Advertisement

ಸಮಾಜದಲ್ಲಿ ಸಮಾನತೆ ಬರಲು ಶಿಕ್ಷಣ ಅಗತ್ಯ: ವೀರಪ್ಪ ಮೊಯಿಲಿ

05:00 PM Dec 27, 2019 | keerthan |

ಬೆಂಗಳೂರು: ಸಮಾಜದಲ್ಲಿ ಸಮಾನತೆ ನಿರ್ಮಾಣ ಆಗಲು ಚಿಂತನಶೀಲ ಶಿಕ್ಷಣದ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು. ಬೆಂಗಳೂರಿನ ಪ್ರತಿಷ್ಠಿತ ಕಮ್ಯುನಿಟಿ ಸೆಂಟರ್ ಗ್ರೂಪ್ ಆಫ್ ಎಜ್ಯುಕೇಷನಲ್ ಇನ್ಸ್ಟಿಟ್ಯೂಟ್ ನ ವಜ್ರ ಮಹೋತ್ಸವದಲ್ಲಿ ಭಾಗವಹಿಸಿದ್ದ ಅವರು, ಜಾಗತಿಕ ಸವಾಲುಗಳನ್ನು ಎದುರಿಸಲು ಪೂರಕವಾದ ಶಿಕ್ಷಣವನ್ನು ನೀಡಲು ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕಿದೆ ಅಂತ ಹೇಳಿದರು.

Advertisement

ಶಿಕ್ಷಣ ಕೇವಲ ಬೌದ್ಧಿಕತೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ನಮ್ಮೆದುರು ತೆರೆದು ನಿಂತಿರುವ ಜಾಗತಿಕ ಸವಾಲುಗಳನ್ನು ಎದುರಿಸುವ ಶಕ್ತಿಶಾಲಿ ಸಾಧನವಾಗಬೇಕಿದೆ.  ಹೀಗಾಗಿ ಬದಲಾವಣೆಯ ಆಲೋಚನೆಗಳನ್ನು ಬಿತ್ತುವ, ನಿರಂತರ ಸಕಾರಾತ್ಮಕ ನಿಲುವುಗಳನ್ನು ಪಸರಿಸುವ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳು ಮುಂದಾಗಲಿ ಎಂದು ವೀರಪ್ಪ ಮೊಯ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸವಾಲುಗಳ ಕುರಿತು ಬೆಳಕು ಚೆಲ್ಲಿದ ಮಾಜಿ ಶಿಕ್ಷಣ ಸಚಿವರು ಆಗಿರುವ ವೀರಪ್ಪ ಮೊಯಿಲಿ,  ಶಿಕ್ಷಣ ಸಂಸ್ಥೆಗಳನ್ನು ನಡೆಸುವವರ ದೂರದೃಷ್ಟಿ ಯಾವಾಗಲೂ ಆ ಸಂಸ್ಥೆಗಳು ನೀಡುವ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಉತ್ತಮ ಚಿಂತನೆಗಳು ಶೈಕ್ಷಣಿಕ ಸಂಸ್ಥೆಗಳಿಗಿರಬೇಕು ಎಂದರು.

ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್ ವೆಂಕಟಾಚಲಯ್ಯ ಅವರು, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಅಗತ್ಯವಿದೆ ಅಂತ ಪ್ರತಿಪಾದಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಿನ ಅನಿವಾರ್ಯತೆ ಯನ್ನು ಅರಿತು ಕೊಳ್ಳಬೇಕು.

ಸೃಜನಶೀಲತೆ ತರುವ ನಿಟ್ಟಿನಲ್ಲಿ ಕಮ್ಯುನಿಟಿ ಸೆಂಟರ್ ಶಿಕ್ಷಣ ಸಂಸ್ಥೆ ಕೆಲಸ ಮಾಡಿಕೊಂಡು ಬರುತ್ತಿದೆ. ಜೀವನದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ರೆಡಿ ಮಾಡುವ ಕೆಲಸ ಆಗ್ತಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ದೇಶ ಮೊದಲು ಅನ್ನೋ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಲಿ ಅಂತ ಹಾರೈಸುತ್ತೇನೆ ಎಂದು ನಿವೃತ್ತ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಯ್ಯ ಹೇಳಿದರು.

Advertisement

ಸಭೆಯಲ್ಲಿ ಶಾಸಕರಾದ ಉದಯ್ ಗರುಡಾಚಾರ್, ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಹಾಗೂ ಬಿಬಿಎಂಪಿ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ಅವರು ಹಳೆಯ ದಿನಗಳನ್ನು ಮೆಲುಕು ಹಾಕಿದ್ರು.

ಮಾಜಿ ಮೇಯರ್ ಶ್ರೀಮತಿ ಗಂಗಾಬಿಕೆ ಮಲ್ಲಿಕಾರ್ಜುನ, ಉದ್ಯಮಿ ಬಿ.ಆರ್ ವಾಸುದೇವ್, ಸಂಸ್ಥೆಯ ಕಾರ್ಯದರ್ಶಿ ಚಿಕ್ಕಯ್ಯ ಮತ್ತು ಅಮರೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು ,ಸಿಬ್ಬಂದಿ ವರ್ಗ ಸಮಾರಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next