Advertisement

ಲೋ ವೋಲ್ಟೇ ಜ್‌: ಕೆಟ್ಟು ಹೋಗುತ್ತಿವೆ ಪಂಪ್‌ಸೆಟ್‌..!

12:27 PM Apr 15, 2018 | |

ಸುಳ್ಯ : ಪಂಪ್‌ಸೆಟ್‌ನ ಸ್ವಿಚ್‌ ಹಾಕಿದರೆ, ಚಾಲು ಆಗುವುದೇ ಕಷ್ಟ. ಚಾಲೂ ಆದರೂ ನೀರು ಬರಲ್ಲ. ನೀರು ಬಂದರೆ, 10 ಸ್ಪ್ರಿಂಕ್ಲರ್‌ ಮೂಲಕ ನೀರುಣಿಸುವ ತೋಟದಲ್ಲಿ ಅಬ್ಬಬ್ಬ ಎಂದರೆ ಎರಡು ನೀರುಣಿಸುತ್ತವೆ.

Advertisement

ಸುಳ್ಯ ತಾಲೂಕಿನಲ್ಲಿ ವಿದ್ಯುತ್‌ ಅವ್ಯವಸ್ಥೆಯಿಂದ ಕೃಷಿಕರು ಪಡುತ್ತಿರುವ ಪಾಡಿದು. ಕೃಷಿ ತೋಟಕ್ಕೆ ನೀರು ಸಮರ್ಪಕವಾಗಿ ಪೂರೈಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದು ಪರಿಸ್ಥಿತಿ ಸುಧಾರಣೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದ ಕೃಷಿಕರಿಗೆ ಲೋ ವೋಲ್ಟೆಜ್‌ ಸಮಸ್ಯೆ ಇನ್ನಷ್ಟು ಕಾಡುತ್ತಿದೆ. ಕೆಲವು ಗ್ರಾಮಾಂತರ ಪ್ರದೇಶದಲ್ಲಿ ಕರೆಂಟ್‌ ಕಣ್ಣಾಮುಚ್ಚಾಲೆ ಕೃಷಿ ಬೆಳೆಗಳಿಗೆ ಸಂಚಕಾರವನ್ನು ತಂದಿದೆ.

ಲೋ ವೋಲ್ಟೇಜ್‌, ಲೋಡ್‌ ಶೆಡ್ಡಿಂಗ್‌ ಹಾವಳಿಯಿಂದ ಜಲ ಕ್ಷಾಮ ಉಂಟಾಗಿ, ಮುಂದಿನ ಬಾರಿ ಆರ್ಥಿಕ ಕ್ಷಾಮದ ಭೀತಿ ಕಾಡಿದೆ. ಮೆಸ್ಕಾಂ ವಿದ್ಯುತ್‌ ಹರಿಸುವ ಯತ್ನ ನಡೆಸಿದರೂ ತನ್ನಲ್ಲಿರುವ ವಿದ್ಯುತ್‌ ಸಂಗ್ರಹಿಸುವ ಧಾರಣ ಸಾಮರ್ಥ್ಯ ಕೊರತೆ ಅದಕ್ಕೆ ಅಡ್ಡಿ ಆಗಿದೆ. ಇನ್ನೆರಡು ತಿಂಗಳಲ್ಲಿ ದಿನವಿಡಿ ಮಳೆ ಸುರಿದರಷ್ಟೇ ಮಲೆನಾಡಿನ ತಾಲೂಕಿನ ಕೃಷಿಕರ ಸಮಸ್ಯೆಗೆ ಮುಕ್ತಿ ಸಿಗಬಹುದು.

ಲೋ ವೋಲ್ಟೇಜ್‌
ತ್ರಿಫೇಸ್‌ ಇದೆ ಎಂದು ಪಂಪ್‌ ಸ್ವಿಚ್‌ ಹಾಕಿದರೆ, 10 ನಿಮಿಷದಲ್ಲಿ ಪಂಪ್‌ ಆಫ್‌ ಆಗುತ್ತದೆ. ತ್ರಿಫೇಸ್‌ ಬದಲು ಸಿಂಗಲ್‌ ಫೇಸ್‌ ಅಳವಡಿಸಿದ ಕೃಷಿಕರಿಗೂ ಇದೇ ಸಮಸ್ಯೆ ಕಾಡಿದೆ. ತ್ರಿಫೇಸ್‌, ಸಿಂಗಲ್‌ ಫೇಸ್‌ ಇದ್ದರೂ ಪಂಪ್‌ ಆಫ್‌ ಆಗುವುದು. ಸ್ಪ್ರಿಂಕ್ಲರ್‌ ನೀರುಣಿಸದೇ ಇರುವುದರಿಂದ ಕೆಲವರು ದುರಸ್ತಿಗೆಂದು ಮೆಕಾನಿಕ್‌ ಗಳನ್ನು ಕರೆ ತಂದಿದ್ದಾರೆ. ಅವಾಗಲೇ ಈ ಲೋ ವೋಲ್ಟೇಜ್‌ ಕಥೆ ಬೆಳಕಿಗೆ ಬಂದಿದೆ ಎನ್ನುತ್ತಾರೆ ಸಂಪಾಜೆ ಗ್ರಾಮದ ಕೃಷಿಕರು.

