3ನೇ ಹಂತದ ಮುದಾಸಿರ್‌ (24) ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಕರಣದ ಮತ್ತೋರ್ವ ಆರೋಪಿ ಗೌಸಿಯಾ ನಗರದ ಪಿಳ್ಳೆ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಾಕು ತೋರಿಸಿ ಬೆದರಿಸಿದ್ದರು
ಎ .4ರಂದು ರಾತ್ರಿ 7.30ಗಂಟೆಗೆ ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಕಣಿವೆ ಬಸವನಹಳ್ಳಿ ಗ್ರಾಮದ ಹೇಮಂತ್‌ ಅವರನ್ನು ಸ್ಕಾರ್ಪಿಯೋ ವಾಹನದಲ್ಲಿ ಬಂದಿದ್ದ ಆರೋಪಿಗಳು ಬಲವಂತವಾಗಿ ಅಪಹರಿಸಿ ಬೆಟ್ಟದಪುರ ರಸ್ತೆಯಲ್ಲಿ ಚಾಕು ತೋರಿಸಿ ಬೆದರಿಕೆ ಹಾಕಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಾತ್ರವಲ್ಲದೆ ಹೇಮಂತ್‌ ಅವರ ಕೈಯ್ಯಲ್ಲಿದ್ದ ಒಟ್ಟು 14 ಗ್ರಾಂ ತೂಕದ 6 ಚಿನ್ನದ ಉಂಗುರ, 7 ಗ್ರಾಂ ತೂಕದ 1 ಬ್ರಾಸ್‌ಲೆಟ್‌, 12 ಗ್ರಾಂ ತೂಕದ 1 ಚಿನ್ನದ ಚೈನ್‌ ಹಾಗೂ ಲಾಕೆಟ್‌, 2 ಎ.ಟಿ.ಎಂ ಕಾರ್ಡ್‌ಗಳು, 2 ಮೊಬೈಲ್‌ ಮತ್ತು 1 ಸ್ಮಾರ್ಟ್‌ ವಾಚ್‌ ಹಾಗೂ ಪರ್ಸ್‌ ಸಹಿತ 4 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದರು. ಅಲ್ಲದೆ ನನ್ನ ಸ್ಕೂಟಿಯನ್ನು ತೆಗೆದುಕೊಂಡು ಹೋಗಿರುವುದಾಗಿ ಆರೋಪಿಸಿ ಹೇಮಂತ್‌ ಎ. 5ರಂದು ಕುಶಾಲನಗರ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಪಹರಣ ಮತ್ತು ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ಮಹಿಳೆ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಥಾರ್ಪಿಯೋ ವಾಹನ, 1.82 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನಾಭರಣಗಳು, 50 ಸಾವಿರ ಬೆಲೆಯ 2 ಮೊಬೈಲ್‌ಗ‌ಳು, ಹೇಮಂತ್‌ ಅವರ 30 ಸಾವಿರ ಬೆಲೆ ಬಾಳುವ ಸ್ಕೂಟಿ, ಮಹಿಳಾ ಆರೋಪಿ ರುಕ್ಸಾನಾ ಕೃತ್ಯಕ್ಕೆ ಉಪಯೋಗಿಸಿದ 30 ಸಾವಿರ ಮೌಲ್ಯದ ಸ್ಕೂಟಿ, 5 ಸಾವಿರ ರೂ. ನಗದು ಹಾಗೂ ಆರೋಪಿಗಳಿಗೆ ಸೇರಿದ 7 ಮೊಬೈಲ್‌ಗ‌ಳು ಸೇರಿದಂತೆ ಒಟ್ಟು 5.97 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಸೋಮವಾರಪೇಟೆ ಡಿವೈಎಸ್‌ಪಿ ಗಂಗಾಧರಪ್ಪ ಆರ್‌.ವಿ, ಕುಶಾಲನಗರ ಟೌನ್‌ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕ ಬಿ.ಜಿ. ಪ್ರಕಾಶ್‌, ಠಾಣಾಧಿಕಾರಿಗಳು ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next