Advertisement

ಮಡಿಕೇರಿ: ಕಾವೇರಿ ನದಿಗೆ ಹಾರಿದ ಮೈಸೂರಿನ ಪೌರ ಕಾರ್ಮಿಕ

06:00 AM Jun 10, 2018 | |

ಮಡಿಕೇರಿ: ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಮೈಸೂ ರಿನ ಪೌರಕಾರ್ಮಿಕನೊಬ್ಬ ಹಾರಿರುವ ಘಟನೆ ಶನಿವಾರ ನಡೆದಿದೆ.
ಮೈಸೂರು ಜ್ಯೋತಿನಗರದ ಪಳನಿಸ್ವಾಮಿ ಅವರ ಪುತ್ರ ರಮೇಶ್‌ (28) ಎಂದು ಗುರುತಿಸಲಾಗಿದೆ. ರಮೇಶ್‌ ತನ್ನ ಸಂಬಂಧಿ ಕಿರಣ್‌ ಅವರೊಂದಿಗೆ ಮಡಿಕೇರಿಗೆ ತೆರಳಿ ಬಳಿಕ ಕುಶಾಲನಗರಕ್ಕೆ ವಾಪಸ್‌ ಬಂದಿದ್ದಾರೆ. ಕುಶಾಲನಗರ ಸಮೀಪ ಕಾವೇರಿ ನದಿ ತೀರದಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದರು. ಇದ್ದಕ್ಕಿದ್ದಂತೆ ಗಾಬರಿಗೊಂಡಂತೆ ವರ್ತಿಸಿದ ಅವರು  ನದಿಗೆ ಜಿಗಿದಿದ್ದಾರೆ.

Advertisement

ತತ್‌ಕ್ಷಣ ಆತನನ್ನು ರಕ್ಷಿಸಲು ಕಿರಣ್‌ ಕೂಡ ನದಿಗೆ ಹಾರಿದ್ದು, ಆದರೆ ರಕ್ಷಿಸಲು ಸಾಧ್ಯವಾಗಲಿಲ್ಲ. ಕಿರಣ್‌ ಪ್ರಯಾಸದಿಂದ ದಡ ಸೇರಿದರಾದರೂ, ರಮೇಶ್‌ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೂಡಲೇ ಕಿರಣ್‌ ಕುಶಾಲನಗರದ ನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೀರಿನ ಹರಿವಿನ ಹೆಚ್ಚಳದ ಕಾರಣ   ಅಗ್ನಿಶಾಮಕ ದಳ, ಪೊಲೀಸ್‌, ರ್ಯಾಫ್ಟಿಂಗ್‌ ಯುವಕರ ಸಹಾಯ ಮತ್ತು ಈಜುಗಾರಿಕೆಯಲ್ಲಿ ಪ್ರಾವೀಣ್ಯ ಪಡೆದ ಯುವಕರನ್ನು ಸೇರಿಸಿಕೊಂಡು ಹುಡುಕಾಟ ಪ್ರಾರಂಭಿಸಿದರು.

ನದಿಯಲ್ಲಿ ನೀರಿನ ಹರಿವು ಕ್ಷಣಕ್ಷಣಕ್ಕೂ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ  ಬಹಳ ದೂರದವರೆಗೆ ಆ ಪೌರಕಾರ್ಮಿಕ ಕೊಚ್ಚಿ ಹೋಗಿರುವ ಸಾಧ್ಯತೆ ಇದ್ದು, ಶನಿವಾರ ಸಂಜೆವರೆಗೆ ಕೂಡು ಮಂಗಳೂರಿನವರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಬಳಿಕ  ಸ್ಥಗಿತಗೊಳಿಸಲಾಗಿದೆ.  ರವಿವಾರ ಬೆಳಗ್ಗಿನಿಂದ ಶೋಧ ಕಾರ್ಯ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next