Advertisement

Madhya Pradesh ಮೂರೇ ತಿಂಗಳಿರುವಾಗ ಸಂಪುಟ ವಿಸ್ತರಣೆ: ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ 

09:44 PM Aug 26, 2023 | Team Udayavani |

ಭೋಪಾಲ:ಯಾವುದೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ಅಥವಾ ಒಂದೂವರೆ ವರ್ಷಗಳು ಬಾಕಿ ಉಳಿದಿವೆ ಎಂದಾದರೆ ಅಲ್ಲಿ ಸಚಿವ ಸಂಪುಟ ವಿಸ್ತರಣೆಯೋ, ನಿಗಮ-ಮಂಡಳಿಗೆಗಳಿಗೆ ನೇಮಕವನ್ನೊ ಮಾಡಲಾಗುತ್ತದೆ. ಆದರೆ, ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಶನಿವಾರ ಕೈಗೊಂಡ ನಿರ್ಧಾರ ಅಚ್ಚರಿ ತಂದಿದೆ. ಇನ್ನೇನು ಅಲ್ಲಿ ಮೂರು ತಿಂಗಳ ಅವಧಿಯಲ್ಲಿ ಚುನಾವಣೆ ನಡೆಯಲಿದೆ. ಇದರ ಹೊರತಾಗಿಯೂ ಕೂಡ ಮೂವರು ಶಾಸಕರನ್ನು ಸಚಿವರನ್ನಾಗಿ ನೇಮಿಸಿಕೊಂಡಿದ್ದಾರೆ.

Advertisement

ಶನಿವಾರ ಸಚಿವ ಸಂಪುಟಕ್ಕೆ ಸೇರಿದ ಹಿರಿಯ ಶಾಸಕರಾದ ಗೌರಿಶಂಕರ್‌ ಬಿಸೇನ್‌ ಮತ್ತು ರಾಹುಲ್‌ ಲೋಧಿ ಅವರು ಮಧ್ಯಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.45 ಇರುವ ಇತರ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್‌ ಮತ್ತು ಬಿಜೆಪಿಗೆ ಆ ಸಮುದಾಯವನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಬಿಜೆಪಿ ವರಿಷ್ಠರು ಕೂಡ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆಯನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಅದಕ್ಕೆ ಅನುಸಾರವಾಗಿ ಈ ವಿಸ್ತರಣೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಹಲವು ಪ್ರಮುಖ ನಾಯಕರು ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಥ ನಿರ್ಧಾರಕ್ಕೆ ಮುಖ್ಯಮಂತ್ರಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಬಲಗೈ ಬಂಟ ಎಂಬ ಹೇಳಿಕೆಗೆ ಪಾತ್ರರಾಗಿದ್ದ ಸಮಂದರ್‌ ಪಟೇಲ್‌ ಅವರು 1,200 ಕಾರುಗಳಲ್ಲಿ ಬೆಂಬಲಿಗರ ಜತೆಗೆ ಬಂದು ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ಇದು ಒಂದು ಉದಾಹರಣೆ ಮಾತ್ರ. ಅಂಥ ಪಕ್ಷ ಸೇರ್ಪಡೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ. ಇದರ ಜತೆಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಘೋಷಣೆ ಮಾಡಿದಂತೆ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್‌, 100 ಯುನಿಟ್‌ ಉಚಿತ ವಿದ್ಯುತ್‌, ಪ್ರತಿ ಮಹಿಳೆಗೆ 1,500 ರೂ. ಸಾಲ ಮನ್ನಾ, ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ವಾಗ್ಧಾನಗಳು ಬಿಜೆಪಿಗೆ ಸವಾಲಿನ ದಿನಗಳನ್ನು ತರಲಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಪ್ರಸಕ್ತ ಸಾಲಿನ ವಿಧಾನಸಭೆ ಚುನಾವಣೆ ಬಿಜೆಪಿಗೆ ಸವಾಲಿನ ಸ್ಥಿತಿ ತರಲಿದೆ ಎಂಬ ಮಾತುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next