ಕೆಟ್ಟು ಹೋಗುತ್ತಿದೆ‌ ಪಂಪ್‌
ವೋಲ್ಟೆàಜ್‌ ಹೆಚ್ಚು-ಕಡಿಮೆ ಆಗುತ್ತಿರುವ ಕಾರಣ ಪ್ರತಿ ಗ್ರಾಮದಲ್ಲಿ ದಿನಕ್ಕೊಂದರಂತೆ ಪಂಪ್‌ ಕೆಟ್ಟು ಹೋಗುತ್ತಿದೆ. ಕೊಳವೆಬಾವಿ, ನದಿಗೆ ಅಳವಡಿಸಿದ ನೂರಾರು ಪಂಪ್‌ ಗಳು ರಿಪೇರಿ ಹಂತದಲ್ಲಿವೆ. ಕೆಲವೆಡೆ ವಿದ್ಯುತ್‌ ಬೋರ್ಡ್‌ನಲ್ಲೇ ಶಾರ್ಟ್‌ ಸರ್ಕ್ನೂಟ್‌ ಸಂಭವಿಸಿದೆ. ತಾಲೂಕಿನಲ್ಲಿ 12 ಸಾವಿರ ಕೃಷಿ ಪಂಪ್‌ ಸೆಟ್‌ಗಳಿದ್ದು, 500ಕ್ಕೂ ಅಧಿಕ ಪಂಪ್‌ಗ್ಳು ದುರಸ್ತಿ ದಾರಿ ಹಿಡಿದಿವೆ. 500ಕ್ಕೂ ಅಧಿಕ ದೂರು ಕರೆಗಳು ಮೆಸ್ಕಾಂನಲ್ಲಿ ದಾಖಲಾಗಿದೆ.

Advertisement

ಸಾಲುತ್ತಿಲ್ಲ ಸಾಮರ್ಥ್ಯ
25 ಕೆವಿ ವಿದ್ಯುತ್‌ ಪರಿವರ್ತಕದಿಂದ 5 ಎಚ್‌ಪಿ ಸಾಮರ್ಥ್ಯದ 5 ಕೃಷಿ ಪಂಪ್‌ಗ್ಳಿಗೆ ನೀರು ಹರಿಸಲು ಸಾಧ್ಯವಿದೆ. ಇಲ್ಲಿ 10ಕ್ಕಿಂತ ಅಧಿಕ ಪಂಪ್‌, 50ಕ್ಕಿಂತ ಅಧಿಕ ಮನೆಗಳಿಗೆ ಒಂದೇ ಪರಿವರ್ತಕದಿಂದ ವಿದ್ಯುತ್‌ ಪೂರೈಸಲಾಗುತ್ತಿದೆ. 25 ಕೆವಿ ವ್ಯಾಪ್ತಿಯ 10 ಕೃಷಿ ಪಂಪ್‌ಸೆಟ್‌ದಾರರು ಏಕಕಾಲದಲ್ಲಿ ಪಂಪ್‌ ಚಾಲು ಮಾಡುತ್ತಾರೆ. ಇದರಿಂದ ಸಾಮರ್ಥ್ಯದ ಕೊರತೆ ಹಾಗೂ ಲೋ ವೋಲ್ಟೇಜ್‌ ಉಂಟಾಗುತ್ತದೆ.

ಇಲ್ಲಿ ಪರಿವರ್ತಕದ ಸಾಮರ್ಥ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಬಳಕೆದಾರರಿಗೆ ಮೆಸ್ಕಾಂ ಸಂಪರ್ಕ ಕಲ್ಪಿಸಿದ ಪರಿಣಾಮ, ಲಭ್ಯ ಇರುವ ವಿದ್ಯುತ್‌ ಸಾಲದೆ, ಲೋ ವೋಲ್ಟೇಜ್‌ ಕಾಡುತ್ತಿದೆ. ತಾಲೂಕಿನಲ್ಲಿ 432 ವಿದ್ಯುತ್‌ ಪರಿವರ್ತಕಗಳಿವೆ. ಅದು ಇನ್ನೂ ಅರ್ಧ ಪಟ್ಟು ಹೆಚ್ಚಾಗಬೇಕು ಅನ್ನುತ್ತಿದೆ ಮೆಸ್ಕಾಂ.

