Advertisement

ಲಕ್ಕಿ ಗ್ರಾಹಕ ಯೋಜನೆ: ಮಂಗಳೂರಿನ ವಿಶ್ವನಾಥ್‌ ಪ್ರಭುಗೆ 1,000 ರೂ.

03:45 AM Jan 10, 2017 | Team Udayavani |

ಮಂಗಳೂರು: ಸಣ್ಣ ಮೊತ್ತದ ಹಣಕಾಸು ವ್ಯವಹಾರಗಳನ್ನು ನಗದು ರಹಿತವಾಗಿ ನಡೆಸುವಂತೆ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರ ಜಾರಿಗೊಳಿಸಿದ “ಲಕ್ಕಿ ಗ್ರಾಹಕ ಯೋಜನೆ’ಯಡಿ ಮಂಗಳೂರಿನ ಉರ್ವಾ ನಿವಾಸಿ ವಿಶ್ವನಾಥ್‌ ಪ್ರಭು ಅವರಿಗೆ ಒಂದು ಸಾವಿರ ರೂ. ಲಭಿಸಿದೆ.

Advertisement

ವಿಶ್ವನಾಥ್‌ ಪ್ರಭು ಡಿ. 31ರಂದು ನಗರದ ಕೆಎಂಸಿ ಆಸ್ಪತ್ರೆಯ ಮೆಡಿಕಲ್‌ನಲ್ಲಿ ತಾಯಿಗಾಗಿ 1000 ರೂ.ಗಳ ಔಷಧ ಖರೀದಿಸಿದ್ದರು. ಅವರು ರೂಪೇ ಕಾರ್ಡ್‌ ಮೂಲಕ ಸ್ವೆ„ಪ್‌ ಮಾಡಿದ್ದರು. ಜ. 2ರಂದು ವಿಶ್ವನಾಥ್‌ ಬ್ಯಾಂಕ್‌ ಖಾತೆಗೆ 1000 ರೂ. ಜಮಾ ಆಗಿದ್ದು, ಲಕ್ಕಿ ಗ್ರಾಹಕ ಯೋಜನೆಗೆ ಆಯ್ಕೆಯಾಗಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿದೆ.  ಖಾತೆಯ ಬ್ಯಾಲೆನ್ಸ್‌ ಪರಿಶೀಲಿಸಿದಾಗ 1000 ರೂ. ಖಾತೆಗೆ ಜಮೆಯಾಗಿತ್ತು ಎಂದು ವಿಶ್ವನಾಥ್‌ ಪ್ರಭು ಅವರು  “ಉದಯವಾಣಿ’ಗೆ ತಿಳಿಸಿದ್ದಾರೆ.
 
ಏನಿದು ಯೋಜನೆ?
ಕಾರ್ಡ್‌ ಮೂಲಕ ವ್ಯವಹಾರ ನಡೆಸುವ ಅದೃಷ್ಟಶಾಲಿ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಬಹುಮಾನ ನೀಡುವ ಸಲುವಾಗಿ ಕ್ರಿಸ್ಮಸ್‌ ಸಂದರ್ಭ ಕೇಂದ್ರ ಸರಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ಗ್ರಾಹಕರಿಗಾಗಿ ರೂಪಿಸಲಾಗಿರುವ ಲಕ್ಕಿ ಗ್ರಾಹಕ ಯೋಜನೆಯಡಿ ಪ್ರತಿದಿನ ಮತ್ತು ವಾರಕ್ಕೊಮ್ಮೆ ಮೆಗಾ ಡ್ರಾ ಇರುತ್ತದೆ. ಯೋಜನೆ ಚಾಲನೆಗೊಂಡಂದಿನಿಂದ 100 ದಿನಗಳ ಕಾಲ ನಿತ್ಯ 15 ಸಾವಿರ ಅದೃಷ್ಟಶಾಲಿ ಗ್ರಾಹಕರನ್ನು ಆರಿಸಿ ತಲಾ 1000 ರೂ. ನೀಡಲಾಗುತ್ತದೆ. 

ಅಂಬೇಡ್ಕರ್‌ ಜಯಂತಿಯಾದ ಎ. 14ರಂದು ಮೆಗಾ ಡ್ರಾ ನಡೆಯಲಿದ್ದು, 1 ಕೋಟಿ ರೂ. ಮೊದಲ ಬಹುಮಾನ, 50 ಲಕ್ಷ ರೂ. ದ್ವಿತೀಯ ಬಹುಮಾನ, 25 ಲಕ್ಷ ರೂ. ತೃತೀಯ ಬಹುಮಾನ ನೀಡಲಾಗುತ್ತದೆ. 

ವ್ಯಾಪಾರಿಗಳಿಗಾಗಿ ಡಿಜಿ ಧನ ವ್ಯಾಪಾರಿ ಯೋಜನೆ ಇದ್ದು, ಇದರಡಿ ಪ್ರತಿ ವಾರ 7 ಸಾವಿರ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಅವರಿಗೆ ತಲಾ 50 ಸಾವಿರ ರೂ. ನೀಡಲಾಗುತ್ತದೆ. ಎ. 14ರಂದು ಮೆಗಾ ಡ್ರಾ ನಡೆಯಲಿದ್ದು, 50 ಲಕ್ಷ ರೂ., 25 ಲಕ್ಷ ರೂ., 5 ಲಕ್ಷ ರೂ. ಬಹುಮಾನ  ನೀಡಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next