45 ಸಾವಿರ ಸಂಪರ್ಕ
ಪುತ್ತೂರು, ಸುಳ್ಯ ತಾಲೂಕಿನಲ್ಲಿ 45 ಸಾವಿರಕ್ಕೂ ಅಧಿಕ ಕೃಷಿ ಪಂಪ್‌ಸೆಟ್‌ ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 50 ಸಾವಿರಕ್ಕೂ ಅಧಿಕ ಗೃಹ ಮತ್ತು ಗೃಹೇತರ ಸಂಪರ್ಕವಿದೆ. ಶೇ. 95ರಷ್ಟು ಕೃಷಿಕರು ಅಡಿಕೆ ಬೆಳೆಯನ್ನು ಜೀವನಾಧಾರವನ್ನಾಗಿ ಬಳಸಿಕೊಂಡಿದ್ದಾರೆ. ಇವೆಲ್ಲದಕ್ಕೂ ಪುತ್ತೂರಿನ 110 ಕೆವಿ ಸಬ್‌ ಸ್ಟೇಷನ್‌ ನಿಂದಲೇ ವಿದ್ಯುತ್‌ ಹರಿಸಬೇಕು. ಪುತ್ತೂರು ತಾಲೂಕಿನ ಮಾಡಾವಿನಲ್ಲಿ 110 ಕೆವಿ ಸಬ್‌ ಸ್ಟೇಷನ್‌ ನಿರ್ಮಾಣದ ಹಂತದಲ್ಲಿದ್ದರೆ, ಸುಳ್ಯದಲ್ಲಿ 110 ಕೆವಿ ಸಬ್‌ ಸ್ಟೇಷನ್‌ ಸರ್ವೆ ಹಂತದಲ್ಲಿ ಮೊಟಕುಗೊಂಡಿದೆ. ಇವೆರೆಡು ಪೂರ್ಣಗೊಂಡರೆ ಮಾತ್ರ ಉಭಯ ತಾಲೂಕಿನ ವಿದ್ಯುತ್‌ ಸಮಸ್ಯೆಗೆ ಪರಿಹಾರ ಸಾಧ್ಯವಾಗಬಹುದು.

ಸುಳ್ಯದಲ್ಲಿ ಅಧಿಕ
ಎರಡು ವರ್ಷಗಳ ಹಿಂದೆ ಸುಳ್ಯದ ವಿದ್ಯುತ್‌ ಗ್ರಾಹಕ ಇಂಧನ ಸಚಿವರಿಗೆ ವಿದ್ಯುತ್‌ ಸಮಸ್ಯೆಯ ಕುರಿತು ಕರೆ ಮಾಡಿ ಬಂಧನಕ್ಕೆ ಒಳಗಾದ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸ್ತವಾಗಿತ್ತು. ಇಲ್ಲಿನ ಬಹು ಬೇಡಿಕೆಯ 110 ಕೆವಿ ಸಬ್‌ ಸ್ಟೇಷನ್‌ ನಿರ್ಮಾಣ ಪ್ರಕ್ರಿಯೆ 15 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜಿಲ್ಲೆಗೆ ಹೋಲಿಸಿದರೆ ವಿದ್ಯುತ್‌ ಸಮಸ್ಯೆ ಇರುವ ತಾಲೂಕಿನಲ್ಲಿ ಸುಳ್ಯಕ್ಕೆ ಅಗ್ರಸ್ಥಾನವಿದೆ.

ಸಮಸ್ಯೆ ಇಲ್ಲ
ಲೋ ವೋಲ್ಟೇಜ್‌ನಿಂದ ಪಂಪ್‌ ಕೆಟ್ಟು ಹೋಗುವುದಿಲ್ಲ. ಪಂಪ್‌ ಆನ್‌ ಆಗದೇ ಇರುವುದು, ಸ್ಪ್ರಿಂಕ್ಲರ್‌ನಲ್ಲಿ ನೀರು ಹಾರದೇ ಇರುವುದು ಇತ್ಯಾದಿ ಸಮಸ್ಯೆಗಳು ಉಂಟಾಗುತ್ತದೆ. ಆದರೆ, ಮಳೆ ಬಂದಿರುವ ಕಾರಣ ಈ ತ್ರಿಫೇಸ್‌ ನಿರಂತರವಾಗಿ ಕೊಡುತ್ತಿದ್ದೇವೆ. ಈಗ ಎಲ್ಲಿಯು ಲೋ- ವೋಲ್ಟೇಜ್‌ ಸಮಸ್ಯೆ ಇಲ್ಲ ಎಂದು ಮೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಪ್‌ ಕೆಟ್ಟಿದೆ
 ಸಮಸ್ಯೆ ಇಲ್ಲ ಲೋ ವೋಲ್ಟೇಜ್‌ನಿಂದ ಪಂಪ್‌ ಕೆಟ್ಟುಹೋಗಿದೆ. ತ್ರಿಪೇಸ್‌ ಇದ್ದರೂ ಪದೇ-ಪದೇ ಪಂಪ್‌ ಆಪ್‌ ಆಗುತ್ತದೆ. ತಿಂಗಳ ಹಿಂದೆಯಷ್ಟೇ 5 ಸಾವಿರ ರೂ. ಖರ್ಚು ಮಾಡಿ ಪಂಪ್‌ ಸರಿಪಡಿಸಿದ್ದೆ. ಈಗ ಮತ್ತೂಮ್ಮೆ ಹಾಳಾಗಿದೆ. ಇದಕ್ಕೆ ಯಾರು ಹೊಣೆ?
– ವೆಂಕಟರಮಣ,
  ಕೃಷಿಕ, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next